ಕರ್ನಾಟಕ

karnataka

ETV Bharat / city

ರಾಜ್ಯಕ್ಕೆ ಬರ್ತಿದ್ದಾರೆ ಸುರ್ಜೆವಾಲಾ: 'ಕೈ' ನಾಯಕರ ಬಾಯಿಗೆ ಬೀಳುತ್ತಾ ಬೀಗ?

ರಾಜ್ಯ ಕಾಂಗ್ರೆಸ್​ನಲ್ಲಿ ನಾಯಕತ್ವ ವಿಚಾರದ ಚರ್ಚೆ ರಾಜ್ಯ ನಾಯಕರಲ್ಲಿ ಮಾತ್ರವಲ್ಲದೆ, ಯುವ ಕಾಂಗ್ರೆಸ್​ನಲ್ಲಿಯೂ ಕಾಡುತ್ತಿದೆ. ಇದಲ್ಲದೆ 2023ಕ್ಕೆ ಎದುರಾಗುವ ವಿಧಾನಸಭೆ ಚುನಾವಣೆ ಹಾಗೂ ಸ್ಥಳೀಯ ಸಂಸ್ಥೆಗಳು ಮತ್ತು ಬಿಬಿಎಂಪಿ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಬೇಕಾಗಿದೆ. ಈ ಎಲ್ಲಾ ನಿಟ್ಟಿನಲ್ಲಿ ರಾಜ್ಯ ನಾಯಕರ ಜತೆ ಚರ್ಚಿಸಿ ಒಂದು ಒಮ್ಮತದ ತೀರ್ಮಾನಕ್ಕೆ ಬರುವ ಸಲುವಾಗಿ ಸುರ್ಜೆವಾಲಾ ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ.

By

Published : Jul 4, 2021, 8:39 PM IST

randeep-singh-surjewala
ಸುರ್ಜೆವಾಲಾ

ಬೆಂಗಳೂರು: ರಾಜ್ಯ ಕಾಂಗ್ರೆಸ್ ಪುನರ್‌ರಚನೆ, ಹೊಸಬರಿಗೆ ಅಧಿಕಾರ ನೀಡಿಕೆ, ಮುಂದಿನ ಸಿಎಂ ಹೀಗೆ ಹಲವಾರು ವಿಚಾರವಾಗಿ 'ಕೈ' ಪಾಳಯದಲ್ಲಿ ಎದ್ದಿರುವ ಗೊಂದಲ ಹಾಗೂ ಯುವ ಕಾಂಗ್ರೆಸ್ ಅಧ್ಯಕ್ಷರ ವಿಚಾರದಲ್ಲಿ ಉಂಟಾಗಿರುವ ಕಲಹಗಳನ್ನು ಸರಿಪಡಿಸುವ ಉದ್ದೇಶದಿಂದ ರಾಜ್ಯ ಕಾಂಗ್ರೆಸ್​ ಉಸ್ತುವಾರಿ ರಣದೀಪ್ ಸುರ್ಜೆವಾಲಾ ಅವರು ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಚಂಡಿಗಡದಲ್ಲಿದ್ದ ಸುರ್ಜೆವಾಲಾ ಇಂದು ದಿಲ್ಲಿಗೆ ತೆರಳಿದ್ದು, ಅಲ್ಲಿ ರಾಷ್ಟ್ರೀಯ ನಾಯಕರ ಜೊತೆ ಚರ್ಚಿಸಿ ಬೆಂಗಳೂರಿಗೆ ಆಗಮಿಸುವ ನಿರೀಕ್ಷೆ ಇದೆ.

ರಾಜ್ಯ ಕಾಂಗ್ರೆಸ್ ನಾಯಕರಿಗೆ ಹೈಕಮಾಂಡ್ ನೀಡುವ ಸಂದೇಶವನ್ನು ಸೂಕ್ಷ್ಮವಾಗಿ ತಲುಪಿಸುವ ಹಾಗೂ ರಾಷ್ಟ್ರೀಯ ನಾಯಕರ ಮಾತು ಮೀರಿದರೆ ಉಂಟಾಗುವ ಪರಿಣಾಮಗಳ ಕುರಿತು ವಿವರಿಸಲು ಅವರು ಆಗಮಿಸುತ್ತಿದ್ದಾರೆ. ಇತ್ತೀಚೆಗಷ್ಟೇ ರಾಜ್ಯಕ್ಕೆ ಭೇಟಿ ಕೊಟ್ಟಿದ್ದರು. ಆದ್ರೆ ಇದೀಗ ಒಂದಿಷ್ಟು ಗೊಂದಲಗಳು ಹೆಚ್ಚಿರುವ ಹಿನ್ನೆಲೆಯಲ್ಲಿ ಮತ್ತೊಮ್ಮೆ ಆಗಮಿಸುತ್ತಿದ್ದಾರೆ. ರಾಜ್ಯ ಕಾಂಗ್ರೆಸ್ ನಾಯಕರು ವ್ಯತಿರಿಕ್ತ ಹೇಳಿಕೆಗಳನ್ನು ನೀಡುತ್ತಿರುವುದು ಹಾಗೂ ಇದರಿಂದ ಪಕ್ಷ ಸಂಘಟನೆಗೆ ಎದುರಾಗಿರುವ ತೊಂದರೆಗಳ ಕುರಿತು ಪರಸ್ಪರ ಸಮಾಲೋಚನೆ ಮೂಲಕ ಮನವರಿಕೆ ಮಾಡಿಕೊಡಲು ಅವರು ನಿರ್ಧರಿಸಿದ್ದಾರೆ.

ಕರ್ನಾಟಕದಲ್ಲಿ ಎದುರಾಗಿರುವ ಗೊಂದಲಗಳನ್ನು ಆರಂಭಿಕ ಹಂತದಲ್ಲೇ ಪರಿಹರಿಸಿಕೊಳ್ಳುವ ಮೂಲಕ ಮುಂದೆ ಉಂಟಾಗಬಹುದಾದ ತೊಂದರೆಯನ್ನು ತಪ್ಪಿಸಲು ರಾಷ್ಟ್ರೀಯ ನಾಯಕರು ತೀರ್ಮಾನಿಸಿದ್ದಾರೆ. ಈ ಹಿನ್ನೆಲೆ ಸುರ್ಜೆವಾಲಾಗೆ ಸೂಕ್ತ ನಿರ್ದೇಶನ ನೀಡಿದ್ದು, ಕೆಪಿಸಿಸಿ ಗೊಂದಲವನ್ನು ನಿವಾರಿಸುವಂತೆ ಸ್ಪಷ್ಟವಾಗಿ ಸಂದೇಶ ರವಾನಿಸಿದ್ದಾರೆ.

ಭೇಟಿಗೆ ಕಡಿವಾಣ

ಇತ್ತೀಚೆಗಷ್ಟೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ದಿಲ್ಲಿಗೆ ತೆರಳಿ ರಾಷ್ಟ್ರೀಯ ನಾಯಕರನ್ನು ಭೇಟಿಯಾಗಿ ವಾಪಸಾಗಿದ್ದಾರೆ. ರಾಜ್ಯದಲ್ಲಿ ಪಕ್ಷ ಪುನರ್ರಚನೆ ಸಂಬಂಧ ರಾಷ್ಟ್ರೀಯ ನಾಯಕರಿಗೆ ಮಾಹಿತಿ ಒದಗಿಸಲು ತೆರಳಿದೆ ಎಂದು ಅವರು ಹೇಳಿದ್ದಾರೆ. ಆದರೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಬೆಂಬಲಿಗರು ರಾಜ್ಯದಲ್ಲಿ ಮುಂದಿನ ಸಿಎಂ ವಿಚಾರವಾಗಿ ಪ್ರಸ್ತಾಪಿಸುತ್ತಿರುವ ಹಾಗೂ ಹೇಳಿಕೆ ನೀಡುತ್ತಿರುವ ವಿಚಾರವನ್ನು ರಾಷ್ಟ್ರೀಯ ನಾಯಕರ ಗಮನಕ್ಕೆ ತಂದಿದ್ದಾರೆ. ಸಿದ್ದರಾಮಯ್ಯ ಮುಂದಿನ ಸಿಎಂ ಎಂದು ಅವರ ಬೆಂಬಲಿಗ ಶಾಸಕರು ಹೇಳುತ್ತಿದ್ದಂತೆ, 34 ಮುಖಂಡರು ತಾವು ಸಹ ಸಿಎಂ ಸ್ಥಾನ ಆಕಾಂಕ್ಷಿ ಎಂದು ಹೇಳಿಕೆ ನೀಡಿದ್ದಾರೆ. ಇದೀಗ ರಾಜ್ಯ ಕಾಂಗ್ರೆಸ್ ಉಸ್ತುವಾರಿಯೇ ಆಗಮಿಸುತ್ತಿದ್ದು ಈ ಒಂದು ಗೊಂದಲಕ್ಕೆ ತೆರೆ ಎಳೆಯುವ ಕಾರ್ಯ ಮಾಡಲಿದ್ದಾರೆ.

ಈ ವಾರಾಂತ್ಯದಲ್ಲಿ ಸುರ್ಜೆವಾಲಾ ರಾಜ್ಯಕ್ಕೆ ಆಗಮಿಸುವ ಸಾಧ್ಯತೆ ಇದೆ. ಇದಕ್ಕೂ ಮುನ್ನವೇ ಸಿದ್ದರಾಮಯ್ಯರನ್ನು ದಿಲ್ಲಿಗೆ ಕರೆದುಕೊಂಡು ಒಂದು ಸುತ್ತು ಸಮಾಲೋಚಿಸುವ ಮುನ್ಸೂಚನೆ ಇದೆ. ದಲಿತ ಸಿಎಂ ಹೇಳಿಕೆ ಹಿಡಿದು ದಿಲ್ಲಿಗೆ ತೆರಳಿದ್ದ ಮಾಜಿ ಸಂಸದ ಕೆ.ಎಚ್ ಮುನಿಯಪ್ಪ ಹಾಗೂ ಎಂಎಲ್​ಸಿ ಬಿ.ಕೆ. ಹರಿಪ್ರಸಾದ್ ಗೆ ಇಂಥ ವಿಚಾರಗಳನ್ನು ಇಟ್ಟುಕೊಂಡು ಬರಬೇಡಿ ಎಂದು ಸೂಕ್ಷ್ಮವಾಗಿ ಹೈಕಮಾಂಡ್ ನಾಯಕರು ಹೇಳಿ ಕಳುಹಿಸಿದ್ದಾರೆ. ಅಲ್ಲದೆ ಸಿದ್ದರಾಮಯ್ಯ ಸೂಚನೆ ನೀಡಿದ್ದು ತಮ್ಮ ಬೆಂಬಲಿಗರಿಂದ ಇಂತಹ ಹೇಳಿಕೆ ಬರಬಾರದು ಎಂದು ತಾಕೀತು ಮಾಡಿದ್ದಾರೆ. ಇದಕ್ಕೆ ಪೂರಕವಾಗಿ ಸಿದ್ದರಾಮಯ್ಯ ಸಹ ತಮ್ಮ ಬೆಂಬಲಿಗರು ಸುಮ್ಮನಿರುವಂತೆ ಸೂಚಿಸಿದ್ದಾರೆ.

ಒಟ್ಟಾರೆ ರಾಜ್ಯ ಕಾಂಗ್ರೆಸ್​ನಲ್ಲಿ ನಾಯಕತ್ವ ವಿಚಾರದ ಚರ್ಚೆ ರಾಜ್ಯ ನಾಯಕರಲ್ಲಿ ಮಾತ್ರವಲ್ಲದೆ ಯುವ ಕಾಂಗ್ರೆಸ್​ನಲ್ಲಿಯೂ ಕಾಡುತ್ತಿದೆ. ಇದಲ್ಲದೆ 2023ಕ್ಕೆ ಎದುರಾಗುವ ವಿಧಾನಸಭೆ ಚುನಾವಣೆ ಹಾಗೂ ಸ್ಥಳೀಯ ಸಂಸ್ಥೆಗಳು ಮತ್ತು ಬಿಬಿಎಂಪಿ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಬೇಕಾಗಿದೆ. ಈ ಎಲ್ಲಾ ನಿಟ್ಟಿನಲ್ಲಿ ರಾಜ್ಯ ನಾಯಕರ ಜತೆ ಚರ್ಚಿಸಿ ಒಂದು ಒಮ್ಮತದ ತೀರ್ಮಾನಕ್ಕೆ ಬರುವ ಸಲುವಾಗಿ ಸುರ್ಜೆವಾಲಾ ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ.

For All Latest Updates

ABOUT THE AUTHOR

...view details