ಬೆಂಗಳೂರು:ಲಾಕ್ಡೌನ್ ಹಿನ್ನೆಲೆಯಲ್ಲಿ ನ್ಯಾಯಾಲಯಗಳಿಗೂ ರಜೆ ಇರುವ ಕಾರಣ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಯುವ ವಕೀಲರಿಗೆ ನೆರವು ನೀಡಲು ಬೆಂಗಳೂರು ವಕೀಲರ ಸಂಘ ಮುಂದಾಗಿದೆ. ಈ ಕುರಿತು ಬೆಂಗಳೂರು ವಕೀಲರ ಸಂಘವು ಅರ್ಹ ಯುವ ವಕೀಲರಿಂದ ಅರ್ಜಿಗಳನ್ನು ಆಹ್ವಾನಿಸಿದೆ.
ಯುವ ವಕೀಲರಿಗೆ ನೆರವಿಗೆ ವಕೀಲರ ಸಂಘದ ನಿರ್ಧಾರ: ಅರ್ಜಿ ಆಹ್ವಾನ
ಹಿರಿಯ ವಕೀಲರು ತಮ್ಮ ಬಳಿ ಕಾರ್ಯ ನಿರ್ವಹಿಸುತ್ತಿರುವ ಕಿರಿಯ ವಕೀಲರಿಗೆ ಆದಷ್ಟು ಆರ್ಥಿಕ ನೆರವು ನೀಡಬೇಕು. ನಿಗದಿತ ಅವಧಿಯೊಳಗೆ ಸಂಬಳ ಮತ್ತಿತರ ಸವಲತ್ತುಗಳನ್ನು ಒದಗಿಸಬೇಕು ಎಂದು ಸಂಘದ ಅಧ್ಯಕ್ಷ ಎ.ಪಿ.ರಂಗನಾಥ್ ಮನವಿ ಮಾಡಿದ್ದಾರೆ.
ಕಿರಿಯ ವಕೀಲರು ಇ-ಮೇಲ್ ಮೂಲಕ ಅಥವಾ ಲಾಕ್ಡೌನ್ ಮುಗಿದ ನಂತರ ನೇರವಾಗಿ ಬೆಂಗಳೂರು ವಕೀಲರ ಸಂಘದ ಕಚೇರಿಗೆ ತೆರಳಿ ಅರ್ಜಿ ಸಲ್ಲಿಸಬಹುದು. 30 ವರ್ಷದೊಳಗಿನ ಹಾಗೂ 5 ವರ್ಷಕ್ಕಿಂತ ಕಡಿಮೆ ಸೇವಾನುಭವ ಹೊಂದಿರುವವರಿಗೆ ಮಾತ್ರ ಅವಕಾಶ ನೀಡಲಾಗಿದೆ.
ಬೇಕಾದ ದಾಖಲೆಗಳು?:ಲಾ ಚೇಂಬರ್ಸ್ ಮತ್ತು ಕಾರ್ಪೋರೇಟ್ ಕಚೇರಿಗಳಲ್ಲಿ ಕೆಲಸ ಮಾಡುತ್ತಿರುವ ಯುವ ವಕೀಲರಿಗೆ ಈ ಸೌಲಭ್ಯವಿಲ್ಲ ಎಂದು ಸಂಘ ತಿಳಿಸಿದೆ. ಅರ್ಜಿ ಸಲ್ಲಿಸುವ ಕಿರಿಯ ವಕೀಲರು ತಮ್ಮ ಹೆಸರು, ವಯಸ್ಸು, ವಿಳಾಸ, ಮೊಬೈಲ್ ಸಂಖ್ಯೆ, ವಕೀಲರ ಪರಿಷತ್ತಿನಿಂದ ಪಡೆದಿರುವ ನೋಂದಣಿ ಪತ್ರದ ನಕಲು, ಬೆಂಗಳೂರು ವಕೀಲರ ಸಂಘದಲ್ಲಿ ನೋಂದಣಿ ಮಾಡಿಸಿಕೊಂಡಿರುವ ದಾಖಲೆಯ ನಕಲು ಪ್ರತಿ ಹಾಗೂ ಬ್ಯಾಂಕ್ ಅಕೌಂಟ್ ಮಾಹಿತಿಯನ್ನು ಸಂಘದ ಇ-ಮೇಲ್ advocatesassociationbangalore@gmail.com ಗೆ ಏಪ್ರಿಲ್ 16ರ ಒಳಗೆ ಕಳುಹಿಸಿಕೊಡುವಂತೆ ಸೂಚಿಸಿದೆ.