ಬೆಂಗಳೂರು: ಜನೌಷಧಿ ಕೇಂದ್ರಗಳಲ್ಲಿ ಬ್ರಾಂಡೆಡ್ ಔಷಧ ಮಾರಾಟಕ್ಕೆ ಅವಕಾಶ ಕೊಡಲ್ಲ. ಆದರೆ ಮುಂದಿನ ದಿನಗಳಲ್ಲಿ ಕಡಿಮೆ ದರದಲ್ಲಿ ಆಯುರ್ವೇದಿಕ್ ಔಷಧ ನೀಡುವ ಕಾರ್ಯಕ್ಕೆ ಚಾಲನೆ ನೀಡಲಾಗುವುದು ಎಂದು ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ಸಚಿವ ಡಿ.ವಿ.ಸದಾನಂದಗೌಡ ತಿಳಿಸಿದರು.
ಹುಬ್ಬಳ್ಳಿಯಲ್ಲಿ ಪ್ರಧಾನಮಂತ್ರಿ ಜನೌಷಧಿ ಕೇಂದ್ರದ ಪ್ರಾಂತೀಯ ಕಚೇರಿಯನ್ನು ಬೆಂಗಳೂರಿನಲ್ಲಿ ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ಸಚಿವ ಡಿ.ವಿ.ಸದಾನಂದಗೌಡ ವರ್ಚುವಲ್ ಮೂಲಕ ಉದ್ಘಾಟಿಸಿದ ನಂತರ ಮಾತನಾಡಿ, ಜನರಿಗೆ ಅಗ್ಗದ ದರದಲ್ಲಿ ಗುಣಮಟ್ಟದ ಔಷಧಗಳನ್ನು ಕೊಡುವ ಕೆಲಸವನ್ನು ಇಂದು ಕೇಂದ್ರ ಸರ್ಕಾರ ಮಾಡಿದೆ. ಜನೌಷಧಿ ಮೂಲಕ ಜನರಿಗೆ ಶೇ. 10ರಿಂದ ಶೇ. 90ರವರೆಗೆ ರಿಯಾಯಿತಿ ದರದಲ್ಲಿ ಕೊಡಲಾಗುತ್ತದೆ ಎಂದು ತಿಳಿಸಿದರು.
ಜನೆರಿಕ್ ಮೆಡಿಸಿನ್ ಆ್ಯಪ್ ನಮ್ಮಲ್ಲಿದ್ದು, ನಿಮ್ಮ ಸಮೀಪದಲ್ಲಿ ಎಲ್ಲಿ ಜನೆರಿಕ್ ಔಷಧ ಮಳಿಗೆ ಇದೆ ಎಂದು ತಿಳಿಸುತ್ತದೆ. ಜೊತೆಗೆ ನಿಮಗೆ ಬೇಕಿರುವ ಔಷಧದ ಹೆಸರನ್ನು ಹಾಕಿದರೆ ಆ ಔಷಧದ ಫಾರ್ಮೂಲಾ ಹೊಂದಿರುವ ಇತರೆ ಬ್ರಾಂಡ್ನ ಯಾವ ಔಷಧ ಮಳಿಗೆಯಲ್ಲಿದೆ ಎಂಬುದನ್ನು ಆ್ಯಪ್ ತೋರಿಸುತ್ತದೆ. ಹೀಗಾಗಿ ರಾಜ್ಯದ ವಿವಿಧೆಡೆ ಶೀಘ್ರದಲ್ಲಿ 1000 ಜನೆರಿಕ್ ಔಷಧ ಮಳಿಗೆಗಳನ್ನು ತೆರೆಯುವ ಗುರಿ ಹಾಕಿಕೊಳ್ಳಲಾಗಿದೆ ಎಂದು ತಿಳಿಸಿದರು.
ಸಾಮಾನ್ಯ ಕಾಯಿಲೆಯಾದ ಬಿಪಿ, ಶುಗರ್ ಇದ್ದರೆ ಬ್ರಾಂಡೆಡ್ ಔಷಧಕ್ಕೆ ಸುಮಾರು 2 ಸಾವಿರದಿಂದ ಎರಡೂವರೆ ಸಾವಿರ ರೂಪಾಯಿ ಕೊಡಬೇಕು. ಆದರೆ ಜನೌಷಧಿ ಕೇಂದ್ರಗಳ ಮೂಲಕ ಕೇವಲ 400 ರೂಪಾಯಿಯಿಂದ 500 ರೂಪಾಯಿಗಳಷ್ಟು ಖರ್ಚಾಗುತ್ತಿದೆ ಎಂದು ತಿಳಿಸಿದರು.