ಕರ್ನಾಟಕ

karnataka

Rafael Scam: ಜಂಟಿ ಸದನ ಸಮಿತಿ ಮೂಲಕ ರಫೇಲ್ ಹಗರಣದ ತನಿಖೆಗೆ ಕೇಂದ್ರ ಸರ್ಕಾರ ಮುಂದಾಗಲಿ: ಪವನ್ ಖೇರಾ ಒತ್ತಾಯ

By

Published : Nov 13, 2021, 1:36 PM IST

Updated : Nov 13, 2021, 3:14 PM IST

ರಫೇಲ್ ಹಗರಣದ ತನಿಖೆ ಈಗಾಗಲೇ ಸಾಕಷ್ಟು ವಿಳಂಬವಾಗಿದ್ದು, ಇದರ ತನಿಖೆ ಕೇಂದ್ರದ ಜಂಟಿ ಸದನ ಸಮಿತಿ ಮೂಲಕ ನಡೆದರೆ ಸೂಕ್ತ ಎಂದು ಎಐಸಿಸಿ ವಕ್ತಾರ ಪವನ್ ಖೇರಾ ಹೇಳಿದ್ದಾರೆ.

ಪವನ್ ಖೇರಾ
ಪವನ್ ಖೇರಾ

ಬೆಂಗಳೂರು: ರಫೇಲ್ ಹಗರಣದ (Rafael Scam) ಬಗ್ಗೆ ಕೇಂದ್ರ ಸರ್ಕಾರ (Central Govt) ಕಾಲಾವಕಾಶ ನೀಡಿ ಸೂಕ್ತ ತನಿಖೆಯನ್ನು ಪೂರ್ಣಗೊಳಿಸುವ ಭರವಸೆ ನೀಡಬೇಕು ಎಂದು ಎಐಸಿಸಿ ವಕ್ತಾರ ಪವನ್ ಖೇರಾ (AICC spokesperson Pawan Khera) ಒತ್ತಾಯಿಸಿದ್ದಾರೆ.

ನಗರದ ಕೆಪಿಸಿಸಿ ಕಚೇರಿಯಲ್ಲಿ (KPCC Office) ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇಂಥದೊಂದು ಮಹತ್ವದ ಪ್ರಕರಣದ ತನಿಖೆ ಕೇಂದ್ರದ ಜಂಟಿ ಸದನ ಸಮಿತಿ (Joint Parliamentary Committee) ಮೂಲಕ ನಡೆದರೆ ಸೂಕ್ತ. ಈಗಾಗಲೇ ಸಾಕಷ್ಟು ವಿಳಂಬವಾಗಿದ್ದು, ಈಗಲಾದರೂ ಕೇಂದ್ರ ಸರ್ಕಾರ ಸೂಕ್ತ ತನಿಖೆಗೆ ಮುಂದಾಗಬೇಕು. ತ್ವರಿತವಾಗಿ ಹಗರಣಕ್ಕೆ ಒಂದು ತಾರ್ಕಿಕ ಅಂತ್ಯ ನೀಡಬೇಕು ಎಂದು ಒತ್ತಾಯಿಸಿದರು.

ಕೆಪಿಸಿಸಿ ಕಚೇರಿಯಲ್ಲಿ ಪವನ್ ಖೇರಾ ಸುದ್ದಿಗೋಷ್ಠಿ

ತಮಗೆ ಬೇಕಿದ್ದ ಅಧಿಕಾರಿ ನೇಮಿಸಿಕೊಂಡ ಕೇಂದ್ರ ಸರ್ಕಾರ

ರಫೇಲ್ ಹಗರಣ ಕುರಿತು 2017ನಿಂದ ಕೇಂದ್ರ ಸರ್ಕಾರ ಗಮನ ಸೆಳೆಯುತ್ತಲೇ ಇದೆ. ಈಗ ಫ್ರೆಂಚ್ ಮಾಧ್ಯಮದ ಮೂಲಕ ಹೊಸದೊಂದು ಮಾಹಿತಿ ಹೊರಬಿದ್ದಿದೆ. ಡಾ. ಮನಮೋಹನ್ ಸಿಂಗ್ ಅಧಿಕಾರದಲ್ಲಿದ್ದಾಗ ಅತ್ಯಂತ ವ್ಯವಸ್ಥಿತವಾಗಿ ರಫೇಲ್ ಖರೀದಿ ತಡೆದಿದ್ದರು. ಆದರೆ, ನರೇಂದ್ರ ಮೋದಿ ಪ್ರಧಾನಿ ಆದ ಬಳಿಕ ತಮ್ಮ ಸ್ನೇಹಿತ ಉದ್ಯಮಿ ಅನಿಲ್ ಅಂಬಾನಿ ಜತೆ ತೆರಳಿ ಹೊಸ ಡೀಲ್ ಮಾಡಿಕೊಂಡು ವಾಪಸಾದರು.

ಎಚ್ಎಎಲ್ ಇದ್ದ ಸ್ಥಾನಕ್ಕೆ ಅಂಬಾನಿ‌ ಹೆಸರು ಸೇರ್ಪಡೆಯಾಯಿತು. ಬೆಲೆ ಸಹ ದೊಡ್ಡ ಮಟ್ಟದಲ್ಲಿ ಹೆಚ್ಚಳ ಆಯಿತು. ಅನುಮಾನ ಹೆಚ್ಚಾದಾಗ ರಾತ್ರೋರಾತ್ರಿ ತನಿಖೆ ನಡೆಸಬೇಕಿದ್ದ ಅಧಿಕಾರಿಯನ್ನು ಕೆಳಗಿಳಿಸಿ ತಮಗೆ ಬೇಕಿದ್ದ ಅಧಿಕಾರಿಯನ್ನು ಕೇಂದ್ರ ಸರ್ಕಾರ ನೇಮಿಸಿಕೊಂಡಿತು. ಇಂದಿಗೂ ಅದರ ತನಿಖೆಯ ಪ್ರಗತಿಯ ವಿವರ ಇಲ್ಲವಾಗಿದೆ ಎಂದು ಪವನ್ ಖೇರಾ ಆರೋಪಿಸಿದರು.

ಯಾಕೆ ತನಿಖೆ ವಿಳಂಬ?

2017 ರಿಂದ ಇಂದಿನವರೆಗೂ ತನಿಖೆ ಪ್ರಗತಿ ಕಂಡಿಲ್ಲ. ಯಾವುದೇ ಕ್ರಮ, ಬಂಧನ ಆಗಿಲ್ಲ. ಸಿಬಿಐ ಮೂಲಕ ತನಿಖೆ ಏಕೆ ಆಗುತ್ತಿಲ್ಲ? ಸುಶೇನ್ ಗುಪ್ತಾ ವಿರುದ್ಧ ಕ್ರಮ ಆಗಿಲ್ಲ. ಮೋದಿ ಸರ್ಕಾರದಲ್ಲಿ ಇಡಿ, ಸಿಬಿಐ ಸ್ವಾತಂತ್ರ್ಯ ತಡೆದವರು ಯಾರು. ದಾಸೋ ಎಂಬಾತನ ವಿರುದ್ಧ ಯಾಕೆ ಕ್ರಮ ಆಗಿಲ್ಲ. ಭ್ರಷ್ಟಾಚಾರ ಹೆಚ್ಚಾಗಿದೆ. ಮನಮೋಹನ್ ಸಿಂಗ್ ತಡೆದಿದ್ದ ಡೀಲ್ ಅನ್ನು ದೇಶದ ಪ್ರಧಾನಿಯಾದ ಮೋದಿ ವಿಶೇಷ ಆಸಕ್ತಿ ವಹಿಸಿ ತಡೆಯಾಜ್ಞೆಯನ್ನು ತೆಗೆದು ಹಾಕಿದರು.

ಅಂಬಾನಿ ಜತೆ ಪ್ಯಾರಿಸ್​​​ಗೆ ತೆರಳಿ ಎಲ್ಲ ಕಾರ್ಯವನ್ನು ಖಾಸಗಿಯಾಗಿ ಮಾಡಿದರು. ದಾಖಲೆ ಇರುವಾಗ ಪ್ರತಿಪಕ್ಷ ಕಾಂಗ್ರೆಸ್ ನಾಯಕರ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ ಬಳಸಿಕೊಳ್ಳುವ ಕೇಂದ್ರ ಸರ್ಕಾರ ಯಾಕೆ ಈ ವಿಚಾರದ ತನಿಖೆ ವಿಳಂಬ ಮಾಡುತ್ತಿದೆ ಎಂದು ಪ್ರಶ್ನೆಗಳ ಸುರಿಮಳೆಯನ್ನೇ ಹರಿಸಿದರು.

ಇದನ್ನೂ ಓದಿ: ಮತಾಂತರ ನಿಷೇಧ ಕಾಯ್ದೆ ಜಾರಿಗೆ ಮಠಾಧಿಪತಿಗಳಿಂದ ಒತ್ತಾಯ : ಪರಿಶೀಲಿಸುವುದಾಗಿ ಸಿಎಂ ಭರವಸೆ

ಸಿಬಿಐ ತನಿಖೆ ಹಳ್ಳ ಹಿಡಿದಿದ್ದು ಹೀಗೆ..

ರಫೇಲ್ ವಿಮಾನ ಖರೀದಿ ಹಗರಣ ಬಹಿರಂಗವಾಗಿದೆ. ಅತ್ಯಧಿಕ ಹಣ ನೀಡಿ ಕೇಂದ್ರ ಸರ್ಕಾರದಿಂದ ಖರೀದಿ ಆಗಿದೆ. ರಫೇಲ್ ಯುದ್ಧ ವಿಮಾನಗಳನ್ನ ಖರೀದಿಸಿದೆ. ಹೆಚ್ಎಎಲ್ ಗೆ ನೀಡಬೇಕಿದ್ದ ಟೆಂಡರ್ ಬೇರೆಯವರಿಗೆ ಕೊಟ್ಟಿದ್ದರು. ಫ್ರೆಂಚ್ ನ ದಸಾಲ್ಟ್ ಸಂಸ್ಥೆಗೆ ನೀಡಿದ್ದರು. 526 ಕೋಟಿ ರೂ. ನೀಡಿ ಯುದ್ಧ ವಿಮಾನಗಳ ಖರೀದಿಸಲಾಗಿದೆ. ಡಸಾಲ್ಟ್ ಕಂಪನಿಯಲ್ಲಿ ಅಂಬಾನಿ ಷೇರಿದೆ. ಅಂಬಾನಿಯಿಂದಾಗಿಯೇ ಇದನ್ನ ನೀಡಲಾಗಿತ್ತು.

ಟೆಂಡರ್ ವೇಳೆ ಅಕ್ರಮ ನಡೆದಿತ್ತು. ಹಗರಣದ ತನಿಖೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಕೋರ್ಟ್ ನಿರ್ದೇಶನದಂತೆ ಕೇಸ್ ಸಿಬಿಐಗೆ ವರ್ಗಾಯಿಸಿದ್ದರು. ತನಿಖೆ ಕೈಗೆತ್ತಿಕೊಂಡ ವೇಳೆ ಅದರ ನಿರ್ದೇಶಕರ ಬದಲಾವಣೆಯಾಯ್ತು. ಬೇರೆ ಆರೋಪಗಳನ್ನ ಮಾಡಿ ಅಲೋಕ್ ವರ್ಮಾ ವರ್ಗಾಯಿಸಲಾಯ್ತು. ಹೀಗಾಗಿ ಈ ಹಗರಣ ನೆನೆಗುದಿಗೆ ಬಿದ್ದಿದೆ. ಇಲ್ಲಿಯವರೆಗೆ ಪ್ರಕರಣದ ತನಿಖೆ ನಡೆದಿಲ್ಲ. ಇಡಿ ತನಿಖೆಯೂ‌ ಆಗಲಿಲ್ಲ, ಸಿಬಿಐ ತನಿಖೆಯೂ ಆಗಲಿಲ್ಲ. ಕೇಂದ್ರ ಸರ್ಕಾರವೇ ಈ ಹಗರಣದ ಹಿಂದಿದೆ. ಹಾಗಾಗಿ ಸಿಬಿಐ ತನಿಖೆ ಹಳ್ಳ ಹಿಡಿದಿದೆ ಎಂದು ಹೇಳಿದರು.

ಸುಶೇನ್​ ಗುಪ್ತಾ ಮೇಲೆ ಹಲವು ಆರೋಪಗಳಿವೆ

ಸುಶೇನ್ ಗುಪ್ತಾ ರಫೇಲ್ ಖರೀದಿಯಲ್ಲಿ‌ ಮಧ್ಯವರ್ತಿ. ಇವನ ಮೇಲೆ ಹಲವು ಆರೋಪಗಳಿವೆ. ಇಂತಹವನು ವಿಮಾನ ಖರೀದಿಯಲ್ಲಿ ಮಧ್ಯವರ್ತಿಯಾಗಿದ್ದಾನೆ. ಸುಶೇನ್ ಗುಪ್ತಾ ಅಗಸ್ಟಾ ವೆಸ್ಟ್ ಲ್ಯಾಂಡ್ ಖರೀದಿಯಲ್ಲೂ ಇದ್ದ. ಸಿಬಿಐ ತನಿಖೆಯನ್ನ ಎದುರಿಸಿದವನು. ಇಂತವನು ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ ಭಾಗಿಯಾಗಿದ್ದಾನೆ. ಕಿಕ್ ಬ್ಯಾಕ್ ಮೂಲಕ ಕೇಂದ್ರ ಸರ್ಕಾರ ಒಪ್ಪಿಸಿದ್ದಾನೆ. 1.1 ಮಿಲಿಯನ್ ಯೂರೋ ಇದರಲ್ಲಿ ಕಿಕ್ ಬ್ಯಾಕ್ ಆಗಿದೆ. ಕೇಂದ್ರ ನಾಯಕರ ಮೇಲೆ ಕಿಕ್ ಬ್ಯಾಕ್ ಆರೋಪವಿದೆ. ಪ್ರಧಾನಿಯವರೇ ಇದಕ್ಕೆ ಉತ್ತರಿಸಬೇಕು ಎಂದು ಪವನ್ ಖೇರಾ ಒತ್ತಾಯಿಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ ವಿ ಶ್ರೀನಿವಾಸ್ ಮತ್ತಿತರ ಕೈ ನಾಯಕರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Last Updated : Nov 13, 2021, 3:14 PM IST

ABOUT THE AUTHOR

...view details