ಬೆಂಗಳೂರು :ಸಾಕಷ್ಟು ಸವಾಲು, ಸಂಕಷ್ಟಗಳ ನಡುವೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರ 6 ತಿಂಗಳು ಪೂರೈಸಿದೆ. ಉಪ ಚುನಾವಣೆಗಳಲ್ಲಿ ಹಿನ್ನಡೆ ಅನುಭವಿಸಿದ ಕಹಿಯೊಂದಿಗೆ ಅಧಿಕಾರಕ್ಕೆ ಬಂದ ದಿನದಿಂದಲೂ ಒಂದಿಲ್ಲೊಂದು ಹೊಸ ಯೋಜನೆಯನ್ನು ತರುವ ಮೂಲಕ ರಾಜ್ಯದ ಜನತೆಯ ಗಮನ ಸೆಳೆದಿದ್ದಾರೆ. ಸಿಂಪಲ್ ಸಿಎಂ ಎನ್ನುವ ಹೆಸರು ಪಡೆದುಕೊಂಡಿದ್ದಾರೆ.
ರಾಜ್ಯದಲ್ಲಿ ನಾಯಕತ್ವ ಬದಲಾವಣೆ ನಂತರ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿ 6 ತಿಂಗಳು ಕಳೆದಿವೆ. ಸಾಕಷ್ಟು ನಿರೀಕ್ಷೆಗಳೊಂದಿಗೆ ಅಧಿಕಾರಕ್ಕೇರಿದ ಬೊಮ್ಮಾಯಿ 6 ತಿಂಗಳಿನಲ್ಲಿ ಸಾಕಷ್ಟು ಕೆಲಸ ಕಾರ್ಯ ಮಾಡಿದ್ದಾರೆ. ಜನರಿಗೆ ಸ್ಪಂದಿಸುವ ಕೆಲಸ ಮಾಡಿದ್ದಾರೆ.
ಜನರ ಅಹವಾಲು ಸ್ವೀಕರಿಸಿದ ಕಾಮನ್ಮ್ಯಾನ್ ಸಿಎಂ ಬೊಮ್ಮಾಯಿ 'ಭವ್ಯ ಭವಿಷ್ಯಕ್ಕಾಗಿ ಭರವಸೆಯ ಹೆಜ್ಜೆಗಳು' ಎನ್ನುವ ಧ್ಯೇಯ ವಾಕ್ಯದೊಂದಿಗೆ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದ್ದಾರೆ. ಪ್ರತಿಪಕ್ಷಗಳ ಟೀಕೆ, ಬಿಟ್ ಕಾಯಿನ್ ಹಗರಣ ಆರೋಪ, ಉಪ ಸಮರದಲ್ಲಿ ತವರು ಜಿಲ್ಲೆಯಲ್ಲೇ ಸೋಲು, ಪರಿಷತ್ ಕದನದಲ್ಲೂ ಹಿನ್ನಡೆಯಂತಹ ಕಹಿ ಘಟನೆಗಳ ಜೊತೆ ಜೊತೆಯಲ್ಲಿ ಅಭಿವೃದ್ಧಿ ಕಾರ್ಯಗಳ ಮೂಲಕ ಸಿಎಂ ಜನರನ್ನು ತಲುಪಿದ್ದಾರೆ.
ರೈತ ಮಕ್ಕಳಿಗೆ ಶಿಕ್ಷಣ :ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡುತ್ತಿದ್ದಂತೆ ಬಸವರಾಜ ಬೊಮ್ಮಾಯಿ ಮಾಡಿದ ಮೊದಲ ಕೆಲಸವೆಂದರೆ, ರೈತರ ಮಕ್ಕಳ ಶಿಕ್ಷಣಕ್ಕೆ ವಿಶೇಷ ಕೊಡುಗೆಯಾಗಿ 'ಮುಖ್ಯಮಂತ್ರಿ ರೈತ ವಿದ್ಯಾನಿಧಿ' ಯೋಜನೆ ಜಾರಿ ಮಾಡಿದ್ದು. 1,000 ಕೋಟಿ ರೂ. ಹಣವನ್ನು ಮೀಸಲಿರಿಸಿ 19 ಲಕ್ಷ ರೈತ ಮಕ್ಕಳಿಗೆ ಲಾಭವಾಗುವ ಯೋಜನೆ ಪ್ರಕಟಿಸಿದರು.
ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ :ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತಂದ ಮೊದಲ ರಾಜ್ಯ ಕರ್ನಾಟಕ. ಬೊಮ್ಮಾಯಿ ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಒಪ್ಪಿಕೊಂಡು ಜಾರಿಗೆ ತಂದಿದೆ. ಇದರ ಜೊತೆ ಸಂಧ್ಯಾ ಸುರಕ್ಷಾ ಯೋಜನೆಯ ಪಿಂಚಣಿ 1,200 ರೂ.ಗಳಿಗೆ ಹೆಚ್ಚಳ, ವಿಧವಾ ವೇತನ 800 ರೂ. ಗಳಿಗೆ ಏರಿಕೆ, ದಿವ್ಯಾಂಗಿಗಳ ಮಾಸಿಕ ವೇತನ 800 ರೂ. ಗಳಿಗೆ ಹೆಚ್ಚಳ ಮಾಡಿ ಆದೇಶಿಸಲಾಗಿದೆ.
ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಮೃತ ಯೋಜನೆಗಳ ಘೋಷಣೆ, ಸರ್ಕಾರದ ವತಿಯಿಂದ ಸಂಗೊಳ್ಳಿ ರಾಯಣ್ಣ ಜಯಂತಿ ಆಚರಣೆ ಘೋಷಣೆ, ಪರಿಶಿಷ್ಟ ವರ್ಗಗಳ ಅಭಿವೃದ್ಧಿಗಾಗಿ ಪ್ರತ್ಯೇಕ ಸಚಿವಾಲಯ ಸ್ಥಾಪನೆ ಮಾಡಲಾಗಿದೆ. ಕರ್ನಾಟಕ ಪೊಲೀಸ್ ಕಾಯ್ದೆಗೆ ತಿದ್ದುಪಡಿ ತಂದು ಆನ್ಲೈನ್ ಜೂಜು ಮತ್ತು ಬೆಟ್ಟಿಂಗ್ಗಳನ್ನು ಶಿಕ್ಷಾರ್ಹ ಅಪರಾಧ ಎಂದು ಘೋಷಣೆ ಮಾಡಿದೆ.
ಅಭಿವೃದ್ಧಿಗೆ ಅನುದಾನ :ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಹೆಚ್ಚುವರಿಯಾಗಿ 1,500 ಕೋಟಿ ರೂ.ಗಳ ಅನುದಾನ ನೀಡಲು ಘೋಷಿಸಿದೆ. ಮುಂಬೈ ಕರ್ನಾಟಕ ಪ್ರದೇಶವನ್ನು 'ಕಿತ್ತೂರು ಕರ್ನಾಟಕ' ಎಂದು ಮರು ನಾಮಕರಣ ಮಾಡುವುದಾಗಿ ಪ್ರಕಟಿಸಿದೆ. ಜೊತೆಗೆ ರಾಜ್ಯದ 31ನೇ ಹೊಸ ಜಿಲ್ಲೆಯಾಗಿ ವಿಜಯಪುರವನ್ನು ಘೋಷಿಸಲಾಗಿದೆ.
ಸಂಗೊಳ್ಳಿ ರಾಯಣ್ಣ ಜಯಂತಿಯಲ್ಲಿ ಸಿಎಂ ಭಾಗಿ ಆನ್ಲೈನ್ ಸೇವೆ :ಗ್ರಾಮ ಪಂಚಾಯತ್ ಹಂತದಲ್ಲಿ ನಾಗರಿಕ ಸೇವೆಗಳನ್ನು ಆನ್ಲೈನ್ ಮೂಲಕ ಒದಗಿಸುವ 'ಗ್ರಾಮ ಸೇವಾ ಯೋಜನೆ'ಗೆ ಪ್ರಾಯೋಗಿಕ ಚಾಲನೆ ನೀಡಿದೆ. ಕೃಷ್ಣಾ ಮೇಲ್ದಂಡೆ ಯೋಜನೆಯ ಭೂಸ್ವಾಧೀನ ಪ್ರಕ್ರಿಯೆಗೆ 20 ಗ್ರಾಮಗಳ ಸ್ಥಳಾಂತರ ಮಾಡಲು ಎರಡು ಸಾವಿರ ಕೋಟಿ ಅನುದಾನ ಒದಗಿಸಲು ಘೋಷಣೆ ಮಾಡಲಾಗಿದೆ.
ಕೃಷ್ಣರಾಜಸಾಗರ ಅಣೆಕಟ್ಟು ಮತ್ತು ವಿಶ್ವೇಶ್ವರಯ್ಯ ನಾಲೆಯ ಸಂಪೂರ್ಣ ಆಧುನೀಕರಣಕ್ಕೆ ಮುಂದಾಗಿದ್ದು, 500 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. 1,600 ಕಿಲೋಮೀಟರ್ ಉದ್ದದ ಆಧುನೀಕರಣ ಪ್ರಸ್ತಾವನೆಗೆ ಅನುಮೋದನೆ ನೀಡಲಾಗುತ್ತಿದೆ. ಎತ್ತಿನಹೊಳೆ ಯೋಜನೆಯ ತ್ವರಿತ ಅನುದಾನಕ್ಕೆ ತೀರ್ಮಾನಿಸಿದೆ.
ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಗಳ ಡ್ಯಾಶ್ ಬೋರ್ಡ್ :ಪ್ರಧಾನಿ ಡ್ಯಾಶ್ ಬೋರ್ಡ್ ಮಾದರಿಯಲ್ಲಿ ಕರ್ನಾಟಕದಲ್ಲಿ ಮುಖ್ಯಮಂತ್ರಿಗಳ ಡ್ಯಾಶ್ ಬೋರ್ಡ್ ಆರಂಭಿಸಿದ್ದು, ವಿವಿಧ ಇಲಾಖೆಯ ಪ್ರಗತಿಯಲ್ಲಿ ಕ್ಷಿಪ್ರ ನೋಟ ಲಭ್ಯವಾಗಲಿದೆ. ಸಾರಿಗೆ ಇಲಾಖೆಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯ ಚಟುವಟಿಕೆಗಳಿಗೆ ಸಂಬಂಧಿಸಿದ 30 ಸೇವೆಗಳ ಆನ್ಲೈನ್ ವ್ಯವಸ್ಥೆ ಮಾಡಲಾಗಿದೆ.
ಜನಸೇವಕ ಯೋಜನೆ ಜಾರಿ:ನಾಗರಿಕರ ಸಮಯದ ಉಳಿತಾಯಕ್ಕೆ ಅನುಕೂಲವಾಗುವಂತೆ ಮತ್ತು ವಿಶೇಷವಾಗಿ ಹಿರಿಯ ನಾಗರಿಕರು ಮತ್ತು ದಿವ್ಯಾಂಗರಿಗೆ ನೆರವಾಗಲು ಸರ್ಕಾರದ 5ಕ್ಕೂ ಹೆಚ್ಚಿನ ನಾಗರಿಕ ಸೇವೆಗಳನ್ನು ಜನರ ಮನೆ ಬಾಗಿಲಿಗೆ ಒದಗಿಸಲು ಜನಸೇವಕ ಯೋಜನೆ ಜಾರಿ ಮಾಡಲಾಗಿದೆ. ಸದ್ಯ ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳಲ್ಲಿ ಯೋಜನೆ ಜಾರಿ ಮಾಡಿದ್ದು, ಜನವರಿ 26ಕ್ಕೆ ರಾಜ್ಯಾದ್ಯಂತ ಇದನ್ನು ವಿಸ್ತರಣೆ ಮಾಡುವುದಾಗಿ ಘೋಷಿಸಿದೆ.
ರಾಜ್ಯೋತ್ಸವ ಪ್ರಶಸ್ತಿ ಪ್ರಕ್ರಿಯೆ :ಮುಂದಿನ ವರ್ಷದಿಂದ ರಾಜ್ಯೋತ್ಸವ ಪ್ರಶಸ್ತಿಗೆ ನಗದು ಪುರಸ್ಕಾರವನ್ನು 1 ಲಕ್ಷದಿಂದ 5 ಲಕ್ಷ ರೂ.ಗಳಿಗೆ ಹೆಚ್ಚಿಸಲು ನಿರ್ಧರಿಸಿದೆ. ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸುವ ವ್ಯವಸ್ಥೆಗೆ ತಿಲಾಂಜಲಿ ಹಾಡಿ ಸಮಿತಿಯೇ ಆಯ್ಕೆ ಮಾಡುವ ವ್ಯವಸ್ಥೆ ತರುವುದಾಗಿ ಘೋಷಿಸಿದೆ.
ಮಕ್ಕಳಿಗೆ ಲಸಿಕೆ ನೀಡಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಿಎಂ ಬೊಮ್ಮಾಯಿ ಕರ್ನಾಟಕ ಲಾಕ್ ಮಾಡದ ಹೆಗ್ಗಳಿಕೆ :ಕೋವಿಡ್ ಕೇಸ್ಗಳ ಸಂಖ್ಯೆ ಪ್ರತಿ ದಿನ ಅರ್ಧ ಲಕ್ಷ ತಲುಪಿದರೂ ಕರ್ನಾಟಕವನ್ನು ಲಾಕ್ ಮಾಡುವ ದುಸ್ಸಾಹಸಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೈಹಾಕಲಿಲ್ಲ. ವೀಕೆಂಡ್ ಕರ್ಫ್ಯೂ ಜಾರಿಗೆ ತಂದರೂ ಎರಡು ವಾರಕ್ಕೆ ತೆರವುಗೊಳಿಸಿ ಜನಮನ್ನಣೆ ಗಳಿಸಿದರು. ಅನ್ಲಾಕ್ನಲ್ಲೇ ಕೋವಿಡ್ ನಿಯಂತ್ರಣಕ್ಕೆ ಯತ್ನಿಸಿ ಜನರ ವಿಶ್ವಾಸ ಗಳಿಸಿಕೊಳ್ಳುತ್ತಿದ್ದಾರೆ.
2240 ಕೋಟಿ ಪೂರಕ ಅನುದಾನ ಒದಗಿಸಿ ಕೊರೊನಾ ಮೂರನೇ ಅಲೆ ನಿಯಂತ್ರಣಕ್ಕೆ ಯತ್ನ, 52 ಲಕ್ಷ ರೈತರ ಮಕ್ಕಳಿಗೆ ವಿದ್ಯಾನಿಧಿ ನೆರವು, ಕಾರ್ಮಿಕರ ಕಲ್ಯಾಣಕ್ಕಾಗಿ 237 ಕೋಟಿ ಮೊತ್ತದ ನೆರವು,ಬೆಂಗಳೂರು ನಗರದ ಮೂಲಸೌಕರ್ಯ ಅಭಿವೃದ್ಧಿಗೆ 6 ಸಾವಿರ ಕೋಟಿ ಅನುದಾನ, ನಗರ ಸ್ಥಳೀಯ ಸಂಸ್ಥೆ ಮೇಲ್ದರ್ಜೆಗೇರಿಸಲು 3885 ಕೋಟಿ ಅನುದಾನ, ನೀರಾವರಿಗೆ 6308 ಕೋಟಿ, ವಸತಿ ಯೋಜನೆಗೆ 1096 ಕೋಟಿ ಖರ್ಚು, ಪರಿಶಿಷ್ಟ ಜಾತಿ/ವರ್ಗಕ್ಕೆ ಪ್ರತ್ಯೇಕ ಸಚಿವಾಲಯ ಸೇರಿದಂತೆ ಹತ್ತು ಹಲವು ಕಾರ್ಯಗಳನ್ನು ಮಾಡಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಿಎಂ ಬಸವರಾಜ ಬೊಮ್ಮಾಯಿ ಮುಂದಿರುವ ಸವಾಲುಗಳೇನು?:ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮುಂದೆ ಬಹುದೊಡ್ಡ ಸವಾಲುಗಳಿವೆ. ಯಡಿಯೂರಪ್ಪ ಸ್ಥಾನ ತುಂಬುವ ಗುರುತರ ಜವಾಬ್ದಾರಿ ಇದೀಗ ಬೊಮ್ಮಾಯಿ ಮೇಲಿದೆ. ಮಾಸ್ ಇಮೇಜ್ ಇರುವ ಯಡಿಯೂರಪ್ಪ ನಾಯಕತ್ವಕ್ಕೆ ಪರ್ಯಾಯವಾದ ಇಮೇಜ್ ಅನ್ನು ಬೊಮ್ಮಾಯಿ ಬೆಳೆಸಿಕೊಳ್ಳಬೇಕಿದೆ. ಸಾಲು ಸಾಲು ಚುನಾವಣೆಗಳಲ್ಲಿ ಮೇಲುಗೈ ಸಾಧಿಸುವ ಮೂಲಕ ಇದೀಗ ಬೊಮ್ಮಾಯಿ ತಮ್ಮ ನಾಯಕತ್ವವನ್ನು ಸಮರ್ಥಿಸಿಕೊಳ್ಳಬೇಕಿದೆ.
ಬಿಬಿಎಂಪಿ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ಬಹುದೊಡ್ಡ ಸವಾಲು ಇದೆ. ಇದಕ್ಕಾಗಿ ಹೆಚ್ಚಿನ ಆಸಕ್ತಿ ತೋರಿ ಸಚಿವರಿಗೆ ಜವಾಬ್ದಾರಿ ಹಂಚಿಕೆ ಮಾಡಿ, ಅನುದಾನ ನೀಡಿ ಇನ್ನಿಲ್ಲದ ಸರ್ಕಸ್ ನಡೆಸುತ್ತಿದ್ದಾರೆ. ಶತಾಯಗತಾಯ ಪಾಲಿಕೆ ಗದ್ದುಗೆ ಏರಲೇಬೇಕಾದ ಅನಿವಾರ್ಯತೆ ಇದೆ. ಇದರ ನಂತರ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆಗಳು ಎದುರಾಗಲಿವೆ. ಅಲ್ಲಿಯೂ ಈ ಬಾರಿ ಹೆಚ್ಚಿನ ಸ್ಥಾನ ಗಳಿಸಿ ಪಕ್ಷ ಹಾಗೂ ಸರ್ಕಾರದ ಇಮೇಜ್ ಬಗ್ಗೆ ಹೈಕಮಾಂಡ್ಗೂ ಸಂದೇಶ ರವಾನಿಸಬೇಕಿದೆ.
ಸಿಎಂ ಬದಲು ಚರ್ಚೆಗೆ ಬೀಳಬೇಕಿದೆ ಪೂರ್ಣ ವಿರಾಮ :ಮತ್ತೆ ನಾಯಕತ್ವ ಬದಲಾವಣೆಯ ಆಗಬಹುದು ಎನ್ನುವ ಮಾತುಗಳು ಕೇಳಿ ಬರಲು ಶುರುವಾಗಿವೆ. ಇದಕ್ಕೆಲ್ಲಾ ಫುಲ್ ಸ್ಟಾಪ್ ಹಾಕಬೇಕಾದರೆ ಬೊಮ್ಮಾಯಿ ನೇತೃತ್ವಕ್ಕೆ ಈಗ ದೊಡ್ಡ ಗೆಲುವು ಬೇಕಾಗಿದೆ. ಬಿಬಿಎಂಪಿ, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ನಲ್ಲಿ ಬೊಮ್ಮಾಯಿ ಅದನ್ನು ಸಾಬೀತುಪಡಿಸಬೇಕಿದೆ.
ಮುಂದಿನ ಸಾರ್ವತ್ರಿಕ ಚುನಾವಣೆ ಬೊಮ್ಮಾಯಿ ನೇತೃತ್ವದಲ್ಲಿ ನಡೆಯಲಿದೆ ಎಂದು ಈಗಾಗಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಘೋಷಣೆ ಮಾಡಿದ್ದು, ಅದನ್ನು ಸಮರ್ಥಿಸಿಕೊಂಡು ಮುಂದಿನ ಚುನಾವಣೆಯ ನೇತೃತ್ವವಹಿಸಿಕೊಳ್ಳಲು ಬೊಮ್ಮಾಯಿ ಈಗ ಎದುರಾಗಲಿರುವ ಎಲ್ಲ ಚುನಾವಣೆಗಳಲ್ಲಿಯೂ ಮೇಲುಗೈ ಸಾಧಿಸಬೇಕಿದೆ.
ಬಜೆಟ್ನಲ್ಲಿ ಜನಪ್ರಿಯ ಯೋಜನೆ ಘೋಷಣೆ :ಚುನಾವಣಾ ವರ್ಷವಾಗಿರುವ ಹಿನ್ನೆಲೆಯಲ್ಲಿ ಇದೊಂದು ಬಜೆಟ್ ಮಾತ್ರ ಪೂರ್ಣ ಪ್ರಮಾಣದಲ್ಲಿ ಬಳಕೆಗೆ ಸಾಧ್ಯವಿದೆ. ಹಾಗಾಗಿ, ಜನಪ್ರಿಯ ಯೋಜನೆಗಳನ್ನು ಘೋಷಿಸಿ ಅನುಷ್ಠಾನಕ್ಕೆ ತರಬೇಕಾದ ಗುರುತರ ಜವಾಬ್ದಾರಿ ಈಗ ಬೊಮ್ಮಾಯಿ ಮೇಲಿದೆ. ಕೋವಿಡ್ ಕಾರಣದಿಂದ ಬೊಕ್ಕಸಕ್ಕೆ ಬರುವ ಹಣ ಕಡಿಮೆಯಾಗಿದ್ದರೂ ಬಜೆಟ್ ಗಾತ್ರ ಕಡಿಮೆ ಮಾಡದೆ ಮುಂದುವರೆಯಬೇಕಿದೆ.
ಜೊತೆಗೆ ಸಂಪುಟದಲ್ಲಿ ಇರುವ ನಾಲ್ಕು ಖಾಲಿ ಸ್ಥಾನಗಳ ಭರ್ತಿ, ಅಸಮರ್ಥ ಸಚಿವರನ್ನು ಕೈಬಿಟ್ಟು ಅಸಮeಧಾನ ಏಳದಂತೆ ನೋಡಿಕೊಂಡು ಚುನಾವಣಾ ಕ್ಯಾಬಿನೆಟ್ ರಚಿಸಬೇಕಾದ ಹೊಣೆಗಾರಿಕೆ ಈಗ ಬೊಮ್ಮಾಯಿ ಮುಂದಿದೆ.
ಜಾಹೀರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ