ಕರ್ನಾಟಕ

karnataka

By

Published : Aug 6, 2021, 8:13 PM IST

ETV Bharat / city

ಮೊಟ್ಟೆ ಟೆಂಡರ್ ಡೀಲ್ ಪ್ರಕರಣ.. ಯಾವುದೇ ತನಿಖೆಗೆ ಸಿದ್ಧ : ಸಚಿವೆ ಶಶಿಕಲಾ ಜೊಲ್ಲೆ

ನಾನು ಯಾವುದೇ ತಪ್ಪು ಮಾಡಿಲ್ಲ. ಆ ರೀತಿಯ ತಪ್ಪು ಮಾಡುವ ಅವಶ್ಯಕತೆಯೂ ನನಗಿಲ್ಲ. ಹೀಗಾಗಿ, ಇದರ ಬಗ್ಗೆ ತನಿಖೆಯಾಗಲಿ. ಏನು ವರದಿ ಬರುತ್ತೆ ಬರಲಿ. ನಾನು ಎಲ್ಲದಕ್ಕೂ ಸಿದ್ಧಳಿದ್ದೇನೆ. ನಾನು ಯಾವುದೇ ಮಾತುಕತೆ ಮಾಡಿಲ್ಲ. ನನ್ನ ಮೇಲೆ ಅಪವಾದ ಹೊರಸಲು ಅನೇಕ ಶತ್ರುಗಳು ಷಡ್ಯಂತ್ರ ಹೆಣಿದಿದ್ದಾರೆ. ನಾನೂ ಜಿದ್ದಿನಿಂದಲೇ ಸವಾಲಾಗಿ ಸ್ವೀಕರಿಸಿದ್ದೇನೆ..

Minister shashikala jolle
ಸಚಿವೆ ಶಶಿಕಲಾ ಜೊಲ್ಲೆ

ಬೆಳಗಾವಿ :ನನ್ನ ಏಳಿಗೆ ಸಹಿಸಲಾಗದವರು ನನ್ನ ವಿರುದ್ಧ ಷಡ್ಯಂತ್ರ ಮಾಡಿದ್ದಾರೆ. ಈ ವಿಷಯವನ್ನು ಜಿದ್ದಿನಿಂದಲೇ ಸವಾಲಾಗಿ ಸ್ವೀಕರಿಸಿದ್ದೇನೆ. ಈ ಆರೋಪದ ಬಗ್ಗೆ ಯಾವುದೇ ತನಿಖೆಗೆ ಸಿದ್ಧ ಎಂದು ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

ತಮ್ಮ ವಿರುದ್ಧ ಕೇಳಿ ಬಂದ ಭ್ರಷ್ಟಾಚಾರ ಆರೋಪದ ಬಗ್ಗೆ ಬೆಳಗಾವಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ರಾಜಕೀಯದಲ್ಲಿ ಓರ್ವ ಹೆಣ್ಣು ಮಗಳಾಗಿ ಒಳ್ಳೆಯ ಕೆಲಸ ಮಾಡುತ್ತಿದ್ದಾಗ, ಏಳಿಗೆ ಸಹಿಸದೆ ನನ್ನ ವಿರುದ್ಧ ಷಡ್ಯಂತ್ರ ಮಾಡಲಾಗಿದೆ. ನಾನು ರಾಜಕೀಯವಾಗಿ ಮುಂದಕ್ಕೆ ಹೋಗಬಾರದು ಎಂದು ಅನೇಕ ಶತ್ರುಗಳು, ಹಿತಶತ್ರುಗಳು ನನ್ನ ವಿರುದ್ಧ ಪಿತೂರಿ ಮಾಡಿದ್ದಾರೆ. ಈ ಆರೋಪದ ಬಗ್ಗೆ ತನಿಖೆಯಾದರೆ ಎದುರಿಸಲು ನಾನು ಸಿದ್ದಳಿದ್ದೇನೆ ಎಂದರು.

ಸಚಿವೆ ಶಶಿಕಲಾ ಜೊಲ್ಲೆ ಪ್ರತಿಕ್ರಿಯೆ

ನಾನು ಯಾವುದೇ ತಪ್ಪು ಮಾಡಿಲ್ಲ. ಆ ರೀತಿಯ ತಪ್ಪು ಮಾಡುವ ಅವಶ್ಯಕತೆಯೂ ನನಗಿಲ್ಲ. ಹೀಗಾಗಿ, ಇದರ ಬಗ್ಗೆ ತನಿಖೆಯಾಗಲಿ. ಏನು ವರದಿ ಬರುತ್ತೆ ಬರಲಿ. ನಾನು ಎಲ್ಲದಕ್ಕೂ ಸಿದ್ಧಳಿದ್ದೇನೆ. ನಾನು ಯಾವುದೇ ಮಾತುಕತೆ ಮಾಡಿಲ್ಲ. ನನ್ನ ಮೇಲೆ ಅಪವಾದ ಹೊರಸಲು ಅನೇಕ ಶತ್ರುಗಳು ಷಡ್ಯಂತ್ರ ಹೆಣಿದಿದ್ದಾರೆ. ನಾನೂ ಜಿದ್ದಿನಿಂದಲೇ ಸವಾಲಾಗಿ ಸ್ವೀಕರಿಸಿದ್ದೇನೆ. ಅಧಿಕಾರ ಇಲ್ಲದಾಗ ಕೂಡ ನಾನು ಸಮಾಜ ಸೇವೆ ಮಾಡುತ್ತಾ ಬಂದಿದ್ದೇನೆ. ಜನರ ಕಷ್ಟಗಳಿಗೆ ಸ್ಪಂದಿಸಿದ್ದೇನೆ. ಅದು ಎಲ್ಲರಿಗೂ ಗೊತ್ತಿರುವ ವಿಷಯ. ನನ್ನ ವಿರುದ್ಧದ ಆರೋಪ ಸತ್ಯಕ್ಕೆ ದೂರ ಎಂದರು.

ಯಾವುದೇ ಇಲಾಖೆಯ ಜವಾಬ್ದಾರಿ ನಿಭಾಯಿಸುವೆ :ರಾಷ್ಟ್ರೀಯ, ರಾಜ್ಯ ಬಿಜೆಪಿ ನಾಯಕರು, ಮಾಜಿ ಸಿಎಂ ಬಿಎಸ್‌ವೈ, ಸಿಎಂ ಬಸವರಾಜ್ ಬೊಮ್ಮಾಯಿ ನನ್ನ ಮೇಲೆ ವಿಶ್ವಾಸವಿಟ್ಟು ಎರಡನೇ ಬಾರಿ ಸಚಿವ ಸ್ಥಾನ ಕೊಟ್ಟಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡಿ ಅಭಿವೃದ್ಧಿ ಕಾರ್ಯ ಮಾಡಿದ್ದೇನೆ. ಯಾವ ಇಲಾಖೆಯ ಜವಾಬ್ದಾರಿ ಕೊಡುತ್ತಾರೋ ಅದನ್ನು ನಿಭಾಯಿಸಿ ಪಕ್ಷ ಸಂಘಟನೆ ಮಾಡುತ್ತೇನೆ ಎಂದರು.

ಮುಂದಿನ ಬಾರಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ತರಲು ಪ್ರಯತ್ನಿಸುವೆ. ಕೋವಿಡ್,‌ ಪ್ರವಾಹದಿಂದ ಜನ ತತ್ತರಿಸಿದ್ದಾರೆ. ಇಂದು ನನ್ನ ಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದೇನೆ. ನಾಳೆ ಬೆಳಗ್ಗೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ನಿಡಗುಂದಿ ತಾಲೂಕಿಗೆ ಭೇಟಿ ನೀಡುವೆ. ವಿಜಯಪುರದ ಗಡಿ ಭಾಗಗಳಲ್ಲಿ ಭೇಟಿ ನೀಡಿ ಪರಿಶೀಲನೆ ಮಾಡುತ್ತೇನೆ. ಯಾವುದೇ ಜಿಲ್ಲೆ ಉಸ್ತುವಾರಿ ಕೊಟ್ಟರೂ ನಿಭಾಯಿಸುತ್ತೇನೆ ಎಂದರು.
ಪ್ರಾಮಾಣಿಕ ಸೇವೆಯೇ ನನ್ನನ್ನು ಈ ಮಟ್ಟಕ್ಕೆ ತಂದಿದೆ‌ :ಪ್ರವಾಹ ಪರಿಸ್ಥಿತಿ ಅವಲೋಕನ ಸೇರಿದಂತೆ ಸಂಭಾವ್ಯ ಕೋವಿಡ್​​ 3ನೇ ಅಲೆಯಲ್ಲಿ ಯಾರಿಗೂ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಮುಂಜಾಗ್ರತಾ ಕ್ರಮಕೈಗೊಳ್ಳಲು ಸಚಿವ ಸಂಪುಟದಲ್ಲಿನ ಎಲ್ಲ ಸಚಿವರುಗಳು ಜಿಲ್ಲಾ ಪ್ರವಾಸಗಳನ್ನು ಕೈಗೊಂಡಿದ್ದೇವೆ ಎಂದು ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

ಇಲ್ಲಿನ ಸದಾಶಿವನಗರದ ಬಿಜೆಪಿ ಕಚೇರಿಯಲ್ಲಿ ಕಾರ್ಯಕರ್ತರ ಸನ್ಮಾನ ಸ್ವೀಕರಿಸಿ ಮಾತನಾಡಿ ಅವರು, ಕೊರೊನಾ ಮೊದಲ ಮತ್ತು ಎರಡನೇ ಅಲೆಯಲ್ಲಿ ಸಾಕಷ್ಟು ಜನರು ಸಂಕಷ್ಟಕ್ಕೆ ಸಿಲುಕಿರುವುದನ್ನ ನೋಡಿದ್ದೇವೆ‌. ಆದರೂ, ಇಂತಹ ಸಂಕಷ್ಟದ ಸಮಯದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಉತ್ತಮ ಕೆಲಸ ಮಾಡಿವೆ.

ಸದ್ಯ 3ನೇ ಅಲೆಯಲ್ಲಿ ಯಾರಿಗೂ ತೊಂದರೆಯಾಗಬಾದು ಎಂಬ ಕಾರಣಕ್ಕೆ ಸಾಕಷ್ಟು ತಯಾರಿಗಳನ್ನು ಮಾಡಿಕೊಳ್ಳುವ ನಿಟ್ಟಿನಲ್ಲಿ ಸರ್ಕಾರದ ಎಲ್ಲ ಸಚಿವರು ಜಿಲ್ಲಾ ಪ್ರವಾಸಗಳನ್ನು ಕೈಗೊಂಡಿದ್ದೇವೆ. ಇದಲ್ಲದೇ ಕಿತ್ತೂರ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಬಸವಣ್ಣ, ಅಂಬೇಡ್ಕರ್ ಅವರ ಸಂಕಷ್ಟ ಸಮಯದಲ್ಲೂ ಇತಿಹಾಸವನ್ನು ನಿರ್ಮಿಸಿದ್ದಾರೆ. ಹೀಗಾಗಿ, ಕೊವೀಡ್​​ನಂತಹ ಸಮಯದಲ್ಲಿ ಅವರ ಆದರ್ಶಗಳನ್ನು ಇಟ್ಟುಕೊಂಡು ಕೊರೊನಾ ಹೋಗಲಾಡಿಸಲು ಪ್ರಾಮಾಣಿಕ ಕೆಲಸ ಮಾಡುತ್ತೇವೆ ಎಂದರು.

ನಿಮ್ಮೆಲ್ಲರ ಆಶೀರ್ವಾದದೊಂದಿಗೆ ನಾನು ಮಾಡಿರುವ ಪ್ರಾಮಾಣಿಕ ಸೇವೆಯೇ ನನ್ನನ್ನು ಈ ಮಟ್ಟಕ್ಕೆ ತಂದಿದೆ‌. ಕಷ್ಟದ ಸಮಯದಲ್ಲೂ ಧೈರ್ಯದಿಂದ ಎದುರಿಸಿದ್ದೇನೆ‌. ಸಂಕಟಗಳು ಬಂದಾಗಲೇ ಜೀವನ‌ದ ಅರ್ಥ ಗೊತ್ತಾಗುತ್ತದೆ. ಅಂತಹ ಸಂಕಟಗಳನ್ನು ಎದುರಿಸುವ ಕೆಲಸವನ್ನು ಮಾಡುತ್ತೇನೆ. ರಾಜ್ಯ ಸರ್ಕಾರ ಮತ್ತು ಕೇಂದ್ರದ ನಾಯಕರು ನನ್ನ ಮೇಲೆ ಇಟ್ಟಿರುವ ವಿಶ್ವಾಸವನ್ನು ಹುಸಿಗೊಳಿಸದೆ ಮುಂಬರುವ ದಿನಗಳಲ್ಲಿ ಸರ್ಕಾರದ ಯೋಜನೆಗಳು ಜನರಿಗೆ ತಲುಪಿಸುವ ಮೂಲಕ ಸಂಕಷ್ಟದಲ್ಲಿರುವ ಜನರಿಗೆ ನೆರವಾಗುವ ಕೆಲಸ ಮಾಡಲಾಗುತ್ತದೆ ಎಂದರು.

ಕೊರೊನಾ ನಿಯಮ ಉಲ್ಲಂಘನೆ :ಸದಾಶಿವನಗರದ ಬಿಜೆಪಿ ಕಚೇರಿಯಲ್ಲಿ ಕಾರ್ಯಕರ್ತರು ನೂತನ ಸಚಿವೆ ಶಶಿಕಲಾ ಜೊಲ್ಲೆ ಅವರಿಗೆ ಹಮ್ಮಿಕೊಂಡ ಸನ್ಮಾನ ಕಾರ್ಯಕ್ರಮದಲ್ಲಿ ಕೋವಿಡ್ ನಿಯಮಗಳನ್ನು ಉಲ್ಲಂಘನೆ ಮಾಡಲಾಯಿತು‌. ಬಿಜೆಪಿ ಸರ್ಕಾರದಲ್ಲಿ ಎರಡನೇ ಬಾರಿಗೆ ಸಚಿವರಾಗಿ ಇದೇ ಮೊದಲ ಬಾರಿ ಬೆಳಗಾವಿಗೆ ಆಗಮಿಸಿದ ಶಶಿಕಲಾ ಜೊಲ್ಲೆ ಅವರನ್ನು ಬಿಜೆಪಿ ಕಾರ್ಯಕರ್ತರು ಅದ್ದೂರಿಯಾಗಿ‌ ಸ್ವಾಗತಿಸಿದರು. ಈ ವೇಳೆ ಶಶಿಕಲಾ ಜೊಲ್ಲೆ ಸೇರಿದಂತೆ ಬಹುತೇಕ ಬಿಜೆಪಿ ಕಾರ್ಯಕರ್ತರು ಮಾಸ್ಕ್, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಕೊರೊನಾ ನಿಯಮ ಉಲ್ಲಂಘಿಸಿದರು.

ಇದನ್ನೂ ಓದಿ:ಮೊಟ್ಟೆ ಡೀಲ್ ಪ್ರಕರಣ: ಸಚಿವೆ ಶಶಿಕಲಾ ಜೊಲ್ಲೆ, ಪರಣ್ಣ ಮುನವಳ್ಳಿ ಸೇರಿ ನಾಲ್ವರ ವಿರುದ್ಧ ದೂರು

ABOUT THE AUTHOR

...view details