ಇಂದು ಮಾರ್ಚ್ 31. ಪ್ರಸಕ್ತ ಆರ್ಥಿಕ ವರ್ಷಾಂತ್ಯ. ನಾಳೆಯಿಂದ ಹೊಸ ಲೆಕ್ಕಾಚಾರ, ಹೊಸ ಯೋಜನೆ, ಹೊಸ ಭರವಸೆಯ ಹಣಕಾಸು ವರ್ಷಾರಂಭ. ಈ ನಿಟ್ಟಿನಲ್ಲಿ ಕೆಲವು ಉಪಯುಕ್ತ ಮಾಹಿತಿ.
ಪ್ರಧಾನ ಮಂತ್ರಿ ವಯ ವಂದನಾ ಯೋಜನೆ: ವೃದ್ಧಾಪ್ಯದಲ್ಲಿ ಸಾಮಾಜಿಕ ಮತ್ತು ಆರ್ಥಿಕ ಭದ್ರತೆ ಒದಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು 'ಪ್ರಧಾನ ಮಂತ್ರಿ ವಯ ವಂದನಾ ಯೋಜನೆ' (ಪಿಎಂವಿವಿವೈ) ಎಂಬ ಪಿಂಚಣಿ ಯೋಜನೆ ಪ್ರಾರಂಭಿಸಿದೆ. 60 ವರ್ಷಗಳ ನಂತರ ಆದಾಯ ಕಳೆದುಕೊಳ್ಳುವವರಿಗೆ ಆಸರೆಯಾಗುವ ಉದ್ದೇಶದಿಂದ ಜಾರಿಗೆ ತರಲಾಗಿದೆ. ಈ ಯೋಜನೆಯನ್ನು ಎಲ್ಐಸಿ ನೀಡುತ್ತದೆ. 60 ವರ್ಷದ ಮೇಲ್ಪಟ್ಟವರು ಯೋಜನೆ ಸೇರಲು ಮಾರ್ಚ್ 31, 2023 ಅಂತಿಮ ಗಡುವು ಎಂದು ತಿಳಿಸಲಾಗಿದೆ. ಗರಿಷ್ಠ 15 ಲಕ್ಷ ರೂ ಪಾವತಿಸಿ ಪಾಲಿಸಿ ಖರೀದಿಸಲು ಅವಕಾಶವಿದೆ. ಮುಂದಿನ ತಿಂಗಳಿನಿಂದ ಪಿಂಚಣಿ ಆರಂಭವಾಗಲಿದೆ. ನೀವು ಪ್ರತಿ ತಿಂಗಳು, ಮೂರು ತಿಂಗಳಿಗೊಮ್ಮೆ, ಆರು ತಿಂಗಳಿಗೊಮ್ಮೆ ಮತ್ತು ಪ್ರತಿ ವರ್ಷ ವಿಭಾಗಗಳಲ್ಲಿ ಪಿಂಚಣಿ ಪಡೆಯಬಹುದು. ಪ್ರಸ್ತುತ ಈ ಯೋಜನೆಯಡಿ ಶೇ 7.4 ರಷ್ಟು ಬಡ್ಡಿ ಸಿಗುತ್ತಿದೆ. ಅದೇ ಬಡ್ಡಿಯು 10 ವರ್ಷಗಳವರೆಗೆ ಮಾನ್ಯ.
ಫಿಕ್ಸೆಡ್ ಡಿಪಾಸಿಟ್: ಹೂಡಿಕೆದಾರರನ್ನು ಆಕರ್ಷಿಸಲು ಬ್ಯಾಂಕುಗಳು ಅನೇಕ ವಿಶೇಷ ನಿಶ್ಚಿತ ಠೇವಣಿ ಯೋಜನೆಗಳನ್ನು ಪರಿಚಯಿಸುತ್ತಿವೆ. ಈ ವಿಶೇಷ ಯೋಜನೆಗಳ ಗಡುವು ಇಂದು ಮುಕ್ತಾಯ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 'ಅಮೃತ್ ಕಲಶ ಯೋಜನೆ' ಹೆಸರಿನಲ್ಲಿ 400 ದಿನಗಳ ಸ್ಥಿರ ಠೇವಣಿ (ಎಫ್ಡಿ) ಪರಿಚಯಿಸಿದೆ. ಯೋಜನೆಯು ಸಾಮಾನ್ಯ ಠೇವಣಿದಾರರಿಗೆ ಶೇ 7.10 ಬಡ್ಡಿ ನೀಡುತ್ತದೆ. ಹಿರಿಯ ನಾಗರಿಕರಿಗೆ ಶೇ.7.60 ಬಡ್ಡಿ ಇದೆ. ಎಸ್ಬಿಐ ವಿ ಕೇರ್ನಲ್ಲಿ ಠೇವಣಿ ಇರಿಸಿರುವ ಹಿರಿಯ ನಾಗರಿಕರಿಗೆ ಹೆಚ್ಚುವರಿ 30 ಬೇಸಿಸ್ ಪಾಯಿಂಟ್ಗಳ ಬಡ್ಡಿಯನ್ನು ಪಾವತಿಸುತ್ತಿದೆ. ಇದು ಐದು ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ಅವಧಿಗೆ ಅನ್ವಯ. ಪ್ರಸ್ತುತ ಯೋಜನೆಯಲ್ಲಿ ಶೇ 7.50 ಬಡ್ಡಿ ಲಭ್ಯವಿದೆ. ಇದರ ಜೊತೆಗೆ ಎಚ್ಡಿಎಫ್ಸಿ ಬ್ಯಾಂಕ್ನ 'ಸೀನಿಯರ್ ಸಿಟಿಜನ್ ಕೇರ್ ಎಫ್ಡಿ', IDBI ಬ್ಯಾಂಕಿನ 'ನಮನ್ ಹಿರಿಯ ನಾಗರಿಕ ಠೇವಣಿ', ಇಂಡಿಯನ್ ಬ್ಯಾಂಕಿನ 'ಇಂಡ್ ಶಕ್ತಿ 555 ದಿನಗಳು', ಪಂಜಾಬ್ ಮತ್ತು ಸಿಂಧ್ ಬ್ಯಾಂಕ್ 'PSB ಫ್ಯಾಬುಲಸ್ 300 ದಿನಗಳು' ಮತ್ತು 'PSB ಫ್ಯಾಬುಲಸ್ 601 ದಿನಗಳು' ಎಂಬ ಹೆಸರಿನೊಂದಿಗೆ ಕೆಲವು ಯೋಜನೆಗಳನ್ನು ತಂದಿದೆ.
ತೆರಿಗೆ ಉಳಿತಾಯ ಹೂಡಿಕೆಗಳು:2022-23 ರ ಹಣಕಾಸು ವರ್ಷಕ್ಕೆ ಹಳೆಯ ಆದಾಯ ತೆರಿಗೆ ವ್ಯವಸ್ಥೆಯನ್ನು ಆಯ್ಕೆ ಮಾಡುವವರು ಮಾರ್ಚ್ 31 ಮೊದಲು ತೆರಿಗೆ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡಬೇಕು. ಆಗ ಮಾತ್ರ ವಿವಿಧ ವಿಭಾಗಗಳ ಅಡಿಯಲ್ಲಿ ತೆರಿಗೆ ವಿನಾಯಿತಿ ಪಡೆಯಲು ಅವಕಾಶವಿದೆ. ಜೀವ ವಿಮಾ ಪಾಲಿಸಿಗಳು, PPF, ELSS, NPS ನಂತಹ ಯೋಜನೆಗಳನ್ನು ಪರಿಶೀಲಿಸಬಹುದು. ಹೊಸ ತೆರಿಗೆ ಪದ್ಧತಿಯನ್ನು ಆಯ್ಕೆ ಮಾಡುವವರಿಗೆ ಯಾವುದೇ ವಿನಾಯಿತಿಗಳಿಲ್ಲ.