ಕರ್ನಾಟಕ

karnataka

ETV Bharat / business

ಟಿವಿಯಲ್ಲಿನ ಪ್ರತಿಭಟನೆ ನೋಡಿ ಹೃದಯಾಘಾತದಿಂದ ಸಾವು... ಅಂತಹದೇನಿತ್ತು ಅಲ್ಲಿ?

ಬಹು ಸಾವಿರ ಕೋಟಿ ರೂ. ಮೊತ್ತದ ಪಂಜಾಬ್ ಮತ್ತು ಮಹಾರಾಷ್ಟ್ರ ಸಹಕಾರ ಬ್ಯಾಂಕ್​ ಲಿಮಿಟೆಡ್​ (ಪಿಎಂಸಿ) ಬ್ಯಾಂಕ್ ಹಗರಣದ ಬಿಕ್ಕಟ್ಟು ನಿವಾರಿಸುವಂತೆ ಒತ್ತಾಯಿಸಿ ಗ್ರಾಹಕರು ಪ್ರತಿಭಟನೆ ನಡೆಸುತ್ತಿದ್ದರು. ಇದೇ ಬ್ಯಾಂಕ್​ನಲ್ಲಿ ಠೇವಣಿ ಇರಿಸಿದ ಗ್ರಾಹಕರೊಬ್ಬರು ಪ್ರತಿಭಟನೆಯನ್ನು ಟಿವಿಯಲ್ಲಿ ನೋಡಿ ತೀವ್ರ ಒತ್ತಡಕ್ಕೆ ಒಳಗಾಗಿ ಹೃದಯಘಾತದಿಂದ ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ದೂರಿದ್ದಾರೆ.

By

Published : Nov 2, 2019, 10:24 AM IST

ಹೃದಯಘಾತ

ಮುಂಬೈ: ಪಂಜಾಬ್ ಮತ್ತು ಮಹಾರಾಷ್ಟ್ರ ಸಹಕಾರ ಬ್ಯಾಂಕ್​ ಲಿಮಿಟೆಡ್​ (ಪಿಎಂಸಿ) ಬ್ಯಾಂಕ್ ಹಗರಣ ಮತ್ತೊಬ್ಬರನ್ನು ಬಲಿಪಡೆದುಕೊಂಡಿದೆ.

4,355 ಕೋಟಿ ರೂ.ಗಳ ಹಗರಣ ಬೆಳಕಿಗೆ ಬಂದ ನಂತರ ಮೃತಪಟ್ಟವರ ಸಂಖ್ಯೆ ಏಳಕ್ಕೆ ತಲುಪಿದೆ. 'ಪಿಎಂಸಿ ಬ್ಯಾಂಕ್​ ಠೇವಣಿದಾರ ಕುಲದೀಪ್ ಕೌರ್ ವಿಗ್ (64) ಅವರು ಹೃದಯಘಾತದಿಂದ ಸಾವನ್ನಪ್ಪಿದ್ದಾರೆ' ಎಂದು ಕುಟುಂಬಸ್ಥರು ಆಪಾದಿಸಿದ್ದಾರೆ. ಬಹು ಸಾವಿರ ಕೋಟಿ ರೂ. ಹಗರಣ ಬೆಳಕಿಗೆ ಬಂದ ಬಳಿಕ ಆರ್​ಬಿಐ, ನಗದು ಹಿಂಪಡೆಯಲು ನಿರ್ಬಂಧ ಹೇರಿತ್ತು.

ಬ್ಯಾಂಕಿನ ಹಣಕಾಸು ಬಿಕ್ಕಟ್ಟು ಪರಿಹರಿಸುವಂತೆ ಪಿಎಂಸಿ ಗ್ರಾಹಕರು ಪ್ರತಿಭಟನೆ ನಡೆಸುತ್ತಿದ್ದರು. ಇದೇ ಬ್ಯಾಂಕ್​ನಲ್ಲಿ ಠೇವಣಿ ಇರಿಸಿರುವ ನವಿ ಮುಂಬೈ ಖಾರ್ಘರ್ ಸೆಕ್ಟರ್ 10ರ ನಿವಾಸಿ ಕೌರ್ ಅವರು ರಾತ್ರಿ ಮನೆಯಲ್ಲಿ ಕುಳಿತು ಟಿವಿಯಲ್ಲಿ ಈ ಪ್ರತಿಭಟನೆ ವೀಕ್ಷಿಸುತ್ತಿದ್ದರು. ಬ್ಯಾಂಕ್​ನಲ್ಲಿರುವ ತನ್ನ ಠೇವಣಿ ಬಗ್ಗೆ ಆತಂಕಗೊಂಡು ತೀವ್ರವಾದ ಒತ್ತಡಕ್ಕೆ ಒಳಗಾಗಿ ಹೃದಯಘಾತಕ್ಕೆ ಈಡಾಗಿದ್ದಾರೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

15 ವರ್ಷಗಳಿಗಿಂತ ಹೆಚ್ಚು ಕಾಲ ಪಿಎಂಸಿ ಬ್ಯಾಂಕ್​ನಲ್ಲಿ ಖಾತೆಗಳನ್ನು ಹೊಂದಿದ್ದೇವೆ. ಕೆಲವು ಸ್ಥಿರ ಠೇವಣಿಗಳನ್ನು ಇತ್ತೀಚೆಗೆ ನವೀಕರಿಸಲಾಗಿದೆ. ಕಳೆದ ಒಂದು ತಿಂಗಳಿಂದ ಈ ಹಗರಣ ಬೆಳಕಿಗೆ ಬಂದಿದೆ. ಇದು ನಮಗೆ ಆತಂಕ ಉಂಟುಮಾಡಿದೆ. ಆರೋಗ್ಯ ವಿಮೆ ನವೀಕರಿಸಲು ಹಣವಿಲ್ಲ. ಬ್ಯಾಂಕ್​ ಬಿಕ್ಕಟ್ಟಿಗೆ ಇನ್ನೂ ಎಷ್ಟು ಜನ ಸಾಯಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details