ಶಿವಮೊಗ್ಗ: ಮೈಸೂರಿನ ಸಂಕಲ್ಪ ಸಂಸ್ಥೆಯು ಕೈದಿಗಳ ಮನ ಪರಿವರ್ತನೆ ಹಾಗೂ ಅವರನ್ನು ಸಮಾಜದೊಂದಿಗೆ ಬೆಸೆಯುವ ಉದ್ದೇಶದಿಂದ ಜೈಲಿನಿಂದ ಜೈಲಿಗೆ ರಂಗಯಾತ್ರೆ ಅಂಗವಾಗಿ ಮೇ29ರಿಂದ 31ರವರೆಗೆ ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಎ.ದಯಾನಂದ ತಿಳಿಸಿದರು.
ಇಲ್ಲಿನ ಜಿಲ್ಲಾಡಳಿತ, ಶಿವಮೊಗ್ಗ ರಂಗಾಯಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಹಾಗೂ ಸ್ಥಳೀಯ ರಂಗ ತಂಡಗಳ ಸಹಯೋಗದಲ್ಲಿ ಮೂರು ದಿನಗಳ ನಾಟಕೋತ್ಸವವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಖೈದಿಗಳನ್ನು ಸಮಾಜದ ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ಇಂತಹ ಪ್ರಯತ್ನಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು. ಇಂತಹ ಕಾರ್ಯಕ್ರಮಗಳನ್ನು ಮಾಡುವುದರಿಂದ ಅವರಲ್ಲಿ ಬದಲಾವಣೆಯನ್ನು ಕಾಣಬಹುದು. ಖೈದಿಗಳಲ್ಲಿ ಇರುವ ಸಾಂಸ್ಕೃತಿಕ ಕಲೆಯನ್ನು ಪರಿಚಯಿಸಿದಂತಾಗುತ್ತದೆ ಎಂದರು.
ಮೇ 29ರ ಸಂಜೆ 6.30ಕ್ಕೆ ಡಾ.ಚಂದ್ರಶೇಖರ ಕಂಬಾರ ರಚನೆಯ ಸಂಗ್ಯಾ ಬಾಳ್ಯಾ ನಾಟಕದ ಪರಿವರ್ತಿತ ನಾಟಕ ಪ್ರದರ್ಶನ ಇದೆ. ಮೆ 30ರಂದು ಸಂಜೆ 6.30 ಕ್ಕೆ ಜಯಂತ್ ಕಾಯ್ಕಿಣಿಯವರ ಜತೆಗಿರುವನು ಚಂದಿರ ನಾಟಕವನ್ನು ಪ್ರದರ್ಶಿಸಲಾಗುವುದು ಎಂದರು.
ಜೀವಾವಧಿ ಶಿಕ್ಷೆಗೆ ಒಳಗಾದ ಖೈದಿಗಳು ಸೇರಿದಂತೆ ಮೈಸೂರು ಕಾರಾಗೃಹದಲ್ಲಿರುವ 28ಮಂದಿ ಬಂಧಿತರು ಹಾಗೂ ಬಿಡುಗಡೆಯಾದ 15 ಮಂದಿ ಕಲಾವಿದರು ಈ ನಾಟಕೊತ್ಸವದಲ್ಲಿ ಭಾಗವಹಿಸುತ್ತಿದ್ದಾರೆ. ಮೇ 31ರಂದು ಕಲಾವಿದರೊಂದಿಗೆ ಸಂಜೆ 6.30ಕ್ಕೆ ಸಂವಾದ ಹಾಗೂ ಪಿ.ಶೇಷಾದ್ರಿ ನಿರ್ಮಾಣದ ಕಾರಾಗೃಹ ರಂಗಭೂಮಿ ಸಾಕ್ಷಾಚಿತ್ರ ಪ್ರದರ್ಶನಗೊಳ್ಳಲಿದೆ ಎಂದರು.