ಕರ್ನಾಟಕ

karnataka

By

Published : Jun 20, 2019, 9:36 PM IST

ETV Bharat / briefs

ಸರ್ಕಾರ ಬೀಳಿಸುವ ಪ್ರಯತ್ನ ಸಾಧ್ಯವಾಗಿಲ್ಲ, ಆಗೋದೂ ಇಲ್ಲ: ಪರಮೇಶ್ವರ್

ಆಡಳಿತ ಚುರುಕಾಗಿ ನಡೆಯುತ್ತಿಲ್ಲ ಎಂದು ಪ್ರತಿಪಕ್ಷ ಟೀಕಿಸುತ್ತಾ ಬಂದಿದ್ದಾರೆ. ಅದಕ್ಕೆ ಉತ್ತರವಾಗಿ ವರ್ಷದಲ್ಲಿ ಮೂರು ಬಾರಿ ಜಿಲ್ಲಾಧಿಕಾರಿಗಳ ಸಭೆ ಕರೆದು ಆಡಳಿತದ ಚುರುಕು ಮುಟ್ಟಿಸಿದ್ದೇವೆ ಡಿಸಿಎಂ ಡಾ.ಜಿ. ಪರಮೇಶ್ವರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಡಿಸಿಎಂ ಡಾ.ಜಿ. ಪರಮೇಶ್ವರ್ ಮಾತನಾಡಿದರು.

ಬೆಂಗಳೂರು: ಮೈತ್ರಿ ಸರ್ಕಾರ ರಚನೆಯಾಗಿ ಒಂದು ವರ್ಷದ ಅವಧಿಯಲ್ಲಿ ಜನಪರ ಆಡಳಿತ ನೀಡಿದ್ದೇವೆ. ಆದರೂ ಪ್ರತಿಪಕ್ಷದವರು ಟೀಕಿಸುವುದನ್ನು ಬಿಟ್ಟಿಲ್ಲವೆಂದು ಡಿಸಿಎಂ ಡಾ. ಜಿ. ಪರಮೇಶ್ವರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ‌ ಮೈತ್ರಿ ಸರ್ಕಾರ ರಚನೆಯಾಗಿ ಒಂದು ವರ್ಷ ಯಶಸ್ವಿಯಾಗಿ ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ವಾರ್ತಾ ಮತ್ತು ಸಾರ್ವಜನಿಕ ಇಲಾಖೆಯ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಇಂದು ಹಮ್ಮಿಕೊಂಡಿದ್ದ ಮೈತ್ರಿ ಪರ್ವ, ಸರ್ಕಾರದ ಸಾಧನೆಗಳ ಅವಲೋಕನ ಪುಸ್ತಕ ಬಿಡುಗಡೆ ಸಂದರ್ಭದಲ್ಲಿ ಅವರು ಮಾತನಾಡಿದರು.

ಮೈತ್ರಿ ಪರ್ವ, ಸರ್ಕಾರದ ಸಾಧನೆಗಳ ಅವಲೋಕನ ಪುಸ್ತಕ ಬಿಡುಗಡೆ ಸಮಾರಂಭ ನಡೆಯಿತು.

ಆಡಳಿತ ಚುರುಕಾಗಿ ನಡೆಯುತ್ತಿಲ್ಲ ಎಂದು ಪ್ರತಿಪಕ್ಷದವರು ಟೀಕಿಸುತ್ತಲೇ ಬಂದಿದ್ದಾರೆ. ಅದಕ್ಕೆ ಉತ್ತರವಾಗಿ ವರ್ಷದಲ್ಲಿ ಮೂರು ಬಾರಿ ಜಿಲ್ಲಾಧಿಕಾರಿಗಳ ಸಭೆ ಕರೆದು ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಿದ್ದೇವೆ ಎಂದು ಪರಮೇಶ್ವರ್​ ಹೇಳಿದರು.

ಆರೋಗ್ಯಕರ ಟೀಕೆ ಮಾಡಿದರೆ ಸ್ವೀಕರಿಸಬಹುದು. ಆದರೆ ಇವರು ಸರ್ಕಾರ ಬೀಳಿಸುವ ಪ್ರಯತ್ನವನ್ನು ಮೊದಲಿನಿಂದ ಮಾಡುತ್ತಿದ್ದರೂ ಅದು ಸಾಧ್ಯವಾಗಿಲ್ಲ. ಸಾಧ್ಯವಾಗುವುದೂ ಇಲ್ಲವೆಂದು ಎಂಬ ಸಂದೇಶ ಕೊಟ್ಟಿದ್ದೇವೆ. ಜನರ ಆಶೋತ್ತರಗಳಿಗೆ ಸ್ಪಂದಿಸಿ ಮುಂದಿನ 4 ವರ್ಷವೂ ಸ್ಥಿರವಾಗಿ ನಮ್ಮ ಸರ್ಕಾರ ಇರಲಿದೆ ಎಂದು ಡಿಸಿಎಂ ಬಿಜೆಪಿಗೆ ತಿರುಗೇಟು ಕೊಟ್ಟರು.

ಒಂದು ವರ್ಷದ ಆಡಳಿತದಲ್ಲಿ ಅನೇಕ ಏಳುಬೀಳು ಕಂಡಿದ್ದೇವೆ. ಪ್ರತಿಪಕ್ಷದ ಅಸಹಕಾರದ ಮಧ್ಯೆಯೂ ಕುಮಾರಸ್ವಾಮಿ ನೇತೃತ್ವದ ಸರ್ಕಾರ ಉತ್ತಮ ಆಡಳಿತ ಕೊಟ್ಟಿದೆ. ಶಿಕ್ಷಣ, ಕೃಷಿ, ಆರೋಗ್ಯ, ನೀರಾವರಿ, ಕೈಗಾರಿಕೆ ಸೇರಿದಂತೆ ಉಳಿಕೆ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದೇವೆ ಎಂದರು.

ಮೈತ್ರಿ ಸರ್ಕಾರದಲ್ಲಿ ಕೋಪರೇಟಿವ್‌ ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ 46 ಸಾವಿರ ಕೋಟಿ ರೂ. ಮೊತ್ತದ ರೈತರ ಸಾಲಮನ್ನಾ ಮಾಡಿದ್ದು ಇಡೀ ದೇಶಕ್ಕೆ ಮಾದರಿಯಾಗಿದೆ. ಹಿಂದಿನ‌ ಯಾವುದೇ ಯೋಜನೆ ಸ್ಥಗಿತ ಮಾಡದೇ ಸಾಲಮನ್ನಾ ಮಾಡಲಾಗಿದೆ. ಜೊತೆಗೆ 11.5 ಲಕ್ಷ ರೈತರಿಗೆ ಋಣಮುಕ್ತ ಪತ್ರ ನೀಡಿದ್ದೇವೆ. ಜಿಲ್ಲಾಧಿಕಾರಿ ಕಚೇರಿ‌ ಮೂಲಕ ಅಧಿಕಾರಿಗಳು ಋಣಮುಕ್ತ ಪತ್ರವನ್ನು ರೈತರ ಮನೆಗೆ ತಲುಪಿಸಲಾಗುತ್ತಿದೆ ಎಂದು ಪರಮೇಶ್ವರ್​ ಮಾಹಿತಿ ನೀಡಿದರು.

ಸರ್ಕಾರಿ ಶಾಲೆಗಳಲ್ಲೂ ಇಂಗ್ಲಿಷ್‌ ಮಾಧ್ಯಮ ತೆರೆದಿದ್ದು, ನಮ್ಮ ಸರ್ಕಾರದ ಮಹತ್ವದ ನಿರ್ಧಾರ. ಸಾಮಾಜಿಕ ನ್ಯಾಯ ಕೊಡಿಸಲು ಬಡತನ ರೇಖೆಗಿಂತ ಒಳಗಿರುವ ಜನರಿಗೆ ಸಮಾಜ ಕಲ್ಯಾಣ ಇಲಾಖೆಯಲ್ಲಿ 30 ಸಾವಿರ ಕೋಟಿ ರೂ. ಹಣ ತೆಗೆದಿಟ್ಟಿದ್ದೇವೆ. ಬೀದಿಬದಿ ವ್ಯಾಪಾರಿಗಳಿಗೆ ಆರ್ಥಿಕ ಸ್ವಾವಲಂಬನೆಗೆ ಬಡವರ ಬಂಧು ಯೋಜನೆ ಯಶಸ್ವಿಯಾಗಿದ್ದು, 4.5 ಲಕ್ಷ ಜನ ಇದರ ಫಲ ಪಡೆದುಕೊಳ್ಳುತ್ತಿದ್ದಾರೆ ಎಂದು ಡಿಸಿಎಂ ವಿವರಿಸಿದರು.

ನೀರಾವರಿ ಯೋಜನೆಗಳಿಗೆ 17,500 ಕೋಟಿ ರೂ, ಸಣ್ಣ ನೀರಾವರಿಗೆ 2,500 ಕೋಟಿ ರೂ, ರಸ್ತೆ ನಿರ್ಮಾಣಕ್ಕೆ 21 ಸಾವಿರ ಕೋಟಿ ರೂ. ಒದಗಿಸಲಾಗಿದೆ. ನವಬೆಂಗಳೂರು ಯೋಜನೆಗೆ 9 ಸಾವಿರ ಕೋಟಿ ರೂ, 5 ನೇ ಹಂತದ ಕಾವೇರಿ ಯೋಜನೆಗೂ ಸಹ ಹಣ ಮೀಸಲಿಟ್ಟಿದ್ದೇವೆ ಎಂದು ತಿಳಿಸಿದರು.

ಕೊಡಗು ಪ್ರವಾಹದಿಂದ ಉಂಟಾದ ನಷ್ಟ ಭರಿಸಲು ಕೇಂದ್ರ ಸರ್ಕಾರ 949 ಕೋಟಿ ರೂ. ಮಾತ್ರ ಹಣ ನೀಡಿದೆ.‌ ಸಾವಿರಾರು ಕೋಟಿಯನ್ನು ರಾಜ್ಯ ಸರ್ಕಾರ ಕೊಟ್ಟಿದೆ. ಇನ್ನು ಸಾಕಷ್ಟು ಯೋಜನೆಯನ್ನು ನಮ್ಮ ಸರ್ಕಾರ ಪರಿಣಾಮಕಾರಿಯಾಗಿ ಮಾಡಿದೆ. ಹೀಗೆ ನಾಲ್ಕು ವರ್ಷ ಕೂಡ ಸರ್ಕಾರ ಚುರುಕಾಗಿ ಆಡಳಿತ ನೀಡಲಿದೆ ಎಂದು ಪರಮೇಶ್ವರ್​ ಭರವಸೆ ವ್ಯಕ್ತಪಡಿಸಿದ್ರು.

ಇದೇ ವೇಳೆ ಸಿಎಂ ಕುಮಾರಸ್ವಾಮಿ ಮಾತನಾಡಿ, ಮೈತ್ರಿ ಸರ್ಕಾರ ರಚನೆಯಾಗಿದ್ದಕ್ಕೆ ಬಿಜೆಪಿ ನಾಯಕರಿಗೆ ಸಹಿಸಲು ಆಗ್ತಿಲ್ಲ. ಹಾಗಾಗಿ ಕಳೆದ ವರ್ಷದಲ್ಲಿ ಸರ್ಕಾರ ಅಸ್ಥಿರಗೊಳಿಸಲು ಏನೆಲ್ಲ ಪ್ರಯತ್ನ ನಡೆಸಿದರು ಮತ್ತು ಈಗಲೂ ಏನೆಲ್ಲ ನಡೆಸುತ್ತಿದ್ದಾರೆ ಅನ್ನೋದು ಗೊತ್ತಿದೆ ಎಂದು ಹೇಳಿದರು.

For All Latest Updates

TAGGED:

ABOUT THE AUTHOR

...view details