ಕರ್ನಾಟಕ

karnataka

1971ರ ಭಾರತ-ಪಾಕ್​ ಯುದ್ಧಕ್ಕೆ 51 ವರ್ಷ ಪೂರ್ಣ: ಹುತಾತ್ಮ ಯೋಧರಿಗೆ ಗೌರವ

By

Published : Dec 16, 2022, 12:41 PM IST

1971ರ ಡಿಸೆಂಬರ್ 3ರಂದು ಆರಂಭವಾಗಿದ್ದ ಯುದ್ಧ ಸುಮಾರು 13 ದಿನಗಳ ಕಾಲ ನಡೆದು ಡಿಸೆಂಬರ್ 16ರಂದು ಕೊನೆಗೊಂಡಿತ್ತು. ಪಾಕಿಸ್ತಾನದ ವಿರುದ್ಧ ಭಾರತ ಯುದ್ಧ ಗೆದ್ದು ಇಂದಿಗೆ 51 ವರ್ಷಗಳು ಕಳೆದಿವೆ. ಯುದ್ಧದಲ್ಲಿ ಹುತಾತ್ಮರಾದ ವೀರ ಯೋಧರಿಗೆ ದೆಹಲಿಯ ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಕೇಂದ್ರ ಸಚಿವ ರಾಜನಾಥ್​ ಸಿಂಗ್​ ಸೇರಿದಂತೆ ಗಣ್ಯರಿಂದ ಗೌರವ ಸಲ್ಲಿಸಲಾಯಿತು.

Vijay Diwas 2022  Pak army capitulated and India liberated Bangla  India decisive victory over Pakistan  Pakistan signed the instrument of surrender  1971 India victory over Pakistan  1971ರ ಭಾರತ ಪಾಕ್​ ಯುದ್ಧಕ್ಕೆ 51 ವರ್ಷ ಪೂರ್ಣ  ಹುತಾತ್ಮ ಯೋಧರಿಗೆ ಗೌರವ  ದೆಹಲಿಯ ರಾಷ್ಟ್ರೀಯ ಯುದ್ಧ ಸ್ಮಾರಕ  ರಾಜನಾಥ್​ ಸಿಂಗ್​ ಸೇರಿದಂತೆ ಗಣ್ಯರಿಂದ ಗೌರವ  ಪಾಕಿಸ್ತಾನದ ವಿರುದ್ಧ ಭಾರತ ಗೆದ್ದ 1971ರ ಯುದ್ಧ  ಭಾರತದ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ  ಬಾಂಗ್ಲಾದೇಶ ಹೊಸ ರಾಷ್ಟ್ರವಾಗಿ ಉದಯ  ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಪುಷ್ಪಾರ್ಚನೆ  ಸ್ಮರಣಾರ್ಥ ವಿಜಯ್ ದಿವಸ್
1971ರ ಭಾರತ-ಪಾಕ್​ ಯುದ್ಧಕ್ಕೆ 51 ವರ್ಷ ಪೂರ್ಣ

ದೆಹಲಿ:ಪಾಕಿಸ್ತಾನದ ವಿರುದ್ಧ ಭಾರತ ಗೆದ್ದ 1971ರ ಯುದ್ಧ ಇಂದಿಗೆ 51 ವರ್ಷವಾಗಿದೆ. ಅಂದು ಭಾರತದ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿಯವರ ದೃಢ ನಿರ್ಧಾರದಿಂದಾಗಿ ಬಾಂಗ್ಲಾದೇಶ ಹೊಸ ರಾಷ್ಟ್ರವಾಗಿ ಉದಯವಾಗಿದ್ದು ಮಾತ್ರವಲ್ಲದೇ ಭಾರತೀಯ ಸೇನೆಯ ಶಕ್ತಿ, ಪರಾಕ್ರಮ ಜಗತ್ತಿಗೆ ಗೊತ್ತಾಗಿತ್ತು.

ಡಿಸೆಂಬರ್ 3ರಂದು ಆರಂಭವಾಗಿದ್ದ ಯುದ್ಧ ಡಿಸೆಂಬರ್ 16ರಂದು ಅಂತ್ಯಗೊಂಡಿತ್ತು. ಈ ಯುದ್ಧದಲ್ಲಿ ಭಾರತ ಜಯಭೇರಿ ಸಾಧಿಸಿ ಇಂದಿಗೆ 51 ವರ್ಷಗಳಾಗಿವೆ. ದೇಶ ವಿಭಜನೆಯಾದ ನಂತರ ಬಾಂಗ್ಲಾದೇಶ ಕೂಡಾ ಪಾಕಿಸ್ತಾನದ ಭಾಗವಾಗಿತ್ತು. 1971ರವರೆಗೆ ಅದನ್ನು ಪೂರ್ವ ಪಾಕಿಸ್ತಾನ ಎಂದೇ ಕರೆಯಲಾಗುತ್ತಿತ್ತು. ಪಾಕಿಸ್ತಾನದ ಸೇನಾಪಡೆಯ ಹಿಂಸಾಚಾರದ ಕಾರಣದಿಂದಾಗಿ ಅಲ್ಲಿನ ಜನರು ಸಾಕಷ್ಟು ತೊಂದರೆಗೆ ಒಳಗಾಗುವಂತಾಗಿತ್ತು.

ಇದು ಭಾರತಕ್ಕೂ ತಲೆನೋವಾಗಿತ್ತು. ಏಕೆಂದರೆ ಲಕ್ಷಾಂತರ ಮಂದಿ ಅಲ್ಲಿನ ಸೇನಾಪಡೆಯ ಹಿಂಸಾಚಾರ ತಾಳಲಾಗದೇ ಭಾರತದೊಳಗೆ ನುಸುಳಿದ್ದರು. ಅಲ್ಲಿಯೂ ಕೂಡಾ ಸೇನೆಯ ವಿರುದ್ಧ ದಂಗೆಗಳು ಆರಂಭವಾಗಿದ್ದು, ಅಲ್ಲಿನ ಪ್ರಬಲ ಪಕ್ಷವಾದ ಅವಾಮಿ ಲೀಗ್ ಕೂಡಾ ಈಗಿನ ಪಾಕಿಸ್ತಾನದ ಸೇನೆಯ ಕಪಿಮುಷ್ಟಿಯಲ್ಲಿ ನರಳುವಂತಾಗಿತ್ತು.

ಈ ವೇಳೆ ಭಾರತದ ಪ್ರಧಾನಿಯಾಗಿದ್ದ ಇಂದಿರಾಗಾಂಧಿ ಬಾಂಗ್ಲಾ ಸ್ವಾತಂತ್ರ್ಯಕ್ಕೆ ಬೆಂಬಲ ನೀಡಿದರು. ಅವಾಮಿ ಲೀಗ್​ನ ಸದಸ್ಯರ ಬಂಧನದ ಜೊತೆಗೆ, ಸಾಕಷ್ಟು ಮಂದಿ ಭಾರತಕ್ಕೆ ಪಲಾಯನ ಮಾಡಿದ್ದರು. ಕೆಲವರನ್ನು ಬಂಧಿಸಿ, ಈಗಿನ ಪಾಕಿಸ್ತಾನವಾದ ಆಗಿನ ಪಶ್ಚಿಮ ಪಾಕಿಸ್ತಾನಕ್ಕೆ ಕರೆದೊಯ್ಯಲಾಗಿತ್ತು.

ಬಾಂಗ್ಲಾದಲ್ಲಿ ಸ್ವಾತಂತ್ರ್ಯ ಹೋರಾಟದ ಕಿಚ್ಚು ಹೆಚ್ಚಾಗುತ್ತಿದ್ದಂತೆ ಇಂದಿರಾಗಾಂಧಿ ಅಲ್ಲಿನ ಸ್ವಾತಂತ್ರ್ಯ ಹೋರಾಟಗಾರರಿಗೆ ಬೆಂಬಲ ನೀಡಿದ್ದರು. ಭಾರತ ಮತ್ತು ಬಾಂಗ್ಲಾದ ಗಡಿಗಳಲ್ಲಿ ನಿರಾಶ್ರಿತರಿಗೆ ನಿರಾಶ್ರಿತರ ಕೇಂದ್ರಗಳನ್ನು ತೆರೆಯಲಾಗಿತ್ತು. ಪಶ್ಚಿಮ ಬಂಗಾಳ, ಅಸ್ಸೋಂ, ಬಿಹಾರ, ಮೇಘಾಲಯ ಮುಂತಾದ ಕಡೆಗಳಲ್ಲಿ ನಿರಾಶ್ರಿತರ ಕೇಂದ್ರಗಳು ಆರಂಭವಾಗಿದ್ದವು.

ಭಾರತ ಬಾಂಗ್ಲಾ ಸ್ವಾತಂತ್ರ್ಯಕ್ಕೆ ಬೆಂಬಲಸೂಚಿಸುತ್ತಿದ್ದ ಕಾರಣದಿಂದ ಅಸಮಾಧಾನಗೊಂಡಿದ್ದ ಪಾಕಿಸ್ತಾನ ಡಿಸೆಂಬರ್ ಮೂರರಂದು ಭಾರತದ ಮೇಲೆ ದಾಳಿ ಮಾಡಲು ಮುಂದಾಗಿತ್ತು. ಇದನ್ನರಿತ ಪ್ರಧಾನಿ ಇಂದಿರಾಗಾಂಧಿ ಪಾಕ್ ವಿರುದ್ಧ ಯುದ್ಧ ಸಾರಬೇಕಾಯಿತು.

ಡಿಸೆಂಬರ್ ಮೂರರಂದು ಆರಂಭವಾಗಿದ್ದ ಯುದ್ಧ ಸುಮಾರು 13 ದಿನಗಳ ಕಾಲ ನಡೆದು ಡಿಸೆಂಬರ್ 16ರಂದು ಕೊನೆಗೊಂಡಿತು. ಬಾಂಗ್ಲಾ ಸ್ವಾತಂತ್ರ್ಯ ಹೋರಾಟಗಾರರೂ ಪಾಕ್ ಸೇನೆಯ ವಿರುದ್ಧ ತಿರುಗಿಬಿದ್ದ ಕಾರಣದಿಂದ ಬಾಂಗ್ಲಾದೇಶವೂ ಸ್ವಾತಂತ್ರ್ಯ ಪಡೆಯಿತು. ಡಿಸೆಂಬರ್ 16, 1971 ರಂದು ಭಾರತ-ಪಾಕಿಸ್ತಾನ ಯುದ್ಧದ ನಂತರ ಪಾಕಿಸ್ತಾನವು ಢಾಕಾದಲ್ಲಿ ಶರಣಾಗತಿಯ ಪತ್ರಕ್ಕೆ ಸಹಿ ಹಾಕಿತು.

ಅಂದು ಪಾಕಿಸ್ತಾನದ 93,000ಕ್ಕೂ ಹೆಚ್ಚು ಸೈನಿಕರು ಶರಣಾದರು. ಈ ನಿರ್ಣಾಯಕ ವಿಜಯದ ನಂತರ ಭಾರತವು ತನ್ನನ್ನು ಪ್ರಮುಖ ಪ್ರಾದೇಶಿಕ ಶಕ್ತಿಯಾಗಿ ಘೋಷಿಸಿತು. ಈಗ ಆ ಯುದ್ಧಕ್ಕೆ 51 ವರ್ಷ ಪೂರ್ಣಗೊಂಡಿದ್ದು, ಭಾರತೀಯ ಸೇನೆಯ ಪರಾಕ್ರಮಗಳನ್ನು ನೆನಪಿಸುತ್ತದೆ.

1971ರ ಬಾಂಗ್ಲಾದೇಶ ವಿಮೋಚನಾ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ವಿಜಯ ಸಾಧಿಸಿದ ಸ್ಮರಣಾರ್ಥ ವಿಜಯ್ ದಿವಸ್ ಸಂದರ್ಭದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಶುಕ್ರವಾರ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಪುಷ್ಪಾರ್ಚನೆ ಮಾಡಿದರು. ಇದಕ್ಕೂ ಮುನ್ನ, ರಕ್ಷಣಾ ಸಿಬ್ಬಂದಿ ಮುಖ್ಯಸ್ಥ (ಸಿಡಿಎಸ್) ಜನರಲ್ ಅನಿಲ್ ಚೌಹಾಣ್, ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ, ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿಆರ್ ಚೌಧರಿ ಮತ್ತು ಭಾರತೀಯ ನೌಕಾಪಡೆಯ ಉಪಾಧ್ಯಕ್ಷ ವೈಸ್ ಅಡ್ಮಿರಲ್ ಎಸ್‌ಎನ್ ಘೋರ್ಮಾಡೆ ಅವರು ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಿದರು.

ಓದಿ:ಇಬ್ಬರು ನಾಗರಿಕರ ಸಾವು ಆರೋಪ.. ಭುಗಿಲೆದ್ದ ಪ್ರತಿಭಟನೆ, ಕಲ್ಲು ತೂರಾಟ!

ABOUT THE AUTHOR

...view details