ಲಕ್ನೋ (ಉತ್ತರ ಪ್ರದೇಶ): ಭಾರತ ದೃಢವಿಶ್ವಾಸದಿಂದ ಮುನ್ನಡೆಯುತ್ತಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಶುಕ್ರವಾರ ಹೇಳಿದ್ದಾರೆ. ದೇಶದ ಅಭಿವೃದ್ಧಿಯ ಹಂತಗಳು ಮತ್ತು ಹೂಡಿಕೆದಾರ ಸ್ನೇಹಿ ವಾತಾವರಣಗಳ ಬಗ್ಗೆ ಹೇಳುತ್ತಾ, ಉತ್ತರ ಪ್ರದೇಶವು ದೇಶದ ಏಳಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವುದನ್ನು ಎತ್ತಿ ತೋರಿಸಿದ ಪ್ರಧಾನಿ, ಭಾರತ ಬಲವಂತದಿಂದ ಮುನ್ನಡೆಯುತ್ತಿಲ್ಲ, ಬದಲಾಗಿ ತನ್ನ ದೃಢವಿಶ್ವಾಸದಿಂದ ಮುನ್ನಡೆಯುತ್ತಿದೆ ಎಂದರು.
ಭಾರತವು ವಿಶ್ವದಲ್ಲಿ ಪ್ರಕಾಶಮಾನವಾದ ತಾಣವಾಗಿದ್ದರೆ, ಉತ್ತರ ಪ್ರದೇಶವು ದೇಶದ ಬೆಳವಣಿಗೆಯನ್ನು ಮುನ್ನಡೆಸುತ್ತಿದೆ ಎಂದು ಲಕ್ನೋದಲ್ಲಿ ಉತ್ತರ ಪ್ರದೇಶ ಜಾಗತಿಕ ಹೂಡಿಕೆದಾರರ ಶೃಂಗಸಭೆ 2023 ಅನ್ನು ಉದ್ಘಾಟಿಸಿದ ನಂತರ ಪ್ರಧಾನಿ ಮೋದಿ ಹೇಳಿದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ಉತ್ತರ ಪ್ರದೇಶದ ಬೆಳವಣಿಗೆ ಗಮನಾರ್ಹವಾಗಿದೆ. ಉತ್ತರ ಪ್ರದೇಶದ ಅಭಿವೃದ್ಧಿಯಾಗುವುದು ಕಷ್ಟ ಮತ್ತು ಇಲ್ಲಿನ ಕಾನೂನು ಸುವ್ಯವಸ್ಥೆ ಸುಧಾರಿಸಲು ಸಾಧ್ಯವಿಲ್ಲ ಎಂದು ಜನರು ಹೇಳುತ್ತಿದ್ದರು. ಉತ್ತರ ಪ್ರದೇಶ ಹಗರಣಗಳಿಗೆ ಹೆಸರುವಾಸಿಯಾಗಿದ್ದರಿಂದ ಯಾರಿಗೂ ಯಾವುದೇ ಭರವಸೆ ಇರಲಿಲ್ಲ. ಆದರೆ, ಕೇವಲ ಐದರಿಂದ ಆರು ವರ್ಷಗಳಲ್ಲಿ, ಉತ್ತರ ಪ್ರದೇಶ ತನ್ನದೇ ಆದ ಹೊಸ ಗುರುತನ್ನು ಸ್ಥಾಪಿಸಿಕೊಂಡಿದೆ. ಇಂದು ಉತ್ತರ ಪ್ರದೇಶವು ಉತ್ತಮ ಆಡಳಿತ, ಶಾಂತಿ, ಕಾನೂನು ಮತ್ತು ಸುವ್ಯವಸ್ಥೆ ಮತ್ತು ಸ್ಥಿರತೆಗೆ ಹೆಸರುವಾಸಿಯಾಗಿದೆ ಎಂದು ಹೇಳಿದರು.
ಇಂದು ಭಾರತೀಯ ಸಮಾಜವು ಯುವಕರ ಚಿಂತನೆ ಮತ್ತು ಆಕಾಂಕ್ಷೆಗಳಲ್ಲಿ ದೊಡ್ಡ ಬದಲಾವಣೆಗೆ ಸಾಕ್ಷಿಯಾಗುತ್ತಿದೆ. ದೇಶದ ಆಕಾಂಕ್ಷೆಗಳು ಸರ್ಕಾರಗಳ ಮೇಲೆ ಒತ್ತಡ ಹೇರುತ್ತಿವೆ ಮತ್ತು ಈ ಆಶಯಗಳು ಅಭಿವೃದ್ಧಿ ಕಾರ್ಯಗಳನ್ನು ಮುನ್ನಡೆಸುತ್ತಿವೆ. ಇಂದು ವಿಶ್ವದ ಪ್ರತಿಯೊಂದು ವಿಶ್ವಾಸಾರ್ಹ ಧ್ವನಿಯು ಭಾರತದ ಆರ್ಥಿಕತೆಯು ವೇಗವಾಗಿ ಬೆಳೆಯುತ್ತದೆ ಎಂಬುದನ್ನು ನಂಬುತ್ತಿದೆ. ಇದರ ಹಿಂದಿನ ದೊಡ್ಡ ಕಾರಣವೆಂದರೆ ಭಾರತೀಯರ ಹೆಚ್ಚುತ್ತಿರುವ ಆತ್ಮವಿಶ್ವಾಸ ಎಂದರು.