ಕರ್ನಾಟಕ

karnataka

By

Published : May 15, 2021, 2:26 PM IST

ETV Bharat / bharat

ಕೋವಿಡ್ ವಿರುದ್ಧ ನಿರ್ಣಾಯಕ ಹೋರಾಟದ ಸಮಯ

ಲಸಿಕೆ ದೇಶದ ಪ್ರತಿಯೊಬ್ಬರಿಗೂ ತಲುಪುವ ಮೊದಲೇ, ಲಸಿಕೆ ಈಗಾಗಲೇ ಬಂದಿದೆಯಲ್ಲ ಎಂಬ ಸಂತೃಪ್ತಿಯಿಂದ ಸರ್ಕಾರಗಳು ಕೊರೊನಾ ನಿಯಂತ್ರಣ ಕ್ರಮಗಳ ಕುರಿತು ನಿರ್ಲಕ್ಷ್ಯದ ಮನೋಭಾವವನ್ನು ಬೆಳೆಸಿಕೊಂಡವು. ಈ ನಿರ್ಲಕ್ಷ್ಯ ವರ್ತನೆಯೇ ಕೋವಿಡ್ ಹರಡುವಿಕೆಯನ್ನು ಬಲಪಡಿಸಲು ಕಾರಣವಾಯಿತು. ನಾಗರಿಕರ ನಿರ್ಲಕ್ಷ್ಯದ ಜೊತೆಗೆ, ವೈರಸ್ಸಿನ ರೂಪಾಂತರಗಳು ಸಹ ಪರಿಸ್ಥಿತಿ ಹದಗೆಡಲು ಕಾರಣವಾಗಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Time for a decisive fight against Covid
ಕೋವಿಡ್ ವಿರುದ್ಧ ನಿರ್ಣಾಯಕ ಹೋರಾಟದ ಸಮಯ

ಕಳೆದ ಏಳು ವಾರಗಳಿಂದ ನಿರಂತರವಾಗಿ ಏರುತ್ತಿರುವ ಕೋವಿಡ್ ಹಾಗೂ ಅದರಿಂದಾಗಿ ಕಳೆದ ನಾಲ್ಕು ವಾರಗಳಿಂದ ಹೆಚ್ಚುತ್ತಿರುವ ಸಾವುನೋವುಗಳ ಕುರಿತು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆಯ ಗಂಟೆ ಮೊಳಗಿಸಿದೆ.

ಮಹಾರಾಷ್ಟ್ರ, ಛತ್ತೀಸ್‍ಗಢ, ಕರ್ನಾಟಕ, ಉತ್ತರ ಪ್ರದೇಶ, ಕೇರಳ ಮತ್ತು ಇತರ ರಾಜ್ಯಗಳಲ್ಲಿ ಕರೋನಾ ಪ್ರಕರಣಗಳು ಏರುಗತಿಯಲ್ಲಿವೆ. ನಿಖರವಾಗಿ ಹೇಳುವುದಾದರೆ, 2021ರ ಮಾರ್ಚ್ 1ರಂದು ದೇಶದಲ್ಲಿ 15,500 ಪ್ರಕರಣಗಳು ದಾಖಲಾಗಿದ್ದರೆ, ಇಂದು ಪ್ರಕರಣಗಳ ಸಂಖ್ಯೆ 12 ಪಟ್ಟು ಹೆಚ್ಚಾಗಿದೆ. ಒಂದೇ ಶವಸಂಸ್ಕಾರದ ಚಿತೆಯ ಮೇಲೆ ಎಂಟು ಶವಗಳನ್ನು ಇಟ್ಟು ಅಂತ್ಯಸಂಸ್ಕಾರ ಮಾಡುವ ದೃಶ್ಯಗಳಿಗೆ ಮಹಾರಾಷ್ಟ್ರ ಮತ್ತು ರಾಯಪುರ ಸಾಕ್ಷಿಯಾಗಿವೆ. ಛತ್ತೀಸ್‍ಗಢದ ಸರ್ಕಾರಿ ಆಸ್ಪತ್ರೆಗಳಲ್ಲಿ ಮೃತ ದೇಹಗಳು ರಾಶಿಯಾಗುತ್ತಿವೆ. ಕೋವಿಡ್ ಅನ್ನು ನಿರ್ಲಕ್ಷಿಸಿದ್ದಕ್ಕಾಗಿ ನಾವು ತೆರಬೇಕಾದ ಬೆಲೆಯನ್ನು ಈ ಪರಿಸ್ಥಿತಿ ನಮಗೆ ಅನಾವರಣ ಮಾಡುತ್ತಿದೆ. ಕಳೆದ ವರ್ಷ ನೋಡಿದ್ದಕ್ಕಿಂತ ಈ ವರ್ಷ ಕೋವಿಡ್ ಸಾಂಕ್ರಾಮಿಕವು ಗರಿಷ್ಠ ಹಂತವನ್ನು ದಾಟಲಿದೆ ಎಂದು ಕೇಂದ್ರ ಹೇಳುತ್ತಿದೆ. ಕರೋನಾ ಮಾರ್ಗಸೂಚಿಗಳ ನಿರ್ಲಕ್ಷ್ಯ, ಸ್ಥಳೀಯ ಚುನಾವಣೆಗಳು, ಮದುವೆಗಳಲ್ಲಿ ಜನರು ದೊಡ್ಡ ಸಂಖ್ಯೆಯಲ್ಲಿ ಸೇರುವುದು ಮತ್ತು ಇತರ ಸಮಾರಂಭಗಳು ಪ್ರಸ್ತುತ ಏರಿಕೆಗೆ ಕಾರಣವಾಗಿವೆ ಎಂಬ ಅಭಿಪ್ರಾಯ ಕೇಳಿಬಂದಿದೆ.

ಆದಾಗ್ಯೂ, ಕಳೆದ ವರ್ಷದ ವಿಧಾನಸಭಾ ಚುನಾವಣೆಗಳಲ್ಲಿ ಅನುಸರಿಸಿದ್ದ ಕೋವಿಡ್ ಮಾರ್ಗಸೂಚಿಗೆ ಏನಾಯಿತು ಎಂಬುದು ಪ್ರಶ್ನೆ ಹಾಗೇ ಉಳಿದಿದೆ. ದೇವರ ಮೇಲಿನ ಭಕ್ತಿ ಕೊರೊನಾವನ್ನು ದೂರ ಮಾಡುತ್ತದೆ ಎಂಬ ನೆಪ ಒಡ್ಡಿ ಕುಂಭಮೇಳ ಪ್ರಾರಂಭವಾಯಿತು. ಕುಂಭಮೇಳದಲ್ಲಿ ಇರುವಂತಹ ಬೃಹತ್ ಜನಜಂಗುಳಿಯು ಕೋವಿಡ್ ಸಕ್ರಿಯತೆಯನ್ನು ಹೆಚ್ಚಿಸುವಂಥದು. ಲಸಿಕೆ ದೇಶದ ಪ್ರತಿಯೊಬ್ಬರಿಗೂ ತಲುಪುವ ಮೊದಲೇ, ಲಸಿಕೆ ಈಗಾಗಲೇ ಬಂದಿದೆಯಲ್ಲ ಎಂಬ ಸಂತೃಪ್ತಿಯಿಂದ ಸರ್ಕಾರಗಳು ಕೊರೊನಾ ನಿಯಂತ್ರಣ ಕ್ರಮಗಳ ಕುರಿತು ನಿರ್ಲಕ್ಷ್ಯದ ಮನೋಭಾವವನ್ನು ಬೆಳೆಸಿಕೊಂಡವು. ಈ ನಿರ್ಲಕ್ಷ್ಯ ವರ್ತನೆಯೇ ಕೋವಿಡ್ ಹರಡುವಿಕೆಯನ್ನು ಬಲಪಡಿಸಲು ಕಾರಣವಾಯಿತು. ನಾಗರಿಕರ ನಿರ್ಲಕ್ಷ್ಯದ ಜೊತೆಗೆ, ವೈರಸ್ಸಿನ ರೂಪಾಂತರಗಳು ಸಹ ಪರಿಸ್ಥಿತಿ ಹದಗೆಡಲು ಕಾರಣವಾಗಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಕಳೆದ ವರ್ಷ ಇದೇ ಅವಧಿಯಲ್ಲಿ ಆದ ಹಾಗೆ ಹಾಸಿಗೆಗಳು, ಔಷಧಿಗಳು ಮತ್ತು ಆಮ್ಲಜನಕದ ಕೊರತೆಯು ಇಡೀ ದೇಶವನ್ನು ವೇಗವಾಗಿ ಆವರಿಸುತ್ತಿದೆ.

ಸ್ಪುಟ್ನಿಕ್ ವಿ ಮತ್ತು ಇತರ ವಿದೇಶಿ ಲಸಿಕೆಗಳ ತುರ್ತು ಬಳಕೆಯನ್ನು ಕೇಂದ್ರವು ಅನುಮೋದಿಸಿದೆ. ಆರೋಗ್ಯ ಸೇವೆಗಳ ಕ್ಷೇತ್ರದ ಕುಸಿತವನ್ನು ತಡೆಗಟ್ಟಲು ಕ್ರಮಗಳನ್ನು ತೆಗೆದುಕೊಳ್ಳುವಾಗ ಔಷಧ ಉದ್ಯಮದೊಂದಿಗೆ ಸಮನ್ವಯ ಸಾಧಿಸುವ ಮೂಲಕ ಸರ್ಕಾರವು ಕೋವಿಡ್ ವಿರುದ್ಧ ಬಹು ಆಯಾಮದ ಹೋರಾಟವನ್ನು ಪ್ರಾರಂಭಿಸಲು ಇದು ಸಕಾಲ.

ಭಾರತವನ್ನು ವಿಶ್ವದ ಲಸಿಕೆ ರಾಜಧಾನಿ ಎಂದು ಪರಿಗಣಿಸಲಾಗಿದೆ. ಅಂತಹ ದೇಶದಲ್ಲಿ ಕೇವಲ ಶೇಕಡಾ 0.7 ರಷ್ಟು ಜನಸಂಖ್ಯೆ ಮಾತ್ರ ಕರೋನಾ ಲಸಿಕೆಯ ಎರಡೂ ಡೋಸ್ ಅನ್ನು ಇಲ್ಲಿಯವರೆಗೆ ತೆಗೆದುಕೊಂಡಿದೆ. ಕೇವಲ ಶೇಕಡಾ 6 ರಷ್ಟು ಜನರು ಲಸಿಕೆಯ ಒಂದು ಡೋಸ್ ತೆಗೆದುಕೊಂಡಿದ್ದಾರೆ. ದಿನಕ್ಕೆ ಕನಿಷ್ಠ 50 ಲಕ್ಷ ಡೋಸ್ ಲಸಿಕೆ ನೀಡದೆ ಕೋವಿಡ್ ವಿರುದ್ಧದ ಹೋರಾಟ ಮುಂದುವರಿಯಲು ಸಾಧ್ಯವಿಲ್ಲ ಎಂದು ತಜ್ಞರು ಹೇಳುತ್ತಿದ್ದಾರೆ. ಜನರ ಮನಸ್ಸಿನಿಂದ ಆತಂಕ ಹಾಗೂ ಗೊಂದಲಗಳನ್ನು ತೆಗೆದುಹಾಕುವಲ್ಲಿನ ವೈಫಲ್ಯ, ರಾಜ್ಯಗಳಿಗೆ ಸಾಕಷ್ಟು ಪ್ರಮಾಣದ ಲಸಿಕೆ ನೀಡಲು ವಿಫಲವಾದದ್ದು ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟವು ನಿಧಾನವಾಗಲು ಕಾರಣಗಳಾಗಿವೆ ಎಂಬುದು ನಿಚ್ಚಳವಾಗಿದೆ.

ಲಸಿಕೆ ಹಾಕಿಸಿಕೊಳ್ಳುವಿಕೆಯಿಂದ ಮಾನವ ದೇಹವು ಕೊರೋನಾ ವಿರುದ್ಧದ ಹೋರಾಟಕ್ಕೆ ಸಿದ್ಧಗೊಳ್ಳುತ್ತದೆ ಹಾಗೂ ಜೀವಕ್ಕೆ ಅಪಾಯ ಉಂಟಾಗುವುದನ್ನು ತಪ್ಪಿಸಲು ಇದು ಸಹಾಯ ಮಾಡುತ್ತದೆ ಎಂಬ ಅಂಶವನ್ನು ಪ್ರಚಾರ ಮಾಡುವ ಜವಾಬ್ದಾರಿ ಸರ್ಕಾರಗಳದು. ದೊಡ್ಡ ಪ್ರಮಾಣದಲ್ಲಿ ಲಸಿಕೆ ಉತ್ಪಾದನೆ ಮಾಡಲು ಹಣಕಾಸಿನ ನೆರವು ನೀಡುವಂತೆ ಸ್ಥಳೀಯ ಲಸಿಕೆ ತಯಾರಕರು ಕೇಂದ್ರಕ್ಕೆ ಈಗಾಗಲೇ ಮನವಿ ಮಾಡಿದ್ದಾರೆ. ಮಿಷನ್ ಕೋವಿಡ್ ಸುರಕ್ಷಾ ಯೋಜನೆ ಅಡಿಯಲ್ಲಿ ಲಸಿಕೆ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ತೊಡಗಿರುವ ದೇಶೀಯ ಕಂಪನಿಗಳಿಗೆ ಹಣಕಾಸಿನ ನೆರವು ನೀಡಲು ಕೇಂದ್ರವು ತನ್ನ ಬಜೆಟ್‍ನಲ್ಲಿ ರೂ. 35,000 ಕೋಟಿ ಮೊತ್ತವನ್ನು ನೀಡಿದೆ. ಆದಾಗ್ಯೂ, ಇಡೀ ಜನಸಂಖ್ಯೆಗೆ ಲಸಿಕೆ ನೀಡಲು ಸರ್ಕಾರ ಚುರುಕಾಗಿ ಕ್ರಮಗಳನ್ನು ಕೈಗೊಳ್ಳಬೇಕಿದೆ.

ಫೈಜರ್ ಮತ್ತು ಮಾಡರ್ನಾ ಕಂಪನಿಗಳ ಲಸಿಕೆಗಳ ಬೆಲೆಯನ್ನು ನಿಯಂತ್ರಣದಲ್ಲಿ ಇಡುವುದರ ಹೊರತಾಗಿ, ಜಾನ್ಸನ್ ಮತ್ತು ಜಾನ್ಸನ್ ಲಸಿಕೆಯು ಅಮೆರಿಕದಲ್ಲಿ ಉಂಟು ಮಾಡಿದ್ದ ಆರೋಗ್ಯ ಸಂಬಂಧಿ ವಿವಾದವನ್ನೂ ಸಹ ಸರಕಾರ ನೆನಪಿನಲ್ಲಿಡಬೇಕು. ಕೋವಿಡ್ ವಿರುದ್ಧದ ಹೋರಾಟದ ಭಾಗವಾಗಿ, ಆಮ್ಲಜನಕ ದಾಸ್ತಾನಿಗಾಗಿ ಉಕ್ಕಿನ ಸ್ಥಾವರಗಳು ಮತ್ತು ತೈಲ ಸಂಸ್ಕರಣಾಗಾರಗಳನ್ನು ಕೇಂದ್ರವು ಸಂಪರ್ಕಿಸುತ್ತಿರುವ ರೀತಿಯಲ್ಲಿಯೇ ರೆಮ್ಡೆಸಿವರ್‍ವನಂತಹ ಕರೋನಾ ಔಷಧಿಗಳನ್ನು ಅಕ್ರಮವಾಗಿ ಪೇರಿಸಿಡುವುದನ್ನು ತಡೆಗಟ್ಟಲು ಸಹ ಹೇರಳವಾಗಿ ಕ್ರಮಗಳನ್ನು ತೆಗೆದುಕೊಳ್ಳಬೇಕು.

ಅದೃಶ್ಯ ವೈರಸ್ ವಿರುದ್ಧದ ಈ ಹೋರಾಟದಲ್ಲಿ ನಾವು ಕನಿಷ್ಠ ಪ್ರಾಣಹಾನಿಯೊಂದಿಗೆ ಜಯಶಾಲಿಯಾಗಬೇಕೆಂದರೆ, ನಾಗರಿಕರು, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು, ಯಾವುದೇ ಸಡಿಲತೆ ಮತ್ತು ಬೇಜವಾಬ್ದಾರಿತನಕ್ಕೆ ಅವಕಾಶ ಕೊಡದೇ, ಜಂಟಿಯಾಗಿ ಪ್ರಯತ್ನ ನಡೆಸಬೇಕಿದೆ.

ABOUT THE AUTHOR

...view details