ಕರ್ನಾಟಕ

karnataka

By

Published : Jul 19, 2023, 10:14 AM IST

ETV Bharat / bharat

ಜಮ್ಮು ಕಾಶ್ಮೀರದಲ್ಲಿ ಸ್ಥಳೀಯರಲ್ಲದ ಕಾರ್ಮಿಕರ ಮೇಲೆ ಗುಂಡಿನ ದಾಳಿ, ಇಬ್ಬರಿಗೆ ಗಾಯ

ಜಮ್ಮು ಕಾಶ್ಮೀರದ ಸ್ಥಳೀಯರಲ್ಲದ ಕಾರ್ಮಿಕರ ಮೇಲೆ ಮತ್ತೆ ಗುಂಡಿನ ದಾಳಿ ಮಾಡಿ ಗಾಯಗೊಳಿಸಲಾಗಿದೆ. ಕಾಶ್ಮೀರ ಬಿಟ್ಟು ಹೋಗಿ ಎಂದು ಬೆದರಿಕೆಗಳು ಕೇಳಿ ಬರುತ್ತಿರುವ ನಡುವೆ ಈ ದಾಳಿ ನಡೆದಿದೆ.

ಕಾರ್ಮಿಕರ ಮೇಲೆ ಗುಂಡಿನ ದಾಳಿ
ಕಾರ್ಮಿಕರ ಮೇಲೆ ಗುಂಡಿನ ದಾಳಿ

ಶ್ರೀನಗರ:ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಭಯೋತ್ಪಾದಕರು ಮತ್ತೆ ತಮ್ಮ ಕೃತ್ಯವನ್ನು ನಡೆಸಿದ್ದಾರೆ. ಮಂಗಳವಾರ ರಾತ್ರೋರಾತ್ರಿ ಗುಂಡಿನ ದಾಳಿ ಮಾಡಿ, ಇಬ್ಬರು ಸ್ಥಳೀಯರಲ್ಲದ ಕಾರ್ಮಿಕರನ್ನು ಗಾಯಗೊಳಿಸಿದ್ದಾರೆ. ಈ ಘಟನೆ ಸ್ಥಳೀಯರಲ್ಲದ ನಿವಾಸಿಗಳಿಗೆ ಆತಂಕ ತಂದಿದೆ.

ಗುಂಡಿನ ದಾಳಿಗೆ ತುತ್ತಾದ ಇಬ್ಬರನ್ನೂ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ ನೀಡಿದ ವೈದ್ಯರು ಗುಂಡು ತಿಂದ ಗಾಯಾಳುಗಳ ಸ್ಥಿತಿ ಸದ್ಯಕ್ಕೆ ಸ್ಥಿರವಾಗಿದೆ ಎಂದು ತಿಳಿಸಿದ್ದಾರೆ. ಉಗ್ರ ದಾಳಿ ನಡೆಸಿದವರ ಪತ್ತೆಗಾಗಿ ಪೊಲೀಸರು ಹುಡುಕಾಟ ರಂಭಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.

ಗಾಯಗೊಂಡವರನ್ನು ಮಹಾರಾಷ್ಟ್ರ ಮೂಲದ ಸೌರವ್ ಮತ್ತು ಅಕ್ಷಯ್ ಎಂದು ಗುರುತಿಸಲಾಗಿದೆ. ಜುಲೈ 13 ರಂದು ಶೋಪಿಯಾನ್ ಜಿಲ್ಲೆಯ ಗಗ್ರಾನ್ ಗ್ರಾಮದಲ್ಲಿ ಭಯೋತ್ಪಾದಕರು ಮೂವರು ಸ್ಥಳೀಯೇತರ ಕಾರ್ಮಿಕರನ್ನು ಗುಂಡಿಕ್ಕಿ ಗಾಯಗೊಳಿಸಿದ್ದರು. ಇದಾದ ಬೆನ್ನಲ್ಲೇ ಮತ್ತೊಂದು ದಾಳಿ ನಡೆದಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.

ಉಗ್ರರ ಹೊಡೆದುರುಳಿಸಿದ ಸೇನೆ:ಇದೇ ವೇಳೆ ಜುಲೈ 16 ರಂದು ಭಾರತ- ಪಾಕ್ ಗಡಿ ನಿಯಂತ್ರಣ ರೇಖೆಯ ಪಕ್ಕದಲ್ಲಿರುವ ಕುಪ್ವಾರ ಜಿಲ್ಲೆಯ ಬಳಿ ಭದ್ರತಾ ಪಡೆ ಮತ್ತು ಭಯೋತ್ಪಾದಕರೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ 5 ಉಗ್ರರು ಹತರಾಗಿದ್ದರು. ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮತ್ತು ಸೇನೆಯ ಜಂಟಿ ಕಾರ್ಯಾಚರಣೆಯಲ್ಲಿ ಭಯೋತ್ಪಾದಕರನ್ನು ಹೊಡೆದುರುಳಿಸಲಾಗಿತ್ತು.

ಇದಾದ ಬಳಿಕ ಮಂಗಳವಾರ ಭಾರತೀಯ ಸೇನೆ ಮತ್ತು ಭದ್ರತಾ ಪಡೆಗಳು ಜಂಟಿ ಕಾರ್ಯಾಚರಣೆಯಲ್ಲಿ ನಾಲ್ವರು ಭಯೋತ್ಪಾದಕರನ್ನು ಬೇಟೆಯಾಡಲಾಗಿತ್ತು. ಪೂಂಚ್‌ ಜಿಲ್ಲೆಯ ಸಿಂಧರಾ ಪ್ರದೇಶದ ಸುರಾನಕೋಟ್​ನಲ್ಲಿ ಎನ್​ಕೌಂಟರ್​ ನಡೆಸಲಾಗಿತ್ತು.

ಸೋಮವಾರ ರಾತ್ರಿ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ಗುಂಡಿನ ಚಕಮಕಿ ನಡೆದಿತ್ತು. ಬಳಿಕ ಈ ಸ್ಥಳದಲ್ಲಿ ಉಗ್ರರ ಪತ್ತೆಗೆ ಡ್ರೋನ್​ ಕಣ್ಗಾವಲು ಇರಿಸಲಾಗಿತ್ತು. ಬಳಿಕ ಮುಂಜಾನೆ ಮತ್ತೆ ಉಗ್ರರು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆದಿದೆ. ಈ ವೇಳೆ ನಾಲ್ವರು ಉಗ್ರರನ್ನು ಸೇನೆ ಹೊಡೆದುರುಳಿಸಿತ್ತು. ಹತರಾದವರಲ್ಲಿ ನಾಲ್ವರೂ ವಿದೇಶಿ ಉಗ್ರರಾಗಿದ್ದು, ಅವರ ಗುರುತು ಪತ್ತೆ ಹಚ್ಚಲಾಗುತ್ತಿದೆ ಎಂದು ಸೇನೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪೂಂಚ್​ ಜಿಲ್ಲೆಯಲ್ಲಿ ಓರ್ವನ ಬಂಧನ:ಭದ್ರತಾ ಪಡೆಗಳು ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಭಯೋತ್ಪಾದಕರ ಅಡಗುತಾಣವೊಂದನ್ನು ಪತ್ತೆ ಮಾಡಿದೆ. ಈ ವೇಳೆ ಓರ್ವ ವ್ಯಕ್ತಿಯನ್ನು ಬಂಧಿಸಿದೆ.

ಇದನ್ನೂ ಓದಿ:Encounter in Kulgam: ತಡರಾತ್ರಿ ಗುಂಡಿನ ದಾಳಿ.. ಉಗ್ರನೊಬ್ಬನನ್ನು ಹೊಡೆದುರುಳಿಸಿದ ಸೇನೆ!

ABOUT THE AUTHOR

...view details