ಪಾಟ್ನಾ (ಬಿಹಾರ): ಆ್ಯಂಬುಲೆನ್ಸ್ ವಿವಾದ ಪ್ರಕರಣ ಬಯಲಿಗೆಳೆದಿದ್ದ ಈಟಿವಿ ಭಾರತ ವರದಿಗಾರನ ವಿರುದ್ಧ ಎಫ್ಐಆರ್ ದಾಖಲಾಗಿರುವ ಸಂಬಂಧ ಬಿಹಾರ ಸರ್ಕಾರದ ವಿರುದ್ಧ ಆಕ್ರೋಶದ ಧ್ವನಿ ಕೇಳಿ ಬಂದಿದೆ.
ಈ ಪ್ರಕರಣ ಸಂಬಂಧ ಪ್ರತಿಪಕ್ಷ ನಾಯಕ ತೇಜಸ್ವಿ ಯಾದವ್ ಟ್ವೀಟ್ ಮಾಡಿ ನಿತೀಶ್ ಕುಮಾರ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಸರ್ಕಾರದ ನ್ಯೂನತೆಗಳು ಮತ್ತು ವಾಸ್ತವಾಂಶ ವರದಿ ಮಾಡುವ ಪತ್ರಕರ್ತರ ವಿರುದ್ಧ ಎಫ್ಐಆರ್ ದಾಖಲಿಸುವ ಹೊಸ ಅಭ್ಯಾಸವನ್ನು ನಿತೀಶ್ ಕುಮಾರ್ ಸರ್ಕಾರ ಆರಂಭಿಸಿದೆ. ಈಗ ಕೇಂದ್ರ ಸಚಿವ ಚೌಬೆ ಅವರ ನಕಲಿ ಆ್ಯಂಬುಲೆನ್ಸ್ ವಿವಾದ ಹೊರತಂದ ಈಟಿವಿ ಭಾರತ ವರದಿಗಾರನ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದಿದ್ದಾರೆ.
ಬಿಹಾರದ ಬಕ್ಸಾರ್ ಜಿಲ್ಲೆಯಲ್ಲಿ ಆ್ಯಂಬುಲೆನ್ಸ್ ಪ್ರಕರಣವನ್ನು ವರದಿ ಮಾಡಿದ್ದಕ್ಕಾಗಿ ಈಟಿವಿ ಭಾರತದ ವರದಿಗಾರ ಉಮೇಶ್ ಪಾಂಡೆ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಬಿಜೆಪಿ ಮುಖಂಡ ಮತ್ತು ಬಕ್ಸಾರ್ ವಿಧಾನಸಭೆಯ ಮಾಜಿ ಅಭ್ಯರ್ಥಿ ಪರಶುರಾಮ್ ಚತುರ್ವೇದಿ ದೂರು ದಾಖಲಿಸಿದ್ದರು. ಈ ದೂರಿನ ಅನ್ವಯ ಬಕ್ಸಾರ್ನ ಸದರ್ ಪೊಲೀಸ್ ಠಾಣೆಯಲ್ಲಿ 500, 506, 290, 420 ಮತ್ತು ಸೆಕ್ಷನ್ 3 ರ ಅಡಿಯಲ್ಲಿ ವರದಿಗಾರನ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಓದಿ:ಬಿಹಾರ ಆ್ಯಂಬುಲೆನ್ಸ್ ವಿವಾದ ಬಯಲಿಗೆಳೆದ ಈಟಿವಿ ಭಾರತ ವರದಿಗಾರನ ವಿರುದ್ಧ ಎಫ್ಐಆರ್