ಕರ್ನಾಟಕ

karnataka

ಆಂಧ್ರ, ಉತ್ತರ ಪ್ರದೇಶದಲ್ಲಿ ರಸ್ತೆ ಅಪಘಾತ: 13 ಮಂದಿ ಸಾವು; ಹಲವರಿಗೆ ಗಾಯ

By

Published : Jul 11, 2023, 8:29 AM IST

Updated : Jul 11, 2023, 10:16 AM IST

ಆಂಧ್ರಪ್ರದೇಶ ಮತ್ತು ಉತ್ತರ ಪ್ರದೇಶದಲ್ಲಿ ಸಂಭವಿಸಿದ ಪ್ರತ್ಯೇಕ ರಸ್ತೆ ಅವಘಡಗಳಲ್ಲಿ ಒಟ್ಟು 13 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಪ್ರತ್ಯೇಕ ರಸ್ತೆ ಅಪಘಾತ
ಪ್ರತ್ಯೇಕ ರಸ್ತೆ ಅಪಘಾತ

ಪ್ರಕಾಶಂ (ಆಂಧ್ರಪ್ರದೇಶ): ಚಾಲಕನ ನಿಯಂತ್ರಣ ಕಳೆದುಕೊಂಡ ಬಸ್ ಕಾಲುವೆಗೆ ಉರುಳಿ ಏಳು ಜನ ಸಾವನ್ನಪ್ಪಿರುವ ಘಟನೆ ಕಳೆದ ತಡರಾತ್ರಿ ಪ್ರಕಾಶಂ ಜಿಲ್ಲೆಯ ದರ್ಶಿ ಎಂಬಲ್ಲಿ ನಡೆದಿದೆ. ಮದುವೆ ಆರತಕ್ಷತೆಗಾಗಿ ಕಾಕಿನಾಡಕ್ಕೆ ತೆರಳಲು ಬಸ್ ಬಾಡಿಗೆಗೆ ಪಡೆದಿದ್ದರು. ಚಾಲಕ ನಿದ್ರೆಗೆ ಜಾರಿದ್ದ ಕಾರಣ ಬಸ್‌ ಕಾಲುವೆಗೆ ಉರುಳಿ ಬಿದ್ದಿದೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

ಪೊದಿಲಿ ಗ್ರಾಮದ ಅಬ್ದುಲ್ ಅಜೀಜ್ (65), ಅಬ್ದುಲ್ ಹನಿ (60), ಶೇಖ್ ರಮೀಜ್ (48), ಮುಲ್ಲಾ ನೂರ್ಜಹಾನ್ (58), ಮುಲ್ಲಾ ಜಾನಿ ಬೇಗಂ (65), ಶೇಖ್ ಶಬೀನಾ (35) ಮತ್ತು ಶೇಖ್ ಹೀನಾ (6) ಘಟನೆಯಲ್ಲಿ ಮೃತಪಟ್ಟಿದ್ದಾರೆ. 12 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಅಪಘಾತದ ವೇಳೆ ಬಸ್ಸಿನಲ್ಲಿ 35ರಿಂದ 40 ಜನ ಪ್ರಯಾಣಿಸುತ್ತಿದ್ದರು ಎಂಬ ಮಾಹಿತಿ ದೊರೆತಿದೆ. ಪೊಲೀಸರು ಕೂಡಲೇ ಘಟನಾ ಸ್ಥಳಕ್ಕೆ ತೆರಳಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಕಾಕಿನಾಡದ ಯುವಕನಿಗೆ ಪ್ರಕಾಶಂ ಜಿಲ್ಲೆಯ ಪೊಡಿಲಿ ಗ್ರಾಮದ ಸಿರಾಜ್ ಎಂಬವರ ಮಗಳ ಮದುವೆ ಸೋಮವಾರ ಪೊಡಿಲಿ ಗ್ರಾಮದಲ್ಲಿ ನೆರವೇರಿತ್ತು. ಮದುವೆ ನಂತರ ನವದಂಪತಿ ಮತ್ತು ಪೋಷಕರು ಕಾರುಗಳಲ್ಲಿ ಕಾಕಿನಾಡಕ್ಕೆ ತೆರಳಿದ್ದರು. ವಧುವಿನ ಸಂಬಂಧಿಗಳಿಗಾಗಿ ಆರ್​ಟಿಸಿ ಬಸ್​ ಬಾಡಿಗೆ ಪಡೆದು ಕಾಕಿನಾಡಕ್ಕೆ ಪ್ರಯಾಣ ಬೆಳೆಸುತ್ತಿದ್ದರು. ಪೊಡಿಲಿಯಿಂದ 20 ಕಿಲೋಮೀಟರ್ ಪ್ರಯಾಣಿಸಿದ ನಂತರ ದರ್ಶಿ ಎಂಬಲ್ಲಿ ಬಸ್ ನಿಯಂತ್ರಣ ತಪ್ಪಿ ಅಲ್ಲಿದ್ದ ಕಾಲುವೆಗೆ ಉರುಳಿಬಿದ್ದಿದೆ.

ಗಾಜಿಯಾಬಾದ್‌ನಲ್ಲಿ ಶಾಲಾ ಬಸ್- ಕಾರು​ ಅಪಘಾತ:ಶಾಲಾ ಬಸ್​ ಮತ್ತು ಕಾರು ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ 6 ಜನರು ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್​​ನ ದೆಹಲಿ- ಮೀರತ್​ ಎಕ್ಸ್​ಪ್ರಸ್​ವೇನಲ್ಲಿ ಇಂದು ಸಂಭವಿಸಿದೆ. ಎನ್​ಹೆಚ್​ 9ರಲ್ಲಿ ಶಾಲಾ ಬಸ್ ಸಂಚಾರಿ ನಿಯಮ ಉಲ್ಲಂಘಿಸಿ ವಿರುದ್ದ ಪಥದಲ್ಲಿ ಚಲಿಸುತ್ತಿದ್ದಾಗ TUV ಕಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಕಾರಿನಲ್ಲಿದ್ದ 6 ಜನ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆ ಬಳಿಕ ಬಸ್ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

ಜಮ್ಮು ಕಾಶ್ಮೀರದಲ್ಲೂ ಇಂಥದ್ದೇ ಘಟನೆ:ಪ್ರವಾಸಿಗರಿದ್ದ ಬಸ್ಸೊಂದು ಆಳ ಕಂದಕಕ್ಕೆ ಬಿದ್ದು 10 ಮಂದಿ ಸಾವನ್ನಪ್ಪಿದ ಘಟನೆ ಜಮ್ಮು ಕಾಶ್ಮೀರದಲ್ಲಿ ಇತ್ತೀಚೆಗೆ ನಡೆದಿತ್ತು. ಅಪಘಾತಕ್ಕೀಡಾದ ಬಸ್​ ಅಮೃತಸರದಿಂದ ಕತ್ರಾಕ್ಕೆ ಹೋಗುತ್ತಿತ್ತು. ಜಜ್ಜರ್​ ಕೋಟ್ಲಿ ಎಂಬಲ್ಲಿ​ ಮೇಲ್ಸೇತುವೆಯ ಸಮೀಪ ನಿಯಂತ್ರಣ ಕಳೆದುಕೊಂಡು ಕಂದಕಕ್ಕೆ ಉರುಳಿ ಬಿದ್ದಿದೆ. ಹತ್ತು ಜನ ಪ್ರವಾಸಿಗರು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಗಾಯಗೊಂಡವರನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಉತ್ತರಪ್ರದೇಶದ ಜಲೌನ್​ ಎಂಬಲ್ಲಿಯೂ ಮದುವೆ ಸಮಾರಂಭ ಮುಗಿಸಿ ವಾಪಸಾಗುತ್ತಿದ್ದ ಬಸ್​ ಕಂದಕಕ್ಕೆ ಬಿದ್ದು ಐವರು ಸಾವನ್ನಪ್ಪಿದ್ದರು. 12ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದರು.

ಇದನ್ನೂ ಓದಿ:Watch Video - ದ್ವಿಚಕ್ರ ವಾಹನ ಮುಖಾಮುಖಿ ಡಿಕ್ಕಿ: ಮೂವರಿಗೆ ಗಂಭೀರ ಗಾಯ.. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆ

Last Updated : Jul 11, 2023, 10:16 AM IST

ABOUT THE AUTHOR

...view details