ಕರ್ನಾಟಕ

karnataka

ಜಮ್ಮು ಕಾಶ್ಮೀರ: ಉರಿಯಲ್ಲಿ ಉಗ್ರರ ಒಳನುಸುಳುವಿಕೆ ಯತ್ನ ವಿಫಲಗೊಳಿಸಿದ ಸೇನೆ

By PTI

Published : Oct 22, 2023, 3:31 PM IST

ಜಮ್ಮು ಕಾಶ್ಮೀರದಲ್ಲಿ ಪಾಕಿಸ್ತಾನ ಬೆಂಬಲಿತ ಉಗ್ರರ ಒಳನುಸುಳುವಿಕೆ ಮುಂದುವರಿದಿದೆ. ಆದರೆ, ಇದನ್ನು ಭಾರತೀಯ ಸೇನೆ ಯಶಸ್ವಿಯಾಗಿ ತಡೆಯುತ್ತಿದೆ.

ಉಗ್ರರ ಒಳನುಸುಳುವಿಕೆ ಯತ್ನ
ಉಗ್ರರ ಒಳನುಸುಳುವಿಕೆ ಯತ್ನ

ಶ್ರೀನಗರ:ಜಮ್ಮು ಮತ್ತು ಕಾಶ್ಮೀರದ ಉರಿ ಸೆಕ್ಟರ್‌ನ ಗಡಿ ನಿಯಂತ್ರಣ ರೇಖೆಯಲ್ಲಿ ಉಗ್ರರ ಒಳನುಸುಳುವಿಕೆ ಪ್ರಯತ್ನವನ್ನು ಭದ್ರತಾ ಪಡೆಗಳು ವಿಫಲಗೊಳಿಸಿವೆ ಎಂದು ಭಾರತೀಯ ಸೇನೆ ಭಾನುವಾರ ತಿಳಿಸಿದೆ. ಪಿಸ್ತೂಲ್​, ಗ್ರೆನೇಡ್​ ಸೇರಿದಂತೆ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ.

ಅಕ್ಟೋಬರ್​ 21 ರಿಂದ 23 ರ ನಡುವೆ ಉಗ್ರರು ಸತತವಾಗಿ ಉರಿ ಸೆಕ್ಟರ್​​ನಿಂದ ಭಾರತದ ಗಡಿ ನಿಯಂತ್ರಣ ರೇಖೆಯನ್ನು ನುಗ್ಗಿ ಬರಲು ಯತ್ನ ನಡೆಸಿದ್ದಾರೆ. ಇದರ ಮಾಹಿತಿ ಅರಿತ ಭದ್ರತಾ ಪಡೆಗಳು ಜಮ್ಮು ಕಾಶ್ಮೀರದ ಪೊಲೀಸರ ಜತೆಗೂಡಿ ಜಂಟಿ ಕಾರ್ಯಾಚರಣೆಗಿಳಿದು, ಒಳನುಸುಳಿ ಬರುತ್ತಿದ್ದ ಭಯೋತ್ಪಾದಕರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಉಗ್ರರು ಕೂಡ ಪ್ರತಿದಾಳಿ ನಡೆಸಿದ್ದಾರೆ. ಇದರಿಂದ ಗಡಿಯಲ್ಲಿ ಗುಂಡಿನ ಚಕಮಕಿ ನಡೆದಿದೆ. ಅಂತಿಮವಾಗಿ ಭಾರತೀಯ ಸಶಸ್ತ್ರ ಪಡೆಗಳು ಉಗ್ರರನ್ನು ಹಿಂದೆ ಸರಿಯುವಂತೆ ಮಾಡಿದ್ದಾರೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.

ಈ ಬಗ್ಗೆ ಎಕ್ಸ್​ನಲ್ಲಿ ಮಾಹಿತಿ ಹಂಚಿಕೊಂಡಿರುವ ಸೇನೆ, 'ಉರಿ ಸೆಕ್ಟರ್​ನ ಬಾರಾಮುಲ್ಲಾದ ಗಡಿಯಲ್ಲಿ ಪಾಕಿಸ್ತಾನ ಕಡೆಯಿಂದ ಭಯೋತ್ಪಾದಕರು ಒಳನುಸುಳುವ ಸಂಚು ರೂಪಿಸಿದ್ದರು. ಗುಪ್ತಚರ ದಳ​ ಮಾಹಿತಿ ಆಧಾರದ ಮೇಲೆ ಜಮ್ಮು ಕಾಶ್ಮೀರ ಪೊಲೀಸರು ಮತ್ತು ಭಾರತೀಯ ಭದ್ರತಾ ಪಡೆಗಳು ಜಂಟಿಯಾಗಿ ಈ ಸಂಚನ್ನು ವಿಫಲಗೊಳಿಸಲಾಗಿದೆ' ಎಂದಿದೆ.

ಶಸ್ತ್ರಾಸ್ತ್ರಗಳು ವಶ:ಒಳನುಸುಳುತ್ತಿದ್ದ ಭಯೋತ್ಪಾದಕರ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ. ಚಕಮಕಿಯಲ್ಲಿ ಯಾವುದೇ ಹಾನಿಯಾದ ಬಗ್ಗೆ ಸದ್ಯಕ್ಕೆ ಮಾಹಿತಿ ಸಿಕ್ಕಿಲ್ಲ. ಘರ್ಷಣೆ ನಡೆದ ಪ್ರದೇಶದಲ್ಲಿ ಉಗ್ರರಿಗೆ ಸೇರಿದ್ದ 6 ಪಿಸ್ತೂಲ್‌ಗಳು ಮತ್ತು 4 ಹ್ಯಾಂಡ್ ಗ್ರೆನೇಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಾರ್ಯಾಚರಣೆ ಮುಂದುವರಿದಿದೆ ಎಂದು ಸೇನೆ ತಿಳಿಸಿದೆ.

ಪೂಂಚ್​ನಲ್ಲಿ ಒಳನುಸುಳಿದ್ದ ಉಗ್ರರು:ಜಮ್ಮು ಕಾಶ್ಮೀರದ ಪೂಂಚ್​​ ಜಿಲ್ಲೆಯಲ್ಲಿ ಕೆಲ ದಿನಗಳ ಹಿಂದೆ ಪಾಕಿಸ್ತಾನದಿಂದ ಉಗ್ರರು ಭಾರತದೊಳಗೆ ನುಸುಳುತ್ತಿದ್ದಾರೆ ಎಂಬ ಖಚಿತ ಮಾಹಿತಿ ತಿಳಿದ ಭದ್ರತಾ ಪಡೆಗಳು ಮತ್ತು ಪೊಲೀಸ್​ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿದ್ದರು. ಉಗ್ರರ ಮೇಲೆ ಗುಂಡಿನ ದಾಳಿ ನಡೆಸಲಾಗಿತ್ತು.

ಪೂಂಚ್‌ ಜಿಲ್ಲೆಯ ಸುರನ್‌ಕೋಟೆ ಪ್ರದೇಶದಲ್ಲಿ ಉಗ್ರರು ಒಳನುಸುಳುವಿಕೆ ನಡೆಸಿದ್ದು, ಸೇನೆ ಮತ್ತು ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಸುರನ್‌ಕೋಟೆಯ ಸಿಂದಾರಾ ಮತ್ತು ಮೈದಾನ್​ ಎಂಬಲ್ಲಿ ಉಗ್ರರು ಒಳನುಸುಳಿದ್ದರು. ಭದ್ರತಾ ಪಡೆಗಳು ಇಡೀ ಪ್ರದೇಶವನ್ನು ಸುತ್ತುವರೆದು, ಗುಂಡಿನ ದಾಳಿ ನಡೆಸಿದ್ದರು. ಇದಕ್ಕೂ ಮೊದಲು ಇದೇ ಪ್ರದೇಶದಲ್ಲಿ ಒಳನುಸುಳಿದ್ದ ಇಬ್ಬರು ಉಗ್ರರನ್ನು ಭಾರತೀಯ ಸೇನೆ ಹೊಡೆದುರುಳಿಸಿತ್ತು.

ಇದನ್ನೂ ಓದಿ:ಸಿಯಾಚಿನ್​ನಲ್ಲಿ ಅಗ್ನಿವೀರ್​​​ ಅಕ್ಷಯ್​ ಹುತಾತ್ಮ: ಭಾರತೀಯ ಸೇನೆಯಿಂದ ಗೌರವ ಸಲ್ಲಿಕೆ

ABOUT THE AUTHOR

...view details