ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): ದೇಶದಲ್ಲಿ ಕೋವಿಡ್ 2ನೇ ಅಲೆಯ ಆರ್ಭಟ ಹೆಚ್ಚಾಗುತ್ತಿದ್ದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಅಮರನಾಥ ಯಾತ್ರೆಯ ನೋಂದಣಿಯನ್ನ ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ ಎಂದು ಶ್ರೀ ಅಮರನಾಥ ದೇವಾಲಯ ಮಂಡಳಿ ತಿಳಿಸಿದೆ.
ಈ ಕುರಿತು ಟ್ವಿಟರ್ನಲ್ಲಿ ಮಾಹಿತಿ ಹಂಚಿಕೊಂಡಿರುವ ದೇವಾಲಯ ಮಂಡಳಿ, ಸದ್ಯದ ಪರಿಸ್ಥಿತಿಯನ್ನು ನಿರಂತರವಾಗಿ ಅವಲೋಕಿಸಲಾಗುತ್ತಿದ್ದು, ಪರಿಸ್ಥಿತಿ ಸುಧಾರಣೆಯ ಬಳಿಕ ಮತ್ತೆ ನೋಂದಣಿಗೆ ಅವಕಾಶ ಮಾಡಿಕೊಡಲಾಗುವುದು ಎಂದಿದೆ.
ಅಮರನಾಥ ಯಾತ್ರೆಗಾಗಿ ಇದೇ ಏಪ್ರಿಲ್ 1ರಿಂದ ನೋಂದಣಿಗೆ ಅವಕಾಶ ನೀಡಲಾಗಿತ್ತು. ಹಿಮಾಲಯ ತಪ್ಪಲಿನ ದೇವಾಲಯಕ್ಕೆ ಜಮ್ಮು ಕಾಶ್ಮೀರದ ಪಹಲ್ಗಮ್ ಮತ್ತು ಬಾಲ್ಟಾಲ್ ಅವಳಿ ಮಾರ್ಗಗಳಿಂದ 56 ದಿನಗಳ ಯಾತ್ರೆ ಆರಂಭವಾಗುವುದಿತ್ತು. ಅಲ್ಲದೆ ಈ ಯಾತ್ರೆಯೂ ಆಗಸ್ಟ್ 22ರಂದು ಕೊನೆಗೊಳ್ಳುವ ಯೋಜನೆ ಹಾಕಿಕೊಳ್ಳಲಾಗಿತ್ತು.
ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದಾಗಿ, ಹೊಸದಾಗಿ ಕೇಂದ್ರಾಡಳಿತ ಪ್ರದೇಶವಾಗಿ ರೂಪುಗೊಂಡ ಬಳಿಕ ನಡೆಯುತ್ತಿರುವ ಮೊದಲ ಅಮರನಾಥ ಯಾತ್ರೆ ಇದಾಗಿದೆ. ಇದಕ್ಕೂ ಮೊದಲು 2019ರಲ್ಲಿ ಆರಂಭಗೊಂಡಿದ್ದ ಯಾತ್ರೆಯನ್ನು ಕೇವಲ 5 ದಿನಗಳಲ್ಲಿ ಮೊಟಕುಗೊಳಿಸಲಾಗಿತ್ತು.