ಕೇರಳ: ಬಸ್ನಲ್ಲಿ ಅನುಚಿತವಾಗಿ ವರ್ತಿಸಿದ ವ್ಯಕ್ತಿಯೊಬ್ಬನನ್ನು ಯುವತಿ ಅಟ್ಟಿಸಿಕೊಂಡು ಹೋಗಿ ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ಕೇರಳದ ಕರಿವೆಲ್ಲೂರಿನಲ್ಲಿ ನಡೆದಿದೆ. ಕಣ್ಣೂರಿನಿಂದ ಕಾನ್ಹಂಗಡ್ ಪ್ರದೇಶಕ್ಕೆ ಕೆಎಸ್ಆರ್ಟಿಸಿ ಬಸ್ ಮೂಲಕ ಕಣ್ಣೂರಿನ ಯುವತಿ ಪ್ರಯಾಣ ಮಾಡುತ್ತಿದ್ದರು.
ಕೇಂದ್ರ ಸರ್ಕಾರದ ಕಾರ್ಮಿಕ ನೀತಿಗಳನ್ನು ವಿರೋಧಿಸಿ ಕೇರಳದ ಖಾಸಗಿ ಬಸ್ಗಳು ಮುಷ್ಕರ ನಡೆಸುತ್ತಿದ್ದ ಕಾರಣ ಸರ್ಕಾರಿ ಬಸ್ ಪ್ರಯಾಣಿಕರಿಂದ ತುಂಬಿ ತುಳುಕುತ್ತಿತ್ತು. ಈ ವೇಳೆ ವ್ಯಕ್ತಿಯೊಬ್ಬ ಯುವತಿ ಜತೆ ಅಸಭ್ಯವಾಗಿ ನಡೆದುಕೊಂಡಿದ್ದ. ಆರೋಪಿಯನ್ನು ರಾಜೀವ್ (52) ಎಂದು ಗುರುತಿಸಲಾಗಿದೆ. ಬಸ್ ನೀಲೇಶ್ವರಮ್ಗೆ ತೆರಳುತ್ತಿದ್ದಂತೆ ಆಕೆಯ ಜತೆ ಆತ ಅನುಚಿತ ವರ್ತನೆ ತೋರಿದ್ದಾನೆ.
ಅನೇಕ ಬಾರಿ ಆತನಿಗೆ ಯುವತಿ ಎಚ್ಚರಿಕೆ ನೀಡಿದರೂ ಕ್ಯಾರೆನ್ನದೆ ಆರೋಪಿ ತನ್ನ ಕುಕೃತ್ಯ ಮುಂದುವರೆಸಿದ್ದಾನೆ. ಬಸ್ನಲ್ಲಿ ಯುವತಿಗೆ ಕಿರುಕುಳ ನೀಡುತ್ತಿದ್ದರೂ ಬಸ್ಸಿನಲ್ಲಿದ್ದ ಸಹಪ್ರಯಾಣಿಕರಲ್ಲಿ ಯಾರೊಬ್ಬರೂ ಕೂಡ ಆಕೆಗೆ ಸಹಾಯ ಮಾಡಲಿಲ್ಲ ಎಂದು ತಿಳಿದುಬಂದಿದೆ. ಇದಾದ ಬಳಿಕ ಯುವತಿ ಪಿಂಕ್ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.