ಹೈದರಾಬಾದ್: ಬರುವ ಲೋಕಸಭಾ ಚುನಾವಣೆಗಾಗಿ ಬಿಜೆಪಿಯೇತರ ಪಕ್ಷಗಳನ್ನು ಒಗ್ಗೂಡಿಸುವ ಪ್ರಯತ್ನಕ್ಕೆ ಆರಂಭದಲ್ಲೇ ವಿಘ್ನ ಎದುರಾಗಿದೆ. ಲೋಕಸಭಾ ಚುನಾವಣೆಗೂ ಮುನ್ನ ಪ್ರತಿಪಕ್ಷಗಳನ್ನು ಒಗ್ಗೂಡಿಸಿ, ಸಾಮಾನ್ಯ ಕನಿಷ್ಠ ಕಾರ್ಯಕ್ರಮ (Common Minimum Program -CMP) ರೂಪಿಸಲು ನಾಳೆ ಪಾಟ್ನಾದಲ್ಲಿ ನಡೆಯಲಿರುವ ಪ್ರತಿಪಕ್ಷಗಳ ಮುಖಂಡರ ಸಭೆಗೆ ಇನ್ನೂ ಒಗ್ಗಟ್ಟು ಮೂಡಿಲ್ಲ ಎನ್ನಲಾಗಿದೆ.
ಆಮ್ ಆದ್ಮಿ ಪಾರ್ಟಿ ಎಚ್ಚರಿಕೆ!: ದೆಹಲಿ ಸರ್ಕಾರದ ವಿರುದ್ಧ ಕೇಂದ್ರ ಸರ್ಕಾರ ಹೊರಡಿಸಿರುವ ವಿವಾದಾತ್ಮಕ ಸುಗ್ರೀವಾಜ್ಞೆಯ ವಿರುದ್ಧ ಕಾಂಗ್ರೆಸ್ ಆಪ್ಗೆ ಬೆಂಬಲ ನೀಡದಿದ್ದಲ್ಲಿ ತಾವು ನಾಳಿನ ಪ್ರತಿಪಕ್ಷಗಳ ಸಭೆಗೆ ಗೈರಾಗುವುದಾಗಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಎಚ್ಚರಿಕೆ ನೀಡಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಆದಷ್ಟೂ ಹೆಚ್ಚು ಕ್ಷೇತ್ರಗಳಲ್ಲಿ ಬಿಜೆಪಿ ವಿರುದ್ಧ ಪ್ರತಿಪಕ್ಷಗಳ ಮೈತ್ರಿಕೂಟದಿಂದ ಸಾಮಾನ್ಯ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಕಾಂಗ್ರೆಸ್ ಒಲವು ಹೊಂದಿದೆ. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಪ್ರಾದೇಶಿಕ ಪಕ್ಷಗಳು ಇದರಿಂದ ತಮಗೇನು ಲಾಭವಾಗಲಿದೆ ಎಂಬ ಲೆಕ್ಕಾಚಾರದಲ್ಲಿ ತೊಡಗಿವೆ. ಪಕ್ಷಗಳ ಈ ಹಿತಾಸಕ್ತಿ ಸಂಘರ್ಷವು ಬಿಜೆಪಿಯ ವಿರುದ್ಧ ಪ್ರಬಲ ಕೂಟ ರಚಿಸಲು ಅಡ್ಡಿಯಾಗುವ ಸಾಧ್ಯತೆಗಳಿವೆ.
ದೆಹಲಿಯಲ್ಲಿ ಆಡಳಿತಾತ್ಮಕ ಸೇವೆಗಳ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಇತ್ತೀಚೆಗೆ ಹೊರಡಿಸಿದ ಸುಗ್ರೀವಾಜ್ಞೆಗೆ ಸಂಬಂಧಿಸಿದಂತೆ ಚರ್ಚೆ ಪ್ರಾರಂಭಿಸುವಂತೆ ಕೇಜ್ರಿವಾಲ್ ಅವರು ವಿರೋಧ ಪಕ್ಷದ ನಾಯಕರಿಗೆ ಪತ್ರ ಬರೆದ ನಂತರ ಮೈತ್ರಿಕೂಟದಲ್ಲಿ ಬಿರುಕು ಇರುವುದು ಸ್ಪಷ್ಟವಾಗಿದೆ. ಒಂದು ವೇಳೆ ಕಾಂಗ್ರೆಸ್ ತನ್ನ ಬೆಂಬಲಕ್ಕೆ ನಿಲ್ಲದಿದ್ದರೆ ತಾನು ಕೂಡ ವಿರೋಧ ಪಕ್ಷದ ಪರವಾಗಿ ನಿಲ್ಲುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಕೇಜ್ರಿವಾಲ್ ಹಲವಾರು ಸಂದರ್ಭಗಳಲ್ಲಿ ಕಾಂಗ್ರೆಸ್ ವಿರುದ್ಧ ದನಿಯೆತ್ತಿರುವುದು ಉಲ್ಲೇಖಾರ್ಹ. ಇತ್ತೀಚೆಗಷ್ಟೇ ದೆಹಲಿ ಸಿಎಂ ಕೇಜ್ರಿವಾಲ್ ರಾಜಸ್ಥಾನದಲ್ಲಿ ಎಎಪಿ ಪರ ಪ್ರಚಾರ ನಡೆಸುತ್ತಿದ್ದ ವೇಳೆ ಕಾಂಗ್ರೆಸ್ ವಿರುದ್ಧ ಬಹಿರಂಗವಾಗಿ ಟೀಕೆ ಮಾಡಿದ್ದರು. ಆದರೆ ಹಾಗಂತ ಕಾಂಗ್ರೆಸ್ಗೆ ಕೇಜ್ರಿವಾಲ್ ಒಬ್ಬರೇ ಸಮಸ್ಯೆಯಲ್ಲ. ಸಮಸ್ಯೆ ಇನ್ನೂ ಹಲವಾರಿವೆ.
ಕಾಂಗ್ರೆಸ್ ವಿರುದ್ಧ ಮಮತಾ ಅಪಸ್ವರ: ಪ್ರತಿಪಕ್ಷ ನಾಯಕರ ಸಭೆಯನ್ನು ಆಯೋಜಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುವ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ಈ ವಿಷಯದಲ್ಲಿ ಕಾಂಗ್ರೆಸ್ ನೇತೃತ್ವ ವಹಿಸುವುದನ್ನು ತಾವು ಸಹಿಸುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಎಲ್ಲಾ ನಾಯಕರಿಗಿಂತ ಒಂದು ದಿನ ಮುಂಚಿತವಾಗಿಯೇ ಪಾಟ್ನಾಗೆ ಬರಲಿರುವ ಬ್ಯಾನರ್ಜಿ, ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಪಕ್ಷವು ಸಿಪಿಐ(ಎಂ) ಜೊತೆ ಕೈಜೋಡಿಸಿದರೆ ಲೋಕಸಭೆ ಕದನದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ಸಹಾಯ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಬಿಆರ್ಎಸ್, ಬಿಜೆಡಿ ಗೈರು?: ಕೆ. ಚಂದ್ರಶೇಖರ ರಾವ್ ನೇತೃತ್ವದ ಭಾರತ್ ರಾಷ್ಟ್ರ ಸಮಿತಿ (ಬಿಆರ್ಎಸ್) ನಾಳಿನ ಸಭೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ತೆಲಂಗಾಣದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳನ್ನು ತನ್ನ ಪ್ರತಿಸ್ಪರ್ಧಿಗಳೆಂದು ಬಿಆರ್ಎಸ್ ಪರಿಗಣಿಸಿರುವುದರಿಂದ ಎರಡೂ ಪಕ್ಷಗಳಿಂದ ಸಮಾನ ಅಂತರವನ್ನು ಕಾಯ್ದುಕೊಳ್ಳುವ ಬಯಕೆ ಪಕ್ಷದ್ದಾಗಿದೆ. ರಾಜ್ಯ ಚುನಾವಣೆಗಳ ಸಮಯದಲ್ಲಿ ಕೂಡ ಪ್ರತಿಪಕ್ಷಗಳು ಬೆಂಬಲ ಮತ್ತು ಸಹಕಾರ ನೀಡಬೇಕೆಂಬುದು ಬಿಆರ್ಎಸ್ ವಾದವಾಗಿದೆ. ಹಾಗಿಲ್ಲದಿದ್ದರೆ ಏಕತೆಯ ಉದ್ದೇಶವೇ ದುರ್ಬಲವಾಗುತ್ತದೆ ಎಂಬುದು ಬಿಆರ್ಎಸ್ ನಿಲುವಾಗಿದೆ.