ಕರ್ನಾಟಕ

karnataka

Yaas Cyclone: ಸಂಕಷ್ಟದಲ್ಲಿ ಬಂಗಾಳದ 1 ಕೋಟಿ ಜನ, ಮೂರು ಲಕ್ಷ ಮನೆಗಳಿಗೆ ಹಾನಿ-ಸಿಎಂ ಮಮತಾ

By

Published : May 27, 2021, 11:09 AM IST

ಪಶ್ಚಿಮ ಬಂಗಾಳದಲ್ಲಿ ಯಾಸ್ ಚಂಡಮಾರುತವು ಓರ್ವ ವ್ಯಕ್ತಿಯನ್ನು ಬಲಿ ತೆಗೆದುಕೊಂಡಿದ್ದು, ಅಪಾರ ಪ್ರಮಾಣದ ಆಸ್ತಿ-ಪಾಸ್ತಿ ನಾಶವಾಗಿದೆ. ಒಂದು ಕೋಟಿ ಜನರು ಸಂಕಷ್ಟದಲ್ಲಿ ಸಿಲುಕಿದ್ದಾರೆಂದು ಸಿಎಂ ಮಮತಾ ಬ್ಯಾನರ್ಜಿ ಮಾಹಿತಿ ನೀಡಿದ್ದಾರೆ.

West Bengal CM Mamata Banerjee on cyclone yaas

ಕೋಲ್ಕತ್ತಾ: ಯಾಸ್ ಚಂಡಮಾರುತದಿಂದಾಗಿ ರಾಜ್ಯದಲ್ಲಿ ಒಂದು ಕೋಟಿ ಜನರು ಬಾಧಿತರಾಗಿದ್ದಾರೆ. ಸುಮಾರು ಮೂರು ಲಕ್ಷ ಮನೆಗಳು, ಅಪಾರ ಪ್ರಮಾಣದ ಕೃಷಿ ಭೂಮಿಗೆ ಹಾನಿಯಾಗಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಉತ್ತರ 24 ಪರಗಣ, ಹೌರಾ, ದಕ್ಷಿಣ 24 ಪರಗಣ ಹಾಗೂ ಪೂರ್ವ ಮೇದಿನಿಪುರ ಜಿಲ್ಲೆಗಳು ಸೈಕ್ಲೋನ್​ ಪರಿಣಾಮವನ್ನು ಹೆಚ್ಚು ಎದುರಿಸಿದ ಜಿಲ್ಲೆಗಳಾಗಿವೆ. ಈ ಪ್ರದೇಶಗಳಲ್ಲಿ ಶುಕ್ರವಾರ ವೈಮಾನಿಕ ಸಮೀಕ್ಷೆ ಕೈಗೊಳ್ಳಲಾಗುವುದು. ಮೀನುಗಾರಿಕೆಗೆ ಹೋದ ಒಬ್ಬ ವ್ಯಕ್ತಿಯು ಸಾವನ್ನಪ್ಪಿದ್ದಾನೆ. ಕೋವಿಡ್​ ಉಲ್ಬಣ ಹಾಗೂ ಚಂಡಮಾರುತ ಹಿನ್ನೆಲೆ ಸೈಕ್ಲೋನ್ ಆರಂಭಕ್ಕೂ ಮುನ್ನವೇ ಮುನ್ನೆಚ್ಚರಿಕಾ ಕ್ರಮವಾಗಿ 15 ಲಕ್ಷ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿತ್ತು ಎಂದು ದೀದಿ ಮಾಹಿತಿ ನೀಡಿದ್ದಾರೆ.

ಜಮೀನುಗಳು, ಸರ್ಕಾರಿ ಕಟ್ಟಡಗಳು ಮತ್ತು ಇತರ ಹಾನಿಯನ್ನು ತಿಳಿಯಲು ನಾವು ಕ್ಷೇತ್ರ ಸಮೀಕ್ಷೆಗಳನ್ನು ನಡೆಸುತ್ತೇವೆ. ಜಿಲ್ಲಾಧಿಕಾರಿಗಳು ಸಮಗ್ರ ವರದಿಯನ್ನು ಸಲ್ಲಿಸಲಿದ್ದಾರೆ. ಚಂಡಮಾರುತದ ಹಾನಿ ಕುರಿತು ಸ್ಪಷ್ಟ ಚಿತ್ರಣವನ್ನು ಪಡೆಯಲು ನಮಗೆ ಕನಿಷ್ಠ 72 ಗಂಟೆಗಳ ಸಮಯ ಬೇಕಾಗಿದೆ ಎಂದು ಸಿಎಂ ಮಮತಾ ತಿಳಿಸಿದ್ದಾರೆ.

ಇದನ್ನೂ ಓದಿ: ಯಾಸ್ ಚಂಡಮಾರುತ ಎಫೆಕ್ಟ್ ​: ಬಂಗಾಳದಲ್ಲಿ ಭಾರೀ ಮಳೆ ; ಎನ್​ಡಿಆರ್​ಎಫ್ ಸಿಬ್ಬಂದಿ ನಿಯೋಜನೆ!

ರಾಜ್ಯದಲ್ಲಿ ಸುಮಾರು 14,000 ತಾತ್ಕಾಲಿಕ ಪರಿಹಾರ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಸಂತ್ರಸ್ತರಿಗೆ ಬಟ್ಟೆ ಮತ್ತು ಆಹಾರ ಸಾಮಗ್ರಿಗಳನ್ನು ಕಳುಹಿಸಲಾಗಿದೆ. ಅನೇಕ ಪ್ರದೇಶಗಳಲ್ಲಿ ವಿದ್ಯುತ್​ ಸ್ಥಗಿತವಾಗಿದೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ರೂಪುಗೊಂಡ ಯಾಸ್ ಚಂಡಮಾರುತವು ತೀವ್ರ ಸ್ವರೂಪ ಪಡೆದು ಒಡಿಶಾ ಹಾಗೂ ಪಶ್ಚಿಮ ಬಂಗಾಳ ಕರಾವಳಿಯನ್ನು ಹಾದು ಹೋಗಿದೆ. ಗಂಟೆಗೆ 130ರಿಂದ 155 ಕಿ.ಮೀ. ವೇಗದಲ್ಲಿ ಗಾಳಿ ಬೀಸಿದೆ. ಒಡಿಶಾದಲ್ಲಿ ಭೂಸ್ಪರ್ಶವೂ ಆಗಿದೆ. ಇಂದು ಜಾರ್ಖಂಡ್​ಗೆ ಯಾಸ್​ ಸೈಕ್ಲೋನ್​ ಅಪ್ಪಳಿಸುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಎಚ್ಚರಿಕೆ ನೀಡಿದೆ.

ABOUT THE AUTHOR

...view details