ಮಧುರೈ(ತಮಿಳುನಾಡು):ತಮಿಳುನಾಡಿನ ದೇವಾಲಯಗಳಲ್ಲಿ ಮೊಬೈಲ್ಗಳ ಬಳಕೆಯನ್ನು ನಿಷೇಧಿಸುವಂತೆ ಮದ್ರಾಸ್ ಹೈಕೋರ್ಟ್ ತಮಿಳುನಾಡು ಸರ್ಕಾರಕ್ಕೆ ಸೂಚಿಸಿದೆ. ದೇವಸ್ಥಾನಗಳ ಪಾವಿತ್ರ್ಯತೆ ಮತ್ತು ಶುದ್ಧತೆಯನ್ನು ಕಾಪಾಡುವ ನಿಟ್ಟಿನಲ್ಲಿ ಈ ಕ್ರಮವನ್ನು ಅನುಸರಿಸಬೇಕು ಎಂದು ಕೋರ್ಟ್ ಹೇಳಿದೆ.
ದೇಗುಲಗಳ ರಕ್ಷಣೆಗಾಗಿ ಮೊಬೈಲ್ ನಿಷೇಧಿಸಬೇಕು ಎಂದು ಕೋರಿ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಬಂದಿದ್ದವು. ಇವುಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್. ಮಹದೇವನ್ ಮತ್ತು ನ್ಯಾಯಮೂರ್ತಿ ಜೆ. ಸತ್ಯನಾರಾಯಣ ಪ್ರಸಾದ್ ಅವರಿದ್ದ ಪೀಠ, ಹಿಂದೂ ಧಾರ್ಮಿಕ ಮತ್ತು ದತ್ತಿ ಕಾನೂನಿನಡಿ ಈ ಕ್ರಮ ತೆಗೆದುಕೊಳ್ಳಲು ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಭಕ್ತರು ದೇವಸ್ಥಾನದಲ್ಲಿ ಮೊಬೈಲ್ ಬಳಸಿ ಪೋಟೋ, ವಿಡಿಯೋ ಮಾಡುವುದು ಹೆಚ್ಚಾಗಿದೆ. ಇದರಿಂದ ಪವಿತ್ರ ಕ್ಷೇತ್ರಗಳಲ್ಲಿನ ವಿಗ್ರಹ ಮತ್ತು ಬೆಲೆಬಾಳುವ ವಸ್ತುಗಳನ್ನು ಸಾರ್ವಜನಿಕವಾಗಿ ಹಂಚಿಕೊಳ್ಳುವುದರಿಂದ ಅವುಗಳ ಭದ್ರತೆಗೆ ಧಕ್ಕೆ ಬರಲಿದೆ ಎಂದು ವಾದಿಸಲಾಗಿತ್ತು.
ಇದನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯ, ದೇವಸ್ಥಾನದೊಳಗೆ ಮೊಬೈಲ್ ತರುವುದಕ್ಕೆ ಬ್ರೇಕ್ ಹಾಕಿ, ಭಕ್ತರಿಗೆ ತೊಂದರೆಯಾಗದ ರೀತಿಯಲ್ಲಿ ದೇಗುಲದಲ್ಲೇ ಲಾಕರ್ ವ್ಯವಸ್ಥೆ ಮಾಡಿಸಿ. ಅಲ್ಲದೇ, ಈ ನಿಯಮ ಪಾಲನೆಯಾಗುವಂತೆ ನೋಡಿಕೊಳ್ಳಲು ಪ್ರತ್ಯೇಕ ಸಿಬ್ಬಂದಿಯನ್ನು ನೇಮಿಸಿ ಎಂದು ಕೋರ್ಟ್ ಸೂಚಿಸಿದೆ.
ಇದನ್ನೂ ಓದಿ:4G ಮತ್ತು 5G ಗಿಂತಲೂ 'ಮಾತಾಜಿ' ಮತ್ತು 'ಪಿತಾಜಿ' ಶ್ರೇಷ್ಠ: ಮುಖೇಶ್ ಅಂಬಾನಿ