ಬಾರಾಸಾತ್: ಪಶ್ಚಿಮ ಬಂಗಾಳ ವಿಭಜನೆಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಯಾವಾಗಲೂ ವಿರೋಧ ವ್ಯಕ್ತಪಡಿಸಿದ್ದಾರೆ. ಉತ್ತರ ಬಂಗಾಳ ಭಾಗಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸಿಎಂ ಮಮತಾ ಪದೇ ಪದೆ ಶಾಂತಿಯ ಬಗ್ಗೆ ಮಾತುಗಳನ್ನೇ ಆಡಿದ್ದರು. ಅಲ್ಲದೇ ಈ ಭಾಗದಲ್ಲಿ ಹೆಚ್ಚಿನ ಬಂಡವಾಳ ಹೂಡಿಕೆ ಮತ್ತು ಅಭಿವೃದ್ಧಿಯ ಬಗ್ಗೆ ಹೇಳಿದ್ದರು.
ಆದರೆ, ಉತ್ತರ ಬಂಗಾಳಕ್ಕೆ ಸಿಎಂ ಮಮತಾ ಭೇಟಿ ನೀಡುವ ಮುನ್ನವೇ ರಾಜ್ಯವನ್ನು ಇಬ್ಭಾಗ ಮಾಡದಂತೆ ಆಗ್ರಹಿಸಿ ಜಲಪೈಗುರಿ ಜಿಲ್ಲೆಯ ದೋವಾರ್ಸ್ನ ಬಿನ್ನಗುರಿಯ ಶಂಕರ್ ಭಟ್ಟಾಚಾರ್ಯ ಎಂಬ 46 ವಯಸ್ಸಿನ ವ್ಯಕ್ತಿಯೊಬ್ಬರು ಪಾದಯಾತ್ರೆ ಆರಂಭಿಸಿದ್ದಾರೆ.
ಈ ವ್ಯಕ್ತಿ ಕಾಲಿಘಾಟ್ ತಲುಪಿ ಅಲ್ಲಿ ಸಿಎಂ ಅವರನ್ನು ಭೇಟಿ ಮಾಡುವ ಯೋಜನೆ ಹಾಕಿಕೊಂಡಿದ್ದಾರೆ. ಹಾಗೂ ದೋವಾರ್ಸ್ನ ಮಣ್ಣನ್ನು ತನ್ನ ಜತೆಗೆ ತರುತ್ತಿದ್ದಾರೆ. ಸಿಎಂ ಮಮತಾರಿಗೆ ಮಣ್ಣನ್ನು ನೀಡುವ ಮೂಲಕ ರಾಜ್ಯ ಇಬ್ಬಾಗ ಮಾಡದಂತೆ ಮನವಿ ಮಾಡುವ ಆಸೆ ಇವರದಾಗಿದೆ. ಮಮತಾ ಬ್ಯಾನರ್ಜಿ ಸಿಎಂ ಆದ ನಂತರ ರಾಜ್ಯದಲ್ಲಿ ಆರಂಭಿಸಲಾದ ಹಲವಾರು ಜನಪರ ಯೋಜನೆಗಳ ಬಗ್ಗೆ ಮಮತಾ ಬ್ಯಾನರ್ಜಿಯವರಿಗೆ ಅಭಿನಂದನೆ ಕೂಡ ಸಲ್ಲಿಸಲಿದ್ದಾರೆ.
ಸಿಎಂ ಭೇಟಿ ಮಾಡಿ ಹುತಾತ್ಮ ದಿನದಲ್ಲಿ ಭಾಗಿ:ಸಿಎಂ ಅವರನ್ನು ಭೇಟಿ ಮಾಡಿದ ನಂತರ ಜುಲೈ 21 ರಂದು ನಡೆಯಲಿರುವ ಹುತಾತ್ಮ ದಿನಾಚರಣೆಯಲ್ಲಿ ಇವರು ಭಾಗಿಯಾಗಲಿದ್ದು, ಅಂದು ಮರಳಿ ಜಲಪೈಗುರಿಯತ್ತ ಪ್ರಯಾಣ ಬೆಳೆಸಲಿದ್ದಾರೆ.