ನವದೆಹಲಿ:ಭಾರತವು ಉಕ್ರೇನ್-ರಷ್ಯಾ ಸಂಘರ್ಷವನ್ನು ವಿರೋಧಿಸುತ್ತದೆ. ಬುಚಾದಲ್ಲಿ ನಡೆದಂತಹ ನಾಗರಿಕ ಹತ್ಯೆಯ ಬಗ್ಗೆ ಸ್ವತಂತ್ರ ತನಿಖೆಯಾಗಲಿ. ಮುಗ್ಧ ಜೀವಗಳ ಬಲಿ ಪಡೆಯುವುದನ್ನು ನಿಲ್ಲಿಸಲು, ಯುದ್ಧವನ್ನು ಅಂತ್ಯಗೊಳಿಸುವುದು ಬಿಟ್ಟು ಬೇರೆ ಮಾರ್ಗವಿಲ್ಲ ಎಂದು ಸರ್ಕಾರ ಬುಧವಾರ ಲೋಕಸಭೆಗೆ ತಿಳಿಸಿದೆ.
ನಾವು ಸಂಘರ್ಷದ ವಿರುದ್ಧ ಬಲವಾಗಿ ಇದ್ದೇವೆ. ರಕ್ತವನ್ನು ಚೆಲ್ಲುವ ಮೂಲಕ ಮುಗ್ಧ ಜೀವಗಳ ಬಲಿ ಪಡೆಯಾಲಾಗುತ್ತಿದೆ. ಇದನ್ನು ನಿಲ್ಲಿಸಲು ಬೇರೆ ಯಾವ ಮಾರ್ಗವೂ ಕಾಣುತ್ತಿಲ್ಲ. ಏನೇ ಸಂಘರ್ಷವಿದ್ದರೂ ಅದನ್ನು ಮಾತುಕತೆ ಮತ್ತು ರಾಜತಾಂತ್ರಿಕತೆಯ ಮೂಲಕ ಬಗೆಹರಿಸಿಕೊಳ್ಳುವುದು ಸರಿಯಾದ ಮಾರ್ಗವಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಹೇಳಿದ್ದಾರೆ.
ಉಕ್ರೇನ್ ನಗರದ ಬುಚಾದಲ್ಲಿ ನಡೆದ ನಾಗರಿಕ ಹತ್ಯೆಗಳ ಕುರಿತು ಮಾತನಾಡಿದ ಜೈಶಂಕರ್, ವರದಿಗಳನ್ನು ನೋಡಿ ಭಾರತವು ವಿಚಲಿತವಾಗಿದೆ. ಅಲ್ಲಿ ನಡೆದಿರುವ ಹತ್ಯೆಗಳನ್ನು ನಾವು ಬಲವಾಗಿ ಖಂಡಿಸುತ್ತೇವೆ. ಇದು ಅತ್ಯಂತ ಗಂಭೀರವಾದ ವಿಷಯವಾಗಿದೆ ಮತ್ತು ಸ್ವತಂತ್ರ ತನಿಖೆಯ ಕರೆಗೆ ನಾವು ಬೆಂಬಲಿಸುತ್ತೇವೆ ಎಂದು ಅವರು ಹೇಳಿದರು.