ಕರ್ನಾಟಕ

karnataka

ETV Bharat / bharat

ಮುಂಬೈ ದಾಳಿಯ ರೂವಾರಿ ಹಫೀಜ್ ಹಸ್ತಾಂತರಿಸಲು ಪಾಕ್​ಗೆ ಭಾರತ ಮನವಿ

India asks Pakistan to extradite Hafiz Saeed: 26/11ರ ಮುಂಬೈ ದಾಳಿಯ ಮಾಸ್ಟರ್‌ಮೈಂಡ್ ಹಫೀಜ್ ಸಯೀದ್‌ನನ್ನು ಹಸ್ತಾಂತರಿಸುವಂತೆ ಪಾಕಿಸ್ತಾನಕ್ಕೆ ಭಾರತ ಮನವಿ ಮಾಡಿದೆ ಎಂದು ವರದಿಯಾಗಿದೆ.

By ETV Bharat Karnataka Team

Published : Dec 28, 2023, 4:15 PM IST

India officially asks Pakistan to extradite Hafiz Saeed: Sources
ಎಲ್‌ಇಟಿ ಸಂಸ್ಥಾಪಕ ಹಫೀಜ್ ಸಯೀದ್‌ ಹಸ್ತಾಂತರಿಸಲು ಪಾಕ್​ಗೆ ಭಾರತ ಮನವಿ

ನವದೆಹಲಿ: ಲಷ್ಕರ್-ಎ-ತೊಯ್ಬಾ(ಎಲ್‌ಇಟಿ) ಉಗ್ರ ಸಂಘಟನೆಯ ಸಂಸ್ಥಾಪಕ, 26/11ರ ಮುಂಬೈ ದಾಳಿಯ ರೂವಾರಿ ಹಫೀಜ್ ಸಯೀದ್‌ನನ್ನು ಹಸ್ತಾಂತರಿಸುವಂತೆ ಪಾಕಿಸ್ತಾನಕ್ಕೆ ಭಾರತ ಅಧಿಕೃತವಾಗಿ ಮನವಿ ಮಾಡಿದೆ ಎಂದು ಮೂಲಗಳು ತಿಳಿಸಿವೆ. ಭಯೋತ್ಪಾದಕನ ಹಸ್ತಾಂತರಕ್ಕೆ ಕಾನೂನು ಪ್ರಕ್ರಿಯೆಯನ್ನು ಪ್ರಾರಂಭಿಸುವಂತೆ ಒತ್ತಾಯಿಸಿರುವ ಭಾರತ, ಈ ಕುರಿತು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಮೂಲಕ ಪಾಕಿಸ್ತಾನ ಸರ್ಕಾರಕ್ಕೆ ಔಪಚಾರಿಕ ಮನವಿ ರವಾನಿಸಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಆದರೆ, ಈ ಬಗ್ಗೆ ಸಚಿವಾಲಯ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.

ಸಯೀದ್ ಭಾರತಕ್ಕೆ ಬೇಕಾಗಿರುವ ಮೋಸ್ಟ್ ವಾಂಟೆಡ್ ಭಯೋತ್ಪಾದಕರಲ್ಲಿ ಒಬ್ಬ. 2008ರ ಮುಂಬೈ ದಾಳಿಯಲ್ಲಿ ಭಾಗಿಯಾಗಿದ್ದಕ್ಕಾಗಿ ಈತನ ಬಂಧನಕ್ಕೆ ಅಮೆರಿಕ 10 ಮಿಲಿಯನ್ ಡಾಲರ್​ ಬಹುಮಾನ ಘೋಷಿಸಿದೆ. ಅಮೆರಿಕದ ಕ್ರಮವನ್ನು ಭಾರತ ಅಧಿಕೃತವಾಗಿ ಬೆಂಬಲಿಸಿತ್ತು. ಮತ್ತೊಂದೆಡೆ, ಇದರ ವಿರುದ್ಧ ಪಾಕಿಸ್ತಾನದಲ್ಲಿ ಪ್ರತಿಭಟನೆಗಳು ನಡೆದಿದ್ದವು.

ಮತ್ತೊಂದೆಡೆ, ಮುಂಬೈ ದಾಳಿ ಪ್ರಕರಣದ ವಿಚಾರಣೆ ಎದುರಿಸಲು ಸಯೀದ್‌ ಹಸ್ತಾಂತರಕ್ಕೆ ಭಾರತ ಪದೇ ಪದೇ ಒತ್ತಾಯಿಸುತ್ತಿದೆ. ಆದರೆ, ಉಭಯ ದೇಶಗಳ ನಡುವೆ ಹಸ್ತಾಂತರ ಒಪ್ಪಂದ ಇರದೇ ಇರುವುದು ಇದಕ್ಕೆ ಅಡ್ಡಿಯಾಗಿದೆ. ಸದ್ಯ ಭಯೋತ್ಪಾದಕ ನಿಧಿ ಪ್ರಕರಣದಲ್ಲಿ ಪಾಕಿಸ್ತಾನದ ನ್ಯಾಯಾಲಯದಿಂದ 31 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾದ ನಂತರ ಸಯೀದ್‌ ಜೈಲಿನಲ್ಲಿದ್ದಾನೆ ಎಂದು ವರದಿಯಾಗಿದೆ. ಆದಾಗ್ಯೂ, ಈತನ ಬಂಧನದ ಕುರಿತಾಗಿ ಯಾವುದೇ ಖಚಿತ ಪುರಾವೆಗಳು ಇದುವರೆಗೂ ಲಭ್ಯವಾಗಿಲ್ಲ.

ಇದೇ ವೇಳೆ, ಭಾರತ 2022ರಲ್ಲಿ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಅಡಿಯಲ್ಲಿ ಸಯೀದ್‌ನ ಮಗ ತಲ್ಹಾ ಸಯೀದ್‌ನನ್ನು ಭಯೋತ್ಪಾದಕ ಎಂದು ಘೋಷಿಸಿದೆ. ಆದರೆ, ತಲ್ಹಾ ಸಯೀದ್ ಜೂನಿಯರ್ ಪಾಕಿಸ್ತಾನ್ ಮಾರ್ಕಾಜಿ ಮುಸ್ಲಿಂ ಲೀಗ್ (ಪಿಎಂಎಂಎಲ್) ಮೂಲಕ ಪಾಕಿಸ್ತಾನದ ಚುನಾವಣೆಯಲ್ಲಿ ಸ್ಪರ್ಧಿಸಲು ಯೋಜಿಸುತ್ತಿದ್ದಾನೆ ಎಂದು ವರದಿಗಳಾಗಿವೆ.

ಮುಂಬೈ ಮೇಲಿನ ಭಯಾನಕ ದಾಳಿ:2008ರ ನವೆಂಬರ್ 26ರಂದು ಪಾಕಿಸ್ತಾನದಿಂದ ಸಮುದ್ರ ಮಾರ್ಗವಾಗಿ ಭಾರತದೊಳಗೆ 10 ಲಷ್ಕರ್-ಎ-ತೊಯ್ಬಾ ಉಗ್ರರು ನುಸುಳಿದ್ದರು. ಮಹಾರಾಷ್ಟ್ರ ರಾಜಧಾನಿ, ದೇಶದ ವಾಣಿಜ್ಯ ನಗರಿಯೂ ಆಗಿರುವ ಮುಂಬೈನ ಹಲವಾರು ಪ್ರತಿಷ್ಠಿತ ಪ್ರದೇಶಗಳಿಗೆ ನುಗ್ಗಿ ಜನರನ್ನು ಒತ್ತೆಯಾಳನ್ನಾಗಿ ಇರಿಸಿಕೊಂಡು ಗುಂಡಿನ ದಾಳಿ ನಡೆಸಿದ್ದರು. 60 ಗಂಟೆಗಳ ಕಾಲ ಭಯೋತ್ಪಾದಕರ ಅಟ್ಟಹಾಸಕ್ಕೆ 18 ಭದ್ರತಾ ಸಿಬ್ಬಂದಿ ಸೇರಿದಂತೆ 166 ಜನ ಬಲಿಯಾಗಿ ಮತ್ತು ನೂರಾರು ಜನರು ಗಾಯಗೊಂಡಿದ್ದರು.

ಇದನ್ನೂ ಓದಿ:ಬಾರಾಮುಲ್ಲಾದಲ್ಲಿ ಎಲ್​ಇಟಿ ಶಂಕಿತ ಉಗ್ರನ ಬಂಧನ, ಶಸ್ತ್ರಾಸ್ತ್ರಗಳ ವಶ

ABOUT THE AUTHOR

...view details