ಕರ್ನಾಟಕ

karnataka

By ETV Bharat Karnataka Team

Published : Dec 15, 2023, 8:23 PM IST

ETV Bharat / bharat

ಶಬರಿಮಲೆ: ಕಳೆದ ವರ್ಷಕ್ಕಿಂತ ₹20 ಕೋಟಿ ಆದಾಯ ಕುಸಿತ

ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಸುಮಾರು 20 ಕೋಟಿ ರೂಪಾಯಿ ಆದಾಯ ಕಡಿಮೆಯಾಗಿದೆ ಎಂದು ಟ್ರವಾಂಕೂರ್ ದೇವಸ್ವಂ ಬೋರ್ಡ್​ ತಿಳಿಸಿದೆ.

Sabarimala revenue fallen as compared to the previous season
Sabarimala revenue fallen as compared to the previous season

ತಿರುವನಂತಪುರ:ಪ್ರಸಿದ್ಧ ಧಾರ್ಮಿಕ ತಾಣ ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಭಕ್ತ ಸಾಗರವೇ ಹರಿದು ಬರುತ್ತಿದ್ದು, ಜನದಟ್ಟಣೆಯೂ ಉಂಟಾಗಿದೆ. ದೇವರ ದರ್ಶನಕ್ಕೆ 20 ಗಂಟೆಗಳ ಕಾಲ ಕಾಯುವ ಪರಿಸ್ಥಿತಿ ಇದೆ. ನಿರೀಕ್ಷೆಗೂ ಮೀರಿ ಭಕ್ತರು ದೇಗುಲಕ್ಕೆ ಆಗಮಿಸಿದ್ದರೂ ಈ ವರ್ಷ ಆದಾಯದಲ್ಲಿ ಕುಸಿತವಾಗಿದೆ. ದೇಗುಲದ ಆಡಳಿತ ನಡೆಸುವ ಟ್ರವಾಂಕೂರ್​ ದೇವಸ್ವಂ ಬೋರ್ಡ್​​ ಶುಕ್ರವಾರ ಈ ಮಾಹಿತಿ ನೀಡಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷ ಸುಮಾರು 20 ಕೋಟಿ ರೂ ಆದಾಯ ಕಡಿಮೆಯಾಗಿದೆ. ಕಳೆದ 28 ದಿನದಲ್ಲಿ ಅಂದರೆ ನವೆಂಬರ್​ 17ರಿಂದ ಇಲ್ಲಿಯವರೆಗೆ ಅಪ್ಪಮ್​ ಮತ್ತು ಪಾಯಸಂ ಮಾರಾಟ ಮತ್ತು ದೇವರಿಗೆ ಸಮರ್ಪಣೆಯಿಂದ 134.44 ಕೋಟಿ ರೂ ಆದಾಯ ಬಂದಿದೆ. ಕಳೆದ ವರ್ಷ ಅಂದರೆ 2022ರ 28 ದಿನದಲ್ಲಿ 154 ಕೋಟಿ ರೂ ಆದಾಯ ಬಂದಿತ್ತು.

ನವೆಂಬರ್​​ 17ರಿಂದ ಇಲ್ಲಿಯವರೆಗೆ ಒಟ್ಟು 28 ದಿನ ಕ್ಷೇತ್ರಕ್ಕೆ 17.52 ಲಕ್ಷ ಭಕ್ತರು ಭೇಟಿ ನೀಡಿದ್ದಾರೆ. ಮುಂದಿನ 33 ದಿನಗಳ ಕಾಲ ದೇವರ ದರ್ಶನಕ್ಕೆ ಅವಕಾಶವಿದ್ದು, ಇದಾದ ಬಳಿಕ ಈ ವರ್ಷದ ಮಂಡಲ ಮಕರವಿಲಕ್ಕು ಭಕ್ತರ ಋತುಮಾನ ಕೊನೆಯಾಗಲಿದೆ.

ಜನ ದಟ್ಟಣೆಯ ಹಿನ್ನೆಲೆಯಲ್ಲಿ ದಿನಕ್ಕೆ 90 ಸಾವಿರ ಮಂದಿಗೆ ದರ್ಶನಕ್ಕೆ ಅವಕಾಶವಿದ್ದು, ಮುಂದಿನ ದಿನಗಳಲ್ಲಿ 29.70 ಲಕ್ಷ ಮಂದಿ ಭಕ್ತರು ದರ್ಶನ ಪಡೆಯಬಹುದು. ಈ ಋತುಮಾನದಲ್ಲಿ ಒಟ್ಟಾರೆ (ಕಳೆದ 28 ದಿನ ಮತ್ತು ಮುಂದಿನ 33 ದಿನ) 47.22 ಲಕ್ಷ ಜನರು ದರ್ಶನ ಪಡೆಯಲಿದ್ದಾರೆ.

ಕಳೆದ ವರ್ಷ ಈ ಋತುಮಾನದಲ್ಲಿ 65 ಲಕ್ಷ ಮಂದಿ ಭೇಟಿ ನೀಡಿದ್ದು, 351 ಕೋಟಿ ರೂ ಆದಾಯ ಬಂದಿತ್ತು. ಕಳೆದ ಬಾರಿಗೆ ಹೋಲಿಕೆ ಮಾಡಿದಾಗ 16 ಲಕ್ಷ ಮಂದಿ ಭಕ್ತರ ಸಂಖ್ಯೆ ಕೂಡ ಕಡಿಮೆಯಾಗಿದೆ. ಅಲ್ಲದೇ, ಆದಾಯವೂ ತಗ್ಗಿದೆ. ಆದರೂ, ಈ ವಾರಾರಂಭದಲ್ಲಿ ಭಕ್ತರ ಸಂಖ್ಯೆಯಲ್ಲಿ ದಟ್ಟಣೆ ಉಂಟಾಗಿ, ಹಲವರು ಸಂಕಷ್ಟ ಅನುಭವಿಸಿದರು. ಈ ಹಿಂದೆಲ್ಲಾ ದರ್ಶನಕ್ಕೆ 5ರಿಂದ 6 ಗಂಟೆ ಕಾಲ ಕಾಯುತ್ತಿದ್ದ ಭಕ್ತರು ದೇವರ ದರ್ಶನಕ್ಕೆ ಈ ಸಲ 20 ಗಂಟೆಗಳಷ್ಟು ಕಾಯುವ ಪರಿಸ್ಥಿತಿ ಉಂಟಾಗಿತ್ತು. ನಿರ್ವಹಣೆಯಲ್ಲಿ ಉಂಟಾದ ಲೋಪದಿಂದಾಗಿ ಈ ಸಮಸ್ಯೆ ಉಂಟಾಗಿದೆ ಎನ್ನಲಾಗಿದೆ. (ಐಎಎನ್​ಎಸ್​)

ಇದನ್ನೂ ಓದಿ: ಶಬರಿಮಲೆಯಲ್ಲಿ ಭಾರೀ ಜನದಟ್ಟಣೆ: ಅವ್ಯವಸ್ಥೆ ವಿರುದ್ಧ ಸಿಡಿದ ಭಕ್ತರಿಂದ ಪ್ರತಿಭಟನೆ

ABOUT THE AUTHOR

...view details