ಜಮ್ಮು (ಜಮ್ಮು ಮತ್ತು ಕಾಶ್ಮೀರ): ಹಿರಿಯ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಅವರ ಸೋದರಳಿಯ ಮುಬಾಶಿರ್ ಆಜಾದ್ ಅವರು ಇಂದು ಜಮ್ಮುವಿನ ತ್ರಿಕೂಟ ನಗರದಲ್ಲಿರುವ ಪಕ್ಷದ ಪ್ರಧಾನ ಕಚೇರಿಯಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು.
ಮುಬಾಶಿರ್ ಮತ್ತು ಅವರ ಬೆಂಬಲಿಗರನ್ನು ಜಮ್ಮು ಮತ್ತು ಕಾಶ್ಮೀರ ಬಿಜೆಪಿ ಅಧ್ಯಕ್ಷ ರವೀಂದರ್ ರೈನಾ ಮತ್ತು ಮಾಜಿ ಶಾಸಕ ದಲೀಪ್ ಸಿಂಗ್ ಪರಿಹಾರ್ ಸೇರಿದಂತೆ ಇತರ ಹಿರಿಯ ನಾಯಕರು ಪಕ್ಷಕ್ಕೆ ಸ್ವಾಗತಿಸಿದರು. ಮುಬಾಶಿರ್ರ ಪಕ್ಷ ಸೇರ್ಪಡೆಯನ್ನು ರೈನಾ ಅವರು 'ತಿರುವು' ಎಂದು ಬಣ್ಣಿಸಿ, ಇದು ಚೆನಾಬ್ ಕಣಿವೆ ಪ್ರದೇಶದ ದೋಡಾ, ಕಿಶ್ತ್ವಾರ್ ಮತ್ತು ರಾಂಬನ್ ಜಿಲ್ಲೆಗಳಿಂದ ಹೆಚ್ಚಿನ ಯುವ ಕಾರ್ಯಕರ್ತರು ಪಕ್ಷಕ್ಕೆ ಸೇರಲು ದಾರಿ ಮಾಡಿಕೊಡುತ್ತದೆ ಎಂದರು.
ಪಕ್ಷ ಸೇರ್ಪಡೆ ಬಳಿಕ ಮಾತನಾಡಿದ ಗುಲಾಂ ನಬಿ ಆಜಾದ್ ಅವರ ಸೋದರ ಸಂಬಂಧಿ ಲಿಯಾಕತ್ ಅಲಿ ಅವರ ಪುತ್ರ ಮುಬಾಶಿರ್, ಕಾಂಗ್ರೆಸ್ ಪಕ್ಷವು ಒಳಜಗಳದಲ್ಲಿ ಮುಳುಗಿದೆ. ಆದರೆ ಮೋದಿ ನೇತೃತ್ವದಲ್ಲಿ ಜನರ ಕಲ್ಯಾಣಕ್ಕಾಗಿ ಕೆಲಸ ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರ ಅಭಿವೃದ್ಧಿ ಕಾರ್ಯಗಳಿಂದ ಪ್ರಭಾವಿತನಾಗಿ ಬಿಜೆಪಿ ಸೇರಿರುವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ರಾಜಸ್ಥಾನ ಸರ್ಕಾರದಿಂದ ಹಳೆಯ ಪಿಂಚಣಿ ಯೋಜನೆ ಮುಂದುವರಿಕೆ : ಇದು ಅವಿವೇಕದ ಕ್ರಮ ಎಂದು ತಜ್ಞರು
ಪಕ್ಷದ ಪ್ರಮುಖ ನಾಯಕರಲ್ಲಿ ಒಬ್ಬರಾದ ಮತ್ತು ಮಾಜಿ ಮುಖ್ಯಮಂತ್ರಿ ಗುಲಾಂ ನಬಿ ಆಜಾದ್ ಅವರನ್ನು ಕಾಂಗ್ರೆಸ್ ನಡೆಸಿಕೊಂಡ ರೀತಿ ಜನಸಾಮಾನ್ಯರ ಭಾವನೆಗಳನ್ನು ಘಾಸಿಗೊಳಿಸಿದೆ. ಕಾಂಗ್ರೆಸ್ ಗುಲಾಂ ನಬಿ ಅವರನ್ನು ಅಗೌರವದಿಂದ ನಡೆಸಿಕೊಂಡಿದೆ ಎಂದು ಇದೇ ವೇಳೆ ಮುಬಾಶಿರ್ ಆರೋಪಿಸಿದ್ದಾರೆ.