ಕರ್ನಾಟಕ

karnataka

By

Published : Feb 4, 2023, 5:11 PM IST

ETV Bharat / bharat

ಅದಾನಿ ಷೇರುಗಳ ಕುಸಿತ.. ಭಾರತದ ಆರ್ಥಿಕತೆ ಮೇಲೆ ಪರಿಣಾಮ ಬೀರಿಲ್ಲ: ವಿತ್ತ ಸಚಿವೆ ಸೀತಾರಾಮನ್ ಸ್ಪಷ್ಟನೆ​

ಎಫ್​ಪಿಒಗಳು ಬರುತ್ತವೆ, ಹೋಗುತ್ತವೆ ಮತ್ತು ಇಂತಹ ಏರಿಳಿತಗಳು ಪ್ರತಿ ಮಾರುಕಟ್ಟೆಯಲ್ಲೂ ಇವೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ತಿಳಿಸಿದ್ದಾರೆ.

fpo-pullout-will-have-no-impact-on-perception-about-india-nirmala-sitharaman
ಅದಾನಿ ಷೇರುಗಳ ಕುಸಿತ... ಭಾರತದ ಆರ್ಥಿಕತೆಯ ಮೇಲೆ ಪರಿಣಾಮ ಬೀರಿಲ್ಲ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​

ಮುಂಬೈ (ಮಹಾರಾಷ್ಟ್ರ):ಖ್ಯಾತ ಉದ್ಯಮಿ ಗೌತಮ್​ ಅದಾನಿ ಸಮೂಹದ ಷೇರುಗಳು ಭಾರಿ ಕುಸಿತಕಂಡು ತಲ್ಲಣ ಸೃಷ್ಟಿಸಿದ್ದು, ಈ ಬಗ್ಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಪ್ರಕ್ರಿಯೆ ನೀಡಿದ್ದಾರೆ. ಅದಾನಿ ಷೇರುಗಳು ಕುಸಿತ ಮತ್ತು ಎಫ್​ಪಿಒ ಷೇರು ಮಾರಾಟ ರದ್ದು ಮಾಡಿರುವುದರಿಂದ ಜಾಗತಿಕ ಮಟ್ಟದಲ್ಲಿ ಭಾರತದ ಆರ್ಥಿಕತೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ನಿರ್ಮಲಾ ಸೀತಾರಾಮನ್ ಸ್ಪಷ್ಟಪಡಿಸಿದ್ದಾರೆ.

ಇಂದು ಮಹಾರಾಷ್ಟ್ರದ ಮುಂಬೈನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅದಾನಿ ಎಫ್​ಪಿಒ (FPO - Follow-On Public Offering) ಹಿಂತೆಗೆದುಕೊಳ್ಳುವಿಕೆ ಮತ್ತು ಅದಾನಿ ಸಮೂಹದ ಪ್ರಸ್ತುತ ಪರಿಸ್ಥಿತಿಯಿಂದ ಜಾಗತಿಕ ಹಣಕಾಸು ಮಾರುಕಟ್ಟೆಯಲ್ಲಿ ಭಾರತದ ಮೇಲೆ ಪರಿಣಾಮ ಬೀರುತ್ತದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದರು. ಈ ದೃಷ್ಟಿಯಲ್ಲಿ ಯೋಚಿಸಬೇಡಿ. ಕಳೆದ ಎರಡು ದಿನಗಳಲ್ಲಿ ವಿದೇಶಿ ವಿನಿಮಯ ಮೀಸಲು ಎಂಟು ಬಿಲಿಯನ್ ಡಾಲರ್ ಹೆಚ್ಚಾಗಿದೆ. ನಮ್ಮ ಸ್ಥೂಲ ಆರ್ಥಿಕ ಮೂಲ ಅಂಶಗಳು ಅಥವಾ ಆರ್ಥಿಕತೆಯ ಮೇಲೆ ಪರಿಣಾಮ ಬೀರಿಲ್ಲ ಎಂದು ಸ್ಪಷ್ಟನೆ ನೀಡಿದರು.

ಇದನ್ನೂ ಓದಿ:ಷೇರುಗಳ ಏರಿಳಿತ, ಅದಾನಿ ಎಫ್​ಪಿಒ ರದ್ದು: ಹೂಡಿಕೆದಾರರಿಗೆ ₹20 ಸಾವಿರ ಕೋಟಿ ವಾಪಸ್​

ಎಫ್​ಪಿಒಗಳು ಬರುತ್ತವೆ, ಹೋಗುತ್ತವೆ. ಇಂತಹ ಏರಿಳಿತಗಳು ಪ್ರತಿ ಮಾರುಕಟ್ಟೆಯಲ್ಲೂ ಇವೆ. ಆದರೆ, ನಮಗೆ ಎಂಟು ಬಿಲಿಯನ್ ಡಾಲರ್​ ವಿದೇಶಿ ಹೂಡಿಕೆ ಬಂದಿದೆ ಎಂಬ ಅಂಶವು ಭಾರತದ ಬಗೆಗಿನ ಗ್ರಹಿಕೆ ಮತ್ತು ಅದರ ಅಂತರ್ಗತ ಶಕ್ತಿ ಅಖಂಡವಾಗಿದೆ ಎಂಬುದನ್ನು ಸಾಬೀತುಪಡಿಸುತ್ತದೆ. ದೇಶದಲ್ಲಿ ಎಫ್‌ಪಿಒ ಎಷ್ಟು ಬಾರಿ ಹಿಂಪಡೆದಿಲ್ಲ?, ಅದರಿಂದ ಭಾರತವು ಎಷ್ಟು ಬಾರಿ ಬಳಲಿದೆ?, ಎಫ್‌ಪಿಒಗಳು ಎಷ್ಟು ಬಾರಿ ಮರಳಿ ಬಂದಿಲ್ಲ ಎಂದು ನಿರ್ಮಲಾ ಸೀತಾರಾಮನ್ ಪ್ರಶ್ನಿಸಿದರು.

ಇದೇ ವೇಳೆ, ಅದಾನಿ ಸಮೂಹದ ಷೇರುಗಳ ಕುಸಿತದಿಂದ ಎಸ್​​ಬಿಐ ಮತ್ತು ಐಎಲ್​ಸಿ ಗ್ರಾಹಕರ ಹಣದ ಮೇಲಿನ ಪರಿಣಾಮದ ಬಗ್ಗೆ ಪ್ರಕ್ರಿಯಿಸಿ, ಆ ಸಂಸ್ಥೆಗಳ ನಿಯಂತ್ರಕರು ತಮ್ಮ ಕೆಲಸವನ್ನು ಮಾಡುತ್ತಾರೆ. ಈ ಬಗ್ಗೆ ಈಗಾಗಲೇ ಆರ್‌ಬಿಐ ಹೇಳಿಕೆ ನೀಡಿದೆ. ಅದಕ್ಕೂ ಮುನ್ನ ಬ್ಯಾಂಕ್‌ಗಳು, ಎಲ್‌ಐಸಿ ಸಹ ಹೇಳಿಕೆ ಕೊಟ್ಟಿದೆ. ಇವುಗಳ ನಿಯಂತ್ರಕರು ಸರ್ಕಾರದಿಂದ ಸ್ವತಂತ್ರರಾಗಿದ್ದು, ಸೂಕ್ತವಾದದ್ದನ್ನು ನಿರ್ಧರಿಸಲು ಅವರಿಗೆ ಬಿಡಲಾಗಿದೆ. ಹೀಗಾಗಿ ಮಾರುಕಟ್ಟೆಯನ್ನು ಉತ್ತಮವಾಗಿ ನಿಯಂತ್ರಿಸಲಾಗುತ್ತದೆ. ಅಲ್ಲದೇ, ಸೆಬಿ ಕೂಡ ತನ್ನದೇ ಆದ ಅಧಿಕಾರವನ್ನು ಹೊಂದಿದೆ ಎಂದು ಸಚಿವರು ತಿಳಿಸಿದರು.

ಫೆಬ್ರವರಿ 18ರಂದು ಜಿಎಸ್‌ಟಿ ಕೌನ್ಸಿಲ್ ಸಭೆ: ಮತ್ತೊಂದೆಡೆ, ನವದೆಹಲಿಯಲ್ಲಿ ಫೆಬ್ರವರಿ 18ರಂದು ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ಕೌನ್ಸಿಲ್‌ನ 49ನೇ ಸಭೆಯು ನಡೆಯಲಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ ಈ ಸಭೆ ನಡೆಯಲಿದ್ದು, ಈ ಬಗ್ಗೆ ಜಿಎಸ್​ಟಿ ಕೌನ್ಸಿಲ್‌ ಟ್ವಿಟರ್​ ಖಾತೆಯಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದೆ.

ಈ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಪಾನ್ ಮಸಾಲಾ ಮತ್ತು ಗುಟ್ಕಾ ಕಂಪನಿಗಳ ಮೇಲಿನ ತೆರಿಗೆ, ಆನ್‌ಲೈನ್ ಗೇಮಿಂಗ್, ಕ್ಯಾಸಿನೊ ಮತ್ತು ಕುದುರೆ ರೇಸಿಂಗ್‌ಗಳ ಮೇಲಿನ ಜಿಎಸ್‌ಟಿ ತೆರಿಗೆ ಹಾಗೂ ಮೇಲ್ಮನವಿ ನ್ಯಾಯಾಧಿಕರಣಗಳ ಸ್ಥಾಪನೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆಯಿದೆ. ಈ ಹಿಂದೆ ಜಿಎಸ್‌ಟಿ ಕೌನ್ಸಿಲ್‌ನ 48ನೇ ಸಭೆಯು ಡಿಸೆಂಬರ್ 17ರಂದು ಜರುಗಿತ್ತು.

ಇದನ್ನೂ ಓದಿ:ದೇಶದ ವಿಮಾನಯಾನ ಉದ್ಯಮಕ್ಕೆ 3 ವರ್ಷಗಳಲ್ಲಿ ₹28 ಸಾವಿರ ಕೋಟಿ ನಷ್ಟ

ABOUT THE AUTHOR

...view details