ಜಾರ್ಖಂಡ್: ಇಲ್ಲಿನ ಡುಮ್ಕಾ ಎಂಬಲ್ಲಿ ಬಾಲಕಿಯನ್ನು ಯುವಕನೊಬ್ಬ ಪ್ರೀತಿ ತಿರಸ್ಕರಿಸಿದ ನೆಪದಲ್ಲಿ ಮನೆಗೆ ನುಗ್ಗಿ ಪೆಟ್ರೋಲ್ ಸುರಿದು, ಬೆಂಕಿ ಹಚ್ಚಿ ಅಮಾನುಷವಾಗಿ ಹತ್ಯೆ ಮಾಡಿದ್ದ ಘಟನೆ ಇತ್ತೀಚೆಗೆ ನಡೆದಿತ್ತು. ಇದಕ್ಕೆ ಸಂಬಂಧಿಸಿದಂತೆ ಬುಧವಾರ ಸಂತ್ರಸ್ತೆ ಕುಟುಂಬಸ್ಥರನ್ನು ರಾಷ್ಟ್ರೀಯ ಮಹಿಳಾ ಆಯೋಗದ ಇಬ್ಬರು ಸದಸ್ಯರ ಸತ್ಯಶೋಧನಾ ಸಮಿತಿ ಭೇಟಿ ಮಾಡಿತು.
ಇದಕ್ಕೂ ಮುನ್ನ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಅವರು, ಸೋಮವಾರ ಜಾರ್ಖಂಡ್ ಡಿಜಿಪಿ ನೀರಜ್ ಸಿನ್ಹಾ ಅವರಿಗೆ ಡುಮ್ಕಾದಲ್ಲಿ ಬಾಲಕಿಯ ಹತ್ಯೆಗೆ ಸಂಬಂಧಪಟ್ಟಂತೆ ಕೈಗೊಂಡ ಕ್ರಮಗಳ ವರದಿಯನ್ನು ನೀಡುವಂತೆ ಸೂಚಿಸಿದ್ದರು.
"ಈ ಘಟನೆ ಬಗ್ಗೆ ಮಾಹಿತಿ ದೊರೆತ ತಕ್ಷಣ ನಾವು ಸ್ವಯಂಪ್ರೇರಿತವಾಗಿ ಕ್ರಮ ಕೈಗೊಂಡಿದ್ದೇವೆ. ಅಲ್ಲದೇ ಡಿಜಿಪಿ ಅವರೊಂದಿಗೆ ಚರ್ಚಿಸಿದ್ದೇವೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾವು ಮಾಡಿರುವ ಅವಲೋಕನವನ್ನು ಎನ್ಸಿಡಬ್ಲ್ಯೂ ಅಧ್ಯಕ್ಷರಿಗೆ ವರದಿಯಲ್ಲಿ ಸಲ್ಲಿಸಲಾಗುವುದು. ಅವರು ಈ ವರದಿಯನ್ನು ನೋಡಿ ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ. ಈಗ ನಾವು ಏನನ್ನೂ ಬಹಿರಂಗಪಡಿಸುವುದಿಲ್ಲ" ಎಂದು ಎನ್ಸಿಡಬ್ಲ್ಯೂ ಕಾನೂನು ಸಲಹೆಗಾರರಾದ ಶಾಲಿನಿ ಸಿಂಗ್ ಹೇಳಿದರು.