ಕರ್ನಾಟಕ

karnataka

By

Published : Jul 2, 2023, 12:24 PM IST

ETV Bharat / bharat

Journalist abducted: ಗುಂಡಿನ ದಾಳಿಯಾದರೂ ಅದೃಷ್ಟವಶಾತ್ ಬದುಕುಳಿದ ಪತ್ರಕರ್ತ: ಗ್ವಾಲಿಯರ್​ನಲ್ಲಿ ಆತಂಕಕಾರಿ ಘಟನೆ!

ಪತ್ರಕರ್ತನೊಬ್ಬನನ್ನು ಅಪಹರಿಸಿ ಆತನ ಮೇಲೆ ಗುಂಡಿನ ದಾಳಿ ನಡೆಸಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

Journalist abducted, assaulted and shot at in Gwalior; hospitalised
Journalist abducted, assaulted and shot at in Gwalior; hospitalised

ಭೋಪಾಲ್ (ಮಧ್ಯ ಪ್ರದೇಶ): ಪ್ರಾದೇಶಿಕ ಸುದ್ದಿ ವಾಹಿನಿಯೊಂದರಲ್ಲಿ ಕೆಲಸ ಮಾಡುವ ಪತ್ರಕರ್ತನನ್ನು ಅಪಹರಿಸಿ, ತೀವ್ರವಾಗಿ ಥಳಿಸಿ ನಂತರ ಆತನ ಮೇಲೆ ಗುಂಡು ಹಾರಿಸಿದ ಆತಂಕಕಾರಿ ಘಟನೆ ಶನಿವಾರ ಮಧ್ಯಪ್ರದೇಶದ ಗ್ವಾಲಿಯರ್ ಜಿಲ್ಲೆಯಲ್ಲಿ ನಡೆದಿದೆ. ಆದಾಗ್ಯೂ, ಅದು ಹೇಗೋ ಮಾಡಿ ದುಷ್ಕರ್ಮಿಗಳಿಂದ ತಪ್ಪಿಸಿಕೊಂಡಿರುವ ಪತ್ರಕರ್ತ ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸಂತ್ರಸ್ತನನ್ನು ಶಿವಂ ಆರ್ಯ ಎಂದು ಗುರುತಿಸಲಾಗಿದ್ದು, ಗ್ವಾಲಿಯರ್‌ನ ಹಜಿರಾ ಪ್ರದೇಶದ ನಿವಾಸಿಯಾಗಿದ್ದಾರೆ. ಶನಿವಾರ ಬೆಳಗ್ಗೆ 6 ಗಂಟೆ ಸುಮಾರಿಗೆ ಅವರ ಮನೆಯಿಂದ ಅವರನ್ನು ಅಪಹರಣ ಮಾಡಲಾಗಿದೆ ಎಂದು ವರದಿಯಾಗಿದೆ. ಅಪಹರಣಕಾರರು ಆತನನ್ನು ಶಿಕಾರ್ಪುರ ಗ್ರಾಮಕ್ಕೆ ಕರೆದೊಯ್ದು ಬೆಟ್ಟದ ಮೇಲಿದ್ದ ಕೋಣೆಯೊಂದರಲ್ಲಿ ಬಂಧಿಸಿಟ್ಟಿದ್ದರು. ಅಲ್ಲದೆ ಮದ್ಯ ಸೇವಿಸುವಂತೆ ಪತ್ರಕರ್ತನಿಗೆ ಒತ್ತಾಯಿಸಿದ್ದಾರೆ.

ಶಿಕಾರ್ಪುರದಿಂದ ಅಪಹರಣಕಾರರು ಅವನನ್ನು ದಾತಿಯಾ ಜಿಲ್ಲೆಯ ಪಕ್ಕದಲ್ಲಿರುವ ಗ್ವಾಲಿಯರ್ ಜಿಲ್ಲೆಯ ದಬ್ರಾ ಎಂಬ ತಹಸಿಲ್‌ಗೆ ಕರೆದೊಯ್ದರು. ಅಲ್ಲಿ ಪತ್ರಕರ್ತನ ಮೇಲೆ ಮತ್ತಷ್ಟು ದೈಹಿಕ ಹಲ್ಲೆ ನಡೆಸಿ, ನಿಂದಿಸಲಾಯಿತು. ನಂತರ, ಮಧ್ಯಾಹ್ನ ಅಪಹರಣಕಾರರಲ್ಲಿ ಒಬ್ಬಾತ ಅಪರಿಚಿತ ವ್ಯಕ್ತಿಗೆ ವೀಡಿಯೊ ಕರೆ ಮಾಡಿದ್ದಾನೆ. ಅಪಹರಣಕಾರರು ನಂತರ ಆರ್ಯ ಮೇಲೆ ಗುಂಡು ಹಾರಿಸಿದ್ದಾರೆ. ಒಂದು ಗುಂಡು ತಲೆಯನ್ನು ಸವರಿಕೊಂಡು ಹೋದರೆ, ಮತ್ತೊಂದು ತೊಡೆಗೆ ತಾಕಿದೆ. ಈ ಸಂದರ್ಭದಲ್ಲಿ ಅಪಹರಣಕಾರ ಬಂದೂಕಿಗೆ ಗುಂಡು ತುಂಬಿಸುವಾಗ ಧೈರ್ಯ ಮಾಡಿದ ಆರ್ಯ, ಆತನನ್ನು ತಳ್ಳಿ ಓಡಿ ಹೋಗಿದ್ದಾನೆ.

ಸುಮಾರು ಒಂದು ಕಿಲೋಮೀಟರ್​ವರೆಗೂ ಓಡಿದ ನಂತರ ಆತ ತನಗೆ ಭೇಟಿಯಾದ ವ್ಯಕ್ತಿಯೊಬ್ಬನಿಗೆ ನಡೆದುದೆಲ್ಲವನ್ನೂ ಹೇಳಿದ್ದಾನೆ. ಆಗ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಪತ್ರಕರ್ತನನ್ನು ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ಸಾಗಿಸಲಾಗಿದೆ. ಪೋಲೀಸರ ಪ್ರಕಾರ, ಆತನ ತಲೆಬುರುಡೆಗೆ ತಗುಲಿದ್ದ ಬುಲೆಟ್ ಅನ್ನು ಶಸ್ತ್ರಚಿಕಿತ್ಸೆಯಿಂದ ತೆಗೆದುಹಾಕಲಾಗಿದೆ ಮತ್ತು ಆತನ ಸ್ಥಿತಿ ಸ್ಥಿರವಾಗಿದೆ ಎಂದು ಹೇಳಲಾಗಿದೆ.

ಈ ಕೃತ್ಯದಲ್ಲಿ ಭಾಗಿಯಾಗಿರುವ ಯುವಕನೊಬ್ಬನ ವಿರುದ್ಧ ಈ ಹಿಂದೆಯೇ ಆರ್ಯ ಅವರ ಪತ್ನಿ ಪ್ರಕರಣ ದಾಖಲಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ದಾಳಿಕೋರರು ಸೇಡು ತೀರಿಸಿಕೊಳ್ಳಲು ಅಥವಾ ಪತ್ರಕರ್ತನಿಂದ ಹಣ ಕೀಳಲು ಇಂಥ ಕೃತ್ಯ ನಡೆಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. "ನಾವು ಪ್ರಕರಣದ ಬಗ್ಗೆ ತನಿಖೆ ಪ್ರಾರಂಭಿಸಿದ್ದೇವೆ ಮತ್ತು ಇದೀಗ ಮೂವರು ಶಂಕಿತರನ್ನು ಗುರುತಿಸಲಾಗಿದೆ. ಅಪರಾಧದ ಹಿಂದಿನ ಉದ್ದೇಶವನ್ನು ತಿಳಿಯಲು ಪ್ರಯತ್ನಿಸುತ್ತಿದ್ದೇವೆ" ಎಂದು ಗ್ವಾಲಿಯರ್ ಎಸ್ಪಿ ರಾಜೇಶ್ ಚಂದೇಲ್ ಹೇಳಿದ್ದಾರೆ.

ಅಪಹರಣಗೊಂಡಿದ್ದ ಉದ್ಯಮಿ ರಕ್ಷಣೆ: ಅಗರ್ತಲಾ ನಗರದ ಪ್ಯಾಲೇಸ್ ಕಾಂಪೌಂಡ್‌ನ ಉತ್ತರ ಗೇಟ್ ಬಳಿಯಿಂದ ಅಪಹರಣಗೊಂಡಿದ್ದ ಗುತ್ತಿಗೆದಾರನನ್ನು ತ್ರಿಪುರಾ ಪೊಲೀಸರು ಶುಕ್ರವಾರ ರಕ್ಷಿಸಿದ್ದಾರೆ. ಶುಕ್ರವಾರ ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿದ ಪಶ್ಚಿಮ ತ್ರಿಪುರಾ ಪೊಲೀಸ್ ವರಿಷ್ಠಾಧಿಕಾರಿ ಕಿರಣ್ ಕುಮಾರ್, ಗುತ್ತಿಗೆದಾರ ಶ್ಯಾಮಲ್ ದೇಬ್ ಅವರನ್ನು ಉತ್ತರ ಗೇಟ್‌ನಲ್ಲಿ ಬಲವಂತವಾಗಿ ವಾಹನಕ್ಕೆ ಹತ್ತಿಸಿಕೊಂಡು ಅಪಹರಿಸಲಾಗಿತ್ತು. ಅಪಹರಣದ ಹಿಂದೆ ಯಾರಿದ್ದಾರೆ ಎಂಬ ವಿವರಗಳನ್ನು ನಾವು ಕಲೆ ಹಾಕುತ್ತಿದ್ದೇವೆ. ಶೀಘ್ರದಲ್ಲೇ ಅವರನ್ನು ಬಂಧಿಸುತ್ತೇವೆ. ಕೆಲವು ಸೂಕ್ಷ್ಮ ವಿಚಾರಗಳು ಒಳಗೊಂಡಿದ್ದು, ನಾವು ತನಿಖೆ ನಡೆಸುತ್ತಿದ್ದೇವೆ ಎಂದು ಅವರು ಹೇಳಿದರು. ಗುತ್ತಿಗೆದಾರ ನಾಲ್ಕೈದು ಶಂಕಿತರ ಹೆಸರುಗಳನ್ನು ಪೊಲೀಸರಿಗೆ ನೀಡಿದ್ದಾರೆ.

ಇದನ್ನೂ ಓದಿ :ಇಂಟರ್​ನೆಟ್​ನಿಂದ ಡೇಟಾ ಕದ್ದ ಆರೋಪ: Open AI ವಿರುದ್ಧ ಯುಎಸ್​ನಲ್ಲಿ ಮೊಕದ್ದಮೆ

ABOUT THE AUTHOR

...view details