ಆದೋನಿ (ಆಂಧ್ರ ಪ್ರದೇಶ): ನಾನು ಕಾಂಗ್ರೆಸ್ ಅಧ್ಯಕ್ಷರ ಕುರಿತಾಗಿ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಈ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಅವರು ಪ್ರತಿಕ್ರಿಯಿಸುತ್ತಾರೆ ಎಂದು ಪಕ್ಷದ ಮಾಜಿ ಅಧ್ಯಕ್ಷ, ಸಂಸದ ರಾಹುಲ್ ಗಾಂಧಿ ತಿಳಿಸಿದರು. ಅಚ್ಚರಿಯೆಂದರೆ, ಪಕ್ಷದ ಅಧ್ಯಕ್ಷೀಯ ಸ್ಥಾನದ ಚುನಾವಣಾ ಫಲಿತಾಂಶ ಸಾರ್ವಜನಿಕವಾಗಿ ಪ್ರಕಟವಾಗುವ ಮುನ್ನವೇ ಅವರು ಈ ರೀತಿ ಹೇಳಿದ್ದು ಅಚ್ಚರಿ ಉಂಟು ಮಾಡಿತು.
ಅಕ್ಬೋಬರ್ 17ರಂದು ಕೈ ಅಧ್ಯಕ್ಷ ಸ್ಥಾನಕ್ಕೆ ಮತದಾನವಾಗಿತ್ತು. ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ತಿರುವನಂತಪುರಂ ಸಂಸದ ಶಶಿ ತರೂರ್ ಕಣದಲ್ಲಿದ್ದರು. ಇಂದು ಮಧ್ಯಾಹ್ನ ಚುನಾವಣಾ ಫಲಿತಾಂಶ ಪ್ರಕಟವಾಗುವುದಕ್ಕೆ ಸ್ವಲ್ಪ ಹೊತ್ತಿಗೂ ಮುನ್ನ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ಸಾಗುತ್ತಿರುವ ಆಂಧ್ರ ಪ್ರದೇಶದ ಆದೋನಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.