ಕರ್ನಾಟಕ

karnataka

ವಿಶೇಷ ಲೇಖನ; ಅನ್ನದ ಬಟ್ಟಲಾಗಿದ್ದ ಬರಗಢ ಜಿಲ್ಲೆ ಇಂದು ಕ್ಯಾನ್ಸರ್​ ತವರೂರು

By

Published : Jul 10, 2020, 5:04 PM IST

ಅತ್ಯಧಿಕ ಪ್ರಮಾಣದ ಇಳುವರಿ ಪಡೆಯಲು ರೈತರು ಸಹಜವಾಗಿಯೇ ಅತಿ ಹೆಚ್ಚು ಪ್ರಮಾಣದಲ್ಲಿ ರಾಸಾಯನಿಕ ಗೊಬ್ಬರ ಹಾಗೂ ಕೀಟನಾಶಕಗಳನ್ನು ಬಳಸಲಾರಂಭಿಸಿದರು. ಆದರೆ ಈ ರಾಸಾಯನಿಕಗಳ ಬಳಕೆಯಿಂದಾಗಬಹುದಾದ ಅಪಾಯಕಾರಿ ಅಡ್ಡಪರಿಣಾಮಗಳ ಬಗ್ಗೆ ರೈತರಿಗೆ ತಿಳುವಳಿಕೆಯೇ ಇರಲಿಲ್ಲ. ಹೀಗಾಗಿ ವರ್ಷದಿಂದ ವರ್ಷಕ್ಕೆ ಇಲ್ಲಿನ ಮಣ್ಣು ಹಾಗೂ ಅಂತರ್ಜಲಗಳು ರಾಸಾಯನಿಕಗಳ ಮಿಶ್ರಣದಿಂದಾಗಿ ವಿಷಪೂರಿತವಾಗತೊಡಗಿದವು.

Story of Bargarh
Story of Bargarh

ಬರಗಢ (ಒಡಿಶಾ): ಒಂದು ಕಾಲಕ್ಕೆ ಒಡಿಶಾದ ಅನ್ನದ ಬಟ್ಟಲು ಎಂದು ಖ್ಯಾತಿ ಪಡೆದಿದ್ದ ಬರಗಢ ಜಿಲ್ಲೆ ಇಂದು ಕ್ಯಾನ್ಸರ್​ ರೋಗಿಗಳ ರಾಜಧಾನಿಯಂತಾಗಿರುವುದು ಶೋಚನೀಯ. ರಾಜ್ಯದ ಇತರ ಜಿಲ್ಲೆಗಳಿಗೆ ಹೋಲಿಸಿದರೆ ಈ ಜಿಲ್ಲೆಯಲ್ಲಿ ಕ್ಯಾನ್ಸರ್​ ಪ್ರಕರಣಗಳ ಸಂಖ್ಯೆ ವಿಪರೀತ ಹೆಚ್ಚಾಗಿದೆ. ಬರಗಢ ಜಿಲ್ಲೆಯಲ್ಲಿಯೇ ಯಾಕಿಷ್ಟು ಕ್ಯಾನ್ಸರ್ ಪ್ರಕರಣಗಳು ಕಂಡು ಬರುತ್ತಿವೆ ಎಂಬುದು ಸರ್ಕಾರಕ್ಕೂ ತಿಳಿಯದಾಗಿದೆ. ಆದರೆ ಕೆಲ ಮೂಲಗಳ ಪ್ರಕಾರ, ಇಲ್ಲಿನ ಕೃಷಿಯಲ್ಲಿ ಅತಿಯಾಗಿ ಬಳಸಲಾಗುತ್ತಿರುವ ರಾಸಾಯನಿಕ ರಸಗೊಬ್ಬರ ಹಾಗೂ ಕೀಟನಾಶಕಗಳಿಂದಾಗಿ ಕ್ಯಾನ್ಸರ್​ ರೋಗ ವ್ಯಾಪಕವಾಗುತ್ತಿದೆ ಎನ್ನಲಾಗಿದೆ.

ವಾತಾವರಣ ಹಾಗೂ ಗಾಳಿಯಲ್ಲಿನ ಮಾಲಿನ್ಯ, ಕಲ್ಮಶಗೊಂಡಿರುವ ನೀರು ಹಾಗೂ ಪ್ರಾಣಘಾತಕವಾಗಿರುವ ರಾಸಾಯನಿಕಗಳಿಂದ ಕೂಡಿರುವ ಆಹಾರಗಳ ಸೇವನೆಯಿಂದ ಜಿಲ್ಲೆಯ ಜನರಲ್ಲಿ ಅತಿ ಹೆಚ್ಚು ಪ್ರಮಾಣದ ಟ್ಯೂಮರ್ ಹಾಗೂ ಕ್ಯಾನ್ಸರ್ ಪ್ರಕರಣಗಳು ಕಾಣಿಸಿಕೊಳ್ಳುತ್ತಿವೆ ಎಂದು ತಜ್ಞರು ಹೇಳುತ್ತಿದ್ದಾರೆ.

1950 ರಲ್ಲಿ ಹಿರಾಕುಡ್ ಡ್ಯಾಂ ನಿರ್ಮಾಣದ ನಂತರ ಕೆನಾಲ್​ ಮೂಲಕ ನೀರು ಹರಿಯಲಾರಂಭಿಸಿ ಈ ಭಾಗದಲ್ಲಿ ಕೃಷಿಗೆ ಉತ್ತೇಜನ ದೊರಕಿತು. ಆಗಿನಿಂದಲೇ ಈ ಪ್ರದೇಶದಲ್ಲಿ ಭತ್ತ ಹಾಗೂ ಇತರ ತರಕಾರಿ ಬೆಳೆಗಳ ಪ್ರಮಾಣದಲ್ಲಿ ಹೆಚ್ಚಳ ಕಂಡು ಬರಲಾರಂಭಿಸಿತು. ಆಂಧ್ರ ಪ್ರದೇಶ ಸೇರಿದಂತೆ ಇನ್ನೂ ಕೆಲ ರಾಜ್ಯಗಳ ರೈತರು ಇಲ್ಲಿಗೆ ಬಂದು, ಕೃಷಿಯಲ್ಲಿ ತೊಡಗಿಸಿಕೊಂಡು ಇಲ್ಲಿಯೇ ವಾಸಿಸತೊಡಗಿದರು.

ಅತ್ಯಧಿಕ ಪ್ರಮಾಣದ ಇಳುವರಿ ಪಡೆಯಲು ರೈತರು ಸಹಜವಾಗಿಯೇ ಅತಿ ಹೆಚ್ಚು ಪ್ರಮಾಣದಲ್ಲಿ ರಾಸಾಯನಿಕ ಗೊಬ್ಬರ ಹಾಗೂ ಕೀಟನಾಶಕಗಳನ್ನು ಬಳಸಲಾರಂಭಿಸಿದರು. ಆದರೆ ಈ ರಾಸಾಯನಿಕಗಳ ಬಳಕೆಯಿಂದಾಗಬಹುದಾದ ಅಪಾಯಕಾರಿ ಅಡ್ಡಪರಿಣಾಮಗಳ ಬಗ್ಗೆ ರೈತರಿಗೆ ತಿಳುವಳಿಕೆಯೇ ಇರಲಿಲ್ಲ. ಹೀಗಾಗಿ ವರ್ಷದಿಂದ ವರ್ಷಕ್ಕೆ ಇಲ್ಲಿನ ಮಣ್ಣು ಹಾಗೂ ಅಂತರ್ಜಲಗಳು ರಾಸಾಯನಿಕಗಳ ಮಿಶ್ರಣದಿಂದಾಗಿ ವಿಷಪೂರಿತವಾಗತೊಡಗಿದವು.

ಕೃಷಿಗೆ ರಾಸಾಯನಿಕ ಬಳಸುವ ಶೇ 64 ರಷ್ಟು ರೈತರು ಬೂಟ್, ಕೈಗವಸು ಹೀಗೆ ಯಾವುದೇ ಸುರಕ್ಷತಾ ಕವಚ ಧರಿಸದೇ ಇವನ್ನು ಬರಿಗೈಯಿಂದಲೇ ಮುಟ್ಟುತ್ತಾರೆ. ಜೊತೆಗೆ ಇತ್ತೀಚಿನ ವರ್ಷಗಳಲ್ಲಿ ಈ ರೈತರು ವಿಪರೀತ ಎನ್ನುವಷ್ಟು ಕೀಟನಾಶಕಗಳನ್ನು ಸಿಂಪಡಿಸುತ್ತಿದ್ದಾರೆ. 2016 ರಲ್ಲಿ 440.702 ಟನ್​ಗಳಷ್ಟು ಇದ್ದ ಕೀಟನಾಶಕಗಳ ಬಳಕೆ ಪ್ರಮಾಣ, 2017 ಕ್ಕೆ 713.867 ಟನ್​ಗಳಿಗೆ ಹೆಚ್ಚಾಗಿದೆ.

ಸಾಮಾನ್ಯವಾಗಿ ವರ್ಷಕ್ಕೆ ಒಂದು ಬಾರಿ ಮಾತ್ರ ಭತ್ತದ ಫಸಲು ಪಡೆಯಲಾಗುತ್ತದೆ. ಆದರೆ ಬರಗಢ ಜಿಲ್ಲೆಯ ಕಾಲುವೆಗಳಲ್ಲಿ ವರ್ಷವೆಲ್ಲ ನೀರಿನ ಹರಿವು ಇರುವುದರಿಂದ ಇಲ್ಲಿನ ರೈತರು ವರ್ಷಕ್ಕೆ ಎರಡು ಭತ್ತದ ಫಸಲು ಪಡೆಯುತ್ತಿದ್ದಾರೆ. ಇಲ್ಲಿನ ಒಟ್ಟು 0.34 ಮಿಲಿಯನ್ ಹೆಕ್ಟೇರ್ ಕೃಷಿ ಭೂಮಿಯ ಪೈಕಿ 0.24 ಮಿಲಿಯನ್ ಹೆಕ್ಟೇರ್ ಪ್ರದೇಶದಲ್ಲಿ ಭತ್ತವನ್ನೇ ಬೆಳೆಯಲಾಗುತ್ತಿದೆ.

ಇತ್ತೀಚೆಗೆ ಕೆಲವರು ಸಾವಯವ ಕೃಷಿಯ ಕಡೆಗೆ ಹೊರಳುತ್ತಿದ್ದಾರಾದರೂ, ಈಗಾಗಲೇ ಅಪಾಯ ಘಟಿಸಿ ಹೋಗಿದೆ. ಕೀಟನಾಶಕಗಳಿಗೆ ಎಲ್ಲಿಯವರೆಗೆ ಸರ್ಕಾರ ನಿಷೇಧ ಹೇರುವುದಿಲ್ಲವೋ ಅಲ್ಲಿಯವರೆಗೆ ಅವುಗಳ ಬಳಕೆ ಅವ್ಯಾಹತವಾಗಿ ಮುಂದುವರೆಯಲಿದೆ ಎನ್ನುತ್ತಾರೆ ಸ್ಥಳೀಯರು.

ಇಲ್ಲಿನ ಪರಿಸ್ಥಿತಿಯ ಕುರಿತು ಈಟಿವಿ ಭಾರತ್​ದೊಂದಿಗೆ ಮಾತನಾಡಿದ ರೈತ ಸಂಘಟನೆಯ ಮುಖಂಡ ಲಿಂಗರಾಜ ಪ್ರಧಾನ್, ಬರಗಢ ಜಿಲ್ಲೆಯಲ್ಲಿ ಕೀಟನಾಶಕಗಳ ಬಳಕೆ ಮಿತಿ ಮೀರಿದೆ. ಕೀಟನಾಶಕ ಹಾಗೂ ಕ್ಯಾನ್ಸರ್​ ಎರಡಕ್ಕೂ ಸಂಬಂಧವಿರುವುದು ಈಗಾಗಲೇ ಸಾಬೀತಾಗಿದೆ. ಹಸಿರು ಕ್ರಾಂತಿಯ ನಂತರ ಭಾರತ ಆಹಾರದ ವಿಷಯದಲ್ಲಿ ಸ್ವಾವಲಂಬಿಯಾಗಿದೆ. ಆದರೆ ಹೆಚ್ಚೆಚ್ಚು ಫಸಲು ಪಡೆಯುವ ನೀತಿಯಿಂದಾಗಿ ಕೀಟನಾಶಕಗಳ ಮೇಲಿನ ನಮ್ಮ ಅವಲಂಬನೆ ಹೆಚ್ಚಾಗಿದೆ. ಪ್ರಸ್ತುತ ಕೃಷಿ ಪದ್ಧತಿಯನ್ನು ಈ ಕೂಡಲೇ ಬದಲಾಯಿಸಿ ಮತ್ತಷ್ಟು ರೈತರು ಕ್ಯಾನ್ಸರ್​ಗೆ ತುತ್ತಾಗದಂತೆ ತಡೆಯಬೇಕಿದೆ ಎಂದು ಹೇಳಿದರು.

ಭತ್ತ ಬೆಳೆಯುವ ಪ್ರದೇಶವಾಗಿದ್ದರಿಂದ ಸುತ್ತಲೂ ನೂರಾರು ರೈಸ್​ ಮಿಲ್​ಗಳು ಸಹ ಆರಂಭವಾಗಿವೆ. ಇವುಗಳು ಹೊರಸೂಸುವ ದಟ್ಟ ಕಪ್ಪು ಹೊಗೆಯಿಂದಾಗಿ ವಾತಾವರಣ ಸಂಪೂರ್ಣ ಹಾಳಾಗುತ್ತಿದ್ದು, ಸ್ಥಳೀಯ ನಿವಾಸಿಗಳು ನರಕಯಾತನೆ ಅನುಭವಿಸುತ್ತಿದ್ದಾರೆ. ಬರಗಢ ಜಿಲ್ಲೆಯಲ್ಲಿ 130 ರೈಸ್​ ಮಿಲ್​ಗಳಿವೆ ಎಂದು ಮೂಲಗಳು ಈಟಿವಿ ಭಾರತ್​ಗೆ ತಿಳಿಸಿವೆ.

2014-15 ನೇ ಸಾಲಿನಲ್ಲಿ ಬರಗಢ ಜಿಲ್ಲೆಯಲ್ಲಿ 1017 ಕ್ಯಾನ್ಸರ್​ ರೋಗಿಗಳನ್ನು ಗುರುತಿಸಲಾಗಿದ್ದು. 2015-16 ರಲ್ಲಿ ಈ ಸಂಖ್ಯೆ 1065 ಕ್ಕೆ ಏರಿತು. 2016-17 ರಲ್ಲಿ ಕ್ಯಾನ್ಸರ್​ ಪೀಡಿತರ ಸಂಖ್ಯೆ 1100 ಕ್ಕೆ ಹೆಚ್ಚಾಗಿದೆ.

ಬರಗಢ ಜಿಲ್ಲೆಯಲ್ಲಿನ ಕ್ಯಾನ್ಸರ್​ ಪ್ರಕರಣಗಳಲ್ಲಿ ಜಠರ ಕ್ಯಾನ್ಸರ್ ಹಾಗೂ ಸ್ತನ ಕ್ಯಾನ್ಸರ್​​ಗಳ ಸಂಖ್ಯೆಯೇ ಹೆಚ್ಚಾಗಿದೆ. ಅಂದರೆ ಇಲ್ಲಿನವರು ಸೇವಿಸುವ ಆಹಾರಕ್ಕೂ ಕ್ಯಾನ್ಸರ್​ಗೂ ಸಂಬಂಧವಿದೆ ಎಂಬುದು ಸ್ಪಷ್ಟವಾಗುತ್ತಿದೆ.

ABOUT THE AUTHOR

...view details