ನವದೆಹಲಿ: ಬಿ.ಆರ್.ಅಂಬೇಡ್ಕರ್ ಮತ್ತು ಸಾವರ್ಕರ್ ಅವರ ಸಾಮಾಜಿಕ ಆಲೋಚನೆಗಳಲ್ಲಿ ಸಾಮ್ಯತೆ ಇದೆ ಸತ್ಯವೆಂದರೆ ಸಾವರ್ಕರ್ , ಅಂಬೇಡ್ಕರ್ ಅವರಿಗಿಂತ ಒಂದು ಹೆಜ್ಜೆ ಮುಂದಿದ್ದರು. ವೈಜ್ಞಾನಿಕ ಆಲೋಚನೆ ಹೊಂದಿದ್ದ ಸಾವರ್ಕರ್ ಜಾತಿ ಇರಬಾರದು ಎಂದಿದ್ದರು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಸಾವರ್ಕರ್ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಾತ್ಯತೀತತೆ, ಸಮಾಜವಾದ ಮತ್ತು ಪ್ರಜಾಪ್ರಭುತ್ವವು ಭಾರತದ ಸಂಸ್ಕೃತಿಯಲ್ಲಿ ಅಡಕವಾಗಿವೆ. ಯಾರೂ ಕೂಡ ದೇಶದ ಜನರಿಗೆ ಈ ಬಗ್ಗೆ ಹೇಳಿಕೊಡುವ ಅಗತ್ಯವಿಲ್ಲ. ಯಾರೂ ಯಾವುದೇ ಧರ್ಮಕ್ಕೆ ವಿರುದ್ಧವಾಗಿಲ್ಲ. ಮುಸ್ಲಿಂ ಬಹುಸಂಖ್ಯಾತ ದೇಶಗಳಾದ ಪಾಕಿಸ್ತಾನ, ಸಿರಿಯಾ ಮತ್ತು ಟರ್ಕಿಯನ್ನು ಉದಾಹರಣೆಗಳಾಗಿ ತೆಗೆದುಕೊಳ್ಳಿ. ಬಹುಪಾಲು ಜನಸಂಖ್ಯೆಯು ಮುಸ್ಲಿಂ ಆಗಿದ್ದರೆ, ಒಂದು ದೇಶದ ಜಾತ್ಯತೀತ ಸ್ವರೂಪವು ಸವೆದುಹೋಗುತ್ತದೆ' ಎಂದು ಬಾಳಾಸಾಹೇಬ್ ದಿಯೋರಸ್ ಹೇಳಿದ್ದಾರೆ ಎಂದರು.
ನಾವು ಸ್ವಭಾವತಃ ಸಹಾನುಭೂತಿ ಉಳ್ಳವರು ಮತ್ತು ಸಹಿಷ್ಣುಗಳಾಗಿದ್ದೇವೆ. ಈ ಮೌಲ್ಯಗಳನ್ನು ಯಾರೂ ನಮಗೆ ಕಲಿಸಬಾರದು. ನಾವು ಸಾಮಾಜಿಕ ಸಮಾನತೆಯ ಬಗ್ಗೆ ಯೋಚಿಸಬೇಕಾಗಿದೆ. ವಿಡಿ ಸಾವರ್ಕರ್ ಅವರ ಆಲೋಚನೆಗಳು ಇನ್ನೂ ಪ್ರಸ್ತುತವಾಗಿವೆ ಎಂದು ಗಡ್ಕರಿ ಹೇಳಿದ್ದಾರೆ.
ಸಾವರ್ಕರ್ ಅವರ ಪ್ರಸ್ತುತತೆ ಕುರಿತು ಮಾತನಾಡಿದ ಅವರು ವಿಭಜನೆಯು ಎರಡು ದೇಶಗಳನ್ನು ಸೃಷ್ಟಿಸಿದೆ. ಸಾವರ್ಕರ್ ಅವರು ವಿಭಜನೆಯ ನೋವನ್ನು ಅನುಭವಿಸಿದ್ದಾರೆ.ವರ ಬೋಧನೆಗಳು ಪ್ರಸ್ತುತ ಮತ್ತು ಭವಿಷ್ಯದ ಪೀಳಿಗೆಗೆ ಭಾರತವು ತಪ್ಪು ದಿಕ್ಕಿನಲ್ಲಿ ಹೋಗದಂತೆ ನೋಡಿಕೊಳ್ಳಲು ಸಹಾಯಕ ಎಂದಿದ್ದಾರೆ.
'ಇಂದು ನೀವು ಪ್ರಪಂಚದ ಪರಿಸ್ಥಿತಿ ಏನು ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಇಡೀ ಪ್ರಪಂಚವನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಒಂದು ಮೂಲಭೂತವಾದಿಗಳು ಮತ್ತು ಭಯೋತ್ಪಾದಕರು ಮತ್ತು ನಾವು ಮತ್ತು ನಮ್ಮ ದೇವರು ಮಾತ್ರ ಉತ್ತಮ ಎಂದು ಹೇಳುವವರು. ಇನ್ನೊಂದು ಗುಂಪು ಸಹಿಷ್ಣುಗಳಾಗಿದ್ದು ಪ್ರಜಾಪ್ರಭುತ್ವ ಮೌಲ್ಯಗಳಲ್ಲಿ ನಂಬಿಕೆಯುಳ್ಳವರಾಗಿದ್ದಾರೆ ಎಂದು ಹೇಳಿದ್ದಾರೆ.