ನವದೆಹಲಿ: ಕೇಂದ್ರ ಸರ್ಕಾರ ಕೊರೊನಾ ವಿಚಾರವಾಗಿ ಗಾಳಿ ಗೋಪುರ ನಿರ್ಮಿಸುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
21 ದಿನಗಳಲ್ಲಿ ಕೊರೊನಾ ನಿರ್ಮೂಲನೆ, ಆರೋಗ್ಯ ಸೇತು ಆ್ಯಪ್ ಹಾಗೂ 20 ಲಕ್ಷ ಕೋಟಿ ರೂಪಾಯಿಗಳ ಪ್ಯಾಕೇಜ್ಗಳ ಮೂಲಕ ಸುಳ್ಳು ಆಶ್ವಾಸನೆಗಳನ್ನು ನೀಡಲಾಗಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಮೋದಿ ಸರ್ಕಾರ ಪಿಎಂ ಕೇರ್ಸ್ಅನ್ನು ಸ್ಥಾಪಿಸುವ ಮೂಲಕ ''ವಿಪತ್ತಿನಲ್ಲಿ ಅವಕಾಶ'' ಕಂಡುಕೊಂಡಿದೆ ಎಂದು ಮಾರ್ಮಿಕವಾಗಿ ವ್ಯಂಗ್ಯವಾಡಿದ್ದಾರೆ.
ಪಿಎಂ ಕೇರ್ಸ್ ನಿಧಿ ಸ್ಥಾಪನೆ ಬಗ್ಗೆ ಮೊದಲಿನಿಂದಲೂ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿತ್ತು. ಕೆಲವು ದಿನಗಳ ಹಿಂದೆ ಪಿಎಂ ಕೇರ್ಸ್ಗೆ ಹಣ ನೀಡಿದವರ ಮಾಹಿತಿ ನೀಡಲು ಕೇಂದ್ರ ಸರ್ಕಾರ ನಿರಾಕರಿಸಿದಾಗ ಮತ್ತಷ್ಟು ಅಸಮಾಧಾನ ವ್ಯಕ್ತಪಡಿಸಿತ್ತು.
ಈಗ ರಾಹುಲ್ ಗಾಂಧಿ ಕೂಡ ಪಿಎಂ ಕೇರ್ಸ್ ನಿಧಿಯಿಂದ ಕೇಂದ್ರ ಸರ್ಕಾರ ''ವಿಪತ್ತಿನಲ್ಲಿ ಅವಕಾಶ'' ಕಂಡುಕೊಂಡಿದೆ ಎಂದು ವ್ಯಂಗ್ಯವಾಡಿದ್ದಾರೆ.
ಪಿಎಂ ಕೇರ್ಸ್ ನಿಧಿಯನ್ನು ಮಾರ್ಚ್ 2020ರಲ್ಲಿ ಕೊರೊನಾ ನಿಯಂತ್ರಣಕ್ಕಾಗಿ ನಿಧಿ ಸಂಗ್ರಹಣೆ ಮಾಡುವ ಸಲುವಾಗಿ ಸ್ಥಾಪನೆ ಮಾಡಲಾಗಿತ್ತು. ಇದಕ್ಕೆ ಬಂದ ಹಣವನ್ನು ಕೊರೊನಾ ಸೋಂಕಿತರ ಚಿಕಿತ್ಸೆಗೆ ಬಳಸಿಕೊಳ್ಳಲಾಗುತ್ತದೆ ಎಂದು ಕೇಂದ್ರ ಮಾಹಿತಿ ನೀಡಿತ್ತು.