ಮಧುರೈ (ತಮಿಳುನಾಡು): ಕೌಟುಂಬಿಕ ಕಲಹದಿಂದ ಬೇಸತ್ತ ಮಹಿಳೆಯೊಬ್ಬಳು ತನ್ನ ಎರಡು ಮಕ್ಕಳನ್ನು ಕೊಲೆ ಮಾಡಿ ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ತಮಿಳುನಾಡಿನ ಮಧುರೈ ಜಿಲ್ಲೆಯ ಮೇಳವಾಸಲ್ ಪ್ರದೇಶದಲ್ಲಿ ನಡೆದಿದೆ.
ಮೇಳವಾಸಲ್ ಮೂಲದ ತಮಿಳುಸೆಲ್ವಿ ಎಂಬ ಮಹಿಳೆಯು ಕೌಟುಂಬಿಕ ಕಲಹದಿಂದ ಬೇಸತ್ತು ಈ ಮಾರ್ಗ ತುಳಿದಿದ್ದಾಳೆ. ಪಾಂಡಿ ಎಂಬುವರನ್ನು ವಿವಾಹವಾಗಿದ್ದ ತಮಿಳುಸೆಲ್ವಿ ಕುಟುಂಬದಲ್ಲಿ ಯಾವುದೂ ಸರಿ ಇರಲಿಲ್ಲ. ಇಬ್ಬರ ನಡುವೆ ಆಗ್ಗಾಗೆ ಜಗಳ ನಡೆಯುತ್ತಲ್ಲೇ ಇತ್ತು.
ಸೆ. 27ರ ರಾತ್ರಿ ದಂಪತಿ ನಡುವಿನ ವಾಗ್ವಾದ ಮಿತಿಮೀರಿತ್ತು. ಇದರಿಂದ ಬೇಸತ್ತ ತಮಿಳುಸೆಲ್ವಿ ಮೊದಲು ತನ್ನ ಮಕ್ಕಳಾದ ವರ್ಷಶ್ರೀ ಮತ್ತು ವರ್ಣಿಕಾಶ್ರೀ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾಳೆ. ಆ ಬಳಿಕ ತಾನೂ ಸಹ ಬೆಂಕಿ ಹಚ್ಚಿಕೊಂಡಿದ್ದಾಳೆ. ದುರ್ಘಟನೆಯಿಂದ ಮಕ್ಕಳ ದೇಹಗಳು ಭಾಗಶಃ ಸುಟ್ಟುಹೋಗಿದ್ದರಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಇನ್ನು ತೀವ್ರ ಸುಟ್ಟಗಾಯಗಳೊಂದಿಗೆ ಸಾವು -ಬದುಕಿನ ನಡುವೆ ಹೋರಾಟ ಮಾಡುತ್ತಿದ್ದ ತಮಿಳುಸೆಲ್ವಿಯನ್ನು ಮಧುರೈ ರಾಜಾಜಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಅವಳು ಮೃತಪಟ್ಟಿದ್ದಾಳೆ ಎನ್ನಲಾಗುತ್ತಿದೆ. ಸುದ್ದಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ತನಿಖೆಯನ್ನು ಸಹ ನಡೆಸಿದ್ದಾರೆ.