ನವದೆಹಲಿ :ಯಾವುದೇ ಹಿಂದೂ ಭಾರತದ ವಿರುದ್ಧ ದುಷ್ಕೃತ್ಯ ಎಸಗಲು ಅಥವಾ ಭಾರತ ವಿರೋಧಿ ಆಗಲು ಸಾಧ್ಯವಿಲ್ಲ ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ನಿನ್ನೆ ದೆಹಲಿಯ ರಾಜಘಾಟ್ನ ಗಾಂಧಿ ದರ್ಶನದಲ್ಲಿ ನಡೆದ ‘ಮೇಕಿಂಗ್ ಆಫ್ ಹಿಂದೂ ಪೆಟ್ರಿಯೆಟ್’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ಮಾತನಾಡಿದ ಮೊಹನ್ ಭಾಗವತ್, ವ್ಯಕ್ತಿಯ ದೇಶಪ್ರೇಮವು ಆತನ ಧರ್ಮದಿಂದ ಹುಟ್ಟಿಕೊಳ್ಳುತ್ತದೆ ಎಂದು ಗಾಂಧೀಜಿ ಹೇಳಿದ್ದಾರೆ.
ಭಾರತದಲ್ಲಿರುವ ಪ್ರತಿ ವ್ಯಕ್ತಿಯು ಈ ಭೂಮಿಯನ್ನು ತನ್ನದೆಂದು ಪರಿಗಣಿಸುತ್ತಾನೆ. ಎಲ್ಲರೂ ಭೂಮಿಯನ್ನು ಪೂಜಿಸುತ್ತಾರೆ. ಹಿಂದೂ ಆಗಿದ್ದರೆ ಅವರು ದೇಶಭಕ್ತರಾಗಬೇಕು, ಒಂದು ವೇಳೆ ಅವರು ನಿದ್ರೆಯಲ್ಲಿದ್ದರೆ ಅವರಲ್ಲಿ ದೇಶಭಕ್ತಿಯನ್ನು ಜಾಗೃತಗೊಳಿಸಬೇಕು. ಯಾವುದೇ ಹಿಂದೂ ಭಾರತ ವಿರೋಧಿ ಅಲ್ಲ ಎಂದು ಹೇಳಿದ್ದಾರೆ.
ಅಂದರೆ ಕೇವಲ ಭೂಮಿಯನ್ನು ಮಾತ್ರ ಪ್ರೀತಿಸುತ್ತಾನೆಂದಲ್ಲ. ಅವನು ಆ ದೇಶದ ಜನ, ನದಿಗಳು, ಸಂಸ್ಕೃತಿ, ಸಂಪ್ರದಾಯ ಎಲ್ಲವನ್ನೂ ಪ್ರೀತಿಸುತ್ತಾನೆಂದು ಅರ್ಥ. ನನ್ನ ಧರ್ಮವನ್ನು ನಾನು ಚೆನ್ನಾಗಿ ಅರ್ಥ ಮಾಡಿಕೊಂಡು ಉತ್ತಮ ದೇಶಭಕ್ತನಾಗಿ ಬೇರೆಯವರು ಕೂಡ ಅದೇ ರೀತಿ ಆಗುವಂತೆ ಉತ್ತೇಜನ ಮತ್ತು ಸ್ಫೂರ್ತಿ ತುಂಬುತ್ತೇನೆ ಎಂದು ತಿಳಿಸಿದ್ದಾರೆ.
ಮಹಾತ್ಮಾ ಗಾಂಧಿ ಕುರಿತಾದ ಸಂಶೋಧನಾ ದಾಖಲೆ ಪುಸ್ತಕದ ಬಗ್ಗೆ ಮಾತನಾಡಿದ ಭಾಗವತ್, ತಮ್ಮ ಪಾಲಿಗೆ ಧರ್ಮ ಮತ್ತು ದೇಶಪ್ರೇಮ ಬೇರೆಯಲ್ಲ. ತಾಯ್ನಾಡಿನ ಮೇಲಿನ ಪ್ರೀತಿ ಅಧ್ಯಾತ್ಮದಿಂದ ಹುಟ್ಟಿಕೊಂಡಿದೆ. ನನ್ನ ದೇಶಪ್ರೇಮವು ಧರ್ಮದಿಂದ ಹುಟ್ಟಿಕೊಂಡಿರುವುದು ಎಂದು ಗಾಂಧಿ ಹೇಳಿದ್ದರು.