ಕರ್ನಾಟಕ

karnataka

By

Published : Nov 26, 2019, 9:07 AM IST

ETV Bharat / bharat

'ಮಹಾ' ಕ್ಷಿಪ್ರಕ್ರಾಂತಿ: ಇಂದು ಸುಪ್ರೀಂಕೋರ್ಟ್​ನಿಂದ ಮಹತ್ವದ ತೀರ್ಪು

ಸೋಮವಾರ ವಾದ - ಪ್ರತಿವಾದ ಕೊನೆಗೊಂಡಿದ್ದು, ಜಸ್ಟೀಸ್​ ಎನ್​​.ವಿ ರಮಣ್ ನೇತೃತ್ವದ ಪೀಠ ಇಂದಿಗೆ ತೀರ್ಪು ಕಾಯ್ದಿರಿಸಿತ್ತು.

Maharashtra Politics,ಮಹಾರಾಷ್ಟ್ರ ಸರ್ಕಾರ ರಚನೆ
ಮಹಾರಾಷ್ಟ್ರ ರಾಜಕೀಯ

ನವದೆಹಲಿ: ಮಹಾರಾಷ್ಟ್ರ ರಾಜಕೀಯ ಕ್ಷಿಪ್ರ ಸಂಚಲನ ನೀಡಿದ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ನಡೆಯನ್ನು ಪ್ರಶ್ನಿಸಿ ಶಿವಸೇನೆ-ಎನ್​​ಸಿಪಿ-ಕಾಂಗ್ರೆಸ್ ಸಲ್ಲಿಸಿರುವ ರಿಟ್ ಅರ್ಜಿಯ ತೀರ್ಪು ಇಂದು ಪ್ರಕಟವಾಗಲಿದೆ.

ಭಾನುವಾರ ಸಲ್ಲಿಕೆಯಾದ ರಿಟ್ ಅರ್ಜಿ ಸತತ ಎರಡು ದಿನಗಳ ವಿಚಾರಣೆ ನಡೆದಿದೆ. ಸೋಮವಾರ ವಾದ - ಪ್ರತಿವಾದ ಕೊನೆಗೊಂಡಿದ್ದು, ಜಸ್ಟೀಸ್​ ಎನ್​​.ವಿ ರಮಣ್ ನೇತೃತ್ವದ ಪೀಠ ಇಂದಿಗೆ ತೀರ್ಪು ಕಾಯ್ದಿರಿಸಿತ್ತು. ಇದಕ್ಕೆ ಸಂಬಂಧಿಸಿದ ಮಹತ್ವದ ತೀರ್ಪು ಇಂದು 10.30ಕ್ಕೆ ಪ್ರಕಟವಾಗಲಿದೆ.

ಮಹಾರಾಷ್ಟ್ರ ಸರ್ಕಾರ ರಚನೆ ಬಿಕ್ಕಟ್ಟು... ನಾಳೆಗೆ ತೀರ್ಪು ಕಾಯ್ದಿರಿಸಿದ ಸುಪ್ರೀಂಕೋರ್ಟ್​​​

ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಫಲಿತಾಂಶ ಹೊರಬಿದ್ದ ಬಳಿಕ ಸಾಕಷ್ಟು ಹೈಡ್ರಾಮಾಗಳು ನಡೆದು ಕೊನೆಗೆ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗಿತ್ತು. ಇದರ ನಡುವೆ ಶಿವಸೇನೆ-ಎನ್​​ಸಿಪಿ ಹಾಗೂ ಕಾಂಗ್ರೆಸ್ ಒಟ್ಟಾಗಿ ಸರ್ಕಾರ ರಚನೆಗೆ ಬಹುತೇಕ ಎಲ್ಲವನ್ನೂ ಅಂತಿಮಗೊಳಿಸಿದ್ದವು. ಆದರೆ, ಕಳೆದ ಶುಕ್ರವಾರದಿಂದ ಶನಿವಾರ ಮುಂಜಾನೆ ನಡುವೆ ನಡೆದ ದಿಢೀರ್ ಬೆಳವಣಿಗೆಯಲ್ಲಿ ದೇವೇಂದ್ರ ಫಡ್ನವೀಸ್ ಮತ್ತೆ ಸಿಎಂ ಪಟ್ಟ ಅಲಂಕರಿಸಿದ್ದರು. ಎನ್​ಸಿಪಿ ನಾಯಕ ಅಜಿತ್ ಪವಾರ್ ಬೆಂಬಲ ಬಲದಲ್ಲಿ ಸರ್ಕಾರ ಅಸ್ತಿತ್ವಕ್ಕೆ ಬಂದಿತ್ತು.

ತೀರ್ಪಿನ ಮಹತ್ವ ಏನು..?

ಮಹಾರಾಷ್ಟ್ರ ರಾಜ್ಯರಾಜಕಾರಣದ ಈ ಕ್ಷಿಪ್ರ ಸಂಚಲನ ಭಾರಿ ಸುದ್ದಿ ಮಾಡಿತ್ತು. ನಸುಕಿನ ಜಾವ ರಾಷ್ಟ್ರಪತಿ ಆಳ್ವಿಕೆ ಹಿಂಪಡೆದು ಸರ್ಕಾರ ರಚನೆಗೆ ಅನುವು ಮಾಡಿಕೊಟ್ಟ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ನಡೆಗೆ ವಿಪಕ್ಷಗಳು ಕೆಂಡಾಮಂಡಲರಾಗಿದ್ದಾರೆ.

ತಕ್ಷಣವೇ ಬಹುಮತ ಸಾಬೀತುಪಡಿಸಬೇಕು ಎಂದು ಪಟ್ಟುಹಿಡಿದಿರುವ ಮೂರೂ ಪಕ್ಷಗಳು ತಮ್ಮ ಪರ ವಕೀಲರ ಮೂಲಕ ಕೋರ್ಟ್​ನಲ್ಲಿ ಇದನ್ನೇ ಹೇಳಿಸಿದ್ದಾರೆ. ಸೋಮವಾರದ ವಿಚಾರಣೆಯಲ್ಲಿ ಹಾಲಿ ಸರ್ಕಾರಕ್ಕೆ ನ.30ರವರೆಗೆ ಬಹುಮತ ಸಾಬೀತಿಗೆ ಅವಕಾಶವಿದೆ ಇದೆ ಎಂದು ಮಹಾರಾಷ್ಟ್ರ ಬಿಜೆಪಿ ಪರ ವಾದ ಮಂಡಿಸಿದ್ದ ಮುಕುಲ್ ರೋಹ್ಟಗಿ ಹೇಳಿದ್ದರು. ಆದರೆ ಕಾಂಗ್ರೆಸ್-ಎನ್​ಸಿಪಿ ಪರ ವಕೀಲ ಅಭಿಷೇಕ್ ಮನುಸಿಂಘ್ವಿ ಶೀಘ್ರ ಬಹುಮತ ಸಾಬೀತಿಗೆ ಒತ್ತಾಯಿಸಿದ್ದರು. ಸದ್ಯ ಎಲ್ಲ ವಾದ-ಪ್ರತಿವಾದವನ್ನು ಆಲಿಸಿರುವ ಜಸ್ಟೀಸ್ ಎನ್​​.ವಿ.ರಮಣ, ಅಶೋಕ್ ಭೂಷಣ್ ಹಾಗೂ ಸಂಜೀವ್ ಖನ್ನಾ ಪೀಠ ಇಂದು ಮಹಾರಾಷ್ಟ್ರ ಸರ್ಕಾರದ ಭವಿಷ್ಯ ನಿರ್ಧರಿಸುವ ತೀರ್ಪು ಪ್ರಕಟಿಸಲಿದೆ.

ತೀರ್ಪಿನ ಸಾಧ್ಯತೆ ಏನು..?

ಇಂದಿನ ತೀರ್ಪು ಮಹಾರಾಷ್ಟ್ರ ರಾಜ್ಯಕ್ಕೆ ಅತ್ಯಂತ ಮಹತ್ವದ್ದಾದರೂ ಉಳಿದ ರಾಜ್ಯಗಳೂ ಇದು ಮಾದರಿಯಾಗಲಿದೆ. ರಾಷ್ಟ್ರಪತಿ ಆಳ್ವಿಕೆ, ಸರ್ಕಾರ ರಚನೆಯ ಕಸರತ್ತು ಹಾಗೂ ಇಂತಹ ಸಂದರ್ಭದಲ್ಲಿ ರಾಜ್ಯಪಾಲ ಕಾರ್ಯದ ಪರಿಧಿಯನ್ನು ಸುಪ್ರೀಂ ಇಂದಿನ ತೀರ್ಪಿನಲ್ಲಿ ಉಲ್ಲೇಖ ಮಾಡುವ ಸಾಧ್ಯತೆ ಇದೆ.

ಬಹುಮತ ಇದೆ ಎಂದು ಸದ್ಯ ಫಡ್ನವೀಸ್ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದಿರುವ ಕಾರಣ ಶೀಘ್ರ ಬಹುಮತ ಸಾಬೀತಿಗೆ ಕೋರ್ಟ್​ ಸೂಚನೆ ನೀಡಬಹುದು.

ಬಹುಮತ ಸಾಬೀತು ಶೀಘ್ರವಾಗಿ ಅಗತ್ಯವಿಲ್ಲ ಎಂದು ತಿಳಿಸಿ ಒಂದಷ್ಟು ಕಾಲಾವಕಾಶ ನೀಡಬಹುದು. ಇದು ಸಾಧ್ಯವಾದಲ್ಲಿ ಹಾಲಿ ಸರ್ಕಾರ ಕೊಂಚ ನಿಟ್ಟುಸಿರುಬಿಡಬಹುದು. ಆದರೂ ಬಹುಮತ ಸಾಬೀತಿನ ಉರುಳಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.

ಹಲವು ನಾಟಕೀಯ ಬೆಳವಣಿಗೆಗೆ ಸಾಕ್ಷಿಯಾಗಿ, ಯಾವುದೇ ಥ್ರಿಲ್ಲರ್ ಸಿನಿಮಾಗೂ ಕಡಿಮೆ ಇಲ್ಲದಂತೆ ಕಂಡುಬಂದ ಮಹಾರಾಷ್ಟ್ರ ರಾಜ್ಯರಾಜಕೀಯ ಸದ್ಯ ಮಹತ್ವದ ಘಟ್ಟಕ್ಕೆ ಬಂದು ನಿಂತಿದೆ. ಫಡ್ನವೀಸ್ ಸರ್ಕಾರಕ್ಕೆ ಸುಪ್ರೀಂ ತೀರ್ಪು ಏನಾಗಿರಲಿದೆ ಎನ್ನುವುದು ಇಂದು ಬೆಳಗ್ಗೆ 10.30ಕ್ಕೆ ತಿಳಿಯಲಿದೆ.

ವಾದ-ಪ್ರತಿವಾದ ಮಂಡಿಸುವ ವಕೀಲರು:

  • ಕಪಿಲ್​ ಸಿಬಲ್ - ಶಿವಸೇನೆ ಪರ
  • ಅಭಿಷೇಕ್ ಮನುಸಿಂಘ್ವಿ - ಕಾಂಗ್ರೆಸ್-ಎನ್​​ಸಿಪಿ ಪರ
  • ಮುಕುಲ್ ರೋಹ್ಟಗಿ - ಮಹಾರಾಷ್ಟ್ರ ಬಿಜೆಪಿ ಪರ
  • ಸಾಲಿಸಿಟರ್ ಜನರಲ್​​ ತುಷಾರ್ ಮೆಹ್ತಾ - ರಾಜ್ಯಪಾಲರ ಕಾರ್ಯದರ್ಶಿ ಪರ
  • ಮಣಿಂದರ್ ಸಿಂಗ್ - ಅಜಿತ್ ಪವಾರ್ ಪರ

ತ್ರಿಸದಸ್ಯ ಪೀಠ:

  • ಜಸ್ಟೀಸ್ ಎನ್​​.ವಿ.ರಮಣ
  • ಅಶೋಕ್ ಭೂಷಣ್
  • ಸಂಜೀವ್ ಖನ್ನಾ

ABOUT THE AUTHOR

...view details