ಹಥ್ರಾಸ್(ಉತ್ತರ ಪ್ರದೇಶ):ಹೊಲಿಗೆ ಮತ್ತು ಕಸೂತಿ ತರಬೇತಿ ನೀಡುವ ನೆಪದಲ್ಲಿ ದೆಹಲಿಗೆ ಕರೆದೊಯ್ಯುತ್ತಿದ್ದ ವ್ಯಕ್ತಿಯಿಂದ ಮಧ್ಯಪ್ರದೇಶದ 17 ವರ್ಷದ ಬಾಲಕಿ ತಪ್ಪಿಸಿಕೊಂಡಿದ್ದು, ಪೊಲೀಸರಿಂದ ಸಹಾಯ ಪಡೆಯುವ ಮುನ್ನ ತೀವ್ರ ಕಷ್ಟಪಟ್ಟಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.
ಮಧ್ಯಪ್ರದೇಶದ ಮಾಂಡ್ಲಾ ಜಿಲ್ಲೆಯ ಡೊಂಗರ್ ಮೂಲದ ಈ ಹುಡುಗಿ ದೆಹಲಿಗೆ ಒಂದು ವಾರದ ಹಿಂದೆಯೇ ಒಬ್ಬ ವ್ಯಕ್ತಿಯೊಂದಿಗೆ ಪ್ರಯಾಣ ಪ್ರಾರಂಭಿಸಿದ್ದಾಳೆ. ಈಕೆಯೊಂದಿಗೆ ಇನ್ನೂ ಸುಮಾರು 11 ಹುಡುಗಿಯರು ಇದ್ದರು ಎನ್ನಲಾಗಿದೆ. ಆಕೆ ತರಬೇತಿ ಪಡೆಯುವುದಾಗಿ ನಂಬಿ ಹೊರಟಿದ್ದು, ಪೋಷಕರ ಅನುಮತಿ ಮೇರೆಗೆಯೇ ತೆರಳಿದ್ದಾಳೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಹೋಗುವ ಮಾರ್ಗ ಮಧ್ಯೆ ಎಲ್ಲಾ ಹುಡುಗಿಯರನ್ನು ಬಸ್ ನಿಲ್ದಾಣದ ಬಳಿ ಬಾಡಿಗೆ ಕೋಣೆಯಲ್ಲಿ ಇರಿಸಲಾಗಿತ್ತು. ಆಗ ಆ ವ್ಯಕ್ತಿಯ ನಡೆ -ನುಡಿ ಕಂಡ ಹುಡುಗಿ, ಆತನ ಉದ್ದೇಶದ ಬಗ್ಗೆ ಅನುಮಾನ ಬಂದ ಹಿನ್ನೆಲೆ ಆಕೆ ಹೇಗೋ ಅಲ್ಲಿಂದ ತಪ್ಪಿಸಿಕೊಂಡಿದ್ದಾಗಿ ತಿಳಿಸಿದ್ದಾಳೆ.