ಕರ್ನಾಟಕ

karnataka

By

Published : Oct 23, 2020, 9:15 PM IST

ETV Bharat / bharat

ಗಗನಕ್ಕೇರಿದ ಈರುಳ್ಳಿ ಬೆಲೆ ಕಡಿವಾಣಕ್ಕೆ ಕೇಂದ್ರದ ಕ್ರಮ: ದಾಸ್ತಾನು ಸಂಗ್ರಹಕ್ಕೆ ಮಿತಿ

ಬಿಟ್ಟು ಬಿಡದೇ ಸುರಿದ ಮಳೆಯ ಪರಿಣಾಮ ಕಳೆದ ಎರಡು ವಾರಗಳಿಂದ ಈರುಳ್ಳಿ ಬೆಲೆಯಲ್ಲಿ ಗಣನೀಯ ಏರಿಕೆ ಕಂಡ ಹಿನ್ನೆಲೆಯಲ್ಲಿ ಎಚ್ಚೆತ್ತ ಕೇಂದ್ರ ಸರ್ಕಾರ, ಈರುಳ್ಳಿ ದಾಸ್ತಾನು ಸಂಗ್ರಹಕ್ಕೆ ಮಿತಿ ವಿಧಿಸಿದೆ.

Govt imposes stock limit on onion traders to check prices
ಸಂಗ್ರಹ ಚಿತ್ರ

ನವದೆಹಲಿ:ಈರುಳ್ಳಿ ಬೆಲೆಯಲ್ಲಿ ಗಣನೀಯ ಏರಿಕೆ ಕಂಡ ಹಿನ್ನೆಲೆಯಲ್ಲಿ ಅದಕ್ಕೆ ಕಡಿವಾಣ ಹಾಕುವುದಕ್ಕಾಗಿ ದಾಸ್ತಾನು ಸಂಗ್ರಹ ಮಿತಿಯನ್ನು ಡಿ.31 ವರೆಗೆ ವಿಸ್ತರಣೆ ಮಾಡಿ ಕೇಂದ್ರ ಸರ್ಕಾರವು ಆದೇಶ ಹೊರಡಿಸಿದೆ.

ಚಿಲ್ಲರೆ ವ್ಯಾಪಾರಿಗಳು ಈರುಳ್ಳಿಯನ್ನು ಕೇವಲ 2 ಟನ್​​ ವರೆಗೆ ಮಾತ್ರ ಸಂಗ್ರಹಿಸಬಹುದು. ಆದರೆ, ಸಗಟು ವ್ಯಾಪಾರಿಗಳು 25 ಟನ್​​ಗಳ ವರೆಗೆ ಸಂಗ್ರಹಿಸಿ ಇಡಲು ಅವಕಾಶವಿದೆ ಎಂದು ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ಲೀನಾ ನಂದನ್ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಸಂಗ್ರಹ ಚಿತ್ರ

ಏರುತ್ತಿರುವ ಈರುಳ್ಳಿ ಬೆಲೆಯನ್ನು ನಿಯಂತ್ರಿಸಲು ಮತ್ತು ದೇಶೀಯ ಸರಕುಗಳ ಲಭ್ಯತೆ ಸುಧಾರಿಸಲು ಹಾಗೂ ಸ್ಥಳೀಯ ಮಾರುಕಟ್ಟೆಯಲ್ಲಿ ಹೆಚ್ಚುತ್ತಿರುವ ಬೇಡಿಕೆಯನ್ನು ತಣಿಸುವ ಸಲುವಾಗಿ ಕೇಂದ್ರ ಸರ್ಕಾರವು ಡಿಸೆಂಬರ್ 31 ರವರೆಗೆ ಚಿಲ್ಲರೆ ಮತ್ತು ಸಗಟು ವ್ಯಾಪಾರಿಗಳಿಗೆ ಸ್ಟಾಕ್ ಹೋಲ್ಡಿಂಗ್ (ದಾಸ್ತಾನು ಸಂಗ್ರಹ) ಮಿತಿಯನ್ನು ವಿಧಿಸಿದೆ ಎಂದು ಅವರು ತಿಳಿಸಿದ್ದಾರೆ.

ಒಂದು ಕಡೆ ಸುರಿದ ಸತತ ಮಳೆಯ ಪರಿಣಾಮ ಈರುಳ್ಳಿ ಬೆಳೆ ನಾಶಗೊಂಡ ಹಿನ್ನೆಲೆ ಕಳೆದ ಕೆಲವು ದಿನಗಳಿಂದ ಈರುಳ್ಳಿ ಬೆಲೆ ಕೆ.ಜಿಗೆ 75 ರೂ.ಗೂ ತಲುಪಿದರೆ, ಮತ್ತೊಂದೆಡೆ ರಫ್ತು ಹೆಚ್ಚಾಗಿದ್ದರಿಂದ ಈರುಳ್ಳಿ ಲಭ್ಯತೆಗೆ ಕೊರತೆ ಉಂಟಾಗಿದೆ ಎನ್ನಲಾಗುತ್ತಿದೆ.

ಸಂಗ್ರಹ ಚಿತ್ರ

ಗ್ರಾಹಕ ವ್ಯವಹಾರಗಳ ಸಚಿವ ಪಿಯೂಷ್ ಗೋಯಲ್ ಅವರು ಈ ಬಗ್ಗೆ ಟ್ವೀಟ್ ಮಾಡಿ, ಏರುತ್ತಿರುವ ಈರುಳ್ಳಿ ಬೆಲೆಗಳನ್ನು ನಿಯಂತ್ರಿಸಲು ಮತ್ತು ಹೋರ್ಡಿಂಗ್ ಅನ್ನು ನಿಗ್ರಹಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮೂರನೇ ಹೆಜ್ಜೆ ಇಟ್ಟಿದೆ ಎಂದಿದ್ದಾರೆ.

ಕೆ.ಜಿ.ಗೆ 10-20 ರೂ. ಇದ್ದಂತಹ ಈರುಳ್ಳಿ ಬೆಲೆ ಕಳೆದ 10 ದಿನಗಳಿಂದ ಏರಿಕೆ ಕಂಡು ಕೆ.ಜಿ.ಗೆ 75 ರೂ. ಮುಟ್ಟಿದೆ. ಮುಂದಿನ ದಿನಗಳಲ್ಲಿ ಈ ಬೆಲೆ ಇನ್ನೂ ಹೆಚ್ಚಾಗಬಹುದು ಎಂದು ಅಂದಾಜು ಮಾಡಲಾಗಿದೆ.

ABOUT THE AUTHOR

...view details