ನವದೆಹಲಿ:ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಳ್ವಿಕೆ ಹಾಗೂ ಸರ್ಕಾರ ರಚನೆಯಲ್ಲಿ ಉಂಟಾದ ಗೊಂದಲದ ಬಗ್ಗೆ ಗೃಹ ಸಚಿವ ಅಮಿತ್ ಶಾ ಸುದ್ದಿಸಂಸ್ಥೆಯೊಂದಿಗೆ ನಡೆಸಿದ ಸಂದರ್ಶನದಲ್ಲಿ ಸ್ಪಷ್ಟನೆ ನೀಡಿದ್ದಾರೆ.
ಈವರೆಗೂ ಯಾವುದೇ ರಾಜ್ಯದಲ್ಲೂ ಸರ್ಕಾರ ರಚನೆಗೆ 18 ದಿನಗಳ ಕಾಲಾವಕಾಶ ನೀಡಿರಲಿಲ್ಲ. ಇಲ್ಲಿ ಶಿವಸೇನೆ ಅಥವಾ ಕಾಂಗ್ರೆಸ್-ಎನ್ಸಿಪಿ ಸರ್ಕಾರ ರಚನೆಗೆ ಹಕ್ಕುಮಂಡಿಸಬಹುದಿತ್ತು. ಈಗಲೂ ಮ್ಯಾಜಿಕ್ ನಂಬರ್ ಹೊಂದಿರುವ ಯಾವುದೇ ಪಕ್ಷ ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಬಹುದು, ರಾಜ್ಯಪಾಲರು ಯಾವುದೇ ಪಕ್ಷಕ್ಕೂ ಈ ವಿಚಾರದಲ್ಲಿ ನಿರಾಕರಿಸಿಲ್ಲ ಎಂದು ಅಮಿತ್ ಶಾ ಹೇಳಿದ್ದಾರೆ.
ಸುದ್ದಿಸಂಸ್ಥೆಗೆ ಸಂದರ್ಶನ ನೀಡಿದ ಗೃಹ ಸಚಿವ ಅಮಿತ್ ಶಾ ಮಹಾರಾಷ್ಟ್ರ ಸರ್ಕಾರ ರಚನೆಗೆ ಎಲ್ಲ ಪಕ್ಷಕ್ಕೂ ಕಾಲಾವಕಾಶ ದೊರೆತಿತ್ತು. ಎಲ್ಲ ತಿಳಿದುಕೊಂಡಿರುವ ಹಿರಿಯ ವಕೀಲ ಕಪಿಲ್ ಸಿಬಲ್ ಅತ್ಯಂತ ಸಿಲ್ಲಿಯಾಗಿ ನಮಗೆ ಅವಕಾಶ ದೊರೆತಿಲ್ಲ ಎಂದಿರುವುದು ಸರಿಯಲ್ಲ ಎಂದು ಅಮಿತ್ ಶಾ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.
ಶಿವಸೇನೆ ಮೈತ್ರಿ ಬಗ್ಗೆ ಶಾ ಮಾತು:ಚುನಾವಣೆಗೂ ಮುನ್ನ ಪ್ರಧಾನಿ ಮೋದಿ ಹಾಗೂ ನಾನು ಹಲವಾರು ಬಾರಿ ಶಿವಸೇನೆಯ ಜೊತೆಗಿನ ಮೈತ್ರಿ ಬಗ್ಗೆ ಮಾತನಾಡಿದ್ದೆವು. ಒಂದು ವೇಳೆ ಬಿಜೆಪಿ - ಶಿವಸೇನೆ ಮೈತ್ರಿ ಚುನಾವಣೆ ಗೆದ್ದರೆ ದೇವೇಂದ್ರ ಫಡ್ನವಿಸ್ ಅವರೇ ಸಿಎಂ ಆಗಲಿದ್ದಾರೆ ಎಂದು ನಾವು ಹಲವಾರು ಬಾರಿ ಹೇಳಿದ್ದೆವು. ಆ ವೇಳೆ ಯಾರೂ ಇದನ್ನು ವಿರೋಧಿಸಿರಲಿಲ್ಲ. ಆದರೆ, ಗೆದ್ದ ತಕ್ಷಣ ಶಿವಸೇನೆ ತಮ್ಮ ಬೇಡಿಕೆಯೊಂದಿಗೆ ಬಂದಿದ್ದಾರೆ ಎಂದು ಅಮಿತ್ ಶಾ ಹೇಳಿದ್ದಾರೆ.