ನವದೆಹಲಿ/ಬೆಂಗಳೂರು:ಭಾರತದ ರೈತಾಪಿ ವರ್ಗ ಪ್ರಧಾನವಾಗಿ ಅವಲಂಬಿಸಿರುವ ನೈಋತ್ಯ ಮುಂಗಾರು ಜೂನ್ 4ರಂದು ಕೇರಳ ಪ್ರವೇಶಿಸುವ ನಿರೀಕ್ಷೆಯಿದೆ ಎಂದು ದೇಶದ ಏಕೈಕ ಖಾಸಗಿ ಹವಾಮಾನ ಮುನ್ಸೂಚನಾ ಸಂಸ್ಥೆ ಸ್ಕೈಮೆಟ್ ತಿಳಿಸಿದೆ.
ಈ ಬಾರಿ ದೇಶದಲ್ಲಿ ವಾಡಿಕೆಗಿಂತ ಕಡಿಮೆ ಪ್ರಮಾಣದಲ್ಲಿ ಮಳೆಯಾಗುವ ಸಾಧ್ಯತೆ ಇದ್ದು, ಶೇ 93 ರಷ್ಟು ಮಳೆಯಾಗಲಿದೆ. ಎಲ್- ನೀನೊ (ಸಮುದ್ರ ತಾಪಮಾನದಲ್ಲಿ ಅಸಹಜ ಹೆಚ್ಚಳ) ಪರಿಣಾಮದಿಂದ ಮಳೆ ಕಡಿಮೆಯಾಗಲಿದೆ. ಶೇ 15ರಷ್ಟು ಬರಗಾಲದ ಛಾಯೆ ಆವರಿಸಲಿದೆ ಎಂದು ಮುನ್ನೆಚ್ಚರಿಕೆ ನೀಡಿದೆ.
ಸಾಮಾನ್ಯವಾಗಿ ಜೂನ್ 1ರಂದು ಕೇರಳಕ್ಕೆ ಮುಂಗಾರು ಮಳೆ ಪ್ರವೇಶವಾಗುತ್ತದೆ. ಮೇ 22ರ ವೇಳೆಗೆ ಅಂಡಮಾನ್ ಹಾಗೂ ನಿಕೋಬಾರ್ ದ್ವೀಪಗಳಿಗೆ ಮುಂಗಾರು ಪ್ರವೇಶಿಸಲಿದೆ. ನೈಋತ್ಯ ಮುಂಗಾರು ಪ್ರವೇಶ ಎರಡು ಮೂರು ದಿನ ಹೆಚ್ಚು ಕಡಿಮೆಯಾಗಲಿದೆ ಎಂದು ತಿಳಿಸಿದೆ.
ಸ್ಕೈಮೆಟ್ ಊಹೆಯನ್ವಯ, ಶೇ 96ರಿಂದ ಶೇ 104ರಷ್ಟು ದೀರ್ಘಾವಧಿ ಸರಾಸರಿಯ (ಎಲ್ಪಿಎ) ಮಳೆಯ ಪ್ರಮಾಣ ಶೇ 30ರಷ್ಟು ಇರಲಿದೆ. ಶೇ 90ರಿಂದ ಶೇ 95 ಸುರಿಯುವ ಎಲ್ಪಿಎ ಸಾಮಾನ್ಯಕ್ಕಿಂತ ಕಡಿಮೆ ಹಾಗೂ ಶೇ 15ರಷ್ಟು ಬರದ ಛಾಯೆ ಮೂಡಲಿದೆ. ಸರಾಸರಿ ಮಳೆಯ ಪ್ರಮಾಣ ಶೇ 90ಕ್ಕಿಂತ ಕಡಿಮೆ ಆಗಲಿದೆ ಎಂದು ತಿಳಿಸಿದೆ.