ಮುಂಬೈ( ಮಹಾರಾಷ್ಟ್ರ): ಮುಂಬೈನ ಹಲವೆಡೆ ಧಾರಾಕಾರ ಮಳೆಯಾಗುತ್ತಿದೆ. ಈ ಹಿನ್ನೆಲೆ ರಸ್ತೆಗಳಲ್ಲಿ ಕಲುಷಿತ ನೀರು ಮಳೆನೀರಿನ ಜೊತೆ ಜಮಾವಣೆಯಾಗ್ತಿದೆ. ಮಳೆನೀರಲ್ಲಿ ಲೆಪ್ಟೊಸ್ಪೈರೋಸಿಸ್ ಎಂಬ ಬ್ಯಾಕ್ಟೀರಿಯ ಇರಬಹುದು. ಹೀಗಾಗಿ ಮಳೆನೀರಿನಲ್ಲಿ ನಡೆವಾಗ ಕಾಲುಗಳಲ್ಲಿ ಗಾಯಗಳಿರುವ ಜನರು ಲೆಪ್ಟೊಸ್ಪೈರೋಸಿಸ್ ಬಗ್ಗೆ ಎಚ್ಚರ ವಹಿಸುವುದು ಅನಿವಾರ್ಯವಾಗಿದೆ. ಮಳೆನೀರಲ್ಲಿ ನಡೆದ 24 ರಿಂದ 72 ಗಂಟೆಗಳ ಒಳಗೆ ಲೆಪ್ಟೊಸ್ಪೈರೋಸಿಸ್ ಇರುವವರು ವೈದ್ಯಕೀಯ ಚಿಕಿತ್ಸೆ ಪಡೆಯಬೇಕು ಎಂದು ಪುರಸಭೆಯ ಆರೋಗ್ಯ ಇಲಾಖೆಯ ಕಾರ್ಯನಿರ್ವಾಹಕ ಆರೋಗ್ಯ ಅಧಿಕಾರಿ ಡಾ.ಮಂಗಲ ಗೋಮರೆ, ಸಲಹೆ ನೀಡುತ್ತಾರೆ.
ಮಳೆ ನೀರಿನಲ್ಲಿ ನಡೆಯುವಾಗ 'ಲೆಪ್ಟೊಸ್ಪೈರೋಸಿಸ್' ಬಗ್ಗೆ ಎಚ್ಚರವಿರಲಿ!
ಮುಂಬೈ ಸೇರಿದಂತೆ ದೇಶದ ಹಲವೆಡೆ ಈಗಾಗಲೇ ಮುಂಗಾರು ಮಳೆ ಆರಂಭವಾಗಿದೆ. ಹೆಚ್ಚು ಮಳೆಯಾಗುತ್ತಿರುವ ಹಿನ್ನೆಲೆ ಜನರು ರಸ್ತೆಗಳಲ್ಲಿ ಹರಿವ ಮಳೆನೀರಿನಲ್ಲಿ ನಡೆದು ಮನೆ ಸೇರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಮಯದಲ್ಲಿ ಕಾಲುಗಳಲ್ಲಿ ಗಾಯಗಳಾಗಿರುವವರು ಲೆಪ್ಟೊಸ್ಪೈರೋಸಿಸ್ ಬಗ್ಗೆ ಜಾಗರೂಕರಾಗಿರಬೇಕು. ಏಕೆಂದರೆ ಮಳೆ ನೀರಿನ ಮೂಲಕ ಲೆಪ್ಟೊಸ್ಪೈರೋಸಿಸ್ ಬ್ಯಾಕ್ಟೀರಿಯಾ ದೇಹವನ್ನು ಸೇರಿ ದೇಹಕ್ಕೆ ಹಾನಿಯುಂಟು ಮಾಡುವ ಸಂಭವ ಹೆಚ್ಚಿರುತ್ತದೆ.
ಲೆಪ್ಟೊಸ್ಪೈರೋಸಿಸ್ ಸಾಂಕ್ರಾಮಿಕವಲ್ಲ. ನಗರ ಪ್ರದೇಶಗಳಲ್ಲಿ, ಇಲಿಗಳು, ನಾಯಿಗಳು ಮುಂತಾದ ಪ್ರಾಣಿಗಳಲ್ಲಿ ಲೆಪ್ಟೊಸ್ಪೈರಾ ಕಂಡು ಬರುತ್ತದೆ. ಸೋಂಕಿತ ಪ್ರಾಣಿಗಳ ಮೂತ್ರದಿಂದ ಕಲುಷಿತಗೊಂಡ ನೀರು ಅಥವಾ ಮಣ್ಣಿನ ಮೂಲಕ ಮನುಷ್ಯರು ಸೋಂಕಿಗೆ ಒಳಗಾಗುತ್ತಾರೆ. ಗಾಯಗೊಂಡ ಚರ್ಮ, ಕಣ್ಣು ಮತ್ತು ಮೂಗಿನ ಮೂಲಕ ಸೋಂಕು ಹರಡುತ್ತದೆ. ಮಳೆಗಾಲ ಮತ್ತು ಪ್ರವಾಹದ ಸಮಯದಲ್ಲಿ ಅಥವಾ ಭಾರಿ ಮಳೆಯ ನಂತರ ಜನರು ಕಲುಷಿತ ನೀರಿನಲ್ಲಿ ನಡೆಯಬೇಕಾದರೆ, ರೋಗದ ಸೂಕ್ಷ್ಮಜೀವಿಗಳು ದೇಹದ ಮೇಲಿನ ಗಾಯಗಳ ಮೂಲಕ ನಮ್ಮ ದೇಹವನ್ನು ಪ್ರವೇಶಿಸಬಹುದು. ಮಳೆಗಾಲದಲ್ಲಿ ಯಾವುದೇ ಜ್ವರವು ಡೆಂಘಿ, ಮಲೇರಿಯಾ ಅಥವಾ ಲೆಪ್ಟೊಸ್ಪಿರೋಸಿಸ್ ಆಗಿರಬಹುದು. ಆದ್ದರಿಂದ, ಜ್ವರವನ್ನು ನಿರ್ಲಕ್ಷಿಸುವ ಬದಲು ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಬಹಳ ಮುಖ್ಯ.
ಮಳೆ ನೀರಿನ ಸಂಪರ್ಕಕ್ಕೆ ಬಂದ ಜನರು ತಕ್ಷಣ ವೈದ್ಯಕೀಯ ಸಲಹೆಯಂತೆ ಔಷಧಗಳನ್ನು ತೆಗೆದುಕೊಳ್ಳಬೇಕು ಎಂದು ಡಾ.ಗೋಮರೆ ಮನವಿ ಮಾಡಿದರು. ಈ ಕಾಯಿಲೆಯನ್ನು ಮೊದಲ ಹಂತದಲ್ಲೇ ಪತ್ತೆ ಮಾಡಿ ಔಷಧಗಳನ್ನು ತೆಗೆದುಕೊಳ್ಳುವುದರಿಂದ 7 ದಿನಗಳಲ್ಲಿ ಗುಣಪಡಿಸಬಹುದು.