ಕರ್ನಾಟಕ

karnataka

ಆಪ್​ vs ಬಿಜೆಪಿ.. ದೆಹಲಿ ವಿಧಾನಸಭೆಯಲ್ಲಿ ಅಹೋರಾತ್ರಿ ಪ್ರತಿಭಟನೆ

By

Published : Aug 30, 2022, 9:31 AM IST

ನೋಟು ಅಮಾನ್ಯೀಕರಣದ ವೇಳೆ ಕಪ್ಪುಹಣವನ್ನು ಬಿಳಿ ಮಾಡಿದ ಆರೋಪದ ಮೇಲೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ರಾಜೀನಾಮೆ ನೀಡಬೇಕೆಂದು ಆಪ್ ಶಾಸಕರು ಒತ್ತಾಯಿಸುತ್ತಿದ್ದಾರೆ.

Overnight protests continue at Delhi assembly
ದೆಹಲಿ ವಿಧಾನಸಭೆಯಲ್ಲಿ ಅಹೋರಾತ್ರಿ ಪ್ರತಿಭಟನೆ

ನವದೆಹಲಿ: ಆಡಳಿತಾರೂಢ ಆಮ್ ಆದ್ಮಿ ಪಕ್ಷ ಮತ್ತು ಪ್ರತಿಪಕ್ಷ ಬಿಜೆಪಿ ಎರಡೂ ಪಕ್ಷಗಳು ದಿಲ್ಲಿಯ ವಿಧಾನಸಭಾ ಭವನದ ಆವರಣದಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಇಬ್ಬರೂ ಪರಸ್ಪರ ಭ್ರಷ್ಟಾಚಾರದ ಆರೋಪ ಮಾಡುತ್ತಿದ್ದಾರೆ. ಎಎಪಿ ಶಾಸಕರು ಮಹಾತ್ಮಾ ಗಾಂಧಿಯವರ ಸ್ಮಾರಕದ ಕೆಳಗೆ ಧರಣಿ ಕೂತರೆ, ಬಿಜೆಪಿ ಶಾಸಕರು ದೆಹಲಿ ವಿಧಾನಸಭಾ ಮೈದಾನದಲ್ಲಿ ಸ್ವಾತಂತ್ರ್ಯ ಹೋರಾಟಗಾರರಾದ ಭಗತ್ ಸಿಂಗ್, ರಾಜ್ ಗುರು ಮತ್ತು ಸುಖದೇವ್ ಅವರ ಪ್ರತಿಮೆಗಳ ಬಳಿ ಧರಣಿ ಆರಂಭಿಸಿದ್ದಾರೆ.

2016ರಲ್ಲಿ ನೋಟು ಅಮಾನ್ಯೀಕರಣದ ವೇಳೆ ಕಪ್ಪುಹಣವನ್ನು ಬಿಳಿ ಮಾಡಿದ ಆರೋಪದ ಮೇಲೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ರಾಜೀನಾಮೆ ನೀಡಬೇಕೆಂದು ಆಪ್ ಶಾಸಕರು ಒತ್ತಾಯಿಸುತ್ತಿದ್ದಾರೆ. ಎಎಪಿ ನಾಯಕ ಅತಿಶಿ ಮಾತನಾಡಿ, 2016 ರಲ್ಲಿ ಅವರು ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ (ಕೆವಿಐಸಿ) ಅಧ್ಯಕ್ಷರಾಗಿದ್ದಾಗ ಸಕ್ಸೇನಾ 1,400 ಕೋಟಿ ರೂಪಾಯಿ ಮೌಲ್ಯದ ನೋಟುಗಳನ್ನು ಬದಲಾಯಿಸುವಂತೆ ತನ್ನ ಉದ್ಯೋಗಿಗಳ ಮೇಲೆ ಒತ್ತಡ ಹೇರಿದ್ದರು ಎಂದು ಆರೋಪಿಸಿದ್ದಾರೆ.

ಸಕ್ಸೇನಾ ಅವರು 2016ರಲ್ಲಿ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ಅಧ್ಯಕ್ಷರಾಗಿದ್ದಾಗ ನೋಟು ಅಮಾನ್ಯೀಕರಣದ ಸಂದರ್ಭದಲ್ಲಿ 1,400 ಕೋಟಿ ರೂಪಾಯಿ ಮೌಲ್ಯದ ಕಪ್ಪುಹಣವನ್ನು ಬಿಳುಪುಗೊಳಿಸುವ ಹಗರಣವನ್ನು ಮಾಡಿದ್ದರು. ಈ ಕುರಿತು ತನಿಖೆ ನಡೆಸುವಂತೆ ನಾವು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ಒತ್ತಾಯಿಸುತ್ತಿದ್ದೇವೆ ಎಂದು ಅತಿಶಿ ಹೇಳಿದ್ದಾರೆ.

ಲೆಫ್ಟಿನೆಂಟ್​ ಜನರಲ್​​ರನ್ನು ಹುದ್ದೆಯಿಂದ ವಜಾಗೊಳಿಸಬೇಕು:ಸಕ್ಸೇನಾ ಅವರನ್ನು ದೆಹಲಿ ಎಲ್-ಜಿ ಹುದ್ದೆಯಿಂದ ವಜಾಗೊಳಿಸಬೇಕು. ಈ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ "ಸಕ್ಸೇನಾ ಪ್ರಭಾವದಲ್ಲಿ ಕಪ್ಪು ಹಣವನ್ನು ಬಿಳುಪುಗೊಳಿಸಲಾಗಿದೆ" ಎಂದು ಸಾಕ್ಷಿಯೊಬ್ಬರು ಒಪ್ಪಿಕೊಂಡಿದ್ದಾರೆ ಕೂಡ. ಜಾರಿ ನಿರ್ದೇಶನಾಲಯ (ಇಡಿ) ಮತ್ತು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ, 2002 ಈ ಬಗ್ಗೆ ಪರಿಶೀಲಿಸಬೇಕು. ಸಿಬಿಐ ಮತ್ತು ಇಡಿ ಸಕ್ಸೇನಾ ಅವರು ಈ ಹಿಂದೆ ಕೆಲಸ ಮಾಡಿದ ಪ್ರತಿ ಸ್ಥಳದಲ್ಲೂ ದಾಳಿ ನಡೆಸಬೇಕು. ತನಿಖೆ ಮುಗಿಯುವವರೆಗೆ ಅವರನ್ನು ಅವರ ಸ್ಥಾನದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.

ಕೇಜ್ರಿವಾಲ್​ - ಸಿಸೋಡಿಯಾ ರಾಜೀನಾಮೆಗೆ ಒತ್ತಾಯ:2021-22ರ ಅಬಕಾರಿ ನೀತಿಯಲ್ಲಿನ ಭ್ರಷ್ಟಾಚಾರದ ಬಗ್ಗೆ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ರಾಜೀನಾಮೆಗೆ ಬಿಜೆಪಿ ಶಾಸಕರು ಒತ್ತಾಯಿಸಿದರು. "ಸಿಸೋಡಿಯಾ ವಿರುದ್ಧ ಸಿಬಿಐ 2021-22ರ ಅಬಕಾರಿ ನೀತಿಯಲ್ಲಿ ಭ್ರಷ್ಟಾಚಾರದ ಆರೋಪ ಹೊರಿಸಿತ್ತು, ಅದನ್ನು ಎಎಪಿ ಆಡಳಿತವು ತರುವಾಯ ಹಿಂತೆಗೆದುಕೊಂಡಿತ್ತು. ದೆಹಲಿಯ ಕೋರ್​ನಲ್ಲಿ ಭ್ರಷ್ಟಾಚಾರ ನಡೆದಿದೆ. ನೀತಿಯೊಂದಿಗೆ ಎಲ್ಲವೂ ಸರಿಯಾಗಿದ್ದರೆ, ಸರ್ಕಾರ ಅದನ್ನು ಏಕೆ ಹಿಂತೆಗೆದುಕೊಂಡಿತು? ಈ ಕುರಿತು ಅರವಿಂದ್ ಕೇಜ್ರಿವಾಲ್ ಪ್ರತಿಕ್ರಿಯೆ ನೀಡಬೇಕು ಎಂದು ಬಿಜೆಪಿ ಶಾಸಕ ರಾಮ್‌ವೀರ್ ಸಿಂಗ್ ಬಿಧುರಿ ತಿಳಿಸಿದ್ದಾರೆ.

ಎಎಪಿ ಪ್ರತಿಭಟನೆ ಮತ್ತು ಸಕ್ಸೇನಾ ರಾಜೀನಾಮೆ ಬೇಡಿಕೆಗೆ ಪ್ರತಿಕ್ರಿಯಿಸಿದ ಮತ್ತೋರ್ವ ನಾಯಕ, ಬಿಜೆಪಿ ಶಾಸಕ ವಿಜೇಂದರ್ ಗುಪ್ತಾ ಮಾತನಾಡಿ, ಭ್ರಷ್ಟಾಚಾರದಲ್ಲಿ ಸಿಕ್ಕಿಹಾಕಿಕೊಂಡಿರುವುದೇ ಅವರ ಭಯಕ್ಕೆ ಕಾರಣ, ಬೇರೇನೂ ಅಲ್ಲ. ದೆಹಲಿಯ ಅಬಕಾರಿ ನೀತಿಯಾಗಲಿ ಅಥವಾ ದೆಹಲಿ ಶಿಕ್ಷಣವೇ ಆಗಲಿ ಭ್ರಷ್ಟಾಚಾರ ನಡೆದಿದೆ. ರಾಷ್ಟ್ರದಲ್ಲಿ ಭ್ರಷ್ಟ ಆಡಳಿತವಿದ್ದರೆ ಅದು ದೆಹಲಿಯಲ್ಲಿ ಕೇಜ್ರಿವಾಲ್ ಆಡಳಿತ. ಭ್ರಷ್ಟಾಚಾರದ ಬಗ್ಗೆ ಮಾತನಾಡುವುದನ್ನು ಹತ್ತಿಕ್ಕಲು ನಿತ್ಯ ಒಂದೊಂದು ಕಥೆ ಕಟ್ಟುತ್ತಿದ್ದಾರೆ ಎಂದರು.

ಇದನ್ನೂ ಓದಿ :ಪ್ರವಾದಿ ವಿರುದ್ಧ ಹೇಳಿಕೆ ನೀಡಿದ ಬಿಜೆಪಿ ಶಾಸಕ ರಾಜಾ ಸಿಂಗ್​ ವಿರುದ್ಧ ಆಕ್ರೋಶ

ABOUT THE AUTHOR

...view details