ಕರ್ನಾಟಕ

karnataka

By

Published : Nov 1, 2021, 4:34 PM IST

Updated : Nov 1, 2021, 5:18 PM IST

ETV Bharat / bharat

ಮೋದಿ ರ್‍ಯಾಲಿಯಲ್ಲಿ ಸರಣಿ ಬಾಂಬ್‌ ಸ್ಫೋಟ ಪ್ರಕರಣ: ನಾಲ್ವರಿಗೆ ಮರಣದಂಡನೆ ಶಿಕ್ಷೆ

2014ರ ಲೋಕಸಭೆ ಚುನಾವಣೆಯ ಸಂಬಂಧ ಪ್ರಧಾನಿ ನರೇಂದ್ರ ಮೋದಿ 2013ರಲ್ಲಿ ಪಾಟ್ನಾದ ಗಾಂಧಿ ಮೈದಾನದಲ್ಲಿ ಬೃಹತ್‌ ಚುನಾವಣಾ ರ್‍ಯಾಲಿ ನಡೆಸುತ್ತಿದ್ದ ವೇಳೆ ಸರಣಿ ಬಾಂಬ್‌ ಸ್ಫೋಟ ಸಂಭವಿಸಿತ್ತು. ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಅಪರಾಧಿಗಳಿಗೆ ಇವತ್ತು ಎನ್‌ಐಎ ಕೋರ್ಟ್‌ ಶಿಕ್ಷೆಯ ಪ್ರಮಾಣ ಪ್ರಕಟಿಸಿದೆ.

2013 Patna Gandhi Maidan serial blasts
ಪ್ರಧಾನಿ ಮೋದಿ ಭಾಗವಹಿಸಿದ್ದ ಗಾಂಧಿ ಮೈದಾನದಲ್ಲಿ ಸರಣಿ ಸ್ಫೋಟ ಪ್ರಕರಣ; 9 ಅಪರಾಧಿಗಳಿಗೆ ಶಿಕ್ಷೆ ಪ್ರಕಟ

ಪಾಟ್ನಾ(ಬಿಹಾರ):2013ರಲ್ಲಿನರೇಂದ್ರ ಮೋದಿಪಾಟ್ನಾ ಗಾಂಧಿ ಮೈದಾನದಲ್ಲಿ ನಡೆಸುತ್ತಿದ್ದ ಚುನಾವಣಾ ರ್‍ಯಾಲಿಯಲ್ಲಿ ನಡೆದ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿದ್ದ ಅಪರಾಧಿಗಳಿಗೆ ಇಂದು ವಿಶೇಷ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಕೋರ್ಟ್‌ ಶಿಕ್ಷೆಯ ಪ್ರಮಾಣ ಪ್ರಕಟಿಸಿದೆ.

ದೇಶದ ಗಮನ ಸೆಳೆದ ಈ ಪ್ರಕರಣದಲ್ಲಿ ಭಾಗಿಯಾಗಿದ್ದ 9 ಅಪರಾಧಿಗಳ ಪೈಕಿ ನಾಲ್ವರಿಗೆ ಮರಣದಂಡನೆ, ಇಬ್ಬರಿಗೆ ಜೀವಾವಧಿ, ಇಬ್ಬರಿಗೆ 10 ವರ್ಷ ಜೈಲು ಹಾಗೂ ಓರ್ವನಿಗೆ 7 ವರ್ಷ ಶಿಕ್ಷೆಯನ್ನು ಕೋರ್ಟ್‌ ಘೋಷಿಸಿತು.

2013ರಲ್ಲಿ ಗಾಂಧಿ ಮೈದಾನದಲ್ಲಿ ನಡೆದಿದ್ದ ಸರಣಿ ಬಾಂಬ್ ಸ್ಫೋಟ ಪ್ರಕರಣದ ಒಟ್ಟು 10 ಮಂದಿಯಲ್ಲಿ ಓರ್ವನನ್ನು ಖುಲಾಸೆಗೊಳಿಸಿ 9 ಮಂದಿಯನ್ನು ಅಪರಾಧಿಗಳೆಂದು ವಿಶೇಷ ಎನ್‌ಐಎ ನ್ಯಾಯಾಲಯ ಅ. 27 ರಂದು ತೀರ್ಪು ನೀಡಿತ್ತು. ನ್ಯಾಯಾಧೀಶರಾದ ಗುರ್ವಿಂದರ್ ಮೆಹ್ರೋತ್ರಾ ತೀರ್ಪು ನೀಡಿದ್ದರು.

ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಅವರ 'ಹುಂಕಾರ್' ಚುನಾವಣಾ ರ್‍ಯಾಲಿ ಸ್ಥಳದಲ್ಲಿ 2013ರಲ್ಲಿ ಸರಣಿ ಬಾಂಬ್‌ ಸ್ಫೋಟ ನಡೆದಿತ್ತು. ಈ ಪ್ರಕರಣದಲ್ಲಿ ಸಾಕ್ಷ್ಯಾಧಾರಗಳ ಕೊರತೆಯಿಂದ ಓರ್ವನನ್ನು ಪ್ರಕರಣದಿಂದ ಕೈಬಿಡಲಾಗಿದೆ. ಪ್ರಕರಣದ ತನಿಖೆಯ ವೇಳೆ ಎನ್‌ಐಎ 11 ಜನರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿತ್ತು. ಇವರಲ್ಲಿ ಒಬ್ಬರು ಅಪ್ರಾಪ್ತರಾಗಿದ್ದು, ಬಾಲನ್ಯಾಯ ಮಂಡಳಿಗೆ ಕಳುಹಿಸಲಾಗಿತ್ತು. ಉಳಿದವರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು.

ಇಮ್ತಿಯಾಜ್ ಅನ್ಸಾರಿ, ಮುಜಿಬುಲ್ಲಾ, ಹೈದರ್ ಅಲಿ, ಫಿರೋಜ್ ಅಸ್ಲಾಂ, ಒಮರ್ ಅನ್ಸಾರಿ, ಇಫ್ತಿಕಾರ್, ಅಹ್ಮದ್ ಹುಸೇನ್, ಉಮೈರ್ ಸಿದ್ದಿಕಿ ಮತ್ತು ಅಜರುದ್ದೀನ್ ಎಂಬುವರನ್ನು ತಪ್ಪಿತಸ್ಥರೆಂದು ನ್ಯಾಯಾಲಯ ಘೋಷಿಸಿದೆ. ಫಕ್ರುದ್ದೀನ್ ಎಂಬಾತನನ್ನು ಆರೋಪದಿಂದ ಖುಲಾಸೆಗೊಳಿಸಲಾಗಿದೆ ಎಂದು ತನಿಖಾ ಸಂಸ್ಥೆಯ ಪರವಾಗಿ ಹಾಜರಾಗಿದ್ದ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಲಾಲನ್ ಪ್ರಸಾದ್ ಸಿಂಗ್ ತಿಳಿಸಿದರು.

2013ರ ಅಕ್ಟೋಬರ್ 27ರಂದು ಗಾಂಧಿ ಮೈದಾನದಲ್ಲಿ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಲಾಗಿದ್ದ ನರೇಂದ್ರ ಮೋದಿ, ಅಲ್ಲಿ ನೆರೆದಿದ್ದ ಜನರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಬಿಜೆಪಿಯ 'ಹುಂಕಾರ್' ರ್‍ಯಾಲಿ ನಡೆಯುತ್ತಿದ್ದಾಗ ಸ್ಫೋಟ ಸಂಭವಿಸಿತ್ತು. ಈ ಸ್ಫೋಟ ಮತ್ತು ನಂತರದ ಕಾಲ್ತುಳಿತದಿಂದಾಗಿ 6 ಮಂದಿ ಸಾವನ್ನಪ್ಪಿ ಅನೇಕರು ಗಾಯಗೊಂಡಿದ್ದರು. ಸರಣಿ ಸ್ಫೋಟದ ಹೊಣೆಯನ್ನು ಯಾವುದೇ ಭಯೋತ್ಪಾದಕ ಸಂಘಟನೆ ವಹಿಸಿಕೊಂಡಿರಲಿಲ್ಲ.

Last Updated : Nov 1, 2021, 5:18 PM IST

ABOUT THE AUTHOR

...view details