ಬೆಂಗಳೂರು: ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (ಬಿಎಂಆರ್ಸಿಎಲ್) ನಮ್ಮ ಮೆಟ್ರೋದ ಪ್ರಯಾಣ ದರ ಹೆಚ್ಚಳ ಮಾಡಿದ್ದು, ಕೇವಲ ಸಾಮಾನ್ಯ ಜನರ ಅಸಮಾಧಾನಕ್ಕೆ ಮಾತ್ರ ಸೀಮಿತವಾಗದೇ ಅನೇಕ ಪ್ರತಿಭಟನೆ ಮತ್ತು ರಾಜಕೀಯ ಟೀಕೆಗೂ ಕಾರಣವಾಯಿತು. ಇದಾದ ಬಳಿಕ ದರ ಪರಿಷ್ಕರಣೆ ನಡೆಸಿದಾದರೂ ಗಣನೀಯ ಮಟ್ಟದಲ್ಲಿ ಇಳಿಕೆ ಕಂಡಿಲ್ಲ. ಇದರ ಪರಿಣಾಮವಾಗಿ ನಮ್ಮ ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ಗಮನಾರ್ಹ ಕುಸಿತ ಕಂಡಿದೆ ಎಂದು ಬಿಎಂಆರ್ಸಿಎಲ್ ಮೂಲಗಳು ತಿಳಿಸಿವೆ.
ಈ ಮೊದಲು ನಮ್ಮ ಮೆಟ್ರೋದಲ್ಲಿ ದಿನಕ್ಕೆ 8.5 ಲಕ್ಷ ಪ್ರಯಾಣಿಕರು ಸಂಚಾರ ನಡೆಸುತ್ತಿದ್ದರು. ಆದರೆ, ದರ ಏರಿಕೆ ಬಳಿಕ ಈ ಸಂಖ್ಯೆ ಅಂದಾಜು 6.3 ಲಕ್ಷಕ್ಕೆ ಇಳಿದಿದ್ದು, ಸುಮಾರು 2 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರ ಸಂಖ್ಯೆ ಕುಗ್ಗಿದೆ ಎನ್ನಲಾಗಿದೆ.
ಫೆ.8ರಂದು ಬಿಎಂಆರ್ಸಿಎಲ್ ಕೆಲವು ವಿಭಾಗದಲ್ಲಿ ಶೇ 100ರಷ್ಟು ಹಾಗೇ ಪೀಕ್ ಅವರ್ಗಳಲ್ಲಿ ಶೇ 5ರಷ್ಟು ಹೆಚ್ಚುವರಿ ಚಾರ್ಜ್ ವಿಧಿಸಿ ದರ ಹೆಚ್ಚಳ ಮಾಡಿತ್ತು. ಈ ನಡೆ ಸಾರ್ವಜನಿಕರ ಆಕ್ರೋಶಕ್ಕೆ ಎಡೆಮಾಡಿಕೊಟ್ಟಿತ್ತು. ಸಿಎಂ ಸಿದ್ದರಾಮಯ್ಯ ಅವರ ಮಧ್ಯಪ್ರವೇಶದಿಂದ ದರ ಇಳಿಕೆಗೆ ಬಿಎಂಆರ್ಸಿಎಲ್ ಮುಂದಾಯಿತು. ಆದರೂ, ಈ ಎಲ್ಲಾ ಹೊಂದಾಣಿಕೆಗಳು ಪ್ರಯಾಣಿಕರ ಸಂಖ್ಯೆ ಕುಸಿತ ತಡೆಯುವ ಪ್ರಯತ್ನಕ್ಕೆ ಫಲ ನೀಡಿಲ್ಲ.
ಪ್ರಯಾಣಿಕರ ದರ ಕುಸಿತ ಒಪ್ಪಿಕೊಂಡಿರುವ ಹಿರಿಯ ಬಿಎಂಆರ್ಸಿಎಲ್ ಅಧಿಕಾರಿಗಳು, ಮೆಟ್ರೋ ಪ್ರಯಾಣಿಕರಲ್ಲಿ 2.3 ಲಕ್ಷದಷ್ಟು ಕುಸಿತ ಕಂಡಿದ್ದು, ನಿರೀಕ್ಷಿಸಿದ ಆದಾಯವನ್ನು ಸಾಧಿಸಲು ಸಾಧ್ಯವಾಗಿಲ್ಲ. ಇದೀಗ ಫೆ.9 ದರ ಹೆಚ್ಚಳ ಜಾರಿಗಿಂತ ಮುಂಚಿದ್ದ ಆದಾಯದಷ್ಟೇ ಅಥವಾ ಅದಕ್ಕಿಂತ ಕಡಿಮೆಯಾಗಿದೆ ಎನ್ನಬಹುದು ಎಂದಿದ್ದಾರೆ.
ಈಟಿವಿ ಭಾರತ್ ಜೊತೆಗೆ ಮಾತನಾಡಿದ ಬಿಎಂಆರ್ಸಿಎಲ್ ಅಧಿಕಾರಿ ಯಶವಂತ್ ಚವಾಣ್, ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ಗಮನಾರ್ಹ ಪ್ರಮಾಣದಲ್ಲಿ ಕುಸಿತ ಕಂಡಿಲ್ಲ. ಮೆಟ್ರೋ ದರದ ಕುರಿತು ಚರ್ಚೆಗಳು ಸಾಗುತ್ತಿದ್ದು, ಮುಂದಿನ ದಿನಗಳಲ್ಲಿ ಈ ಕುರಿತು ನಿರ್ಧಾರ ಪ್ರಕಟಿಸಲಾಗುವುದು ಎಂದು ತಿಳಿಸಿದರು.
ರಾಜ್ಯ ಸರ್ಕಾರದತ್ತ ಬೊಟ್ಟು : ಮೆಟ್ರೋ ದರ ಹೆಚ್ಚಳವೂ ಪ್ರಯಾಣಿಕರ ಆಕ್ರೋಶದ ಹೊರತಾಗಿ ರಾಜಕೀಯ ಆರೋಪ- ಪ್ರತ್ಯಾರೋಪಗಳಿಗೆ ಗುರಿಯಾಗಿದೆ. ದರ ಹೆಚ್ಚಳಕ್ಕೆ ಕಾರಣ ಕರ್ನಾಟಕ ಸರ್ಕಾರ ಎಂದು ಸಂಸದ ಪಿಸಿ ಮೋಹನ್ ದೂರಿದ್ದಾರೆ. ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿದ ಅವರು, ಕರ್ನಾಟಕ ಕಾಂಗ್ರೆಸ್ ನಿರ್ವಹಣೆ ಲೋಪ ಬೆಂಗಳೂರು ಮೆಟ್ರೋ ಮೇಲೆ ಹಾನಿ ಮಾಡಿದೆ. ದರ ಹೆಚ್ಚಳದಿಂದ ಪ್ರಯಾಣಿಕರ ಸಂಖ್ಯೆ 6.26 ಲಕ್ಷಕ್ಕೆ ಕುಸಿದಿದೆ ಎಂದು ಆರೋಪಿಸಿದ್ದಾರೆ.
ಮೆಟ್ರೋ ದರ ಹೆಚ್ಚಳದ ಆರೋಪವನ್ನು ಸಿಎಂ ಸಿದ್ದರಾಮಯ್ಯ ಕೇಂದ್ರದತ್ತ ಬೊಟ್ಟು ಮಾಡಿದ್ದು, ರಾಜ್ಯ ಸರ್ಕಾರ ದರ ಪರಿಷ್ಕರಣೆ ಪ್ರಸ್ತಾಪ ಮಾಡಿದರೂ, ಅಂತಿಮ ನಿರ್ಧಾರ ಹೈ ಕೋರ್ಟ್ ನ್ಯಾಯಮೂರ್ತಿ ನೇತೃತ್ವದ ಕೇಂದ್ರ ಮಂಡಳಿಯದ್ದು ಎಂದರು. ಈ ದರ ಹೆಚ್ಚಳ ಕೇವಲ ರಾಜ್ಯ ಸರ್ಕಾರದ ನಿರ್ಧಾರವಲ್ಲ. ಇದನ್ನು ನಾವು ಪ್ರಸ್ತಾಪಿಸಿದರೂ ಇದಕ್ಕೆ ಕೇಂದ್ರ ಮಂಡಳಿ ಒಪ್ಪಿಗೆ ಅಗತ್ಯ ಎಂದಿದ್ದರು.
ದರ ಹೆಚ್ಚಳದ ವಿರುದ್ಧ ಜನ ಸಾಮಾನ್ಯರು ಹೆಚ್ಚಿನ ಆಕ್ರೋಶ ವ್ಯಕ್ತಪಡಿಸಿದ್ದು, ಮೆಟ್ರೋ ಸಾಮಾನ್ಯ ಜನರಿಗಲ್ಲ ಎಂದರು. ಅಷ್ಟೇ ಅಲ್ಲದೇ, ನೂರಾರು ವಿದ್ಯಾರ್ಥಿಗಳು, ಹಿರಿಯ ನಾಗರಿಕರು, ಬಿಎಂಸಿಎ ಸದಸ್ಯರ ಕೂಡ ಪ್ರತಿಭಟನೆ ಮಾಡಿ, ದರ ಹೆಚ್ಚಳವನ್ನು ಹಿಂಪಡೆಯುವಂತೆ ಆಗ್ರಹಿಸಿದ್ದರು.
ಜನಸಾಮಾನ್ಯರ ಆಕ್ರೋಶ : ಬಿಎಂಸಿಎ ಕಾರ್ಯಕರ್ತ ರಾಜೇಶ್ ಭಟ್, ಬಿಎಂಆರ್ಸಿಎಲ್ ವಿರುದ್ಧ ಟೀಕಿಸಿದ್ದು, ಮೆಟ್ರೋವನ್ನು ಸಾರ್ವಜನಿಕರ ಒಳಿತಿಗಾಗಿ ಪರಿಚಯಿಸಿದ್ದೇ ಹೊರತು, ಲಾಭಕ್ಕೆ ಅಲ್ಲ. ಸಾಮಾನ್ಯ ಜನರ ಸಾಮಾಜಿಕ-ಆರ್ಥಿಕ ಸ್ಥಿತಿ ಅನುಸಾರ ಕೈಗೆಟುಕುವ ಮತ್ತು ತಡೆರಹಿತ ಸಾರ್ವಜನಿಕ ಸಾರಿಗೆಯನ್ನು ಒದಗಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ. ಅಲ್ಲದೇ, ಇದು ಸಾಂವಿಧಾನಿಕ ಹಕ್ಕು, ಆದರೂ ಪಾಲನೆಯಾಗುತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಎಐಸಿಸಿಟಿಯು ಕಾರ್ಯಕರ್ತ ವಕೀಲರಾದ ಮೈತ್ರಿಯಿ ಕೃಷ್ಣ ಕೂಡ ಸಾರ್ವಜನಿಕ ಸಾರಿಗೆ ಕೈಗೆಟುಕುವ ದರದಲ್ಲಿ ಇರಬೇಕು. ಇದು ಕಾರ್ಮಿಕರು ಮತ್ತು ವಿದ್ಯಾರ್ಥಿಗಳಿಗೆ ಹೊರೆಯಾಗಬಾರದು ಎಂದಿದ್ದಾರೆ.
ಪರಿಸರ ಸಂಘಟನೆ ಗ್ರೀನ್ಪೀಸ್ ಇಂಡಿಯಾ ಕೂಡ ಈ ಕುರಿತು ಬಿಎಂಆರ್ಸಿಎಲ್ಗೆ ಜನರಿಗೆ ಅನುಕೂಲವಾಗುವಂತೆ ಕ್ರಮಕ್ಕೆ ಮುಂದಾಗಿ ದರ ಹೆಚ್ಚಳ ಹಿಂಪಡೆಯುವಂತೆ ಮನವಿ ಪತ್ರವನ್ನು ನೀಡಿದ್ದಾರೆ.
ಪ್ರಯಾಣ ದರ ಏರಿಕೆಯ ಪರಿಣಾಮವನ್ನು ನಿರ್ಣಯಿಸಲು ಮಾರ್ಚ್ 1 ರಂದು ಪರಿಶೀಲನಾ ಸಭೆಯನ್ನು ನಿಗದಿಪಡಿಸಲಾಗಿದೆ. ಬಿಎಂಆರ್ಸಿಎಲ್ ಪತ್ರಿಕಾ ಪ್ರಕಟಣೆಯ ಪ್ರಕಾರ, ದೈನಂದಿನ ಮೆಟ್ರೋ ಬಳಕೆದಾರರಲ್ಲಿ ಸುಮಾರು ಶೇ 46ರಷ್ಟು ಜನರು ಅಂದರೆ, ಸುಮಾರು 2.91 ಲಕ್ಷ ಪ್ರಯಾಣಿಕರು-ಪರಿಷ್ಕೃತ ದರ ರಚನೆಯಿಂದ ಪ್ರಯೋಜನ ಪಡೆಯುವ ನಿರೀಕ್ಷೆಯಿದೆ. ಪ್ರಯಾಣಿಕರ ಸಂಖ್ಯೆ ಏರಿಳಿತವಾಗುತ್ತಲೇ ಇರುತ್ತದೆ ಎಂದಿದೆ. ಇತ್ತೀಚಿನ ವರದಿಗಳ ಪ್ರಕಾರ ದೈನಂದಿನ ಪ್ರಯಾಣಿಕರ ಸಂಖ್ಯೆ ಮೊದಲಿಗೆ 7.78 ಲಕ್ಷಕ್ಕೆ ನಂತರ 7.62 ಲಕ್ಷಕ್ಕೆ ಇಳಿದಿದೆ.
ಇದನ್ನೂ ಓದಿ: ಕೇಂದ್ರ ಸರ್ಕಾರಿ ನೌಕರರ ಜಾತಿ ಪ್ರಮಾಣಪತ್ರವನ್ನು ಡಿಸಿವಿಸಿ ಪರಿಶೀಲಿಸಬಹುದು: ಹೈಕೋರ್ಟ್
ಇದನ್ನೂ ಓದಿ: ಅತಿಯಾದ ಜಾಹೀರಾತಿನಿಂದ ಪ್ರೇಕ್ಷಕರ ಸಮಯ ವ್ಯರ್ಥ: ಬೆಂಗಳೂರಲ್ಲಿ ಪಿವಿಆರ್ ಸಿನಿಮಾಗೆ 1 ಲಕ್ಷ ರೂ. ದಂಡ