ಶಿವಮೊಗ್ಗ : ಶರಾವತಿ ಸಂತ್ರಸ್ತರಿಗೆ ಭೂ ಹಕ್ಕು ನೀಡುವ ಕುರಿತು ಒಂದು ವರದಿಯನ್ನು ಜಿಲ್ಲಾಡಳಿತದಿಂದ ಸಿದ್ದಪಡಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೀಡಲಾಗುವುದು ಎಂದು ಸಾಗರ ಶಾಸಕ ಹಾಗೂ ರಾಜ್ಯ ಅರಣ್ಯ ಕೈಗಾರಿಕಾ ಅಭಿವೃದ್ದಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಅವರು ಹೇಳಿದ್ದಾರೆ.
ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶರಾವತಿ ಸಂತ್ರಸ್ತರ ಕುರಿತು ಅರಣ್ಯ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳ ಜೊತೆ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪನವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿ ನಂತರ ಅವರು ಮಾತನಾಡಿದರು.
ಜಿಲ್ಲಾ ಮಟ್ಟದಲ್ಲಿ ಶರಾವತಿ ಸಂತ್ರಸ್ತರಿಗೆ ಸಿಗಬೇಕಾದ ಭೂ ಹಕ್ಕಿನ ಕುರಿತು ಚರ್ಚೆ ನಡೆಸಲಾಗಿದೆ. ಹಿಂದಿನ ಸರ್ಕಾರದಿಂದ ಕೋರ್ಟ್ಗೆ ಹೋಗಬೇಕಾಯಿತು. ಜನರಿಗೆ ಸಾಕಷ್ಟು ಬೇಗ ಪರಿಹಾರ ನೀಡಬೇಕು ಎಂಬುದು ನಮ್ಮ ಉದ್ದೇಶ. ಇದರಿಂದ ಸಭೆ ನಡೆಸಲಾಗುತ್ತಿದೆ. ಬೆಂಗಳೂರು ಸೇರಿದಂತೆ ಶಿವಮೊಗ್ಗದಲ್ಲೂ ಸಹ ಸಭೆ ನಡೆಸಲಾಗುತ್ತಿದೆ. ಈಗ ಜಿಲ್ಲೆಯಲ್ಲಿ ಮೂರು ಸಭೆಗಳನ್ನು ನಡೆಸಲಾಗಿದೆ. ಇದರ ಕುರಿತು ಜಿಲ್ಲಾ ಮಂತ್ರಿಗಳು ಆಸಕ್ತಿ ಹೊಂದಿದ್ದಾರೆ. ಭೂ ಹಕ್ಕಿನ ಕುರಿತು ಆರ್ಡರ್ ಮಾಡಿಸಲು ಸಮಸ್ಯೆಗಳಿವೆ. ಇದರಿಂದ ಚರ್ಚೆ ನಡೆಸಲಾಗುತ್ತಿದೆ. ಸಿಎಂಗೆ ವರದಿ ನೀಡಲಾಗುವುದು. ನಂತರ ಅದರ ಕುರಿತು ಸಿಎಂ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದರು.
ಪಾಕ್ ಪರ ಘೋಷಣೆ ಹಾಕಿದವನಿಗೆ ಗುಂಡಿಕ್ಕಿ : ಪಾಕಿಸ್ತಾನ ಪರ ಘೋಷಣೆ ಹಾಕಿದವನಿಗೆ ಗುಂಡೇಟು ಹೊಡೆಯಬೇಕು. ಅಂತಹ ವ್ಯಕ್ತಿಗಳಿಗೆ ಕಾನೂನು ರೀತಿಯಲ್ಲಿ ಕ್ರಮ ಜರುಗಿಸಬೇಕು. ಬಾಂಬ್ ಸ್ಪೋಟ ಕುರಿತು ರಾಜ್ಯ ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು. ಬಾಂಬ್ ಇಟ್ಟವನಿಗೆ ಗಲ್ಲು ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದರು.
ಕಾಂಗ್ರೆಸ್ ಪಕ್ಷಕ್ಕೆ ಸಾಕಷ್ಟು ಜನ ಬರುವವರಿದ್ದಾರೆ: ಜಗದೀಶ್ ಶೆಟ್ಟರ್ ಘರ್ ವಾಪಸಿ ಆಗಿದ್ದಾರೆ. ನಮ್ಮ ಪಕ್ಷಕ್ಕೆ ಇನ್ನೂ ಜನ ಬರುವವರಿದ್ದಾರೆ. ಯಾರು ಯಾರು ಬರುತ್ತಾರೆ ಎಂದು ನೋಡಿ. ನಾನು ಆ ಪಕ್ಷಕ್ಕೆ ಹೋಗುವುದಕ್ಕೆ ಆಗುತ್ತಾ? ಎಂದು ಪ್ರಶ್ನಿಸಿದರು.
ಸಾಗರ ಸಂಗಮ ಚುನಾವಣಾ ಗಿಮಿಕ್ : ಸಾಗರದಲ್ಲಿ ನಾಳೆ ಸಾಗರ ಸಂಗಮ ಎಂಬ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದು ನಾನು ಕೇಳಿದೆ. ನಾಳೆ ಅಲ್ಲಿ ನಡೆಯುತ್ತಿರುವ ಸಭೆ ಈಡಿಗರು, ಹಿಂದುಳಿದವರ ಸಭೆಯೇ ಎಂದು ಸ್ಪಷ್ಟಪಡಿಸಬೇಕು. ಇದು ಒಂದು ಚುನಾವಣಾ ಗಿಮಿಕ್. ಯಡಿಯೂರಪ್ಪನವರಿಗೆ ಸನ್ಮಾನ ಮಾಡಲಿ ಅದಕ್ಕೆ ನನ್ನ ಆಕ್ಷೇಪ ಇಲ್ಲ ಎಂದರು.
ನಾಳಿನ ಸಭೆಗೆ ನಮಗೆ ಕರೆದರೂ ನಾವು ಹೋಗುತ್ತಿದ್ದೆವು. ನಾನು, ಮಧು ಬಂಗಾರಪ್ಪ, ಭೀಮಣ್ಣ ನಾಯ್ಕ್ ಈಡಿಗರಲ್ಲವೇ? ಎಂದು ಪ್ರಶ್ನಿಸಿದರು. ನಾಳೆ ನನಗೆ ಕರೆದರೆ ಹೋಗುತ್ತಿದ್ದೆ. ಆದರೆ ನನಗೆ ಆಹ್ವಾನ ಇಲ್ಲ. ನಾಳೆ ಮಾಜಿ ಶಾಸಕರ ಅಸ್ಥಿತ್ವ ಉಳಿಸಿಕೊಳ್ಳಲು ಸನ್ಮಾನ ಮಾಡಲು ಹೊರಟಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ : ಲೋಕಸಭೆಗೆ ನಿಲ್ಲಬಾರದು ಎಂದು ನನಗೆ ಪಕ್ಷದಿಂದ ಆದೇಶ ಬಂದಿದೆ: ಗೋಪಾಲಕೃಷ್ಣ ಬೇಳೂರು