ಬೆಳಗಾವಿ: ಆಧುನಿಕತೆ ಭರಾಟೆಯಲ್ಲಿ ಕುಂಬಾರಿಕೆ ಕಣ್ಮರೆಯಾಗುತ್ತಿದೆ. ಗ್ರಾಮೀಣ ಗುಡಿ ಕೈಗಾರಿಕೆಗಳು ತೆರೆಮರೆಗೆ ಸರಿಯುತ್ತಿವೆ. ಆದರೆ, ಕಳೆದ 70 ವರ್ಷಗಳಿಂದ ಕುಂಬಾರಿಕೆಯನ್ನು ಶೈಕ್ಷಣಿಕವಾಗಿ ಮತ್ತು ಶಾಸ್ತ್ರೀಯವಾಗಿ ಕಲಿಸಿಕೊಡುವ ದೇಶದ ಏಕಮಾತ್ರ ಸಂಸ್ಥೆ ಬೆಳಗಾವಿ ಜಿಲ್ಲೆಯ ಖಾನಾಪುರದಲ್ಲಿದೆ ಎಂಬುದು ಅದೆಷ್ಟೋ ಜನರಿಗೆ ಗೊತ್ತೇ ಇಲ್ಲ. ಹೇಗಿದೆ ತರಬೇತಿ ಕೇಂದ್ರ? ಇದನ್ನು ಕಲಿಯಲೆಂದೇ ರಾಜ್ಯ, ಹೊರ ರಾಜ್ಯಗಳಿಂದ ಇಲ್ಲಿಗೆ ವಿದ್ಯಾರ್ಥಿಗಳು ಬರುತ್ತಾರೆ ಎಂಬ ಕುರಿತು ಈಟಿವಿ ಭಾರತದ ವಿಶೇಷ ವರದಿ ಇಲ್ಲಿದೆ.
ಹೌದು, ಖಾನಾಪುರ ಹೊರ ವಲಯದಲ್ಲಿ ರುಮೇವಾಡಿ ಕ್ರಾಸ್ನಲ್ಲಿ ಮಲಪ್ರಭಾ ನದಿ ದಂಡೆಯ ಮೇಲೆ ಮೂರುವರೆ ಏಕರೆ ಪ್ರದೇಶದಲ್ಲಿ 1954ರಲ್ಲಿ ಕೇಂದ್ರ ಸರ್ಕಾರದಿಂದ ಕೇಂದ್ರೀಯ ಗ್ರಾಮ ಕುಂಬಾರಿಕಾ ತರಬೇತಿ ಸಂಸ್ಥೆ ಆರಂಭವಾಗಿದೆ. ಅಂದಿನಿಂದ ಇಂದಿನವರೆಗೂ ರಾಜ್ಯ, ಹೊರ ರಾಜ್ಯಗಳ ಸುಮಾರು 50 ಸಾವಿರಕ್ಕೂ ಅಧಿಕ ವಿದ್ಯಾರ್ಥಿ, ವಿದ್ಯಾರ್ಥಿನಿಯರು ತರಬೇತಿ ಪಡೆದು, ಕುಶಲಕರ್ಮಿಗಳಾಗಿ ಹೊರ ಹೊಮ್ಮಿದ್ದಾರೆ. ಹಲವರು ಸ್ವಯಂ ಉದ್ಯೋಗ ಕೈಗೊಂಡು, ಉದ್ಯಮಿಗಳಾಗಿದ್ದಾರೆ. ಮತ್ತೆ ಹಲವರು ಕುಂಬಾರಿಕೆಗೆ ಆಧುನಿಕ ಸ್ಪರ್ಶ ನೀಡಿ, ನೂರಾರು ಜನರಿಗೆ ಉದ್ಯೋಗ ನೀಡಿರೋದು ಈ ಸಂಸ್ಥೆಯ ಹೆಗ್ಗಳಿಕೆ.
![Khanapur institution providing training in pottery for over 70 years](https://etvbharatimages.akamaized.net/etvbharat/prod-images/03-09-2024/bgm-kumbarika-training-special-story_03092024093127_0309f_1725336087_515.jpg)
ಬೇರೆ ಬೇರೆ ರಾಜ್ಯದ ಯುವ ಜನತೆಗೂ ತರಬೇತಿ; ಕರ್ನಾಟಕ ಅಷ್ಟೇ ಅಲ್ಲದೇ, ಪಕ್ಕದ ಗೋವಾ, ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ದೂರದ ಬಿಹಾರ, ಉತ್ತರ ಪ್ರದೇಶ, ಹಿಮಾಚಲಪ್ರದೇಶ ಸೇರಿ ದೇಶದ ಬಹುತೇಕ ಎಲ್ಲ ರಾಜ್ಯಗಳಿಂದ ಯುವಕ, ಯುವತಿಯರು ಇಲ್ಲಿ ತರಬೇತಿ ಪಡೆಯಲು ಆಗಮಿಸುತ್ತಾರೆ. ಅನಕ್ಷರಸ್ಥರು ಅಷ್ಟೇ ಅಲ್ಲದೇ ಪದವಿ, ಉನ್ನತ ಶಿಕ್ಷಣ ಪಡೆದವರೂ ಕುಂಬಾರಿಕೆ ಕಲಿಯಲು ಹೆಚ್ಚಿನ ಆಸಕ್ತಿ ತೋರುತ್ತಿರುವುದು ವಿಶೇಷವಾಗಿದೆ.
ಕೋರ್ಸ್ಗಳು ಯಾವ್ಯಾವು: ಕೇಂದ್ರ ಸರ್ಕಾರದ ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಕೈಗಾರಿಕಾ ಇಲಾಖೆಯ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದಡಿ ಕಾರ್ಯನಿರ್ವಹಿಸುತ್ತಿರುವ ಈ ತರಬೇತಿ ಕೇಂದ್ರದಲ್ಲಿ ಒಂದು ತಿಂಗಳ ಅವಧಿಯ ಹವ್ಯಾಸಿ ಕೋರ್ಸ್, ಅಡ್ವಾನ್ಸ್ ಪಾಟರಿ ಕೋರ್ (ಜಿಗರ್ಜಾಲಿ ಹಾಗೂ ಸ್ಲಿಪ್ ಕಾಸ್ಟಿಂಗ್ ಪ್ರೊಸೆಸ್ ಕೋರ್ಸ್), ಎರಡು ತಿಂಗಳ ಟೆರಾಕೋಟ ಆರ್ಟ್ವೇರ್ ಕೋರ್ಸ್, ನಾಲ್ಕು ತಿಂಗಳ ವ್ಹೀಲ್ ಪಾಟರಿ ಕೋರ್ಸ್ ಇಲ್ಲಿದ್ದು, ವಯೋಮಿತಿ 16ರಿಂದ 50 ವರ್ಷದೊಳಗೆ ಇರಬೇಕು. 5ನೇ ತರಗತಿ ಪಾಸಾದವರು ಅಥವಾ ಓದಲು, ಬರೆಯಲು ಬಂದರೆ ಅದೇ ಶೈಕ್ಷಣಿಕ ಅರ್ಹತೆ. ಒಂದು ಬ್ಯಾಚ್ನಲ್ಲಿ 40 ಮಂದಿಗೆ ಅವಕಾಶ ಇರುತ್ತದೆ. ಉಚಿತ ಊಟ, ಹಾಸ್ಟೆಲ್ ಸೌಲಭ್ಯದ ಜೊತೆಗೆ ಪ್ರತಿಯೊಬ್ಬರಿಗೂ ಪ್ರತಿ ತಿಂಗಳು 1,500ರಿಂದ 3 ಸಾವಿರ ರೂ. ವರೆಗೆ ಕಲಿಕಾ ಭತ್ಯೆಯನ್ನೂ ನೀಡಲಾಗುತ್ತಿದೆ.
ಏನೆಲ್ಲಾ ತಯಾರಿಸುತ್ತಾರೆ?: ವಿವಿಧ ಬಗೆಯ ಗೃಹೋಪಯೋಗಿ ವಸ್ತುಗಳು, ಅಲಂಕಾರಿಕ ವಸ್ತುಗಳು, ಮೂರ್ತಿಗಳು, ಪ್ರತಿಮೆಗಳು, ಆಟದ ವಸ್ತುಗಳು, ಪೂಜಾ ಸಲಕರಣೆಗಳು. ಹೀಗೆ.. ಆಧುನಿಕ ಜೀವನಶೈಲಿಗೆ ಬೇಕಾದ ವಸ್ತುಗಳನ್ನು ಮಣ್ಣಿನಿಂದಲೇ ತಯಾರಿಸಲಾಗುತ್ತಿದೆ. 50 ಲೀಟರ್ ನೀರು ಕಾಯಿಸುವಂಥ ಹಂಡೆ, ಕುಡಿಯುವ ನೀರಿನ ಹೂಜಿ, ಆಹಾರ ತಯಾರಿಸುವ ಮಡಿಕೆ, ಕುಡಿಕೆ, ಹಣತೆ, ಚಹಾ ಕುಡಿಯುವ ಲೋಟ, ತಟ್ಟೆ, ಆಲಂಕಾರಿಕ ಹೂಜಿ, ಹ್ಯಾಂಗಿಂಗ್ ಚೈನು, ಹೂಕುಂಡ, ಒಲೆ, ವಿವಿಧ ರೀತಿಯ ಉದ್ಯಾನ ಪಾತ್ರೆ, ಡಸ್ಟ್ ಬಿನ್, ಮಣ್ಣಿನ ಬಾಟಲ್ಗಳನ್ನೂ ತಯಾರಿಸುವ ತರಬೇತಿ ಇಲ್ಲಿ ನೀಡಲಾಗುತ್ತಿದೆ. ಇದಷ್ಟೇ ಅಲ್ಲದೇ ಕಿವಿ ಮತ್ತು ಕೊರಳಲ್ಲಿ ಧರಿಸಬಹುದಾದ ಆಭರಣಗಳನ್ನು ಹೇಗೆ ತಯಾರಿಸಬೇಕು ಎಂಬುದನ್ನು ಇಲ್ಲಿ ಕಲಿಸಲಾಗುತ್ತಿದೆ.
ಸ್ವಾವಲಂಬಿ ಬದುಕು: ಈಟಿವಿ ಭಾರತಕ್ಕೆ ಮಾಹಿತಿ ನೀಡಿದ ಸಂಸ್ಥೆಯ ಹಿರಿಯ ಕಾರ್ಯನಿರ್ವಹಣಾಧಿಕಾರಿ ಶೇಷೋ ನಾರಾಯಣ ದೇಶಪಾಂಡೆ, ದೇಶದ ಮೂಲೆ ಮೂಲೆಯಿಂದ ಬರುವ ವಿದ್ಯಾರ್ಥಿಗಳು ತರಬೇತಿ ಪಡೆದುಕೊಂಡು, ಮಣ್ಣಿನಲ್ಲಿ ತಮ್ಮ ಕೌಶಲ್ಯತೆ ತೋರಿಸಿ ಅನೇಕ ಕಲಾಕೃತಿಗಳನ್ನು ತಯಾರಿಸಬಹುದು ಎಂಬುದನ್ನು ನಿರೂಪಿಸಿದ್ದಾರೆ. ಕೈಯಿಂದ ಮತ್ತು ಯಂತ್ರಗಳಿಂದ ಕಲಾಕೃತಿ ತಯಾರಿಸಬಹುದಾಗಿದೆ. ಅಲ್ಲದೇ ತರಬೇತಿ ಬಳಿಕ ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದಾರೆ. ವಿದ್ಯಾರ್ಥಿಗಳಿಗೆ ಉಚಿತ ಊಟ ಮತ್ತು ವಸತಿ ವ್ಯವಸ್ಥೆಯಿದ್ದು, ವಿದ್ಯಾರ್ಥಿನಿಯರಿಗೆ ಊಟ ಇರುತ್ತದೆ. ಆದರೆ, ವಸತಿ ವ್ಯವಸ್ಥೆ ಇರುವುದಿಲ್ಲ. ಹಾಗಾಗಿ, ಹೊರಗಡೆ ರೂಮ್ ಇಲ್ಲವೇ ಮನೆ ಬಾಡಿಗೆ ಪಡೆಯಬೇಕಿದೆ. ಕೇಂದ್ರ ಸರ್ಕಾರದ ಕುಂಬಾರಿಕಾ ಸಶಕ್ತಿಕರಣ ಯೋಜನೆ ಅಡಿ ಯಂತ್ರಚಾಲಿತ ಚಕ್ರಗಳನ್ನೂ ವಿತರಿಸಲಾಗುತ್ತಿದೆ. ಗುಡಿ ಕೈಗಾರಿಕೆಗೆ ಸಂಬಂಧಿಸಿದ ಸ್ಟಾರ್ಟ್ಅಪ್ಗೆ ಸಾಲವನ್ನೂ ಸರ್ಕಾರ ನೀಡುತ್ತಿದ್ದು, ಇದರ ಸದುಪಯೋಗ ಪಡೆದುಕೊಳ್ಳುವಂತೆ ಕರೆ ನೀಡಿದರು.
ಖಾನಾಪುರ ಮಣ್ಣು ಮತ್ತೆಲ್ಲೂ ಸಿಗಲ್ಲ: ಖಾನಾಪುರ ತಾಲೂಕಿನಲ್ಲಿ ಸಿಗುವ ಮಣ್ಣು ಇಡೀ ಭಾರತ ದೇಶದಲ್ಲಿ ಎಲ್ಲಿಯೂ ಸಿಗುವುದಿಲ್ಲ. ಇಲ್ಲಿನ ಮಣ್ಣು ವಿಶಿಷ್ಟ ಗುಣ ಹೊಂದಿದ್ದು, ಇದರಲ್ಲಿ ಕಬ್ಬಿಣದ ಅಂಶ ಯಥೇಚ್ಛವಾಗಿದೆ. ಹೆಚ್ಚು ಜಿಗುಟು ಬರುವುದರಿಂದ ವಸ್ತುಗಳು ಹೆಚ್ಚು ಬಾಳಿಕೆ ಬರುತ್ತವೆ. ಮಲಪ್ರಭಾ ನದಿ ಪಾತ್ರದಲ್ಲಿ ಜೇಡಿ ಮಣ್ಣು ಸಾಕಷ್ಟಿದೆ. ಜೇಡಿ, ಶೇಡು ಮತ್ತು ಕೆರೆ ಮಣ್ಣು ಹೀಗೆ ಮೂರು ಮಣ್ಣನ್ನು ಯಂತ್ರದ ಸಹಾಯದಿಂದ ಮಿಶ್ರಣ ಮಾಡುತ್ತೇವೆ. ಬಳಿಕ ಮಣ್ಣನ್ನು ಸಂಸ್ಕರಿಸಿ, ಬೃಹದಾಕಾರದ ಭಟ್ಟಿಗಳಲ್ಲಿ ಹಾಕಿ ಅದನ್ನು ಸುಡಲಾಗುತ್ತದೆ. ಮಣ್ಣು ಹದಕ್ಕೆ ಬಂದ ಮೇಲೆ ಒಣಹಾಕಿ, ಕಲಿಸಿದ ಬಳಿಕ ಉಪಯೋಗಕ್ಕೆ ಸಿದ್ಧವಾಗುತ್ತದೆ. ನಂತರ ಆ ಮಣ್ಣನ್ನು ಬಳಸಿ ಏನೇನು ತಯಾರಿಸಬಹುದು ಎಂದು ವಿದ್ಯಾರ್ಥಿಗಳಿಗೆ ಕಲಿಸುತ್ತೇವೆ. ಇಲ್ಲಿ ತರಬೇತಿ ಪಡೆದವರಿಗೆ ಕುಂಬಾರಿಕೆ ಕೌಶಲದ ಜೊತೆಗೆ ಮಾರ್ಕೆಟಿಂಗ್, ಸಾಲ ಸೌಲಭ್ಯಗಳ ಕುರಿತೂ ಮಾಹಿತಿ ನೀಡುತ್ತೇವೆ ಎಂದು ಕುಂಬಾರಿಕೆ ತರಬೇತುದಾರ ಸಾಯಿರಾಮ ಚಟ್ಟಿ ವಿವರಿಸಿದರು.
![KHANAPUR POTTERY TRAINING CENTER](https://etvbharatimages.akamaized.net/etvbharat/prod-images/03-09-2024/22362630_bng-1.jpg)
ಬೆಂಗಳೂರಿನಿಂದ ತರಬೇತಿಗೆ ಬಂದಿದ್ದ ಜ್ಯೋತಿ ಮಾತನಾಡಿ, ನಾನು ಕೈಯಿಂದ ಮಣ್ಣಿನ ವಸ್ತುಗಳನ್ನು ತಯಾರಿಸುತ್ತಿದ್ದೆ. ಯಂತ್ರಗಳಿಂದ ಕಲಿಯಲು ಇಲ್ಲಿಗೆ ಬಂದಿದ್ದೇನೆ. ಶಿಕ್ಷಕರು ತುಂಬಾ ಚೆನ್ನಾಗಿ ಹೇಳಿ ಕೊಡುತ್ತಾರೆ. ಪರಿಪೂರ್ಣ ಆಗೋವರೆಗೂ ಕಲಿಸುತ್ತಾರೆ. ಮುಂದೆ ಶಾಲೆಗಳಿಗೆ ಹೋಗಿ ಮಣ್ಣಿನಿಂದ ಏನೆಲ್ಲಾ ಕಲಾಕೃತಿಗಳನ್ನು ತಯಾರಿಸಬಹುದು ಎಂಬುದನ್ನು ಮಕ್ಕಳಿಗೆ ಕಲಿಸುವ ಆಲೋಚನೆ ಹೊಂದಿದ್ದೇನೆ ಎಂದು ಹೇಳಿದರು.
ನಮ್ಮ ಪೂರ್ವಿಕರು ಕುಂಬಾರಿಕೆ ಮಾಡುತ್ತಿದ್ದರು. ನನಗೂ ಕಲಿಯಬೇಕೆಂಬ ಆಸೆ ಇತ್ತು. ಕಾರಣಾಂತಗಳಿಂದ ಕಲಿಯಲು ಸಾಧ್ಯವಾಗಿರಲಿಲ್ಲ. ಬೆಳಗಾವಿ ಜಿಲ್ಲೆಯ ಖಾನಾಪುರದಲ್ಲಿ ಕುಂಬಾರಿಕಾ ತರಬೇತಿ ನೀಡುವ ಸಂಸ್ಥೆ ಇದೆ ಎಂಬ ಮಾಹಿತಿ ಸಿಕ್ಕಿತು. ಹಾಗಾಗಿ ತೆಲಂಗಾಣದಿಂದ ಇಲ್ಲಿಗೆ ಬಂದೆ. ಕಳೆದ 20 ದಿನಗಳಿಂದ ಬಹಳ ಕಲಿತುಕೊಂಡಿರುವೆ. ಇಲ್ಲಿರುವ ಸಿಬ್ಬಂದಿ ನಮಗೆಲ್ಲ ಚೆನ್ನಾಗಿ ತರಬೇತಿ ನೀಡುತ್ತಿದ್ದು, ಕಲಿಯಲು ಇದೊಂದು ಉತ್ತಮ ಅವಕಾಶ ಎಂದು ತೆಲಂಗಾಣದಿಂದ ತರಬೇತಿಗಾಗಿ ಆಗಮಿಸಿದ ವಿಜಯಗಿರಿ ಎಂಬುವರು ತಮ್ಮ ಅನುಭವ ಹೇಳಿಕೊಂಡರು. ಮುಂಬೈದಿಂದ ತರಬೇತಿಗಾಗಿ ಇಲ್ಲಿಗೆ ಬಂದಿರುವ ತೇಜಸ್ವಿನಿ ಕೂಡ ಈ ಬಗ್ಗೆ ತಮ್ಮ ಅನುಭವ ಹಂಚಿಕೊಂಡರು.
ಒಟ್ಟಿನಲ್ಲಿ ಸ್ವಾವಲಂಬಿ ಬದುಕಿಗೆ ನಾಂದಿ ಹಾಡುತ್ತಿರುವ ಕುಂಬಾರಿಕಾ ತರಬೇತಿ ಸಂಸ್ಥೆಯ ಸದುಪಯೋಗವನ್ನು ಹೆಚ್ಚೆಚ್ಚು ಜನರು ಪಡೆಯಲಿ ಎಂಬುದೇ ನಮ್ಮ ಆಶಯ.
ಇದನ್ನೂ ಓದಿ: ಕೈಗಾರಿಕಾ ಮತ್ತು ಕರಕುಶಲ ವಸ್ತುಗಳ ಮಾರಾಟ ಮೇಳಕ್ಕೆ ತೆರೆ.. ನಶಿಸುತ್ತಿರುವ ಕುಂಬಾರಿಕೆ ಉಳಿಸಲು ಬೇಕಿದೆ ನೆರವು