ಇಂದೋರ್(ಮಧ್ಯಪ್ರದೇಶ): 4 ಎಸೆತಗಳಲ್ಲಿ 4 ವಿಕೆಟ್ಗಳನ್ನು ಕಬಳಿಸುವ ಮೂಲಕ ಮಧ್ಯಪ್ರದೇಶದ ಕುಲ್ವಂತ್ ಖೆಜ್ರೋಲಿಯಾ ರಣಜಿ ಟ್ರೋಫಿ ಇತಿಹಾಸದಲ್ಲಿ ಹೊಸ ದಾಖಲೆ ಸೃಷ್ಟಿಸಿದ್ದಾರೆ. ಇದರ ಜೊತೆಗೆ ಹ್ಯಾಟ್ರಿಕ್ ವಿಕೆಟ್ ಪಡೆದ ಮಧ್ಯಪ್ರದೇಶದ ಮೂರನೇ ಬೌಲರ್ ಎನಿಸಿಕೊಂಡರು.
ಬರೋಡಾ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮಧ್ಯಪ್ರದೇಶ 454 ರನ್ಗಳ ಬೃಹತ್ ಮೊತ್ತ ದಾಖಲಿಸಿತು. ಇದಕ್ಕುತ್ತರವಾಗಿ ಬರೋಡಾ 132 ರನ್ಗಳಿಗೆ ಆಲೌಟ್ ಆಗಿ ಫಾಲೋ ಆನ್ಗೆ ಒಳಗಾಯಿತು. ಅಗ್ರ ಕ್ರಮಾಂಕದ ಬ್ಯಾಟರ್ ಶಾಶ್ವತ್ ರಾವತ್ ಬಾರಿಸಿದ ಭರ್ಜರಿ ಶತಕ (105) ತಂಡವನ್ನು ಆಧರಿಸಿತು. ಆರಂಭಿಕ ಆಟಗಾರ ಜ್ಯೋತ್ಸ್ನಿಲ್ ಸಿಂಗ್ 83 ರನ್ ಗಳಿಸಿದರು. 5 ವಿಕೆಟ್ಗೆ 233 ರನ್ ಗಳಿಸಿ ಉತ್ತಮ ಸ್ಥಿತಿಯಲ್ಲಿತ್ತು.
ಕುಲ್ವಂತ್ ಮಾರಕ ದಾಳಿ: ಈ ವೇಳೆ 95ನೇ ಓವರ್ ಬೌಲಿಂಗ್ ಮಾಡಿದ ಕುಲ್ವಂತ್ ಖೇಜ್ರೋಲಿಯಾ ಬರೋಡಾದ ಇನಿಂಗ್ಸ್ಗೆ ತೆರೆ ಎಳೆದರು. 95ನೇ ಓವರ್ನ 2ನೇ ಎಸೆತದಲ್ಲಿ ಶತಕ ಗಳಿಸಿದ್ದ ಶಾಶ್ವತ್ ರಾವತ್(105), ಮೂರನೇ ಬಾಲ್ನಲ್ಲಿ ಮಹೇಶ್ ಪಿಥಿಯಾ(0), ನಾಲ್ಕನೇ ಎಸೆತದಲ್ಲಿ ಭಾರ್ಗವ್ ಭಟ್ (0) ಮತ್ತು 5ನೇ ಎಸೆತದಲ್ಲಿ ಆಕಾಶ್ ಸಿಂಗ್ (0) ಔಟ್ ಮಾಡಿದರು. ಇದರಿಂದ ತಂಡ ದಿಢೀರ್ ಕುಸಿದು 270ಕ್ಕೆ ಗಂಟುಮೂಟೆ ಕಟ್ಟಿತು. ಇದರಿಂದ ಮಧ್ಯಪ್ರದೇಶ ಇನಿಂಗ್ಸ್ ಮತ್ತು 52 ರನ್ಗಳ ಗೆಲುವು ಸಾಧಿಸಿತು.
ಸತತ 4 ವಿಕೆಟ್ ಪಡೆದ ಮೂರನೇ ಬೌಲರ್: ರಣಜಿ ಇತಿಹಾಸದಲ್ಲಿ ಸತತ 4 ಎಸೆತಗಳಲ್ಲಿ ವಿಕೆಟ್ ಪಡೆದ ಅತಿ ವಿರಳ ಸಾಧನೆ ಮಾಡಿದವರ ಪಟ್ಟಿಯಲ್ಲಿ ಕುಲ್ವಂತ್ ಮೂರನೇ ಸ್ಥಾನ ಪಡೆದರು. ಇದಕ್ಕೂ ಮೊದಲು ದೆಹಲಿಯ ಶಂಕರ್ ಸೈನಿ ಮತ್ತು ಜಮ್ಮು ಮತ್ತು ಕಾಶ್ಮೀರದ ಮೊಹಮ್ಮದ್ ಮುಧಾಸಿರ್ ಅವರು ಸತತ ನಾಲ್ಕು ಎಸೆತಗಳಲ್ಲಿ ವಿಕೆಟ್ ಪಡೆದಿದ್ದರು.
ಇನ್ನೊಂದೆಡೆ, ಹಿಮಾಚಲ ಪ್ರದೇಶ ವಿರುದ್ಧ ನಡೆದ ಪಂದ್ಯದಲ್ಲಿ ದೆಹಲಿ ತಂಡ 76 ರನ್ಗಳ ಗೆಲುವು ಸಾಧಿಸಿತು. ಎರಡನೇ ಇನಿಂಗ್ಸ್ನಲ್ಲಿ 5 ವಿಕೆಟ್ ಗೊಂಚಲು ಪಡೆಯುವ ಮೂಲಕ ಹಿಮಾಂಶು ಚೌಹಾಣ್ ದಿಲ್ಲಿ ಗೆಲುವಿಗೆ ಕಾಣಿಕೆ ನೀಡಿದರು. ಇದರೊಂದಿಗೆ ಮಧ್ಯಪ್ರದೇಶ 26 ಅಂಕ, ಬರೋಡಾ 23 ಅಂಕ, ಜಮ್ಮು ಮತ್ತು ಕಾಶ್ಮೀರ 18 ಅಂಕ, ದೆಹಲಿ 16 ಅಂಕಗಳೊಂದಿಗೆ ಮೊದಲ ನಾಲ್ಕು ಸ್ಥಾನ ಪಡೆದವು.
ಚಂಡೀಗಢ ಮತ್ತು ತ್ರಿಪುರಾ, ಆಂಧ್ರಪ್ರದೇಶ ಮತ್ತು ಉತ್ತರಪ್ರದೇಶ ನಡುವಿನ ಪಂದ್ಯಗಳು ಡ್ರಾದಲ್ಲಿ ಅಂತ್ಯಗೊಂಡರೆ, ಗೋವಾ ವಿರುದ್ಧ ರೈಲ್ವೇಸ್ 63 ರನ್ ಗೆಲುವು ಸಾಧಿಸಿತು. ಬೆಂಗಾಲ್ ವಿರುದ್ಧ ಕೇರಳ 109 ರನ್ ಜಯ ಸಾಧಿಸಿತು.
ಇದನ್ನೂ ಓದಿ: ವಿರಾಟ್ ಕೊಹ್ಲಿ ಇಲ್ಲದ ಟೆಸ್ಟ್ ಸರಣಿ ಸಪ್ಪೆ: ಇಂಗ್ಲೆಂಡ್ ಮಾಜಿ ವೇಗಿ ಸ್ಟುವರ್ಟ್ ಬ್ರಾಡ್