ETV Bharat / bharat

ಅತ್ಯಾಚಾರ ಪ್ರಕರಣಗಳ ತೀರ್ಪು ವಿಳಂಬ, ನ್ಯಾಯಾಲಯಗಳ 'ಮುಂದೂಡಿಕೆ ಸಂಸ್ಕೃತಿ'ಗೆ ರಾಷ್ಟ್ರಪತಿ ಮುರ್ಮು ತೀವ್ರ ಕಳವಳ - Supreme Court 75th Anniversary

author img

By ANI

Published : Sep 2, 2024, 9:58 AM IST

Updated : Sep 2, 2024, 10:43 AM IST

ಅತ್ಯಾಚಾರ ಪ್ರಕರಣಗಳಲ್ಲಿ ಕೋರ್ಟ್‌ಗಳು ವಿಳಂಬವಾಗಿ ತೀರ್ಪು ನೀಡುತ್ತಿರುವುದು, ಮುಂದೂಡಿಕೆ ಸಂಸ್ಕೃತಿ ಹಾಗು ನ್ಯಾಯಾಂಗ ವ್ಯವಸ್ಥೆಯಲ್ಲಿ ಜನಸಾಮಾನ್ಯರ ಸಂಕಷ್ಟಗಳ ಕುರಿತಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಕಳವಳ ವ್ಯಕ್ತಪಡಿಸಿದ್ದಾರೆ. ಬಾಕಿ ಉಳಿದಿರುವ ಪ್ರಕರಣಗಳ ಶೀಘ್ರ ಇತ್ಯರ್ಥಕ್ಕಾಗಿ ಹೆಚ್ಚು ಹೆಚ್ಚು ವಿಶೇಷ ಲೋಕ ಅದಾಲತ್ ಏರ್ಪಡಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ. ನ್ಯಾಯಾಲಯಗಳು ಮುಂದೂಡಿಕೆ ಸಂಸ್ಕೃತಿಯನ್ನು ಬದಲಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದ್ದಾರೆ.

President Murmu
ಜಿಲ್ಲಾ ನ್ಯಾಯಾಂಗ ವ್ಯವಸ್ಥೆಯ ಸಮ್ಮೇಳನದ ಸಮಾರೋಪ ಸಮಾರಂಭ (ANI)

ನವದೆಹಲಿ: ಹೇಯ ಅಪರಾಧ ಕೃತ್ಯಗಳಾದ ಅತ್ಯಾಚಾರಗಳಂಥ ಪ್ರಕರಣಗಳಲ್ಲಿ ವಿಳಂಬ ನಿರ್ಧಾರಗಳಿಂದಾಗಿ ನ್ಯಾಯಾಲಯಗಳು ಸಂವೇದನೆ ಕಳೆದುಕೊಂಡಿವೆ ಎಂದು ಜನಸಾಮಾನ್ಯರು ಯೋಚಿಸುವಂತಾಗಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದ್ದಾರೆ. ನ್ಯಾಯಾಂಗ ವ್ಯವಸ್ಥೆಯ 'ಮುಂದೂಡಿಕೆ ಪ್ರವೃತ್ತಿ'ಯಲ್ಲಿ ಬದಲಾವಣೆ ತರುವ ಅವಶ್ಯಕತೆ ಇದೆ ಎಂದು ಅವರು ಸಲಹೆ ನೀಡಿದ್ದಾರೆ. ಅನೇಕ ವರ್ಷಗಳಿಂದ ಬಾಕಿ ಉಳಿದಿರುವ ಪ್ರಕರಣಗಳು ನ್ಯಾಯಾಂಗ ವ್ಯವಸ್ಥೆ ಎದುರಿಸುತ್ತಿರುವ ಬಹುದೊಡ್ಡ ಸವಾಲು ಎಂದು ಇದೇ ವೇಳೆ ಮುರ್ಮು ತಿಳಿಸಿದರು.

ಅತ್ಯಂತ ಅಮಾನುಷ ಕೃತ್ಯಗಳಾದ ಅತ್ಯಾಚಾರಗಳಂಥ ಪ್ರಕರಣಗಳ ತೀರ್ಮಾನಗಳು ಒಂದು ತಲೆಮಾರಿನ ನಂತರ ಕೋರ್ಟ್‌ಗಳಿಂದ ಹೊರಬರುತ್ತಿರುವುದರಿಂದ ನ್ಯಾಯಾಂಗ ವ್ಯವಸ್ಥೆ ಸಂವೇದನೆ ಕಳೆದುಕೊಂಡಿದೆ ಎಂಬುದು ಜನಸಾಮಾನ್ಯರ ಭಾವನೆ ಎಂದು ಮುರ್ಮು ಹೇಳಿದ್ದಾರೆ.

ಜಿಲ್ಲಾ ನ್ಯಾಯಾಂಗ ವ್ಯವಸ್ಥೆಯ ಕುರಿತು ನವದೆಹಲಿಯ ಭಾರತ ಮಂಟಪಂನಲ್ಲಿ ಭಾನುವಾರ ನಡೆದ ಎರಡು ದಿನಗಳ ರಾಷ್ಟ್ರೀಯ ಮಟ್ಟದ ಸಮ್ಮೇಳನದ ಸಮಾರೋಪ ಸಮಾರಂಭ ಉದ್ದೇಶಿಸಿ ಅವರು ಮಾತನಾಡಿದರು.

ನ್ಯಾಯಾಂಗ ವ್ಯವಸ್ಥೆಯಲ್ಲಿರುವ ಬಾಕಿ ಪ್ರಕರಣಗಳ ಶೀಘ್ರ ವಿಲೇವಾರಿಗೆ ವಿಶೇಷ ಲೋಕ ಅದಾಲತ್ ಅನ್ನು ಹೆಚ್ಚೆಚ್ಚು ಆಯೋಜಿಸಬೇಕು. ಸಮಸ್ಯೆ ಬಗೆಹರಿಸಲು ಎಲ್ಲ ಪಾಲುದಾರರು ಭಾಗಿಯಾಗಿ ಆದ್ಯತೆಯಾಗಿ ಪರಿಗಣಿಸಿ ಪರಿಹಾರ ಕಂಡುಕೊಳ್ಳಬೇಕು ಎಂದು ಮುರ್ಮು ಕಿವಿಮಾತು ಹೇಳಿದರು.

ಕೆಲವು ಪ್ರಕರಣಗಳಲ್ಲಿ, ಸಿರಿವಂತರು ಅಪರಾಧ ಕೃತ್ಯಗಳಲ್ಲಿ ಭಾಗಿಯಾದ ನಂತರ ಮುಕ್ತವಾಗಿ ತಿರುಗಾಡುತ್ತಿದ್ದಾರೆ. ಆದರೆ ಅದೇ ಅಪರಾಧ ಕೃತ್ಯಗಳಿಂದ ತೊಂದರೆಗೀಡಾದ ಜನರು ತಾವೇ ಅಪರಾಧಗಳಲ್ಲಿ ಭಾಗಿಯಾದೆವೇನೋ ಎಂಬಂತೆ ಭಯದಲ್ಲಿ ಬದುಕುತ್ತಿದ್ದಾರೆ ಎಂದು ಬೇಸರ ಹೊರಹಾಕಿದರು.

ಗ್ರಾಮಗಳಲ್ಲಿ ನೆಲೆಸಿರುವ ಬಡ ಜನ ನ್ಯಾಯಾಲಯಗಳ ಮೊರೆ ಹೋಗಲು ಹೆದರುತ್ತಿದ್ದಾರೆ. ತಮ್ಮ ಮೇಲೆ ತೀವ್ರ ಒತ್ತಡವಿದ್ದಾಗ ಮಾತ್ರವೇ ಅವರು ನ್ಯಾಯಾಂಗ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಾರೆ. ಅನೇಕ ಸಂದರ್ಭಗಳಲ್ಲಿ ತಮ್ಮ ವಿರುದ್ಧ ಅನ್ಯಾಯ ನಡೆದರೂ ಮೌನವಾಗಿ ಸಹಿಸಿಕೊಳ್ಳುತ್ತಿರುತ್ತಾರೆ. ಏಕೆಂದರೆ, ತಾವು ನ್ಯಾಯಕ್ಕಾಗಿ ಹೋರಾಡಿದರೆ ಬದುಕು ಇನ್ನಷ್ಟು ಅಸಹನೀಯವಾಗಬಹುದೆಂಬ ಅವ್ಯಕ್ತ ಭಯ ಅವರಲ್ಲಿದೆ. ಈ ಜನರಿಗೆ ಗ್ರಾಮಗಳಿಂದ ನ್ಯಾಯಾಲಯಕ್ಕೆ ಹೋಗುವುದು ಎಂಬುದೇ ಬಹುದೊಡ್ಡ ಮಾನಸಿಕ ಮತ್ತು ಹಣಕಾಸಿನ ಒತ್ತಡವಾಗುತ್ತದೆ. ಇಂಥ ಸಂದರ್ಭದಲ್ಲಿ ನ್ಯಾಯಾಲಯಗಳಲ್ಲಿನ 'ಮುಂದೂಡಿಕೆ ಸಂಸ್ಕೃತಿ'ಯಿಂದ ಅದೆಷ್ಟು ತೊಂದರೆ ಅನುಭವಿಸಬಹುದು ಎಂಬುದು ಅನೇಕರ ಊಹೆಗೂ ನಿಲುಕದ ಸಂಗತಿ. ಹಾಗಾಗಿ, ಈ ಸಂಸ್ಕೃತಿಯನ್ನು ಬದಲಿಸಲು ಸಾಧ್ಯವಿರುವ ಎಲ್ಲ ಕ್ರಮಗಳನ್ನೂ ಕೈಗೊಳ್ಳಲೇಬೇಕಿದೆ ಎಂದು ರಾಷ್ಟ್ರಪತಿ ಮುರ್ಮು ಒತ್ತಿ ಹೇಳಿದರು.

ನಿಮಗೆ 'ವೈಟ್ ಕೋಟ್‌ ಹೈಪರ್‌ಟೆನ್ಶನ್' ಎಂಬ ಬಗ್ಗೆ ಗೊತ್ತಿರಬೇಕು. ಅಂದರೆ, ಆಸ್ಪತ್ರೆಯ ಪರಿಸರದಲ್ಲಿ ಕೆಲವು ಜನರ ರಕ್ತದೊತ್ತಡ ಏರಿಕೆಯಾಗುವ ಪರಿಸ್ಥಿತಿ. ಅದರಂತೆ, ಕೋರ್ಟ್‌ ರೂಂನಲ್ಲೂ ಸಾಮಾನ್ಯ ಜನರ ಮನೋವೇದನೆ ಹೆಚ್ಚಾಗುತ್ತದೆ. ಇದನ್ನು 'ಬ್ಲ್ಯಾಕ್ ಕೋಟ್‌ ಸಿಂಡ್ರೋಮ್‌' ಎನ್ನುವರು ಎಂದು ಮುರ್ಮು ಉದಾಹರಣೆ ಸಹಿತ ವಿವರಿಸಿದರು.

ಜನಸಾಮಾನ್ಯರಿಗೆ ಆಗುವ ಇಂಥ ಅನುಭವದಿಂದಾಗಿ, ಆತ ತನ್ನ ಪರವಾದ ವಿಚಾರಗಳು ಅಥವಾ ತನಗೆ ಸ್ಪಷ್ಚವಾಗಿ ಗೊತ್ತಿರುವ ಸಂಗತಿಗಳನ್ನೂ ಆತನಿಗೆ ನ್ಯಾಯಾಲಯಗಳಲ್ಲಿ ಹೇಳಲು ಸಾಧ್ಯವಾಗಲಾರದು. ದೇಶದ ಪ್ರತಿಯೊಬ್ಬ ನ್ಯಾಯಾಧೀಶ, ನ್ಯಾಯಾಂಗ ವ್ಯವಸ್ಥೆಯ ಅಧಿಕಾರಿಗೆ ಧರ್ಮ, ಸತ್ಯ ಮತ್ತು ನ್ಯಾಯವನ್ನು ಗೌರವಿಸುವ ನೈತಿಕ ಜವಾಬ್ದಾರಿ ಇರುತ್ತದೆ ಎಂದು ಮುರ್ಮು ನೆನಪಿಸಿದರು.

ಇದನ್ನೂ ಓದಿ: ತೆಲಂಗಾಣ, ಆಂಧ್ರದಲ್ಲಿ ಮಳೆ ಆರ್ಭಟ; ಒಂದೇ ದಿನ 10 ಮಂದಿ ಸಾವು - Telangana Andhra Pradesh Heavy Rain

ನವದೆಹಲಿ: ಹೇಯ ಅಪರಾಧ ಕೃತ್ಯಗಳಾದ ಅತ್ಯಾಚಾರಗಳಂಥ ಪ್ರಕರಣಗಳಲ್ಲಿ ವಿಳಂಬ ನಿರ್ಧಾರಗಳಿಂದಾಗಿ ನ್ಯಾಯಾಲಯಗಳು ಸಂವೇದನೆ ಕಳೆದುಕೊಂಡಿವೆ ಎಂದು ಜನಸಾಮಾನ್ಯರು ಯೋಚಿಸುವಂತಾಗಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದ್ದಾರೆ. ನ್ಯಾಯಾಂಗ ವ್ಯವಸ್ಥೆಯ 'ಮುಂದೂಡಿಕೆ ಪ್ರವೃತ್ತಿ'ಯಲ್ಲಿ ಬದಲಾವಣೆ ತರುವ ಅವಶ್ಯಕತೆ ಇದೆ ಎಂದು ಅವರು ಸಲಹೆ ನೀಡಿದ್ದಾರೆ. ಅನೇಕ ವರ್ಷಗಳಿಂದ ಬಾಕಿ ಉಳಿದಿರುವ ಪ್ರಕರಣಗಳು ನ್ಯಾಯಾಂಗ ವ್ಯವಸ್ಥೆ ಎದುರಿಸುತ್ತಿರುವ ಬಹುದೊಡ್ಡ ಸವಾಲು ಎಂದು ಇದೇ ವೇಳೆ ಮುರ್ಮು ತಿಳಿಸಿದರು.

ಅತ್ಯಂತ ಅಮಾನುಷ ಕೃತ್ಯಗಳಾದ ಅತ್ಯಾಚಾರಗಳಂಥ ಪ್ರಕರಣಗಳ ತೀರ್ಮಾನಗಳು ಒಂದು ತಲೆಮಾರಿನ ನಂತರ ಕೋರ್ಟ್‌ಗಳಿಂದ ಹೊರಬರುತ್ತಿರುವುದರಿಂದ ನ್ಯಾಯಾಂಗ ವ್ಯವಸ್ಥೆ ಸಂವೇದನೆ ಕಳೆದುಕೊಂಡಿದೆ ಎಂಬುದು ಜನಸಾಮಾನ್ಯರ ಭಾವನೆ ಎಂದು ಮುರ್ಮು ಹೇಳಿದ್ದಾರೆ.

ಜಿಲ್ಲಾ ನ್ಯಾಯಾಂಗ ವ್ಯವಸ್ಥೆಯ ಕುರಿತು ನವದೆಹಲಿಯ ಭಾರತ ಮಂಟಪಂನಲ್ಲಿ ಭಾನುವಾರ ನಡೆದ ಎರಡು ದಿನಗಳ ರಾಷ್ಟ್ರೀಯ ಮಟ್ಟದ ಸಮ್ಮೇಳನದ ಸಮಾರೋಪ ಸಮಾರಂಭ ಉದ್ದೇಶಿಸಿ ಅವರು ಮಾತನಾಡಿದರು.

ನ್ಯಾಯಾಂಗ ವ್ಯವಸ್ಥೆಯಲ್ಲಿರುವ ಬಾಕಿ ಪ್ರಕರಣಗಳ ಶೀಘ್ರ ವಿಲೇವಾರಿಗೆ ವಿಶೇಷ ಲೋಕ ಅದಾಲತ್ ಅನ್ನು ಹೆಚ್ಚೆಚ್ಚು ಆಯೋಜಿಸಬೇಕು. ಸಮಸ್ಯೆ ಬಗೆಹರಿಸಲು ಎಲ್ಲ ಪಾಲುದಾರರು ಭಾಗಿಯಾಗಿ ಆದ್ಯತೆಯಾಗಿ ಪರಿಗಣಿಸಿ ಪರಿಹಾರ ಕಂಡುಕೊಳ್ಳಬೇಕು ಎಂದು ಮುರ್ಮು ಕಿವಿಮಾತು ಹೇಳಿದರು.

ಕೆಲವು ಪ್ರಕರಣಗಳಲ್ಲಿ, ಸಿರಿವಂತರು ಅಪರಾಧ ಕೃತ್ಯಗಳಲ್ಲಿ ಭಾಗಿಯಾದ ನಂತರ ಮುಕ್ತವಾಗಿ ತಿರುಗಾಡುತ್ತಿದ್ದಾರೆ. ಆದರೆ ಅದೇ ಅಪರಾಧ ಕೃತ್ಯಗಳಿಂದ ತೊಂದರೆಗೀಡಾದ ಜನರು ತಾವೇ ಅಪರಾಧಗಳಲ್ಲಿ ಭಾಗಿಯಾದೆವೇನೋ ಎಂಬಂತೆ ಭಯದಲ್ಲಿ ಬದುಕುತ್ತಿದ್ದಾರೆ ಎಂದು ಬೇಸರ ಹೊರಹಾಕಿದರು.

ಗ್ರಾಮಗಳಲ್ಲಿ ನೆಲೆಸಿರುವ ಬಡ ಜನ ನ್ಯಾಯಾಲಯಗಳ ಮೊರೆ ಹೋಗಲು ಹೆದರುತ್ತಿದ್ದಾರೆ. ತಮ್ಮ ಮೇಲೆ ತೀವ್ರ ಒತ್ತಡವಿದ್ದಾಗ ಮಾತ್ರವೇ ಅವರು ನ್ಯಾಯಾಂಗ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಾರೆ. ಅನೇಕ ಸಂದರ್ಭಗಳಲ್ಲಿ ತಮ್ಮ ವಿರುದ್ಧ ಅನ್ಯಾಯ ನಡೆದರೂ ಮೌನವಾಗಿ ಸಹಿಸಿಕೊಳ್ಳುತ್ತಿರುತ್ತಾರೆ. ಏಕೆಂದರೆ, ತಾವು ನ್ಯಾಯಕ್ಕಾಗಿ ಹೋರಾಡಿದರೆ ಬದುಕು ಇನ್ನಷ್ಟು ಅಸಹನೀಯವಾಗಬಹುದೆಂಬ ಅವ್ಯಕ್ತ ಭಯ ಅವರಲ್ಲಿದೆ. ಈ ಜನರಿಗೆ ಗ್ರಾಮಗಳಿಂದ ನ್ಯಾಯಾಲಯಕ್ಕೆ ಹೋಗುವುದು ಎಂಬುದೇ ಬಹುದೊಡ್ಡ ಮಾನಸಿಕ ಮತ್ತು ಹಣಕಾಸಿನ ಒತ್ತಡವಾಗುತ್ತದೆ. ಇಂಥ ಸಂದರ್ಭದಲ್ಲಿ ನ್ಯಾಯಾಲಯಗಳಲ್ಲಿನ 'ಮುಂದೂಡಿಕೆ ಸಂಸ್ಕೃತಿ'ಯಿಂದ ಅದೆಷ್ಟು ತೊಂದರೆ ಅನುಭವಿಸಬಹುದು ಎಂಬುದು ಅನೇಕರ ಊಹೆಗೂ ನಿಲುಕದ ಸಂಗತಿ. ಹಾಗಾಗಿ, ಈ ಸಂಸ್ಕೃತಿಯನ್ನು ಬದಲಿಸಲು ಸಾಧ್ಯವಿರುವ ಎಲ್ಲ ಕ್ರಮಗಳನ್ನೂ ಕೈಗೊಳ್ಳಲೇಬೇಕಿದೆ ಎಂದು ರಾಷ್ಟ್ರಪತಿ ಮುರ್ಮು ಒತ್ತಿ ಹೇಳಿದರು.

ನಿಮಗೆ 'ವೈಟ್ ಕೋಟ್‌ ಹೈಪರ್‌ಟೆನ್ಶನ್' ಎಂಬ ಬಗ್ಗೆ ಗೊತ್ತಿರಬೇಕು. ಅಂದರೆ, ಆಸ್ಪತ್ರೆಯ ಪರಿಸರದಲ್ಲಿ ಕೆಲವು ಜನರ ರಕ್ತದೊತ್ತಡ ಏರಿಕೆಯಾಗುವ ಪರಿಸ್ಥಿತಿ. ಅದರಂತೆ, ಕೋರ್ಟ್‌ ರೂಂನಲ್ಲೂ ಸಾಮಾನ್ಯ ಜನರ ಮನೋವೇದನೆ ಹೆಚ್ಚಾಗುತ್ತದೆ. ಇದನ್ನು 'ಬ್ಲ್ಯಾಕ್ ಕೋಟ್‌ ಸಿಂಡ್ರೋಮ್‌' ಎನ್ನುವರು ಎಂದು ಮುರ್ಮು ಉದಾಹರಣೆ ಸಹಿತ ವಿವರಿಸಿದರು.

ಜನಸಾಮಾನ್ಯರಿಗೆ ಆಗುವ ಇಂಥ ಅನುಭವದಿಂದಾಗಿ, ಆತ ತನ್ನ ಪರವಾದ ವಿಚಾರಗಳು ಅಥವಾ ತನಗೆ ಸ್ಪಷ್ಚವಾಗಿ ಗೊತ್ತಿರುವ ಸಂಗತಿಗಳನ್ನೂ ಆತನಿಗೆ ನ್ಯಾಯಾಲಯಗಳಲ್ಲಿ ಹೇಳಲು ಸಾಧ್ಯವಾಗಲಾರದು. ದೇಶದ ಪ್ರತಿಯೊಬ್ಬ ನ್ಯಾಯಾಧೀಶ, ನ್ಯಾಯಾಂಗ ವ್ಯವಸ್ಥೆಯ ಅಧಿಕಾರಿಗೆ ಧರ್ಮ, ಸತ್ಯ ಮತ್ತು ನ್ಯಾಯವನ್ನು ಗೌರವಿಸುವ ನೈತಿಕ ಜವಾಬ್ದಾರಿ ಇರುತ್ತದೆ ಎಂದು ಮುರ್ಮು ನೆನಪಿಸಿದರು.

ಇದನ್ನೂ ಓದಿ: ತೆಲಂಗಾಣ, ಆಂಧ್ರದಲ್ಲಿ ಮಳೆ ಆರ್ಭಟ; ಒಂದೇ ದಿನ 10 ಮಂದಿ ಸಾವು - Telangana Andhra Pradesh Heavy Rain

Last Updated : Sep 2, 2024, 10:43 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.