ನವದೆಹಲಿ: ಕಾಶ್ಮೀರದ ಕುರಿತು ಜನಾಭಿಪ್ರಾಯ ಸಂಗ್ರಹಕ್ಕೆ ಒತ್ತಾಯಿಸುತ್ತಿದ್ದೇನೆ ಎಂದು ಪರಿಸರವಾದಿ ಸೋನಮ್ ವಾಂಗ್ಚುಕ್ ಹೇಳಿದ್ದಾರೆ ಎಂಬ ವಿಡಿಯೋವನ್ನು ಹಲವಾರು ಸಾಮಾಜಿಕ ಜಾಲತಾಣದ ಬಳಕೆದಾರರು ಹಂಚಿಕೊಂಡಿದ್ದಾರೆ. ಈ ಬಗ್ಗೆ ಸುದ್ದಿಸಂಸ್ಥೆ ಪಿಟಿಐ ಫ್ಯಾಕ್ಟ್ ಚೆಕ್ ಮಾಡಿದ್ದು, ಸೋನಮ್ ವಾಂಗ್ಚುಕ್ ಅವರ ಸಂದರ್ಶನದ ಆಯ್ದ ಭಾಗವನ್ನು ಮಾತ್ರ ತೆಗೆದು, ತಪ್ಪುದಾರಿಗೆಳೆಯುವ ಸಂದೇಶ ಹಂಚಿಕೊಳ್ಳಲಾಗಿದೆ ಎಂಬ ವಿಚಾರ ಬಯಲಾಗಿದೆ.
ಹೆಸರಾಂತ ಇಂಜಿನಿಯರ್ ಮತ್ತು ಪರಿಸರವಾದಿಯಾಗಿರುವ ಸೋನಮ್ ವಾಂಗ್ಚುಕ್, ಇತ್ತೀಚೆಗೆ ಲಡಾಖ್ಗೆ ರಾಜ್ಯ ಸ್ಥಾನಮಾನ ನೀಡಬೇಕು ಮತ್ತು ಸಂವಿಧಾನದ 6ನೇ ಪರಿಚ್ಛೇದ ಜಾರಿ ಮಾಡಬೇಕು ಎಂದು 21 ದಿನಗಳ ಉಪವಾಸ ನಡೆಸಿದ್ದರು. ಇದರ ನಡುವೆ ಕೆಲ ಫೇಸ್ಬುಕ್ ಬಳಕೆದಾರರು ಮೇ 19ರಂದು ಸೋನಮ್ ವಾಂಗ್ಚುಕ್ ಅವರು ಕಾಶ್ಮೀರಕ್ಕೆ ಜನಾಭಿಪ್ರಾಯ ಸಂಗ್ರಹಕ್ಕೆ ಒತ್ತಾಯಿಸಿದ್ದಾರೆ ಎಂದು ಹೇಳುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಮ್ಯಾಗ್ಸೆಸೆ ಪ್ರಶಸ್ತಿಯ ನಿಜವಾದ ಬಣ್ಣ ಈಗ ಹೊರಬರುತ್ತಿದೆ. ಸಂದೇಹಾಸ್ಪದ ಕಾರ್ಯಕರ್ತ ಸೋನಮ್ ವಾಂಗ್ಚುಕ್ ಲೇಹ್ನಲ್ಲಿ ಕಾಶ್ಮೀರಕ್ಕಾಗಿ ಜನಾಭಿಪ್ರಾಯ ಸಂಗ್ರಹಣೆಗೆ ಆಗ್ರಹಿಸುತ್ತಿದ್ದಾರೆ. ಈಗ ಅವರು ಪ್ರತ್ಯೇಕತಾವಾದಿಯಾಗಿದ್ದಾರೆ. ಪರಿಸರವಾದಿ ಕೇವಲ ಮುಖವಾಡವಾಗಿತ್ತು ಎಂಬ ಶೀರ್ಷಿಕೆ ನೀಡಿ ವ್ಯಾಪಕವಾಗಿ ಟ್ವಿಟರ್ನಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ.
ಇದನ್ನೂ ಓದಿ: ಲಡಾಖ್ಗೆ ರಾಜ್ಯದ ಸ್ಥಾನಮಾನ ವಿಳಂಬ: ಹೆಪ್ಪುಗಟ್ಟುವ ಚಳಿಯಲ್ಲಿ ಸೋನಮ್ ವಾಂಗ್ಚುಕ್ ಆಮರಣಾಂತ ಉಪವಾಸ
ಫ್ಯಾಕ್ಟ್ ಚೆಕ್ ಡೆಸ್ಕ್ ವಾಂಗ್ಚುಕ್ ಅವರ ಸಂದರ್ಶನವನ್ನು ಸಂಪೂರ್ಣ ಪರಿಶೀಲಿಸಿದ್ದು, 15:35 ನಿಮಿಷಗಳ ವಿಡಿಯೋವನ್ನು ಕಂಡುಹಿಡಿದಿದೆ. ಮಾತುಕತೆಯ 14:50 ನಿಮಿಷಗಳಲ್ಲಿ ವೈರಲ್ ವಿಡಿಯೋ ಕ್ಲಿಪ್ ತೆಗೆಯಲಾಗಿದೆ. ಸಂದರ್ಶಕರು ಕಾಶ್ಮೀರದೊಂದಿಗೆ ಬಲವಾಗಿ ಒಡನಾಟದ ಕೇಳುವಾಗ ಕಾರ್ಗಿಲ್ ನಿವಾಸಿಗಳ ಬಗ್ಗೆ ಸೋನಮ್ ಅವರ ಅಭಿಪ್ರಾಯಗಳನ್ನು ಕೇಳುತ್ತಾರೆ. ಅದಕ್ಕೆ ಪ್ರತಿಕ್ರಿಯಿಸುತ್ತಾ ಅವರು, ಜನರು ತಮ್ಮ ಅಭಿಪ್ರಾಯಗಳನ್ನು ಹೊಂದಬಹುದು. ಜಗತ್ತಿನ ಯಾವುದೇ ಪ್ರದೇಶವಿರಲಿ ಸಂತೋಷವಾಗಿರಬೇಕು; ಜನರು ಎಲ್ಲಿ ಬೇಕಾದರೂ ಹೋಗಲು ಸ್ವತಂತ್ರರಾಗಿರಬೇಕು. ಆದ್ದರಿಂದ ನೀವು ಜನಾಭಿಪ್ರಾಯ ಸಂಗ್ರಹಗಳು ಮತ್ತು ಜನಾಭಿಪ್ರಾಯಗಳ ಬಗ್ಗೆ ಕೇಳಿರಬೇಕು ಎಂದು ಹೇಳುತ್ತಾರೆ.
ನಂತರ ತಿರುಚಿದ ವಿಡಿಯೋ ವೈರಲ್ ಬಗ್ಗೆ ವಾಂಗ್ಚುಕ್ ಖುದ್ದಾಗಿ ಸ್ಪಷ್ಟಪಡಿಸಿದ್ದಾರೆ. ಮೇ 20ರಂದು ನನ್ನ ಹೇಳಿಕೆಯನ್ನು ಗುರುತಿಸಲಾಗದಷ್ಟು ತಿರುಚಿರುವುದನ್ನು ನೋಡಿ ಬೇಸರವಾಗಿದೆ. ಆದರೆ, ನನ್ನ ವಿಡಿಯೋದ ಸಂದರ್ಭದಿಂದ ಹೊರತೆಗೆದಾಗ ಅದನ್ನು ಹೇಗೆ ತಪ್ಪಾಗಿ ಅರ್ಥೈಸಿಕೊಳ್ಳಬಹುದು ಎಂಬುದನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ. ದಯವಿಟ್ಟು ಸತ್ಯವನ್ನು ಹರಡಿ, ಸುಳ್ಳನ್ನಲ್ಲ. ಸತ್ಯಮೇವ ಜಯತೆ ಎಂದು ಪೋಸ್ಟ್ ಮಾಡಿದ್ದಾರೆ.
ಈ ಕುರಿತು ಸೋನಮ್ ವಾಂಗ್ಚುಕ್ ಪಿಟಿಐಗೆ ಪ್ರತಿಕ್ರಿಯಿಸಿ, ಕಾರ್ಗಿಲ್ನ ರಾಜಕಾರಣಿಯೊಬ್ಬರು ಲಡಾಖ್ಅನ್ನು ಕಾಶ್ಮೀರದೊಂದಿಗೆ ಮರು ವಿಲೀನಗೊಳಿಸಬೇಕೆಂದು ಹೇಳಿದ್ದರು. ನಾನು ಅದನ್ನು ಆಕ್ಷೇಪಿಸಿದೆ. ಇದು ಅವರ ವೈಯಕ್ತಿಕ ದೃಷ್ಟಿಕೋನವಾಗಿದ್ದರೆ ಸರಿ. ಕಾರ್ಗಿಲ್ನ ಎಲ್ಲ ಜನರು ಹಾಗೆ ಭಾವಿಸಿದರೆ, ಅದನ್ನು ಮಾಡಬಹುದು. ಆದರೆ, ಲಡಾಖ್ ಕೇಂದ್ರಾಡಳಿತ ಪ್ರದೇಶವಾಗಿ ಮುಂದುವರಿಯುತ್ತದೆ. ಕಾಶ್ಮೀರದೊಂದಿಗೆ ಮತ್ತೆ ವಿಲೀನಗೊಳ್ಳಲು ನಮಗೆ ಆಸಕ್ತಿ ಇಲ್ಲ. ಅದು ಸಂದರ್ಭವಾಗಿತ್ತು. ನಾನು ಕಾಶ್ಮೀರದ ಬಗ್ಗೆ ಮಾತನಾಡುತ್ತಿದ್ದೇನೆ ಮತ್ತು ದೇಶವಿರೋಧಿ ಹೇಳಿಕೆ ನೀಡುತ್ತಿದ್ದೇನೆ ಎಂದು ತೋರುವ ರೀತಿಯಲ್ಲಿ ಸಂದರ್ಶನದ ಒಂದು ಸಣ್ಣ ಕ್ಲಿಪ್ ಅನ್ನು ತೋರಿಸಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಶ್ರೀರಾಮನ ಭಾವಚಿತ್ರವನ್ನು ಓವೈಸಿ ಹಿಡಿದುಕೊಂಡಿರುವುದು ನಿಜವೇ?; ಫ್ಯಾಕ್ಟ್ ಚೆಕ್ ಇಲ್ಲಿದೆ